ಪಬ್ ಜಿ ಮರ್ಡರ್ ; ಪೊಲೀಸರಿಂದ ಪ್ರಕರಣದ ಸತ್ಯಾಂಶ ತಿರುಚಲು ಯತ್ನ : ಸ್ಥಳೀಯರ ಆರೋಪ

12-04-21 08:41 pm       Mangaluru correspondent   ಕರಾವಳಿ

ಕಮಿಷನರ್ ಶಶಿಕುಮಾರ್ ಅವರು ಸಮರ್ಪಕ ತನಿಖೆ ನಡೆಸಿ ಬಾಲಕನ‌ ನಿಗೂಢ ಸಾವಿಗೆ ನ್ಯಾಯ ಒದಗಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಖಲೀಲ್ ತಲಪಾಡಿ ಆಗ್ರಹಿಸಿದ್ದಾರೆ. 

ಉಳ್ಳಾಲ,  ಎ.12:  ಕೆ.ಸಿ.ರೋಡಲ್ಲಿ ಕೆಲ ದಿನಗಳ ಹಿಂದೆ ದಾರುಣವಾಗಿ ಕೊಲೆಯಾದ ಅಪ್ರಾಪ್ತ ಬಾಲಕ ಆಕಿಫ್ ಪ್ರಕರಣದ ನೈಜಾಂಶವನ್ನು ಪೊಲೀಸರು ತಿರುಚಿದ್ದಲ್ಲದೆ, ಸಾಕ್ಷ್ಯ ನಾಶಕ್ಕೂ ಯತ್ನಿಸುತ್ತಿದ್ದು ಕಮಿಷನರ್ ಶಶಿಕುಮಾರ್ ಅವರು ಸಮರ್ಪಕ ತನಿಖೆ ನಡೆಸಿ ಬಾಲಕನ‌ ನಿಗೂಢ ಸಾವಿಗೆ ನ್ಯಾಯ ಒದಗಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಖಲೀಲ್ ತಲಪಾಡಿ ಆಗ್ರಹಿಸಿದ್ದಾರೆ. 

ಕೆ.ಸಿ ರೋಡಿನ ಅಪ್ರಾಪ್ತ ಬಾಲಕ ಆಕಿಫ್ ಕೊಲೆ ಪ್ರಕರಣದ ಸೂಕ್ತ ‌ತನಿಖೆಗೆ ಆಗ್ರಹಿಸಿ ಹಾಗೂ ನೈಜ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಜಸ್ಟಿಸ್ ಫಾರ್ ಆಕಿಫ್ ನಾಗರಿಕ ಸಮಿತಿ ಇಂದು ಕೆ.ಸಿ ರೋಡ್ ಜಂಕ್ಷನ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ಜನರನ್ನುದ್ದೇಶಿಸಿ ಮಾತನಾಡಿದರು.

ಆಕಿಫ್ ಕೊಲೆ ಪ್ರಕರಣದ ಬಗ್ಗೆ ಸ್ಥಳೀಯರಲ್ಲಿ ಅನೇಕ ಸಂಶಯಗಳಿವೆ. ಕೊಲೆ ಕೃತ್ಯ ನಡೆದ ಸಂದರ್ಭದಲ್ಲಿ ಕಮಿಷನರ್ ಶಶಿಕುಮಾರ್ ಪ್ರಕರಣದ ತನಿಖೆಯನ್ನು ತನ್ನ ಮಗನಿಗೇ ಆದ ಅನ್ಯಾಯದ ರೀತಿಯಲ್ಲಿ ಮಾಡುತ್ತೇನೆಂದು ಭರವಸೆ ನೀಡಿದ್ದರಾದರೂ ಅವರ ಕೆಳಗೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಪಬ್ ಜಿ ಗೇಮ್ ಹೆಸರಲ್ಲಿ ಹಳ್ಳ ಹಿಡಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಆಕಿಫ್ ಕೊಲೆಗೈದ ಆರೋಪಿ ಎನ್ನಲಾದ ಕೆ.ಸಿ. ನಗರದ ವಾಸ್ತವ್ಯ ಇರುವ ಬಾಡಿಗೆ ಮನೆಯ ಸಾಮಗ್ರಿಗಳನ್ನು ಪೊಲೀಸ್ ಬೆಂಗಾವಲಲ್ಲೇ ಶಿಫ್ಟ್ ಮಾಡಲು ಪ್ರಯತ್ನ ನಡೆದಿದೆ. ತಕ್ಷಣ ಸ್ಥಳೀಯರು ಕಮಿಷನರ್ ಶಶಿಕುಮಾರ್ ಗೆ ಮಾಹಿತಿ ನೀಡಿದ್ದು ಟೆಂಪೋದಲ್ಲಿ ತುಂಬಿದ ಸಾಮಾನುಗಳನ್ನು ಮತ್ತೆ ಮನೆಗೆ ತುಂಬಿಸುವ ಕಾರ್ಯ ಕಿರಿಯ ಪೊಲೀಸರು ಮಾಡಿದ್ದಾರೆ. 

ಇಲ್ಲಿ ಕೊಲೆಯ ಬಗೆಗಿನ ಸಾಕ್ಷ್ಯ ನಾಶ ಮಾಡುವ ಕಾರ್ಯ ನಡೆದಿದ್ದು ಸ್ಥಳೀಯ ಪೊಲೀಸರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಮನೆ ಸ್ಥಳಾಂತರಿಸಲು ಪ್ರಯತ್ನಿಸಿದ್ದಾರೆ. ಕೊಲೆಯ ಬಗ್ಗೆ ಬಾಲಾಪರಾಧಿಯ ಮನೆಗೆ ಪೊಲೀಸರು ಸ್ಥಳೀಯ ಮುಖಂಡರಿಗೆ ಮಾಹಿತಿ ನೀಡದೆ ಸ್ಥಳ ಮಹಜರಿಗೆ ಬಂದಿದ್ದು ಕೃತ್ಯಕ್ಕೆ ಬಳಸಲಾದ ಕಲ್ಲು, ಬಾಲಾಪರಾಧಿ ಧರಿಸಿದ್ದ ವಸ್ತ್ರವನ್ನು ಸ್ವಾಧೀನ ಪಡಿಸಿದ್ದು ಅನುಮಾನ ಮೂಡಿಸಿದೆ. ಬಾಲಾಪರಾಧಿ ಎನ್ನಲಾದವನ ಬರ್ತ್ ಸರ್ಟಿಫಿಕೇಟ್ ಬಗ್ಗೆ ಸಾಕ್ಷ್ಯಗಳನ್ನು ಪೊಲೀಸರು ಬಹಿರಂಗ ಪಡಿಸಿಲ್ಲ. ಕೊಲೆಯಾದ ಆಕಿಫ್ ಬೇರೆ ಯಾವುದಾದರೂ ಘಟನೆ ನೋಡಿದ ಫಲವಾಗಿ ಅಥವಾ ಬಾಲಕನನ್ನು ಬೇರೇನೂ ಅನೈತಿಕ ಕೃತ್ಯಕ್ಕೆ ಬಳಸೋ ಸಮಯದಲ್ಲಿ ಬಾಲಕ ತಪ್ಪಿಸಲು ಯತ್ನಿಸಿದಾಗ ಘಟನೆ ನಡೆದಿದೆಯೇ ಎಂಬುದರ ಬಗ್ಗೆ ಬಲವಾದ ಸಂಶಯಗಳಿವೆ. ಆದರೆ ಇದೀಗ ಪಬ್ ಜಿ ಗೇಮ್ ನೆರಳಲ್ಲಿ ಪ್ರಕರಣದ ನೈಜತೆ ಅದೃಶ್ಯವಾಗಿದೆ. ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಯನ್ನು ಅನಾವರಣಗೊಳಿಸಬೇಕು. ಆಧುನಿಕ ತಂತ್ರಜ್ಞಾನ ಇದ್ದರೂ ಮೃತ ಆಕಿಫ್ ಬಳಸಿದ್ದ ಮೊಬೈಲ್ ಇನ್ನೂ ಪತ್ತೆಯಾಗಿಲ್ಲವೆನ್ನುವುದು ಹಾಸ್ಯಾಸ್ಪದ. ಪೊಲೀಸರ ತನಿಖೆಯಲ್ಲಿ ನಮಗೆ ನ್ಯಾಯ ಸಿಗದಿದ್ದರೆ ಸಿಬಿಐ ಕದ ತಟ್ಟಲು ತಯಾರಿದ್ದೇವೆ ಎಂದು ಎಚ್ಚರಿಸಿದರು. 

ಸಾಮಾಜಿಕ ಕಾರ್ಯಕರ್ತ ಅಶ್ರಫ್ ಕೆ.ಸಿ ರೋಡ್ ಮಾತನಾಡಿ, ಕೊರಗಜ್ಜನ ಕಟ್ಟೆಯ ಅಪವಿತ್ರ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಿ ಬಿಟ್ಟು ಕಳಿಸಿದ ಕಮಿಷನರ್ ಶಶಿಕುಮಾರ್ ಅವರಿಂದಲೇ ಆಕಿಫ್ ಕೊಲೆ ಪ್ರಕರಣದಲ್ಲಿ ಎಡವಟ್ಟಾಗಲೂ ಸಾಧ್ಯವಿದೆ. ಈ ಕುಕೃತ್ಯ ಒಬ್ಬನೇ ಮಾಡಲು ಸಾಧ್ಯವಿಲ್ಲ. ಕೊಲೆ ಮಾಡಿ ಮೃತದೇಹವನ್ನು ಎಳೆದೊಯ್ದು ತೆಂಗಿನ ಗರಿಗಳನ್ನು ಮುಚ್ಚಿಡಲು ಒಬ್ಬನಿಂದ ಸಾಧ್ಯವಿಲ್ಲ. ಬಾಲಾಪರಾಧಿಯ ಪೋಷಕರಿಗೂ ಕೊಲೆಯ ಬಗ್ಗೆ ತಿಳಿದಿತ್ತು. ಕ್ರಿಮಿನಲ್ ಬಾಲಕ ಈ ಹಿಂದೆ ಮೊಬೈಲ್ ಕದ್ದಿರುವ ಪ್ರಕರಣದಲ್ಲಿದ್ದು ಪೊಲೀಸರಲ್ಲಿ ಮಾತಿನ ಚಾಲಾಕಿಯಲ್ಲಿ ತಪ್ಪಿಸಿಕೊಂಡಿದ್ದಾನೆ ಎಂದರು.

ಹೋರಾಟ ಸಮಿತಿ ಮುಖಂಡರಾದ ಕೋಟೆಕಾರ್ ಪಟ್ಟಣ ಸದಸ್ಯ ಮೊಯ್ದಿನ್ ಬಾವ, ತಾಲೂಕು ಪಂಚಾಯತ್ ಸದಸ್ಯರಾದ ಸಿದ್ದೀಕ್ ಕೊಳಂಗೆರೆ, ಮಾಜಿ ಪಂಚಾಯತ್ ಸದಸ್ಯರಾದ ಇಬ್ರಾಹಿಂ ಕೆ.ಸಿ ರೋಡ್, ವಿದ್ಯಾರ್ಥಿ ಸಂಘಟನೆ ಮುಖಂಡ ಸವಾದ್, ಕೊಲೆಯಾದ ಆಕಿಫ್ ಪೋಷಕರು ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಇದ್ದರು.


A 12 year old boy who was murdered by minor over pubg game revenge has taken a news twist where public are seeking true justice in the death of the boy. A huge protest was held at K C road in Ullal.