ನಿಂಬೆ ರಸದ ಕುರಿತ ವಿಡಿಯೋ ಡಿಲೀಟ್ ; ನರೇಂದ್ರ ನಾಯಕ್ ಮೇಲೆ ಫೇಸ್ಬುಕ್ ಪ್ರತಾಪ

29-04-21 07:31 pm       Mangaluru correspondent   ಕರಾವಳಿ

ಕೊರೊನಾ ಸೋಂಕಿತರು ಮೂಗು ಕಟ್ಟಿದರೆ ನಿಂಬೆ ರಸ ಹಾಕಿಕೊಂಡರೆ ಕ್ಲಿಯರ್ ಆಗತ್ತೆ ಎಂದು ವಿಆರ್ ಎಲ್ ಸಂಸ್ಥಾಪಕ ವಿಜಯ ಸಂಕೇಶ್ವರ ಹೇಳಿಕೆ ನೀಡಿದ್ದು ಭಾರೀ ಸುದ್ದಿಯಾಗಿತ್ತು.

ಮಂಗಳೂರು, ಎ.29: ಕೊರೊನಾ ಸೋಂಕಿತರು ಮೂಗು ಕಟ್ಟಿದರೆ ನಿಂಬೆ ರಸ ಹಾಕಿಕೊಂಡರೆ ಕ್ಲಿಯರ್ ಆಗತ್ತೆ ಎಂದು ವಿಆರ್ ಎಲ್ ಸಂಸ್ಥಾಪಕ ವಿಜಯ ಸಂಕೇಶ್ವರ ಹೇಳಿಕೆ ನೀಡಿದ್ದು ಭಾರೀ ಸುದ್ದಿಯಾಗಿತ್ತು. ಅದನ್ನು ಪ್ರಶ್ನಿಸಿ, ಫೇಸ್ಬುಕ್ಕಲ್ಲಿ ವಿಡಿಯೋ ಹರಿಯಬಿಟ್ಟಿದ್ದ ಮಂಗಳೂರಿನ ವಿಚಾರವಾದಿ ನರೇಂದ್ರ ನಾಯಕ್ ಅವರಿಗೆ ಫೇಸ್ಬುಕ್ ಪನಿಶ್ಮೆಂಟ್ ನೀಡಿದೆ. ವಿಡಿಯೋ ಡಿಲೀಟ್ ಮಾಡಿದ್ದಲ್ಲದೆ, 18 ಗಂಟೆ ಕಾಲ ಫೇಸ್ಬುಕ್ ಬಳಕೆ ಮಾಡದಂತೆ ನರೇಂದ್ರ ನಾಯಕ್ ಗೆ ಶಿಕ್ಷೆ ನೀಡಿದೆ.

ಈ ನಡುವೆ, ಸಂಕೇಶ್ವರ ಅವರ ನಿಂಬೆ ರಸದ ವಿಚಾರ ತಿಳಿದ ಚಿತ್ರದುರ್ಗದ ವ್ಯಕ್ತಿಯೊಬ್ಬ ಮೂಗಿಗೆ ನಿಂಬೆ ರಸ ಸುರಿದ್ಕೊಂಡು ಮೃತಪಟ್ಟಿದ್ದಾಗಿ ಸುದ್ದಿಯಾಗಿತ್ತು. ಇದೇ ವೇಳೆ, ನರೇಂದ್ರ ನಾಯಕ್ ಸಿಟ್ರಿಕ್ ಆಸಿಡನ್ನು ಮೂಗಿಗೆ ನೇರವಾಗಿ ಸುರಿದುಕೊಳ್ಳಬಾರದು. ಅದು ಮೆದುಳಿಗೆ ಹೋಗಿ ಪ್ರಾಬ್ಲಂ ಆಗಬಹುದು. ಅಲ್ಲದೆ, ನಿಂಬೆ ರಸದಿಂದ ಕೊರೊನಾ ಗುಣಪಡಿಸಬಹುದು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಇದರಿಂದ ಜನರಿಗೆ ಮಿಸ್ ಗೈಡ್ ಆಗುತ್ತದೆ ಎಂದು ಹೇಳಿಕೆ ನೀಡಿದ್ದರು.

ನರೇಂದ್ರ ನಾಯಕ್ ಹೇಳಿಕೆ ಮತ್ತು ವಿಜಯ ಸಂಕೇಶ್ವರ ನೀಡಿರುವ ಮಾಹಿತಿಗಳು ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆಯುರ್ವೇದ ತಜ್ಞರು ಈ ಬಗ್ಗೆ ಸ್ಪಷ್ಟನೆ ನೀಡಿ, ಒಂದೆರಡು ಬಿಂದು ನಿಂಬೆ ರಸವನ್ನು ಮೂಗಿಗೆ ಹಾಕಿದರೆ ಯಾವುದೇ ತೊಂದರೆಯಾಗದು. ಒಮ್ಮೆಗೆ ಮೂಗು ಕಟ್ಟಿದ್ದು ಸರಾಗವಾಗಿ ಉಸಿರಾಟ ಸಮಸ್ಯೆ ದೂರವಾಗಬಹುದು. ಹಾಗೆಂದು, ತಕ್ಷಣದ ಚಿಕಿತ್ಸೆ ಅಷ್ಟೇ, ಆಬಳಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು ಎಂದಿದ್ದರು. ಇವೆಲ್ಲ ಚರ್ಚೆ, ಸ್ಪಷ್ಟನೆಗಳ ಮಧ್ಯದಲ್ಲೇ ನರೇಂದ್ರ ನಾಯಕ್ ಅವರ ವಿಡಿಯೋವನ್ನು ಸ್ವತಃ ಫೇಸ್ಬುಕ್ ಡಿಲೀಟ್ ಮಾಡಿದೆ.

Help, Someone stole my Facebook video! — Lights, Camera, Live®

ಸುಮಾರು 300 ಮಂದಿ ಈ ಬಗ್ಗೆ ರಿಪೋರ್ಟ್ ಹಾಕಿದ್ದಾರಂತೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ರೀತಿಯ ಹೇಳಿಕೆ ನೀಡಿರುವ ಈ ವಿಡಿಯೋ ಡಿಲೀಟ್ ಮಾಡುವಂತೆ ಬರೆದಿದ್ದರಿಂದ ಫೇಸ್ಬುಕ್ ಈ ಕೆಲಸ ಮಾಡಿದೆ. ಅಲ್ಲದೆ, 18 ಗಂಟೆ ಕಾಲ ಫೇಸ್ಬುಕ್ ಬಳಸದಂತೆ ಶಿಕ್ಷೆಯನ್ನೂ ನೀಡಿದೆ. ಶಾಲೆಯಲ್ಲಿ ಮಕ್ಕಳಿಗೆ ಮೇಷ್ಟ್ರು ಶಿಕ್ಷೆ ಕೊಟ್ಟಂತಾಗಿದೆ ಎಂದು ನರೇಂದ್ರ ನಾಯಕ್ ಪ್ರತಿಕ್ರಿಯಿಸಿದ್ದಾರೆ. ವಿಜಯ ಸಂಕೇಶ್ವರ ಪತ್ರಿಕಾ ಸಂಸ್ಥೆಯ ಮಾಲೀಕರಾಗಿದ್ದು ಅವರು ಸುದ್ದಿಗೋಷ್ಠಿ ಕರೆದು ನಿಂಬೆ ರಸದ ವಿಚಾರವನ್ನು ಹೇಳಿದ್ದರು. ನರೇಂದ್ರ ನಾಯಕ್ ವಿಡಿಯೋ ಮಾಡಿದ್ದು, ಸಂಕೇಶ್ವರ ಅವರಿಗೆ ಮುಜುಗರ ಆಗುವ ದೃಷ್ಟಿಯಿಂದ ಅಭಿಮಾನಿಗಳು ಫೇಸ್ಬುಕ್ ಕಂಪನಿಗೆ ರಿಪೋರ್ಟ್ ಬರೆದು ವಿಡಿಯೋ ಡಿಲೀಟ್ ಮಾಡಿಸಿದ್ದಾರೆ ಎನ್ನಲಾಗುತ್ತಿದೆ.

ಬಳಕೆದಾರರು ಅಪ್ಲೋಡ್ ಮಾಡುವ ವಿಡಿಯೋದಲ್ಲಿರುವ ಕಂಟೆಂಟ್ ಬಗ್ಗೆ ಸಾರ್ವಜನಿಕ ವಿರೋಧ ಬಂದರೆ, ಫೇಸ್ಬುಕ್ ಆ ವಿಡಿಯೋವನ್ನು ಡಿಲೀಟ್ ಮಾಡುವ ಸ್ವಾತಂತ್ರ್ಯ ಕಾಯ್ದುಕೊಂಡಿದೆ.

Mangalore rationalist Narendra Nayaks Facebook page has been blocked after uploading video on Lemon therapy for oxygen is not right.