ಸೋಮೇಶ್ವರ: ಬ್ರಹ್ಮಕಲಶ ಸಂಪನ್ನದ ಬೆನ್ನಲ್ಲೇ ಕ್ಷೇತ್ರಕ್ಕೆ ಅಧಿಕಾರಿಗಳ ತಂಡ ಎಂಟ್ರಿ ! ಕೋವಿಡ್ ನೀತಿ ಉಲ್ಲಂಘನೆಗೆ ಗರಂ

26-04-21 10:18 pm       Mangaluru correspondent   ಕರಾವಳಿ

ಇತಿಹಾಸ ಪ್ರಸಿದ್ಧ ಸೋಮೇಶ್ವರ ಸೋಮನಾಥ ದೇವರ ಬ್ರಹ್ಮಕಲಶ ಸಂಪನ್ನಗೊಂಡ ಬೆನ್ನಲ್ಲೇ ಮಂಗಳೂರು ಸಹಾಯಕ ಕಮಿಷನರ್ ಮದನ್ ಮೋಹನ್ ಎಂಟ್ರಿಯಾಗಿದ್ದು ಕೋವಿಡ್ ನಿಯಮಗಳನ್ನು ಮೀರಿ ಸೇರಿದ್ದ ಜನರನ್ನ ಚದುರಿಸಿದ್ದಾರೆ. 

ಮಂಗಳೂರು, ಎ.26: ಇತಿಹಾಸ ಪ್ರಸಿದ್ಧ ಸೋಮೇಶ್ವರ ಸೋಮನಾಥ ದೇವರ ಬ್ರಹ್ಮಕಲಶ ಸಂಪನ್ನಗೊಂಡ ಬೆನ್ನಲ್ಲೇ ಮಂಗಳೂರು ಸಹಾಯಕ ಕಮಿಷನರ್ ಮದನ್ ಮೋಹನ್ ಎಂಟ್ರಿಯಾಗಿದ್ದು ಕೋವಿಡ್ ನಿಯಮಗಳನ್ನು ಮೀರಿ ಸೇರಿದ್ದ ಜನರನ್ನ ಚದುರಿಸಿದ್ದಾರೆ. 

ಕಳೆದ ಬಾರಿ ಕೊರೊನಾ ಲಾಕ್ ಡೌನ್ ನಿಂದ ಮುಂದೂಡಲ್ಪಟ್ಟ ಸೋಮನಾಥ ದೇವರ ಬ್ರಹ್ಮಕಲಶೋತ್ಸವ ಇಂದು ಮಧ್ಯಾಹ್ನ ಸಂಪನ್ನಗೊಂಡಿತ್ತು. ಸೋಮನಾಥನಿಗೆ ಮಹಾಪೂಜೆ ನೆರವೇರಿ ಅನ್ನಸಂತರ್ಪಣೆ ನಡೆಯುತ್ತಿದ್ದ ವೇಳೆ ಸಹಾಯಕ ಕಮಿಷನರ್ ಮದನ್ ಮೋಹನ್, ಉಪವಿಭಾಗದ ಎಸಿಪಿ ರಂಜಿತ್ ಬಂಡಾರು, ಸೋಮೇಶ್ವರ ಗ್ರಾಮದ ಗ್ರಾಮಕರಣಿಕೆ ಲಾವಣ್ಯ ಸೇರಿದಂತೆ ಅಧಿಕಾರಿಗಳ ತಂಡವು ಭೇಟಿ ನೀಡಿದ್ದು ಕ್ಷೇತ್ರದಲ್ಲಿ ಕೋವಿಡ್ ಕಟ್ಟುನಿಟ್ಟಿನ ಮಾರ್ಗಸೂಚಿಯ ನಡುವಲ್ಲಿಯೂ ಸೇರಿದ್ದ ಭಕ್ತಾದಿಗಳನ್ನು ಅರ್ಧ ಗಂಟೆಯೊಳಗೆ ಮನೆ ಸೇರುವಂತೆ ಮೈಕ್ ಅನೌನ್ಸ್ ಮೆಂಟ್ ಮೂಲಕ ಆದೇಶಿಸಿದ್ದಾರೆ. ಕೂಡಲೇ ಅಲ್ಲಿ ಅನ್ನಪ್ರಸಾದಕ್ಕೆ ಸೇರಿದ್ದ ಭಕ್ತಾದಿಗಳೆಲ್ಲರೂ ಚದುರಿ ಮನೆಗೆ ಸೇರಿದ್ದಾರೆ.
ಸೋಮೇಶ್ವರಕ್ಕೆ ಕಳೆದ ಸೋಮವಾರ ಸಾಗಿದ ಹಸಿರು ಹೊರೆಕಾಣಿಕೆಯಲ್ಲೂ ಕೋವಿಡ್ ನಿಯಮ ಉಲ್ಲಂಘನೆಯಾಗಿದೆ ಎಂದು ತಹಶೀಲ್ದಾರ್ ಗುರುಪ್ರಸಾದ್ ಬ್ರಹ್ಮಕಲಶೋತ್ಸವ ಸಮಿತಿಗೆ ನೋಟೀಸು ನೀಡಿದ್ದಲ್ಲದೆ  ಉಳ್ಳಾಲ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು. 

ಇಂದು ಸಂಜೆ ಶತಮಾನದ ನಂತರ ಸೋಮನಾಥ ದೇವರಿಗೆ ಸಮರ್ಪಣೆಯಾದ ನೂತನ ಬ್ರಹ್ಮರಥೋತ್ಸವ ನಡೆಯಲಿದ್ದು, ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರೇ ರಥೋತ್ಸವವನ್ನು ಸರಳವಾಗಿ ಆಚರಿಸಲು ಮುಂದಾಗಿದ್ದಾರೆ. ನಾಳೆಯಿಂದ ಕ್ಷೇತ್ರದಲ್ಲಿ ನಡೆಯುವ ವರ್ಷಾವಧಿ ಉತ್ಸವಕ್ಕೆ ಬ್ರೇಕ್ ಬೀಳುವ ಸಾಧ್ಯತೆಯಿದೆ. 

ಭಗವತಿ ಆವಾಹನೆಗೆ ಸಾಕ್ಷಿಯಾದ ಕ್ಷೇತ್ರ ! 

ವಾಡಿಕೆ ಪ್ರಕಾರ, ಸೋಮೇಶ್ವರದ ವರ್ಷಾವಧಿ ಜಾತ್ರೆಯ ಕೊನೆಯ ದಿನ ಹತ್ತಿರದ ಅಡ್ಕ ಭಗವತೀ ಕ್ಷೇತ್ರದಲ್ಲಿ ನಡೆಯುವ ವರ್ಷಾವಧಿ ಜಾತ್ರೆಯ ಕೊಡಿಯೇರಿಸಲು ಅಪ್ಪಣೆ ಪಡೆಯಲು ಭಗವತೀ ದೈವಗಳು ಸೋಮನಾಥನ ಭೇಟಿ ಮಾಡಿ ಅಪ್ಪಣೆ ಪಡೆಯೋದು ಪ್ರತೀತಿ. ಇಂದು ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಅಡ್ಕ ಭಗವತೀ ಕ್ಷೇತ್ರದ ಅರ್ಚಕರಿಗೆ ಭಗವತೀ ಆವಾಹನೆಯಾಗಿ ಕಾರಣಿಕ ಪ್ರದರ್ಶನವಾಗಿದೆ. ಆ ಮೂಲಕ ಸೋಮನಾಥ ಮತ್ತು ಭಗವತೀ ದೈವಗಳ ಅವಿನಾಭಾವ ಸಂಬಂಧಕ್ಕೆ ಸಾಕ್ಷಿ ತೋರಿಸಿದೆ.

Mangalore AC raids and stops Someshwara Temple programme in the middle  for violating covid norms even after government has restricted ban on religious activities.