ಕಾರು ಮಾರಾಟ ; ಸಸ್ಪೆಂಡ್ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಲು ನಿರ್ಧಾರ ! ಅಧಿಕಾರಿಗಳ ಕುತ್ತಿಗೆ ಹಿಡಿಯಲಿದ್ಯಾ ಪ್ರಕರಣ ?

01-03-21 09:13 pm       Mangaluru correspondent   ಕರಾವಳಿ

ಇನ್ ಸ್ಪೆಕ್ಟರ್ ಹಾಗೂ ಸಬ್ ಇನ್ ಸ್ಪೆಕ್ಟರ್ ಅನ್ನು ಮೇಲಧಿಕಾರಿಗಳು ಸಸ್ಪೆಂಡ್ ಮಾಡಿದ್ದಾರೆ. ಇದೇ ವೇಳೆ, ಒಬ್ಬ ಸಿಬಂದಿಯ ಅಮಾನತು ಆದೇಶದ ಬಗ್ಗೆ ಪ್ರಬಲ ಶಂಕೆ ಕೇಳಿಬಂದಿದೆ.

ಮಂಗಳೂರು, ಮಾ.1: ಮಂಗಳೂರು ಸಿಸಿಬಿಯಲ್ಲಿ ನಡೆದಿದೆ ಎನ್ನಲಾದ ಕಾರು ಮಾರಾಟ ಪ್ರಕರಣ ಈಗ ಮತ್ತೊಂದು ಹಂತಕ್ಕೆ ಬಂದು ಮುಟ್ಟಿದೆ. ಒಂದೆಡೆ ಸಿಐಡಿ ಅಧಿಕಾರಿಗಳು ಮಂಗಳೂರಿಗೆ ಬಂದು ತನಿಖೆ ಆರಂಭಿಸಿದ್ದಾರೆ. ಮತ್ತೊಂದು ಕಡೆ ಇಬ್ಬರು ಪೊಲೀಸ್ ಸಿಬಂದಿ, ಮತ್ತಿಬ್ಬರು ಇನ್ ಸ್ಪೆಕ್ಟರ್ ಹಾಗೂ ಸಬ್ ಇನ್ ಸ್ಪೆಕ್ಟರ್ ಅನ್ನು ಮೇಲಧಿಕಾರಿಗಳು ಸಸ್ಪೆಂಡ್ ಮಾಡಿದ್ದಾರೆ. ಇದೇ ವೇಳೆ, ಒಬ್ಬ ಸಿಬಂದಿಯ ಅಮಾನತು ಆದೇಶದ ಬಗ್ಗೆ ಪ್ರಬಲ ಶಂಕೆ ಕೇಳಿಬಂದಿದೆ.

ಮಂಗಳೂರು ಸಿಸಿಬಿಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿರುವ ಆಶಿತ್ ಡಿಸೋಜ, ಮನಿ ಡಬ್ಲಿಂಗ್ ಪ್ರಕರಣ ನಡೆದಿರುವ ಅಕ್ಟೋಬರ್ ತಿಂಗಳಲ್ಲಿ ಕೊರೊನಾ ಪೀಡಿತರಾಗಿ ಆಸ್ಪತ್ರೆಯಲ್ಲಿ ಮಲಗಿದ್ದರು. ಅ.6ರಂದು ಅಥೆನಾ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ಗಂಭೀರ ಸ್ಥಿತಿಯೆಂದು ಬಳಿಕ ವೆಂಟಿಲೇಟರ್ ಒದಗಿಸುವ ನಿಟ್ಟಿನಲ್ಲಿ ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅ.19ರಂದು ಅವರನ್ನು ಎಜೆಯಿಂದ ಬಿಡುಗಡೆ ಮಾಡಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ಸಂದರ್ಭದಲ್ಲಿ 14 ದಿನ ಕ್ವಾರಂಟೈನ್ ಇರಬೇಕೆಂದು ಸೂಚನೆ ನೀಡಿದ್ದ ಕಾರಣ ಆಶಿತ್ ಡಿಸೋಜ ಮನೆಯಲ್ಲೇ ಉಳಿದುಕೊಂಡಿದ್ದರು. ಹೀಗಾಗಿ ಅ.6ರಿಂದ ನವೆಂಬರ್ 6ರ ವರೆಗೂ ಸಿಸಿಬಿಯ ಕೆಲಸಕ್ಕೆ ರಜೆ ಹಾಕಿದ್ದರು.

ಮತ್ತೆ ಜಾಯಿನ್ ಆಗಿದ್ದು ನವೆಂಬರ್ ಆರಕ್ಕೆ. ಮನೆ ಡಬ್ಲಿಂಗ್ ಪ್ರಕರಣ ಮಂಗಳೂರಿನಲ್ಲಿ ದಾಖಲಾಗಿದ್ದು ಅ.16ರಂದು. ಆಬಳಿಕ ಪ್ರಕರಣದ ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿಸಿ, ಅವರಲ್ಲಿದ್ದ ಕಾರುಗಳನ್ನು ಸೀಜ್ ಮಾಡಲಾಗಿತ್ತು. ಈ ನಡುವೆ, ಜಾಗ್ವಾರ್ ಕಾರನ್ನು ಮಾರಾಟ ಮಾಡಲಾಗಿತ್ತು ಅನ್ನೋ ಆರೋಪ ಕೇಳಿಬಂದಿದೆ. ಪ್ರಕರಣ ಈಗ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಸಂಚಲನ ಉಂಟು ಮಾಡಿದ್ದಲ್ಲದೆ, ನಾಲ್ವರ ಅಮಾನತಿಗೆ ಕಾರಣವಾಗಿದೆ.

ಸಸ್ಪೆಂಡ್ ಪ್ರಶ್ನಿಸಿ ಕೋರ್ಟಿಗೆ ಹೋಗುತ್ತೇನೆ

ಆದರೆ, ಈ ಘಟನೆ ನಡೆಯುವ ಹೊತ್ತಲ್ಲಿ ನಾನು ಸಿಸಿಬಿಯಲ್ಲೇ ಇರಲಿಲ್ಲ. ಹೀಗಿದ್ದರೂ, ನನ್ನನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಇದರ ಹಿಂದೆ ಭಾರೀ ಒತ್ತಡಗಳು ಕೆಲಸ ಮಾಡಿವೆ. ಮೇಲಧಿಕಾರಿಗಳು ಯಾರದೋ ಒತ್ತಡಕ್ಕೆ ಒಳಗಾಗಿ ಕೆಲಸ ಮಾಡಿದ್ದಾರೆ. ನಾನು ಆಸ್ಪತ್ರೆ ಸೇರಿದ್ದು, ಒಂದು ತಿಂಗಳ ಕಾಲ ಸಿಸಿಬಿಯಲ್ಲಿ ಕರ್ತವ್ಯದಲ್ಲಿ ಇರದೇ ಇರುವುದಕ್ಕೆ ದಾಖಲೆಗಳಿವೆ. ಇದರಿಂದ ತುಂಬ ಮಾನಸಿಕ ಕಿರುಕುಳ ಅನುಭವಿಸಿದ್ದೇನೆ. ಮನೆಯವರಿಗೆ, ಗೆಳೆಯವರಿಗೆ ಮುಖ ತೋರಿಸದ ಸ್ಥಿತಿಯಾಗಿದೆ. ನಾನು ಇಲ್ಲದೇ ಇರುವಾಗ ನಡೆದಿರುವ ಘಟನೆಯಲ್ಲಿ ನನ್ನನ್ನು ಯಾಕೆ ಸೇರಿಸಿದ್ದಾರೆ. ಈ ಬಗ್ಗೆ ಕೋರ್ಟಿನಲ್ಲಿ ಫೈಟ್ ಮಾಡುತ್ತೇನೆ. ಮೇಲಧಿಕಾರಿಗಳ ಗಮನಕ್ಕೂ ಇದನ್ನು ತಂದಿದ್ದೇನೆ ಎಂಬುದಾಗಿ ಆಶಿತ್ ಡಿಸೋಜ ಹೆಡ್ ಲೈನ್ ಕರ್ನಾಟಕಕ್ಕೆ ತಿಳಿಸಿದ್ದಾರೆ.

ಎಲ್ಲ ಸೇರಿ ಬಲಿಪಶು ಮಾಡಿದ್ದಾರೆ !  

ಟಿವಿ ಸೇರಿದಂತೆ ಎಲ್ಲ ಮಾಧ್ಯಮದಲ್ಲಿ ನನ್ನ ಫೋಟೋ ಹಾಕಿ, ಏನೆಲ್ಲಾ ಹೇಳ್ಕೊಂಡು ಮರ್ಯಾದೆ ತೆಗೆಯುತ್ತಿದ್ದಾರೆ. ನಾವು ಬರೀ ಬಡಪಾಯಿಗಳು. ನಾವು ಏನಿದ್ದರೂ ಮೇಲಧಿಕಾರಿಗಳ ಆದೇಶ ಪಾಲನೆಯನ್ನಷ್ಟೇ ಮಾಡುತ್ತೇವೆ. ಕಾರು ಮಾರಾಟ ಮಾಡಿದ್ದೇನೆ ಎಂದು ಹೇಳುತ್ತೀರಲ್ಲಾ.. ನಾನು ಘಟನೆ ನಡೆದಾಗ ಸಿಸಿಬಿಯಲ್ಲೇ ಇರಲಿಲ್ಲ. ಆನಂತರವೂ ನನಗೆ ಹೆಚ್ಚು ಕೆಲಸ ಮಾಡಲಾಗುತ್ತಿಲ್ಲ ಎಂದು ಕಚೇರಿಗೆ ಬಂದು ಹೋಗುವುದನ್ನು ಮಾತ್ರ ಮಾಡುತ್ತಿದ್ದೆ. ಮೇಲಧಿಕಾರಿಗಳು ಬರೆದಿರುವ ವರದಿಯಲ್ಲಿ ಏನೋ ತಪ್ಪಾಗಿದೆ, ನನ್ನನ್ನು ಬಲಿಪಶು ಮಾಡಲಾಗಿದೆ ಎಂದು ಆಶಿತ್ ಅಲವತ್ತುಕೊಂಡಿದ್ದಾರೆ.

ಡಿಸಿಪಿ ವಿನಯ ಗಾಂವ್ಕರ್ ವರದಿ ಆಧರಿಸಿ, ಇಬ್ಬರು ಪೊಲೀಸ್ ಸಿಬಂದಿಯನ್ನು ಮಂಗಳೂರು ಪೊಲೀಸ್ ಕಮಿಷನರ್ ಅಮಾನತು ಮಾಡಿದ್ದರು. ಸಸ್ಪೆಂಡ್ ಆಗಿರುವ ಆಶಿತ್ ಡಿಸೋಜ, ಕೋರ್ಟ್ ಮೆಟ್ಟಿಲೇರುವ ಸೂಚನೆ ನೀಡಿದ್ದಾರೆ. ಪೊಲೀಸ್ ಇಲಾಖೆಯ ಒಳಗಿನ ಹುಳುಕಿನ ಗುಟ್ಟು ಈಗ ಮೇಲಧಿಕಾರಿಗಳ ಕುತ್ತಿಗೆ ಹಿಡಿಯುವ ಲಕ್ಷಣ ಕಂಡುಬಂದಿದೆ.


CCB Police Ashith Dsouza who has been suspended in Luxury Car missing from police custody case is now all set to appeal the court over his suspension. Ashith speaks to Healdine Karnataka about his move.