ನೈಟ್ ಕರ್ಫ್ಯೂ ; ಪೊಲೀಸರ ತಡೆಗೆ ಸಿಕ್ಕಿಬಿದ್ದ ವಾಹನಗಳು ! ನಗರ ಪೂರ್ತಿ ಬ್ಲಾಕ್ ! ವಾಗ್ವಾದ, ಸಂಘರ್ಷ !!

10-04-21 08:22 pm       Mangaluru correspondent   ಕರಾವಳಿ

ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ನಿನ್ನೆ ರಾತ್ರಿ ನಗರದಾದ್ಯಂತ ರೌಂಡ್ಸ್ ನಡೆಸಿದ್ದರು. ಈ ವೇಳೆ, ರಾತ್ರಿ ಹತ್ತು ಗಂಟೆ ಬಳಿಕ ಯಾವುದೇ ವಾಹನವನ್ನೂ ಬಿಡಬಾರದು ಎಂದು ಸೂಚನೆ ನೀಡಿದ್ದರಿಂದ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಭಾರೀ ವಾಗ್ವಾದ, ಅರಚಾಟಕ್ಕೆ ಕಾರಣವಾಯಿತು. 

ಮಂಗಳೂರು, ಎ.11: ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ನಿನ್ನೆ ರಾತ್ರಿ ನಗರದಾದ್ಯಂತ ರೌಂಡ್ಸ್ ನಡೆಸಿದ್ದರು. ಈ ವೇಳೆ, ರಾತ್ರಿ ಹತ್ತು ಗಂಟೆ ಬಳಿಕ ಯಾವುದೇ ವಾಹನವನ್ನೂ ಬಿಡಬಾರದು ಎಂದು ಸೂಚನೆ ನೀಡಿದ್ದರಿಂದ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಭಾರೀ ವಾಗ್ವಾದ, ಅರಚಾಟಕ್ಕೆ ಕಾರಣವಾಯಿತು. 

ಕದ್ರಿ ಸರ್ಕಿಟ್ ಹೌಸ್, ಬಿಜೈ ಕೆಎಸ್ಸಾರ್ಟಿಸಿ, ಲಾಲ್ ಬಾಗ್, ನಂತೂರು, ಲೇಡಿಹಿಲ್, ಪಂಪ್ವೆಲ್, ಪಡೀಲ್, ಕಂಕನಾಡಿ ಹೀಗೆ ಅಲ್ಲಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನ ಸಂಚಾರಕ್ಕೆ ತಡೆಹೇರಿದ್ದರು. ದಿಢೀರ್ ಆಗಿ ರಸ್ತೆ ತಡೆದಿದ್ದರಿಂದ ಇನ್ನೂ ಮನೆ ಸೇರದ ವಾಹನಗಳು ಸಿಕ್ಕಿಬಿದ್ದು ನರಳುವಂತಾಗಿತ್ತು. ದ್ವಿಚಕ್ರ ವಾಹನಗಳು, ಕಾರು, ಆಟೋ ರಿಕ್ಷಾಗಳಲ್ಲಿ ಪ್ರಯಾಣಿಕರು ಸಿಕ್ಕಿಬಿದ್ದು ಪೊಲೀಸರ ಜೊತೆ ಸಂಘರ್ಷಕ್ಕಿಳಿದಿದ್ದರು. 

ರಾತ್ರಿ ಹತ್ತು ಗಂಟೆ ನಂತ್ರ ಕರ್ಫ್ಯೂ ಇದೆಯೆಂದು ಗೊತ್ತಿಲ್ವಾ.. ಯಾಕೆ ಬಂದಿದ್ದು ಮತ್ತೆ ಎಂದು ಪೊಲೀಸರು ದಬಾಯಿಸಿದರೆ, ನಿಮಗೆ ರಾತ್ರಿ ಹತ್ತು ಗಂಟೆ ನಂತ್ರಾನೇ ಕೊರೊನಾ ಬರುವುದೆಂದು ಯಾರು ಹೇಳಿದ್ದು ? ಯಾರಾದ್ರೂ ತಜ್ಞರು ನೀಡಿರುವ ವರದಿ ಇದ್ಯಾ ಎಂದು ಜನರು ಪ್ರತಿಯಾಗಿ ಪೊಲೀಸರನ್ನೇ ದಬಾಯಿಸಿದರು. ಕೆಲವರು ನಾವು ಪಾರ್ಸೆಲ್, ಬಸ್ಸಿಗೆ ಹೋಗುವುದೆಂದು ಸಬೂಬು ನೀಡಿದರು. ನಿಮ್ಮ ಒಳಿತಿಗಾಗಿ ನಾವು ಇದನ್ನು ಮಾಡ್ತಿದೇವೆ, ನಮ್ಗೇನು ಲಾಭ ಇಲ್ಲ ಎಂದು ಕೆಲವು ಪೊಲೀಸರು ತಿಳಿ ಹೇಳುತ್ತಿದ್ದರು. ಎಲ್ಲ ಕಡೆಯೂ ಬ್ಯಾರಿಕೇಡ್ ಹಾಕಿದ್ದರಿಂದ ನಗರ ಪ್ರವೇಶದಲ್ಲಿ ರಸ್ತೆಗಳು ಪೂರ್ತಿ ಬ್ಲಾಕ್ ಆಗಿತ್ತು. ನಂತೂರು, ಪಡೀಲಿನಲ್ಲಿ ಭಾರೀ ಸಂಘರ್ಷವೇ ಏರ್ಪಟ್ಟಿತ್ತು. 

ಪಡೀಲಿನಲ್ಲಿ ಸಂಘರ್ಷ ; ಪೊಲೀಸರ ಜೊತೆ ರಮಾನಾಥ ರೈ ವಾಗ್ವಾದ 

ಪಡೀಲಿನಲ್ಲಿ ಜನರು ಮತ್ತು ಪೊಲೀಸರ ನಡುವೆ ಸಂಘರ್ಷ ನಡೆಯುತ್ತಿದ್ದಾಗಲೇ ಮಾಜಿ ಸಚಿವ ರಮಾನಾಥ ರೈ ಕಾರ್ಯ ನಿಮಿತ್ತ ಸಾಗುತ್ತಿದ್ದವರು ವಾಹನದಿಂದ ಇಳಿದು ಹೊರಬಂದರು. ಜನರ ಜೊತೆ ನಿಂತು ಪೊಲೀಸರಿಗೆ ಜೋರು ಮಾಡಿದ್ರು. ಹೀಗೆ ನಡುರಾತ್ರಿಯಲ್ಲಿ ವಾಹನಗಳನ್ನು ತಡೆದು ರಸ್ತೆ ಬ್ಲಾಕ್ ಮಾಡಿದರೆ ಹೇಗೆ ? ಕೊರೊನಾ ರಾತ್ರಿ ಮಾತ್ರ ಬರೋದಾ..? ಕರ್ಫ್ಯೂ ಹೇರಿದರೆ ಏನಾದ್ರೂ ವ್ಯವಸ್ಥೆ ಮಾಡಿ.. ಒಂದೋ ವಾರ್ನ್ ಮಾಡಿ ಕಳಿಸಿಕೊಡಿ, ರಸ್ತೆಯನ್ನೇ ಬ್ಲಾಕ್ ಮಾಡಿ ಜನರಿಗೆ ಯಾಕೆ ಕಷ್ಟ ಕೊಡ್ತೀರಿ.. ಆಂಬುಲೆನ್ಸ್ , ತುರ್ತು ಸಂಚಾರಕ್ಕೆ ಬರುವ ಮಂದಿಗೆ ತೊಂದ್ರೆ ಆಗಲ್ವೇ ಎಂದು ಅಲ್ಲಿದ್ದ ಪೊಲೀಸ್ ಅಧಿಕಾರಿಗಳನ್ನು ರಮಾನಾಥ ರೈ ತರಾಟೆಗೆತ್ತಿಕೊಂಡರು. 

ಸಿಕ್ಕಿಬಿದ್ದ ಆಂಬುಲೆನ್ಸ್ ; ಮಹಿಳೆಯಿಂದ ಪೊಲೀಸರಿಗೆ ತರಾಟೆ 

ಬಳಿಕ ರಾತ್ರಿ 11.30 ರ ವೇಳೆಗೆ ಎಲ್ಲ ಕಡೆಯೂ ವಾಹನಗಳನ್ನು ಬಿಡಲಾಯ್ತು. ಇದರಿಂದ ಒಂದೂವರೆ ಗಂಟೆ ಕಾಲ ವಾಹನ ಸವಾರರು ಪರದಾಡಿದ್ರು. ನಂತೂರು ಸರ್ಕಲ್ ನಲ್ಲಿ ಬ್ಲಾಕ್ ಆಗಿರುವಾಗಲೇ ಆಂಬುಲೆನ್ಸ್ ಬಂದಿದ್ದು ಅವಾಂತರ ಸೃಷ್ಟಿಯಾಯ್ತು. ಗರ್ಭಿಣಿ ಮಹಿಳೆಯನ್ನು ಕರೆತಂದಿದ್ದ ಆಂಬುಲೆನ್ಸಿಗೆ ಹೋಗುವುದಕ್ಕೇ ಜಾಗ ಇರಲಿಲ್ಲ. ಆಂಬುಲೆನ್ಸ್ ವಾಹನದಲ್ಲಿದ್ದ ಮಹಿಳೆಯೊಬ್ಬರು ರಸ್ತೆಗಿಳಿದು ಪೊಲೀಸರ ವರ್ತನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಏನ್ರೀ ಮಾಡ್ತಿದೀರಾ.. ಸೀರಿಯಸ್ ಕಂಡಿಶನ್ನಲ್ಲಿ ರೋಗಿ ಬರ್ತಿರುವಾಗ ರೋಡ್ ಬ್ಲಾಕ್ ಮಾಡಿದ್ದೀರಲ್ವಾ? ನಿಮ್ಗೇನಾದ್ರೂ ಮಾನ, ಮರ್ಯಾದೆ ಇದೆಯಾ.. ತಂದೆ, ತಾಯಿ, ಮಕ್ಕಳು ಯಾರೂ ಇಲ್ವಾ ಎಂದು ತರಾಟೆಗೆತ್ತಿಕೊಂಡರು. ಅಷ್ಟರಲ್ಲಿ ವಾಹನಗಳನ್ನು ಸರಿಸಿ, ಆಂಬುಲೆನ್ಸ್ ಹೋಗಲು ಬಿಡಲಾಯಿತು. 

ಇದಕ್ಕೂ ಮುನ್ನ ರಾತ್ರಿ 8.30ರ ಸುಮಾರಿಗೆ ಪದುವಾ ಗ್ರೌಂಡಿಗೆ ಬಂದಿದ್ದ ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಮ್ ಶಂಕರ್, ಜನರ ಜೊತೆ ಪೊಲೀಸರು ಸಂಯಮದಿಂದ ವರ್ತಿಸಬೇಕು, ಹೆಚ್ಚು ವಾಗ್ವಾದ ಮಾಡಿದವರ ವಾಹನಗಳನ್ನು ಸೀಜ್ ಮಾಡುವಂತೆ ಸೂಚನೆ ನೀಡಿದ್ದರು.

Police commissioner Shashi Kumar and DCP Hariram Shankar conduction inspection of vehicles and warned people of not stepping out of home after 10 PM.