ಮಂಗಳೂರಿನಲ್ಲಿ ತುರ್ತು ಸಭೆ ನಡೆಸಿದ ಕೋವಿಡ್ ನೋಡಲ್ ಆಫೀಸರ್ ಹೇಮಂತ್ ನಿಂಬಾಳ್ಕರ್

24-04-21 04:52 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಕೋವಿಡ್ ನೋಡಲ್ ಆಫೀಸರ್ ಆಗಿ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿದ್ದು, ಮಂಗಳೂರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಂಗಳೂರು, ಎ.24: ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಕೋವಿಡ್ ನೋಡಲ್ ಆಫೀಸರ್ ಆಗಿ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿದ್ದು, ಮಂಗಳೂರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಹೇಮಂತ್ ನಿಂಬಾಳ್ಕರ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಪೊಲೀಸ್ ಕಮಿಷನರ್ ಶಶಿಕುಮಾರ್, ಎಸ್ಪಿ ಋಷಿಕುಮಾರ್ ಸೋನವಾನೆ ಜೊತೆಗೆ ಕೋವಿಡ್ ಸ್ಥಿತಿಗತಿ ಬಗ್ಗೆ ಸಭೆ ನಡೆಸಿದರು. ಕೋವಿಡ್ ಸೋಂಕಿನ ತೀವ್ರತೆ, ಅದನ್ನು ಎದುರಿಸಲು ಕೈಗೊಂಡಿರುವ ಸಿದ್ಧತೆಗಳು, ಜಿಲ್ಲೆಯಲ್ಲಿ ಬೆಡ್ ಸಾಮರ್ಥ್ಯ, ಕೋವಿಡ್ ಸೋಂಕು ಹೆಚ್ಚಿದರೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ, ಸೂಚನೆಗಳನ್ನು ಸಭೆಯಲ್ಲಿ ಹೇಮಂತ್ ನಿಂಬಾಳ್ಕರ್ ನೀಡಿದ್ದಾರೆ.

ನಿಂಬಾಳ್ಕರ್ ಜೊತೆಗಿನ ಸಭೆಯ ಬಳಿಕ ಈ ಬಗ್ಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಜಿಲ್ಲೆಯ ಕೋವಿಡ್ ಪರಿಸ್ಥಿತಿ ಬಗ್ಗೆ ಅವಲೋಕನ ಮಾಡಿದ್ದಾರೆ. ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಮುಂದಿನ ದಿನಗಳಲ್ಲಿ ಸೋಂಕು ಹೆಚ್ಚಿದರೆ ಯಾವೆಲ್ಲಾ ಕ್ರಮ ತಗೋಬೇಕು ಎನ್ನುವ ಬಗ್ಗೆ ಸೂಚನೆಗಳನ್ನು ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯಕ್ಕೆ 3800 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 2550 ಮಂದಿ ಹೋಮ್ ಐಸೋಲೇಶನಲ್ಲಿದ್ದಾರೆ. 645 ಮಂದಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ರೋಗಿಗಳಿಗಾಗಿ 4800 ಬೆಡ್ ಗಳಿವೆ. ಮಂಗಳೂರು ನಗರದಲ್ಲಿ ನಾಲ್ಕು ಕೋವಿಡ್ ಕೇರ್ ಸೆಂಟರ್ ಗಳನ್ನು ಮಾಡಿದ್ದೇವೆ. ಯಾರಿಗೆ ಹೋಮ್ ಐಸೋಲೇಶನಲ್ಲಿ ಇರಲು ಸಾಧ್ಯವಿಲ್ಲ. ಅಂಥವರಿಗಾಗಿ ಕೋವಿಡ್ ಸೆಂಟರ್ ಗಳನ್ನು ಮಾಡಲಾಗಿದೆ. ಪ್ರತಿ ತಾಲೂಕಿನಲ್ಲಿ ಐದೈದು ವೆಂಟಿಲೇಟರ್ ಜೊತೆಗೆ ಬೆಡ್ ವ್ಯವಸ್ಥೆ ಮತ್ತು ಕೋವಿಡ್ ಕೇರ್ ಸೆಂಟರ್ ಇರುತ್ತದೆ. ಇದಲ್ಲದೆ, ಅಗತ್ಯ ಬಿದ್ದರೆ ಮೊರಾರ್ಜಿ ದೇಸಾಯಿ ಶಾಲೆಗಳ ಹಾಸ್ಟೆಲ್ ಗಳಲ್ಲಿ ತಲಾ 50 ಬೆಡ್ ಗಳನ್ನು ರೆಡಿ ಮಾಡಿ ಕೋವಿಡ್ ಸೆಂಟರ್ ಮಾಡಲಾಗುವುದು. ಇದಲ್ಲದೆ, ಲಾಡ್ಜ್ , ರೆಸ್ಟೋರೆಂಟ್ ಗಳಲ್ಲಿಯೂ ಬೆಡ್ ರಚಿಸಿ, ನಿಗಾ ಕೇಂದ್ರಗಳಾಗಿ ಮಾಡಲು ಸಿದ್ಧತೆ ನಡೆಸಿದ್ದೇವೆ ಎಂದು ಹೇಳಿದರು.

ಈಗ ನಮ್ಮಲ್ಲಿ ಒಟ್ಟು 4800 ಬೆಡ್ ಸಾಮರ್ಥ್ಯದಲ್ಲಿ 645 ಮಾತ್ರ ಭರ್ತಿ ಆಗಿರುವುದು. ಈ ಪೈಕಿ 50 ಶೇ. ಬೆಡ್ ಪೂರ್ತಿಯಾದರೆ ಈ ರೀತಿಯ ಪರ್ಯಾಯ ವ್ಯವಸ್ಥೆಗಳನ್ನು ರೆಡಿ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಎಸ್ಪಿ ಋಷಿಕುಮಾರ್ ಸೋನವಾನೆ, ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಜಿಲ್ಲಾಧಿಕಾರಿ ಜೊತೆಗಿದ್ದರು.

ADGP Hemanth Nimbalkar Presently the Nodal officer of Dakshina Kannada and Udupi visited Mangalore and held a meeting along with Police Commissioner and Dc regarding Covid Situation in city.