ನೈತಿಕ ಪೊಲೀಸ್ ಗಿರಿ ತಡೆಗೆ ಅಬ್ಬಕ್ಕ ತಂಡದಿಂದ ಮಫ್ತಿ ಪೊಲೀಸಿಂಗ್

02-04-21 04:07 pm       Mangalore Correspondent   ಕರಾವಳಿ

ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಸ್ ನಿಲ್ದಾಣ, ಸಾರ್ವಜನಿಕ ಪ್ರದೇಶಗಳಲ್ಲಿ ಮಫ್ತಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ಕಮಿಷನರ್ ಹೇಳಿದ್ದಾರೆ.

ಮಂಗಳೂರು, ಎ.2: ನಗರದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಸ್ ನಿಲ್ದಾಣ, ಸಾರ್ವಜನಿಕ ಪ್ರದೇಶಗಳಲ್ಲಿ ಮಫ್ತಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗುವುದು. ಅದಕ್ಕಾಗಿ ಅಬ್ಬಕ್ಕ ಪೊಲೀಸ್ ದಳವನ್ನು ಮತ್ತೆ ಸಕ್ರಿಯ ಮಾಡಲಾಗುವುದು ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.

ಪಂಪ್ ವೆಲ್ ನಲ್ಲಿ ಬಸ್ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಶಶಿಕುಮಾರ್, ಘಟನೆ ಸಂಬಂಧಿಸಿ ಯುವತಿ ದೂರಿನ ಪ್ರಕಾರ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಎಷ್ಟು ಮಂದಿ ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ. ಸ್ಥಳದಲ್ಲಿ ಸಿಸಿಟಿವಿ ಪರಿಶೀಲಿಸಿ, ಯಾರೆಲ್ಲ ಇದ್ದರು ಎನ್ನುವುದನ್ನು ಪತ್ತೆ ಮಾಡಲಾಗುವುದು ಎಂದು ಹೇಳಿದರು.

ಯುವಕ ಮತ್ತು ಯುವತಿ ಕ್ಲಾಸ್ ಮೇಟ್ಸ್ ಆಗಿದ್ದಾರೆ. ಯುವತಿ ಬೆಂಗಳೂರಿನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಹುಡುಕುವುದಕ್ಕಾಗಿ ತೆರಳುತ್ತಿದ್ದಳು. ಬೆಂಗಳೂರಿನಲ್ಲಿ ಅಷ್ಟಾಗಿ ಪರಿಚಯ ಇಲ್ಲವೆಂದು ಯುವಕನನ್ನು ಜೊತೆಗೆ ಕರೆಸಿಕೊಂಡಿದ್ದಾಳೆ. ಈ ವಿಚಾರವನ್ನು ಸ್ವತಃ ಹುಡುಗಿಯೇ ತಿಳಿಸಿದ್ದಾಳೆ. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಇವರು ಬಸ್ ಏರುವುದನ್ನು ಗಮನಿಸಿದ ಯುವಕರು, ಪಂಪ್ ವೆಲ್ ನಲ್ಲಿ ಯುವತಿಯ ಪರಿಚಯಸ್ಥರು ಎಂದು ಹೇಳಿ ಮೊದಲು ಆಕೆಯನ್ನು ಬಸ್ಸಿನಿಂದ ಇಳಿಸಿದ್ದಾರೆ. ಬಳಿಕ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಯುವಕನಿಗೆ ಇರಿತದ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾನೆ. ಘಟನೆ ಬಗ್ಗೆ ಕಂಕನಾಡಿ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.

ಮೊನ್ನೆ ಸುರತ್ಕಲ್ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚುತ್ತಿರುವುದನ್ನು ಮನಗಂಡು ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಪೊಲೀಸ್ ಬೀಟ್ ಹೆಚ್ಚಿಸಲಾಗುವುದು. ಜೊತೆಗೆ ಅಬ್ಬಕ್ಕ ತಂಡವನ್ನು ಸಕ್ರಿಯಗೊಳಿಸಿ, ಮಫ್ತಿಯಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಲಾಗುವುದು. ರಾತ್ರಿ ವೇಳೆಯೂ ಇವರು ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

Read: ನೈತಿಕ ಪೊಲೀಸ್ ಗಿರಿ ; ಬಸ್ ತಡೆದು ಯುವತಿ ಜೊತೆಗಿದ್ದ ಯುವಕನಿಗೆ ಹಲ್ಲೆ !

In order to control Moral Policing in Mangalore Abbakka Police Team will be formed in Mangalore Said Police Commissioner Shahsi Kumar.