ಮಂಗಳೂರಿನಲ್ಲಿ ಮಕ್ಕಳನ್ನು ಭಿಕ್ಷಾಟನೆಗಿಳಿಸುವ ದಂಧೆ ಪತ್ತೆ ; ರಾಜಸ್ಥಾನ ಮೂಲದ 9 ಮಕ್ಕಳ ರಕ್ಷಣೆ !

10-04-21 12:25 pm       Mangalore Correspondent   ಕರಾವಳಿ

ಮಕ್ಕಳನ್ನು ಭಿಕ್ಷಾಟನೆಗೆ ಇಳಿಸಿ ಹಣ ಮಾಡುತ್ತಿರುವ ದಂಧೆಯನ್ನು ಪತ್ತೆಹಚ್ಚಿರುವ ಮಕ್ಕಳ ರಕ್ಷಣಾ ಘಟಕ ಒಂಬತ್ತು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. 

ಮಂಗಳೂರು, ಎ.10: ಸಣ್ಣ ಮಕ್ಕಳನ್ನು ಭಿಕ್ಷಾಟನೆಗೆ ಇಳಿಸಿ ಹಣ ಮಾಡುತ್ತಿರುವ ದಂಧೆಯನ್ನು ಪತ್ತೆಹಚ್ಚಿರುವ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಪೊಳಲಿ ದೇವಸ್ಥಾನದ ಪರಿಸರದಲ್ಲಿ ಕಾರ್ಯಾಚರಣೆ ನಡೆಸಿ, ಎರಡು ತಿಂಗಳ ಮಗು ಸೇರಿ ಒಂಬತ್ತು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. 

ಮಂಗಳೂರಿನ ಬೀದಿಗಳಲ್ಲಿ ಬಲೂನ್ ಮಾರುತ್ತಾ ಭಿಕ್ಷೆಗೆ ಇಳಿದಿದ್ದ ಮಕ್ಕಳು ಈಗ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಉತ್ಸವದ ಸಂದರ್ಭದಲ್ಲಿ ಭಿಕ್ಷಾಟನೆ ಶುರು ಮಾಡಿದ್ದರು. ಈ ವೇಳೆ ಜಿಲ್ಲಾ  ಮಕ್ಕಳ ಅಭಿವೃದ್ಧಿ ಸಮಿತಿ ಮತ್ತು ಮಕ್ಕಳ ರಕ್ಷಣಾ ಸಮಿತಿಯ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಎಲ್ಲರೂ ಏಳು ವರ್ಷದೊಳಗಿನ ಮಕ್ಕಳಾಗಿದ್ದು ಈ ಪೈಕಿ ಐದು ಮಂದಿ ಹುಡುಗರು. 

ಹಿಂದಿ ಮಾತನಾಡುವ ಮಕ್ಕಳು, ಅವುಗಳ ತಾಯಂದಿರು ಮಂಗಳೂರಿನ ಬೀದಿಗಳಲ್ಲಿ ಅಲೆದಾಡುತ್ತಿದ್ದರು. ಲಾಕ್ಡೌನ್ ಸಂದರ್ಭದಲ್ಲಿ ಇವರ ಕಾಟ ಸ್ವಲ್ಪ ಕಡಿಮೆಯಾಗಿತ್ತು. ಸಾರಿಗೆ ಸೇವೆ ಪುನಾರಂಭಗೊಂಡ ನಂತರ ರಸ್ತೆಗಳ ಮಧ್ಯೆ ಬಲೂನ್ ಮಾರುತ್ತಾ ಭಿಕ್ಷಾಟನೆ ನಡೆಸುತ್ತಿದ್ದುದು ಕಂಡುಬಂದಿದೆ.‌ ಈ ಮಕ್ಕಳು ಶಾಲೆಯ ಮುಖವನ್ನೇ ನೋಡಿರಲಿಕ್ಕಿಲ್ಲ ಎಂದು ಹೇಳುತ್ತಾರೆ, ಚೈಲ್ಡ್ ವೆಲ್ಫೇರ್ ಕಮಿಟಿ ಸದಸ್ಯರು. 

ಈ ರೀತಿ ಬೀದಿಗೆ ಬಿಟ್ಟ ಮಕ್ಕಳಲ್ಲಿ ಹೆಚ್ಚಿನವರು ರಾಜಸ್ಥಾನ ಮೂಲದವರು. ಮಕ್ಕಳ ಪೋಷಕರನ್ನು ಲಾಡ್ಜ್ ನಲ್ಲಿ ಇಡಲಾಗುತ್ತೆ. ಮಕ್ಕಳನ್ನು ಈ ರೀತಿ ಭಿಕ್ಷೆಗೆ ಇಳಿಸುವಲ್ಲಿ ಏಜಂಟರು ಕೆಲಸ ಮಾಡುತ್ತಾರೆ.  ಹತ್ತು ಕುಟುಂಬಗಳ ಎರಡು ಗುಂಪು ಮಂಗಳೂರಿನಲ್ಲಿ ಸಕ್ರಿಯ ಆಗಿರುವುದು ಕಂಡುಬರುತ್ತಿದೆ. ಈ ಮಕ್ಕಳ ತಾಯಂದಿರು ಕೂಡ ಮೈನರ್ ಆಗಿದ್ದು ಅವರನ್ನು ಭಿಕ್ಷಾಟನೆಗೆ ಇಳಿಸುವುದು ಇಲ್ಲವೇ ಇತರೇ ದಂಧೆಗಳಿಗೆ ಬಳಸಿಕೊಳ್ಳಲಾಗುತ್ತೆ. ವಾರಕ್ಕೊಮ್ಮೆ ಜಾಗ ಬದಲು ಮಾಡುತ್ತಾರೆ. ಒಂದೊಂದು ವಾರ ಒಂದೊಂದು ಕಡೆ ದೇವಸ್ಥಾನ, ಇನ್ನಿತರ ಜನ ಸೇರುವ ಪ್ರದೇಶಗಳಲ್ಲಿ ಮಕ್ಕಳನ್ನು ಬಿಡಲಾಗುತ್ತದೆ. ಸಂಜೆ ಹೊತ್ತಿಗೆ ಲಾಲ್ ಬಾಗಿನ ಫೇಮಸ್ ಐಸ್ ಕ್ರೀಂ ಪಾರ್ಲರ್ ಬಳಿ ಇರುತ್ತಾರೆ ಎಂದು ಕಮಿಟಿ ಸದಸ್ಯರು ಮಾಹಿತಿ ನೀಡಿದ್ದಾರೆ. ರಕ್ಷಣೆ ಮಾಡಿದ ಮಕ್ಕಳನ್ನು ಸುರಕ್ಷಿತವಾಗಿ ಇರಿಸಿ ಶಾಲೆಗೆ ಕಳಿಸುವ ವ್ಯವಸ್ಥೆ ಮಾಡುತ್ತೇವೆ ಎಂದಿದ್ದಾರೆ.

Mangalore Forced begging childline department rescues 9 children of Rajasthan who were forced to sell balloons and make money.