ಸ್ಮಾರ್ಟ್ ಹೆಸರಲ್ಲಿ ಹೇಲು ತಿನ್ನುವ ಕೆಲಸ ; ಕಾಂಕ್ರೀಟ್ ಅಗೆಯುತ್ತಲೇ ದುಡ್ಡು ಪೋಲು ; ನಾಯಕರಿಗೆ ಕಟೌಟ್ ಕ್ರೆಡಿಟ್ಟು !

13-04-21 06:50 pm       Mangaluru correspondent   ಕರಾವಳಿ

ಮಂಗಳೂರಿನ ಸ್ಮಾರ್ಟ್ ಸಿಟಿ ಕಾಮಗಾರಿ ಹೇಗೆ ನಡೀತಿದೆ ಅಂದ್ರೆ, ನರಿ ಹೇಲು ತಿಂದು ಮೇಕೆ ಮೂತಿಗೆ ಒರೆಸಿದ ರೀತಿ.. ಅತ್ತ ಕಾಸು ಬಿಚ್ಚಬೇಕು, ದುಡ್ಡು ಖರ್ಚಾಗಿ ನೀರು ಹರಿದಂತೆ ಖಾಲಿಯಾಗಬೇಕು.

Photo credits : Gautham, Headline Karnataka Photo Journalist

ಮಂಗಳೂರು, ಎ.13: ಮಂಗಳೂರಿನ ಸ್ಮಾರ್ಟ್ ಸಿಟಿ ಕಾಮಗಾರಿ ಹೇಗೆ ನಡೀತಿದೆ ಅಂದ್ರೆ, ನರಿ ಹೇಲು ತಿಂದು ಮೇಕೆ ಮೂತಿಗೆ ಒರೆಸಿದ ರೀತಿ.. ಅತ್ತ ಕಾಸು ಬಿಚ್ಚಬೇಕು, ದುಡ್ಡು ಖರ್ಚಾಗಿ ನೀರು ಹರಿದಂತೆ ಖಾಲಿಯಾಗಬೇಕು. ಕೆಲಸ ಮಾತ್ರ ಸಾಗಬಾರದು ಅನ್ನುವ ಹಾಗೆ.. ನಾಯಕರ ಕಟೌಟ್ ಮಾತ್ರ ಮಿಂಚುತ್ತಿರಬೇಕು! ಹಂಪನಕಟ್ಟೆ ವೃತ್ತದಲ್ಲಿ ಕಾಂಕ್ರೀಟ್ ಕಾಮಗಾರಿ ಮಾಡುವುದಕ್ಕೆಂದು ಕಳೆದ ನವೆಂಬರ್ 8ರಂದು ರಸ್ತೆ ಬಂದ್ ಮಾಡಲಾಗಿತ್ತು. ಎರಡು ತಿಂಗಳಲ್ಲಿ ಕೆಲಸ ಮುಗಿಸಿ, ಜನವರಿ 6ರಂದು ರಸ್ತೆಯನ್ನು ಸಾರ್ವಜನಿಕ ಉಪಯೋಗಕ್ಕೆ ಬಿಟ್ಟುಕೊಡಬೇಕಿತ್ತು.

ಜನವರಿ ಮುಗಿದು ಎಪ್ರಿಲ್ ಕಳೆಯುತ್ತಾ ಬಂತು. ಇನ್ನೂ ಕಾಮಗಾರಿ ಮುಗಿದಿಲ್ಲ. ನಡುವೆ, ಒಂದು ತಿಂಗಳ ಕಾಲ ಸ್ಮಾರ್ಟ್ ಸಿಟಿ ಯೋಜನೆಯವರು ಮಾನದಂಡ ಪ್ರಕಾರ ಕೆಲಸ ಮಾಡುತ್ತಿಲ್ಲ ಎಂದು ಇಡೀ ಯೋಜನೆಗೆ ಹೈಕೋರ್ಟ್ ಬ್ರೇಕ್ ಹಾಕಿತ್ತು. ಆಬಳಿಕ ಕೆಲಸ ಆರಂಭಗೊಂಡಿದ್ದು ಅರ್ದಂಬರ್ಧ ಕಾಮಗಾರಿ ನಡೆಯುತ್ತಲೇ ಇದೆ. ಇದರ ನಡುವೆ, ಹೊಸತಾಗಿ ಸಿಟಿ ಸೆಂಟರ್ ಮಾಲ್ ಎದುರುಗಡೆಯ ಕೆ.ಎಸ್. ರಾವ್ ರಸ್ತೆಯನ್ನು ಬಂದ್ ಮಾಡಲಾಗಿದೆ. ಪ್ರಭಾತ್ ಟಾಕೀಸ್ ಬದಿಯಲ್ಲಿರುವ ದೊಡ್ಡ ತೋಡಿಗೆ ಸೇತುವೆಯನ್ನೇ ಮಾಡದೇ ಹತ್ತು ವರ್ಷಗಳ ಹಿಂದೆ ಕೆ.ಎಸ್. ರಾವ್ ರಸ್ತೆಗೆ ಕಾಂಕ್ರೀಟ್ ಹಾಕಲಾಗಿತ್ತು. ಈಗ ಮತ್ತೆ ಕಾಂಕ್ರೀಟ್ ರಸ್ತೆಯನ್ನು ಅಗೆದು ಸೇತುವೆಗೆಂದು ಮತ್ತೊಂದಷ್ಟು ಕೋಟಿ ಸುರಿಯಲು ಯೋಜನೆ ಹಾಕಲಾಗಿದೆ.

ಇದಕ್ಕಾಗಿ ನಗರದ ಹೃದಯಭಾಗದ ಕೆ.ಎಸ್.ರಾವ್ ರಸ್ತೆಯನ್ನು ಬಂದ್ ಮಾಡಿ ಅಗೆಯಲಾಗುತ್ತಿದೆ. ಇದೇ ವೇಳೆ, ಶರವು ಬಳಿ ಮತ್ತೊಂದು ಸೇತುವೆ ಮಾಡುವುದಕ್ಕಾಗಿ ರಸ್ತೆ ಬಂದ್ ಮಾಡಲು ಪೊಲೀಸ್ ಕಮಿಷನರ್ ಮೂಲಕ ಟ್ರಾಫಿಕ್ ಡೈವರ್ಟ್ ಮಾಡಿಸಿ ಆದೇಶ ಮಾಡಲಾಗಿದೆ. ಒಟ್ಟೊಟ್ಟಿಗೆ ಕಾಮಗಾರಿ ನಡೆಯುದೇನೋ ಸರಿ. ಆದರೆ, ಎರಡೂ ಕಡೆ ಸೇತುವೆ ಕಾಮಗಾರಿ ಹತ್ತು ವರ್ಷಗಳ ಹಿಂದೆ ಕೆ.ಎಸ್.ರಾವ್ ರಸ್ತೆಯ ಕಾಂಕ್ರೀಟ್ ಕಾಮಗಾರಿ ಆಗುವಾಗಲೇ ನಡೆಯಬೇಕಿತ್ತು. ಸರಕಾರಿ ಹಣವನ್ನು ಕಿತ್ತು ಜೇಬಿಗಿಳಿಸುವ ಇಂಜಿನಿಯರ್ ಗಳು ಮತ್ತು ಕಾರ್ಪೊರೇಟರ್ ಗಳಿಂದಾಗಿ ಅಡ್ಡಲಾಗಿರುವ ತೋಡಿಗೆ ಸೇತುವೆಯನ್ನೆ ಮಾಡದೇ ಕಾಂಕ್ರೀಟ್ ಸ್ಲಾಬ್ ಮುಚ್ಚಿದ್ದರು. ಅಲ್ಲಿ ಹಿಂದೆ ಇದ್ದ ಸಣ್ಣ ಚರಂಡಿ ಬ್ಲಾಕ್ ಆಗಿ ಪ್ರತಿಬಾರಿ ಮಳೆ ಬಂದಾಗಲೂ ಕೆ.ಎಸ್. ರಾವ್ ರಸ್ತೆ ತೋಡಿನಂತಾಗುತ್ತಿತ್ತು. ಸಿಟಿ ಸೆಂಟರ್ ಬರುತ್ತಿದ್ದ ಜನರು ಮಳೆನೀರಿನಲ್ಲೇ ಈಜಿಕೊಂಡು ದಡ ಸೇರುತ್ತಿದ್ದರು.

ಈಗ ಯಾರೋ ಸ್ಮಾರ್ಟ್ ಸಿಟಿಯಡಿ ಸೇತುವೆ ಮಾಡಲು ಕಿವಿಯೂದಿದ್ದಾರೆ.. ಸ್ಮಾರ್ಟ್ ದುಡ್ಡಿನಲ್ಲಿ ಮತ್ತೊಂದಷ್ಟು ಕೋಟಿ ಹೊಡೆಯಲು ಪ್ಲಾನ್ ಹಾಕಿದ್ದಾರೆ. ಅತ್ತ ಮಳೆ ಬರುತ್ತಿದೆ ಎನ್ನುವಾಗ ರಸ್ತೆಯನ್ನು ಅಗೆದು ಮತ್ತೆ ಇಡೀ ನಗರವನ್ನು ಬ್ಲಾಕ್ ಮಾಡಲು ಮಹಾನಗರ ಪಾಲಿಕೆಯ ಆಡಳಿತ ಯೋಜನೆ ಹಾಕಿದೆ. ಮುಂದಾಲೋಚನೆ ಇಲ್ಲದ ಆಡಳಿತಗಾರರು ರಸ್ತೆಗೆ ಕಾಂಕ್ರೀಟ್ ಹಾಕುವುದು ಮತ್ತು ಅದನ್ನು ಅಗೆಯುವುದನ್ನೇ ಕಾಯಕವಾಗಿಸಿದ್ದಾರೆ. ಸೇತುವೆ ಕಾಮಗಾರಿಗಾಗಿ ಕೆ.ಎಸ್. ರಾವ್ ರಸ್ತೆಯನ್ನು ಎ.12ರಿಂದ ಜೂನ್ 11ರ ವರೆಗೆ 60 ದಿನಗಳ ಕಾಲ ಬಂದ್ ಮಾಡಿ ಕಮಿಷನರ್ ಆದೇಶ ಮಾಡಿದ್ದಾರೆ. ಇದೇ ದೊಡ್ಡ ಸಾಧನೆಯೆಂದು ಹೇಳಿ ಬೇಕೂಫಗಳೆಲ್ಲ ಸೇರಿ ಜನಪ್ರತಿನಿಧಿಗಳ ಕಟೌಟ್ ಕೂಡ ಹಾಕಿಸ್ಕೊಂಡಿದ್ದಾರೆ. ಇವರ ಅಪ್ಪನ ಮನೆಯಿಂದ ಹಣ ತಂದು ಸುರಿವ ಹಾಗೆ..!  

ಹಿಂದೆ ಕಾಂಕ್ರೀಟ್ ಆಗುವಾಗ, ಸೇತುವೆ ಮಾಡಿಲ್ಲ ಯಾಕೆಂದು ಈಗಿನ ಮಂದಿಯಲ್ಲಿ ಕೇಳಿದರೆ, ಆದು ಆಗಿನವರನ್ನೇ ಕೇಳಬೇಕು ಎನ್ನುತ್ತಾರೆ. ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆಯೋ ಅನ್ನುವ ರೀತಿ ಸ್ಮಾರ್ಟ್ ಸಿಟಿಯ ದುಡ್ಡನ್ನು ಬಾಚುತ್ತಿದ್ದಾರೆ, ಈಗಿನ ಬಿಜೆಪಿಯ ಕುಳಗಳು. ಹಂಪನಕಟ್ಟೆಯ ಕೆಲಸವೇ ಐದಾರು ತಿಂಗಳಾದ್ರೂ ಮುಗಿದಿಲ್ಲ. ಇನ್ನು ಈ ಸೇತುವೆ ಯಾವಾಗ ಆಗುತ್ತೋ.. ಮುಗ್ರೋಡಿ ಕನ್ ಸ್ಟ್ರಕ್ಷನ್ ನವರಿಗೆ ಸೇತುವೆ ಕಾಮಗಾರಿಯ ಕಾಂಟ್ರಾಕ್ಟ್ ಕೊಟ್ಟಿದ್ದಾರೆ. ಬೇಗ ಮುಗಿದರೆ ಅದರ ಕ್ರೆಡಿಟ್ಟು ಅವರಿಗೇ ಸಲ್ಲಬೇಕು.

ರಥಬೀದಿಯಲ್ಲೂ ಸ್ಮಾರ್ಟ್ ಎಡವಟ್ಟು !

ಮೊನ್ನೆಯಷ್ಟೇ ರಥಬೀದಿಯಲ್ಲಿ ಕಾಂಕ್ರೀಟ್ ರಸ್ತೆ ಮಾಡಲಾಗಿತ್ತು. ಆದರೆ, ಮೊದಲ ಮಳೆಗೇ ನೀರು ಹರಿಯಲು ಜಾಗ ಸಾಲದೆ ಕಾಂಕ್ರೀಟ್ ರಸ್ತೆ ತೋಡಿನಂತಾಗಿತ್ತು. ಈ ಬಗ್ಗೆ ರಸ್ತೆ ಕೆಲಸ ಆರಂಭಿಸುವಾಗಲೇ ಅಲ್ಲಿನ ಕೆಲವರು ಆಕ್ಷೇಪ ತೆಗೆದಿದ್ದರು. ಡ್ರೈನೇಜ್ ಚರಂಡಿಗೆ ಐದಿಂಚು ಗಾತ್ರದ ಪೈಪ್ ಹಾಕಲಾಗಿತ್ತು. ಇದರಿಂದ ಡ್ರೈನೇಜ್ ನೀರು ಹರಿಯಲು ಸಾಧ್ಯವೇ ಎಂದು ಕೇಳಿದ್ದರು. ಡ್ರೈನೇಜ್ ಬೇರೆ, ಮಳೆನೀರು ಹರಿಯುವ ಚರಂಡಿ ಬೇರೆ. ಆದರೆ, ರಥಬೀದಿ ರಸ್ತೆಯ ಎರಡೂ ಚರಂಡಿಗಳಲ್ಲಿ ಮೊದಲ ಮಳೆಗೆ ನೀರೇ ಹರಿದಿಲ್ಲ. ಇನ್ನು ಕುಂಭದ್ರೋಣ ಮಳೆಗೆ ಇನ್ನೇನು ಆಗುತ್ತೋ.. ಏನೇ ಸಂಕಷ್ಟ ಆದ್ರೂ ಜನರು ಚರಂಡಿ ನೀರಿನಲ್ಲಿ ಈಜಿಕೊಂಡಾದ್ರೂ ಹೋಗುತ್ತಾರೆ, ಅಷ್ಟೇ ಬಿಡಿ. ಯಾರನ್ನೂ ಬೈಬೇಡಿ.. ಬೇಕೂಫಗಳೆಲ್ಲ ಮೇಲಿನಿಂದ ಇಳಿದು ಬಂದವರಲ್ವೇ..? 

Mangalore R s rao road soon to be closed with traffic diversion for Underground Drainage projects. Commuters slams at mcc for their unplanned work in the name of Smart city.