ಪ್ರತಾಪ್ ‌ಸಿಂಹ ಒಬ್ಬ ಮೆಂಟಲ್, ಹುಚ್ಚಾಸ್ಪತ್ರೆಗೆ ಸೇರಿಸಬೇಕು ; ಹರಿಹಾಯ್ದ ಹರೀಶ್ ಕುಮಾರ್

06-03-21 11:15 pm       Mangaluru correspondent   ಕರಾವಳಿ

ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಕ್ರೈಸ್ತರ ಸೇವೆ ಅನನ್ಯ. ಇಂತಹ ಕ್ರೈಸ್ತರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವ ಸಂಸದ ಪ್ರತಾಪ್ ಸಿಂಹನಿಗೆ ತಲೆ ಕೆಟ್ಟಿದೆ.

ಮಂಗಳೂರು, ಮಾ.6: ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಕ್ರೈಸ್ತರ ಸೇವೆ ಅನನ್ಯ. ಇಂತಹ ಕ್ರೈಸ್ತರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವ ಸಂಸದ ಪ್ರತಾಪ್ ಸಿಂಹನಿಗೆ ತಲೆ ಕೆಟ್ಟಿದೆ. ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮನೆ ಮನೆಯಿಂದ ಚಂದಾ ಎತ್ತಿ ಮೆಂಟಲ್ ಪ್ರತಾಪ್ ‌ಸಿಂಹ ಅವರಿಗೆ ಮಂಗಳೂರಿನ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್‌ಕುಮಾರ್ ವ್ಯಂಗ್ಯವಾಡಿದ್ದಾರೆ.

ಕ್ರೈಸ್ತ ಸಮುದಾಯದ ವಿರುದ್ಧ ಸಂಸದ ಪ್ರತಾಪ್ ಸಿಂಹ ನೀಡಿರುವ ವಿವಾದಾತ್ಮಕ ಹೇಳಿಕೆ ಖಂಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಘಟಕದಿಂದ ಮಂಗಳೂರು ಮಹಾನಗರ ಪಾಲಿಕೆ ಎದುರಿನ ಗಾಂಧಿ ಪ್ರತಿಮೆ ಬಳಿ ಪತ್ರಿಭಟನಾ ಸಭೆ ನಡೆಯಿತು. ಸಭೆಯನ್ನು ಮೊಂಬತ್ತಿ ಬೆಳಗಿಸಿ ಅವರು ಮಾತನಾಡಿದರು.

ಸಂಸದರು ತಮ್ಮ ಸ್ಥಿಮಿತ ಕಳಕೊಂಡಿದ್ದಾರೆ. ಇಂತಹ ಜನರಿಗೆ ಕೂಡಲೇ ಸೂಕ್ತ ಚಿಕಿತ್ಸೆ ನೀಡಿದರೆ ಮಾನಸಿಕ ರೋಗ ವಾಸಿಯಾಗಲಿದೆ. ಇಲ್ಲದಿದ್ದರೆ ಇಂತಹ ದುಷ್ಕೃತ್ಯಗಳು ಮುಂದುವರಿಯುತ್ತದೆ. ಸಂಸತ್‌ನಲ್ಲಿ ಅವಿವೇಕಿ ಸಂಸದನಿಗೆ ಕುಳಿತುಕೊಳ್ಳುವ ಯೋಗ್ಯತೆ ಇಲ್ಲ. ರಾಜ್ಯಪಾಲರು ಕೂಡಲೇ ಸಂಸದರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಸ್ವಾತಂತ್ರ್ಯ ಪೂರ್ವದಿಂದಲೂ ಸರ್ವ ಧರ್ಮದವರು ಕೂಡಿ ಬಾಳುತ್ತಾ ಬಂದಿದ್ದೇವೆ. ಇಂತಹ ಸೌಹಾರ್ದವನ್ನು ಬಿಜೆಪಿ ಮೊದಲಿನಿಂದಲೂ ಒಡೆಯುತ್ತಾ ಬಂದಿದೆ. ಜಿಲ್ಲೆಯ ವಿವಿಧೆಡೆ ಕ್ರೈಸ್ತ ಧರ್ಮದ ಪ್ರತಿಮೆ ಧ್ವಂಸ, ಕ್ರೈಸ್ತರ ಮೇಲೆ ನಿರಂತರ ಹಲ್ಲೆಗಳು ನಡೆಯುತ್ತಲೇ ಬಂದಿವೆ. ಬಿಜೆಪಿಯ ಮನೋಭಾವ, ಸರಕಾರದ ಧೋರಣೆಗಳು ಇಂತಹ ಹೇಳಿಕೆಯಿಂದ ಬಯಲಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ಜೆ.ಆರ್. ಲೋಬೋ ಮಾತನಾಡಿ, ಕಳೆದ ಫೆ.24ರಂದು ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಸಂಸದ ಪ್ರತಾಪ ಸಿಂಹ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶಿಲುಬೆ ಧರಿಸಿ ಬರುವವರ ಕೆಲಸಗಳನ್ನು ಮಾಡಿಕೊಡಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿರುವುದು ದೇಶದ ಐಕ್ಯತೆಗೆ ನೀಡಿದ ಬಹುದೊಡ್ಡ ಪೆಟ್ಟಾಗಿದೆ ಎಂದು ಹೇಳಿದರು.

ಸಂಸದರನ್ನು ಕಿತ್ತೊಗೆಯುವ ಕೆಲಸವನ್ನು ಜನತೆ ಮಾಡಬೇಕಿದೆ. ಒಡೆದು ಆಳುವ ನೀತಿಯನ್ನು ಜನಪ್ರತಿನಿಧಿಗಳು ಮಾಡಿದಲ್ಲಿ ಭವಿಷ್ಯದಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇಂತಹ ವಿವಾದಾತ್ಮಕ ಹೇಳಿಕೆಯು ಸಂಸದರ ಮನಸ್ಥಿತಿಯನ್ನು ತೋರ್ಪಡಿಸುತ್ತದೆ ಎಂದರು.

ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾತನಾಡಿ, ಪ್ರಚೋದನಕಾರಿ ಹೇಳಿಕೆ ನೀಡಿದ ಸಂಸದ ಪ್ರತಾಪ್ ಸಿಂಹ ವಿರುದ್ಧ ಪ್ರಕರಣ ದಾಖಲಿಸ ಬೇಕು. ಬಿಜೆಪಿಯ ಮುಖಂಡರು ಇಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ನ ಮಹಿಳಾ ಮುಖಂಡರಾದ ಮರಿಯಮ್ಮ ಥಾಮಸ್ ಮಾತನಾಡಿದರು. ಪ್ರತಿಭಟನಾ ಸಭೆಯ ನೇತೃತ್ವವನ್ನು ದ.ಕ. ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ವಹಿಸಿದ್ದರು.

MP Prathap Simha is Mental he needs treatment in Mangalore Mocked Congress District President Harish Kumar at the mass protest held by congress for deformation comments by MP on Christians.