ಮಂಗಳೂರು ವಿಮಾನ ನಿಲ್ದಾಣಕ್ಕೆ ಅದಾನಿ ಹೆಸರಿಟ್ಟಿದ್ದೇ ಕಾನೂನು ಬಾಹಿರ ! ಕಾಂಗ್ರೆಸ್ ಚಳವಳಿ ಎಚ್ಚರಿಕೆ

14-04-21 06:56 pm       Mangaluru correspondent   ಕರಾವಳಿ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆಗೆ ಗುತ್ತಿಗೆ ನೀಡಿದ ಬಳಿಕ ವಿಮಾನ ನಿಲ್ದಾಣಕ್ಕೆ ಅದಾನಿ ಹೆಸರು ಸೇರಿಸಿದ್ದೇ ಕಾನೂನುಬಾಹಿರ ಎಂಬುದು ಮಾಹಿತಿ ಹಕ್ಕಿನಲ್ಲಿ ದೃಢಪಟ್ಟಿದೆ.

ಮಂಗಳೂರು, ಎ.14: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆಗೆ ಗುತ್ತಿಗೆ ನೀಡಿದ ಬಳಿಕ ವಿಮಾನ ನಿಲ್ದಾಣಕ್ಕೆ ಅದಾನಿ ಹೆಸರು ಸೇರಿಸಿದ್ದೇ ಕಾನೂನುಬಾಹಿರ ಎಂಬುದು ಮಾಹಿತಿ ಹಕ್ಕಿನಲ್ಲಿ ದೃಢಪಟ್ಟಿದೆ. ಆದುದರಿಂದ ಈ ಬಗ್ಗೆ ವಿಮಾನ ನಿಲ್ದಾಣ ಪ್ರಾಧಿಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ವಿಮಾನ ನಿಲ್ದಾಣದಿಂದ ಅದಾನಿ ಹೆಸರು ಕೈ ಬಿಡದಿದ್ದರೆ ಕಾಂಗ್ರೆಸ್ ವತಿಯಿಂದ ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಎಚ್ಚರಿಸಿದ್ದಾರೆ.

ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೌಲಭ್ಯ ಕಡಿತದ ಜೊತೆಗೆ ವಿಮಾನ ಯಾನ ಸ್ಥಗಿತ, ಗುತ್ತಿಗೆ ಒಪ್ಪಂದದ ಉಲ್ಲಂಘನೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ 'ಏರ್‌ಪೋರ್ಟ್‌ ಉಳಿಸಿ ಚಳವಳಿ' ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಮಂಗಳೂರು - ಮುಂಬೈಗೆ ವಿಮಾನಯಾನ ಕಡಿತ ಮಾಡಲಾಗಿದೆ. ಮೈಸೂರಿಗೆ  ಇದ್ದ ಒಂದು ಇಂಡಿಯನ್ ಏರ್ ಲೈನ್ಸ್ ಅನ್ನೂ ರದ್ದುಗೊಳಿಸಲಾಗಿದೆ. ಯಾವುದೇ ವಿಮಾನ ಕಂಪನಿಗಳು  ಮಂಗಳೂರಿನಿಂದ ವಿಮಾನ ಓಡಿಸಲು ಹಿಂದೇಟು ಹಾಕುತ್ತಿವೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯ ಉದ್ದೇಶವೇ ಈಡೇರದಂತಾಗಿದೆ. ಖಾಸಗೀಕರಣದ ಹೆಸರಿನಲ್ಲಿ ಒಪ್ಪಂದ ಮಾಡಿಕೊಂಡು ನಿಯಮ ಉಲ್ಲಂಘನೆ ಮಾಡಿದರೂ ಕ್ರಮ ಕೈಗೊಳ್ಳದಿರುವುದು ಯಾವ ನ್ಯಾಯ ಎಂದು ಐವನ್ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರಿನಿಂದ ಗೋವಾ, ಕ್ಯಾಲಿಕಟ್, ಕೊಚ್ಚಿನ್, ಹೈದರಾಬಾದ್, ಚೆನ್ನೈ, ಮೈಸೂರು, ಕಲಬುರಗಿ, ಬೀದರ್‌ ಮುಂತಾದ ಕಡೆ ವಿಮಾನಯಾನ ಒದಗಿಸಲು ಯಾವ ಕಾರಣಕ್ಕಾಗಿ ವಿಮಾನ ನಿಲ್ದಾಣ ಪ್ರಾಧಿಕಾರ ವಿಫಲವಾಗಿದೆ ಎಂದು ಸ್ಪಷ್ಟನೆ ನೀಡಬೇಕು. 'ಗೋ ಏ‌ರ್' ವಿಮಾನ ಯಾನ ಕಂಪನಿ ಮುಂಬೈ ಮತ್ತು ಬೇರೆ ಬೇರೆ ಪ್ರದೇಶಗಳಿಗೆ ವಿಮಾನ ಓಡಿಸಲು ಮುಂದೆ ಬಂದಿದ್ದರೂ, ಅದಕ್ಕೆ ಅವಕಾಶ ಕೊಟ್ಟಿಲ್ಲ ಎಂದು ಐವನ್ ಆರೋಪಿಸಿದ್ದಾರೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮನ್ನಣೆ ಪಡೆದು 16 ವರ್ಷಗಳಾದರೂ ಗಲ್ಫ್ ರಾಷ್ಟ್ರಗಳಿಗೆ ಒಟ್ಟು ಬೇರೆ ಯಾವುದೇ ಪ್ರವಾಸೋದ್ಯಮ ರಾಷ್ಟ್ರಗಳಿಗೆ ಅದರಲ್ಲೂ, ಶ್ರೀಲಂಕಾ, ಸಿಂಗಾಪುರ, ಥೈಲ್ಯಾಂಡ್, ಬ್ಯಾಕಾಂಕ್ ಮುಂತಾದ ರಾಷ್ಟ್ರಗಳಿಗೆ ನೇರ ಯಾನವನ್ನು ಒದಗಿಸಲು ಏರ್ ‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಸಂಪೂರ್ಣ ವಿಫಲವಾಗಿದೆ ಎಂದು ಐವನ್ ಆರೋಪಿಸಿದ್ದಾರೆ.

ತಿರುಪತಿ, ಶಿರ್ಡಿ ಪ್ರದೇಶಗಳಿಗೆ ಅಲ್ಲಿ ಏರ್‌ಪೋರ್ಟ್‌ ಇದ್ದರೂ, ಅನೇಕ ಭಕ್ತಾದಿಗಳು ಮಂಗಳೂರಿನಿಂದ ಪ್ರಯಾಣ ಮಾಡುವವರಿದ್ದಾರೆ. ಆದರೆ ಇಲ್ಲಿನ ಪ್ರಯಾಣಿಕರಿಗೆ ವಿಮಾನವನ್ನೇ ಒದಗಿಸಿಲ್ಲ, ಬದಲಾಗಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ ಎಂದು ಹೇಳುವ ಮೂಲಕ ಅಂತಾರಾಷ್ಟ್ರೀಯ ನಿಲ್ದಾಣದ ಮನ್ನಣೆಯನ್ನು ಕಳೆದುಕೊಳ್ಳುವ ಸ್ಥಿತಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದೆ ಎಂದು ಐವನ್ ತಿಳಿಸಿದರು. 

ವಿಮಾನ ನಿಲ್ದಾಣದಿಂದ ನಗರಕ್ಕೆ ಬರಲು ಸೂಕ್ತ ಬಸ್ ವ್ಯವಸ್ಥೆ ಇಲ್ಲ. ವಿಮಾನ ನಿಲ್ದಾಣದಲ್ಲಿ ಆಗಮನ ಮತ್ತು ನಿರ್ಗಮನ ದಾರಿ ಪ್ರತ್ಯೇಕವಾಗಿರಬೇಕಿತ್ತು. ಆದರೆ ಹಲವು ವರ್ಷಗಳಿಂದ ಕಾಮಗಾರಿ ನಡೆದರೂ ಇನ್ನೂ ಈ ವ್ಯವಸ್ಥೆ ಜಾರಿಯಾಗಿಲ್ಲ. ವಿಮಾನ ನಿಲ್ದಾಣದ ಕಾಮಗಾರಿ ವಿಳಂಬಗತಿಯಲ್ಲಿ ಸಾಗುತ್ತಿದ್ದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂಲೂ 2- ಏರೋ ಬ್ರಿಡ್ಜ್ ಸ್ಥಾಪಿಸಲು ಸಾಧ್ಯವಾಗಿಲ್ಲ. ಶಾಲಾ ಮಕ್ಕಳಿಗೆ ವಿಮಾನ ಹಾರಾಟ ಮತ್ತು ಆಗಮನವನ್ನು ವೀಕ್ಷಿಸಲು ಇದ್ದ ಏಮಾನ ವೀಕ್ಷಣೆ ಗ್ಯಾಲರಿಯನ್ನು ತೆಗೆದುಹಾಕಲಾಗಿದೆ ಎಂದವರು ಹೇಳಿದರು.

ಉಡಾನ್ ಸ್ಕೀಮ್ ಅಡಿ ಉಡುಪಿಯಲ್ಲಿ ವಿಮಾನ ನಿಲ್ದಾಣ ಪ್ರಾರಂಭಿಸಿ, ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ಮಾಡಬಹುದು. ಈ ನಿಟ್ಟಿನಲ್ಲಿ ನಮ್ಮ ಸಂಸದರ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಈ ಬಗ್ಗೆ ಕೂಡಲೇ ವಿಮಾನಯಾನ ಸಚಿವರು ಗಮನಹರಿಸಬೇಕು ಎಂದು ಐವನ್ ಡಿಸೋಜ ಹೇಳಿದರು. 

ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ಮನಪಾ ವಿಪಕ್ಷ ನಾಯಕ ಎ.ಸಿ.ವಿನಯರಾಜ್, ದ.ಕ. ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಕಾಂಗ್ರೆಸ್ ಮುಖಂಡರಾದ  ಪ್ರಕಾಶ್ ಸಾಲ್ಯಾನ್ ,ಅಪ್ಪಿ, ಭಾಸ್ಕರ ರಾವ್ , ಸುಭೋದ್ ಆಳ್ವ, ವಿವೇಕ್ ರಾಜ್, ಆಲ್ವಿಸ್ಟರ್ ಮೊದಲಾದವರು ಉಪಸ್ಥಿತರಿದ್ದರು.

Mangalore Name of adani should be removed from mangalore airport slammed Ivan Dsouza during a press meet held at Congress office in Mangalore.