ಕಡೆಕ್ಲಾ ಮೇಯರ್ ಆಯೆರ್ ಪ್ರೇಮಣ್ಣೆ...

02-03-21 02:59 pm       Mangalore Correspondent   ಕರಾವಳಿ

ಮಹಾನಗರ ಪಾಲಿಕೆಯಲ್ಲಿ ಪ್ರೇಮಾನಂದ ಶೆಟ್ಟಿ 22ನೇ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಮಂಗಳೂರು, ಮಾ.2: ಅಂತೂ ಮಹಾನಗರ ಪಾಲಿಕೆಯಲ್ಲಿ ಪ್ರೇಮಾನಂದ ಶೆಟ್ಟಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಮಂಗಳಾದೇವಿ ವಾರ್ಡಿನಲ್ಲಿ ಐದು ಬಾರಿ ಗೆದ್ದಿದ್ದ ಹಿರಿಯ ಸದಸ್ಯ ಈ ಹಿಂದೆಯೇ ಮೇಯರ್ ಆಗಬೇಕಿತ್ತು. ಆ ಬಗ್ಗೆ ಕಾರ್ಯಕರ್ತರ ಕಡೆಯಿಂದ ಪ್ರೇಮಣ್ಣ ಮೇಯರ್ ಆಗಬೇಕೆಂಬ ಮಾತೂ ಕೇಳಿಬರ್ತಿತ್ತು. ಈ ಬಾರಿ ಸಾಮಾನ್ಯ ವಿಭಾಗಕ್ಕೆ ಮೀಸಲು ಬಂದ ಕಾರಣವೋ ಏನೋ ಅಂತೂ ಪ್ರೇಮಾನಂದ ಶೆಟ್ಟಿ ಮಂಗಳೂರಿನ 22ನೇ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಪಾಲಿಕೆಯ ಸಭಾಂಗಣದಲ್ಲಿ ಮೈಸೂರು ವಿಭಾಗೀಯ ಆಯುಕ್ತ ಡಾ.ಪ್ರಕಾಶ್ ನೇತೃತ್ವದಲ್ಲಿ ಮೇಯರ್ ಆಯ್ಕೆ ಪ್ರಕ್ರಿಯೆ ನಡೆಯಿತು. 44 ಸದಸ್ಯ ಬಲದ ಪೂರ್ತಿ ಬಹುಮತ ಇರುವುದರಿಂದ ಮೇಯರ್ ಆಯ್ಕೆ ವಿಚಾರದಲ್ಲಿ ಪ್ರಶ್ನೆ ಇರಲಿಲ್ಲ. ಆದರೂ ನಾಮಕೇವಾಸ್ತೆ ಚುನಾವಣಾ ಪ್ರಕ್ರಿಯೆ ನಡೆದಿತ್ತು. ಕಾಂಗ್ರೆಸ್ ನಿಂದ ಅನಿಲ್ ಕುಮಾರ್ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಬಿಜೆಪಿಯಿಂದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಉಪಸ್ಥಿತಿ ಇದ್ದುದರಿಂದ 46 ಮತಗಳು ಬಿಜೆಪಿ ಅಭ್ಯರ್ಥಿ ಪ್ರೇಮಾನಂದ ಶೆಟ್ಟಿಗೆ ಬಿದ್ದವು. ಕಾಂಗ್ರೆಸ್ ಅಭ್ಯರ್ಥಿಗೆ 14 ಮತಗಳು ಬಿದ್ದರೆ, ಎಸ್ಡಿಪಿಐ ಪಕ್ಷದ ಇಬ್ಬರು ತಟಸ್ಥರಾಗಿ ಉಳಿದರು.

ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಕುಂಜತ್ ಬೈಲ್ ವಾರ್ಡಿನ ಸುಮಂಗಲಾ ರಾವ್ ಮತ್ತು ಕಾಂಗ್ರೆಸಿನಿಂದ ಜೆಸಿಂತಾ ಡಿಸೋಜ ನಾಮಪತ್ರ ಸಲ್ಲಿಸಿದ್ದರು. ಕ್ರಮವಾಗಿ 46 ಮತ್ತು 14 ಮತಗಳು ಬಿದ್ದು ಮೊದಲೇ ನಿಶ್ಚಯಿಸಿದ ರೀತಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆಯಾದರು. ಮೇಯರ್ ಸಾಮಾನ್ಯ ಮತ್ತು ಉಪ ಮೇಯರ್ ಸಾಮಾನ್ಯ ಮಹಿಳೆಗೆ ಈ ಬಾರಿ ಬಂದಿತ್ತು. ಮಂಗಳೂರು ಉತ್ತರದಲ್ಲಿ ಇನ್ನಿಬ್ಬರು ಮಹಿಳಾ ಅಭ್ಯರ್ಥಿಗಳು ಉಪ ಮೇಯರ್ ಸ್ಥಾನಕ್ಕೆ ಆಕಾಂಕ್ಷಿಗಳಿದ್ದರು. ಆದರೆ, ಮೀಸಲಾತಿ ನೆಲೆಯಲ್ಲಿ ಅವರಿಗೆ ಮುಂದೆಯೂ ಸ್ಥಾನ ಲಭಿಸುವ ಸಾಧ್ಯತೆ ಇರುವುದರಿಂದ ಸಾಮಾನ್ಯ ವಿಭಾಗದ ಸುಮಂಗಲಾ ರಾವ್ ಅವರನ್ನು ಆಯ್ಕೆ ಮಾಡಲಾಗಿತ್ತು ಎಂದು ಪಕ್ಷದ ಕೆಲವರು ಹೇಳಿಕೊಂಡಿದ್ದರು.

ಮೇಯರ್, ಉಪ ಮೇಯರ್ ಆಯ್ಕೆಯಾಗುತ್ತಿದ್ದಂತೆ ಮೊದಲೇ ಕಾದಿದ್ದ ಅಭಿಮಾನಿಗಳು, ಪ್ರಮುಖರು ಮುಗಿಬಿದ್ದು ಹೂವಿನ ಮಾಲೆ ಅರ್ಪಿಸಿದರು. 

Premananda Shetty, the Corporator of Mangladevi ward. was elected as the mayor and Sumangala Rao of the Kunjatbail ward as deputy mayor of Mangaluru City Corporation (MCC).