ಕಟೀಲಿನ ಬಸ್ ನಿಲ್ದಾಣ ಉದ್ಘಾಟನೆಯ ಫೋಟೋ ವೈರಲ್ ; ಕಾರಣ ನಿಗೂಢ !

17-04-21 02:57 pm       Mangalore Correspondent   ಕರಾವಳಿ

ಕೋವಿಡ್ ಹಿನ್ನೆಲೆಯಲ್ಲಿ ಸುರಕ್ಷಿತವಾಗಿರಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂಬ ಸಲಹೆಯ ಮಾತುಗಳನ್ನೂ ನಿಲ್ದಾಣದ ಗೋಡೆಯಲ್ಲೇ ಬರೆಯಲಾಗಿದೆ. ಆದರೆ ನಳಿನ್ ಕುಮಾರ್ ಕಟೀಲು ಸೇರಿದಂತೆ ಯಾರಲ್ಲೂ ಮಾಸ್ಕೂ ಇರಲಿಲ್ಲ. ನಡುವೆ ಅಂತರವೂ ಇರಲಿಲ್ಲ.

ಮಂಗಳೂರು, ಎ.17: ಹೇಳುವುದು ಶಾಸ್ತ್ರ ಇಕ್ಕುವುದು ಗಾಳ ಅಂತಾರಲ್ಲ. ಈ ಗಾದೆ ಮಾತು ಕೆಲವು ಸಂದರ್ಭಗಳಲ್ಲಿ ರಾಜಕಾರಣಿಗಳಿಗೆ ಚೆನ್ನಾಗಿಯೇ ಅನ್ವಯಿಸುತ್ತದೆ. ನಿನ್ನೆ ಕಟೀಲಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಕಾರ್ಯಕ್ರಮ ಇತ್ತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸೇರಿ ಶಾಸಕರು, ಕಟೀಲು ದೇಗುಲದ ಆಡಳಿತ ಕಮಿಟಿ ಸದಸ್ಯರು, ಅರ್ಚಕರು, ಸ್ಥಳೀಯ ಪುಢಾರಿಗಳು ಭಾಗವಹಿಸಿದ್ದರು. ಇದರಲ್ಲಿ ಹೆಚ್ಚು ವಿಶೇಷವಾಗಿ ಕಂಡಿದ್ದು ಕಟೀಲಿನ ನೂತನ ಬಸ್ ನಿಲ್ದಾಣದ ಉದ್ಘಾಟನೆ ಕಾರ್ಯಕ್ರಮ.

ಕಟೀಲಿನಲ್ಲಿ ಹೊಸತಾದ ಪಾರ್ಕಿಂಗ್ ಸೌಲಭ್ಯ ಸೇರಿದಂತೆ ಅಲ್ಲಿಯೇ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಸುರಕ್ಷಿತವಾಗಿರಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂಬ ಸಲಹೆಯ ಮಾತುಗಳನ್ನೂ ನಿಲ್ದಾಣದ ಗೋಡೆಯಲ್ಲೇ ಬರೆಯಲಾಗಿದೆ. ಆದರೆ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಗಣ್ಯರು ಬಸ್ ನಿಲ್ದಾಣದಲ್ಲಿ ಉದ್ದಕ್ಕೆ ಕುಳಿತು ಫೋಟೋಗೆ ಪೋಸು ನೀಡಿದ್ದರು. ಮಧ್ಯಾಹ್ನ ನಡೆದಿದ್ದ ಕಾರ್ಯಕ್ರಮದ ಫೋಟೋಗಳು ಸಂಜೆ ಹೊತ್ತಿಗೆ ಜಾಲತಾಣದಲ್ಲಿ ಹರಿದಾಡಿದ್ದವು.

ಬಸ್ ನಿಲ್ದಾಣದಲ್ಲಿ ಉದ್ದಕ್ಕೆ ಕುಳಿತಿದ್ದ ನಳಿನ್ ಕುಮಾರ್ ಕಟೀಲು ಸೇರಿದಂತೆ ಯಾರಲ್ಲೂ ಮಾಸ್ಕೂ ಇರಲಿಲ್ಲ. ನಡುವೆ ಅಂತರವೂ ಇರಲಿಲ್ಲ. ಅಲ್ಲಿ ಸೇರಿದ್ದವರೆಲ್ಲ ಉದ್ದಕ್ಕೆ ಹತ್ತಿರತ್ತಿರ ಕುಳಿತು ನಗು ಬೀರುತ್ತಾ ಬಸ್ ನಿಲ್ದಾಣದ ಶೋಭೆ ಹೆಚ್ಚಿಸಿದ್ದರು. ಈ ಫೋಟೋ ಸಹಜವಾಗೇ ಜನರಲ್ಲಿ ನಗೆಯುಬ್ಬಿಸಿದ್ದಲ್ಲದೆ, ಮಾಸ್ಕ್ ಧರಿಸಿ, ಅಂತರ ಕಾಪಾಡಿ ಎಂಬ ಬೋರ್ಡ್ ಎದುರಲ್ಲೇ ಗಣ್ಯರೆನಿಸಿಕೊಂಡವರು ಹೀಗೆ ಪೋಸು ಕೊಟ್ಟಿದ್ದು ಅಲ್ಲಿನ ಪದಗಳನ್ನೇ ಅಣಿಕಿಸಿದಂತಿತ್ತು. ಉತ್ತರ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ನಡೆಸಿ ಬಂದಿದ್ದ ನಳಿನ್ ಕುಮಾರ್ ಅಲ್ಲಿದ್ದುದಕ್ಕೆ ಹೆಚ್ಚು ಪ್ರಾಶಸ್ತ್ಯ ಬಂದಿತ್ತು.

ಕಟೀಲು ದೇವಸ್ಥಾನದ ಆಡಳಿತ ಮೊಕ್ತೇಸರ ವಾಸುದೇವ ಆಸ್ರಣ್ಣರಿಂದ ತೊಡಗಿ ಆಡಳಿತ ಸಮಿತಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ, ಅನಂತ ಪದ್ಮನಾಭ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ಭುವನಾಭಿರಾಮ ಉಡುಪ ಹೀಗೆ ಹಲವು ಮಂದಿ ಇದ್ದರು. ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ ಮತ್ತು ಶಾಸಕ ಉಮಾನಾಥ ಕೋಟ್ಯಾನ್ ಮಾಸ್ಕ್ ಧರಿಸಿದ್ದು ಬಿಟ್ಟರೆ ಉಳಿದವರಲ್ಲಿ ಮಾಸ್ಕ್ ಇರಲಿಲ್ಲ. ಅಂತರವಂತೂ ಮೊದಲೇ ಇರಲಿಲ್ಲ. ಇದೇ ಕಾರಣಕ್ಕೆ ಬಾಯಲ್ಲಿ ಮಂತ್ರ, ಇತರರಿಗೆ ಶಾಸ್ತ್ರ ಹೇಳುವ ಮಂದಿಯ ಫೋಟೋ ಭಾರೀ ವೈರಲ್ ಆಗಿದೆ. ಕೆಲವರಂತೂ ಈ ಫೋಟೋಗಳಿಗೆ ರೆಕ್ಕೆ ಪುಕ್ಕ ಸೇರಿಸ್ಕೊಂಡು ಹಂಚಿಕೊಂಡಿದ್ದರು. 

Mangalore Top bjp leaders break covid rules during the inauguration of kateel bus stand picture turns controversy