ಕೊರೊನಾ ಭಯವೇ ? ಇಲ್ಲಿದೆ ಸಹಾಯವಾಣಿ ; ತಕ್ಷಣ ಸ್ಪಂದಿಸಲು ಯುವಕರ ಟೀಮ್ ರೆಡಿ !

11-05-21 03:12 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯ ಕೊರೊನಾ ಸೋಂಕಿತರಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿರುವ ಯುವಕರು ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ಹೆಸರಿನಲ್ಲಿ ಸಹಾಯವಾಣಿ ಆರಂಭಿಸಿದ್ದಾರೆ.

ಮಂಗಳೂರು, ಮೇ 11: ಕೊರೊನಾ ಸೋಂಕಿಗೆ ಒಳಗಾದವರು ತಕ್ಷಣಕ್ಕೆ ಏನು ಮಾಡಬೇಕು. ಸೋಂಕಿನ ಲಕ್ಷಣಗಳಿದ್ದರೆ ಎಲ್ಲಿ ತಪಾಸಣೆ ಮಾಡಬೇಕು, ಆಸ್ಪತ್ರೆಗೆ ದಾಖಲಾಗುವ ಅಗತ್ಯವಿದೆಯೇ ಅಥವಾ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯಬಹುದೇ ? ಮನೆಯಲ್ಲಿ ಹೋಮ್ ಐಸೋಲೇಶನಲ್ಲಿದ್ದವರು ಉಸಿರಾಟದ ಸಮಸ್ಯೆಗೆ ಒಳಗಾದರೆ ತಕ್ಷಣಕ್ಕೆ ಆಂಬುಲೆನ್ಸ್ ವ್ಯವಸ್ಥೆ ಹೇಗೆ ಮಾಡಬೇಕು. ಯಾವ ಆಸ್ಪತ್ರೆಗೆ ದಾಖಲಾಗಬೇಕು.. ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ನಾನಾ ರೀತಿಯ ಪ್ರಶ್ನೆ, ಗೊಂದಲಗಳು ಇರುವುದು ಸಹಜ.

ಇದಕ್ಕಾಗಿಯೇ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿರುವ ಯುವಕರು ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ಕೊರೊನಾ ಸೋಂಕಿತರಿಗಾಗಿ ಸಹಾಯವಾಣಿ ಆರಂಭಿಸಿದ್ದಾರೆ. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿರುವ ಶ್ರೀಶ ಭಟ್, ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ಹೆಸರಿನಲ್ಲಿ 37 ಸದಸ್ಯರನ್ನು ಸೇರಿಸಿಕೊಂಡು ಸಂಘಟನೆ ಮಾಡಿದ್ದು, ಇದರಡಿ ಆಕಾಂಕ್ಷಾ ಸಹಾಯವಾಣಿ ಆರಂಭಿಸಿದ್ದಾರೆ.

ಇವರ ಸಂಘಟನೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿರುವ ಪರಿಣತರು ಇದ್ದಾರೆ. ಬೇರೆ ಬೇರೆ ಉದ್ಯೋಗ ಕ್ಷೇತ್ರಗಳಲ್ಲಿರುವ ಮಂದಿ ಮತ್ತು ಕೆಲವು ಕಾಲೇಜು ವಿದ್ಯಾರ್ಥಿಗಳು ಕೂಡ ಸದಸ್ಯರಿದ್ದಾರೆ. ಯಾರೇ ಆದ್ರೂ ಇವರ ಸಹಾಯವಾಣಿಗೆ ಕರೆ ಮಾಡಿದರೆ, ತಕ್ಷಣವೇ ಫೋನ್ ಮೂಲಕ ನೆರವು ನೀಡುತ್ತಾರೆ. ಅದಕ್ಕಾಗಿ ತಜ್ಞ ವೈದ್ಯರು, ಕೌನ್ಸೆಲಿಂಗ್ ತಜ್ಞರ ನೆರವನ್ನೂ ಪಡೆಯುತ್ತಾರೆ. ಯಾವುದೇ ವ್ಯಕ್ತಿ ತಮ್ಮ ಸಮಸ್ಯೆ ಬಗ್ಗೆ ಕರೆ ಮಾಡಿದರೆ, ಸಂಘಟನೆ ಸದಸ್ಯರು ಆನ್ ಲೈನಲ್ಲೇ ಉತ್ತರ ನೀಡುತ್ತಾರೆ. ಜೊತೆಗೆ, ತಕ್ಷಣ ಆಸ್ಪತ್ರೆ ಸೇರಿಸಬೇಕಾದಲ್ಲಿ ಆಂಬುಲೆನ್ಸ್ ವ್ಯವಸ್ಥೆ ಮಾಡತ್ತಾರೆ.

ಮನೆಯಲ್ಲಿ ಐಸೋಲೇಶನ್ ಇರುವವರಿಗೆ ಧೈರ್ಯ ತುಂಬುವ ಕೌನ್ಸೆಲಿಂಗ್ ಕೆಲಸವನ್ನೂ ಫೋನಲ್ಲೇ ಉಚಿತವಾಗಿ ನೀಡುತ್ತಾರೆ. ಎಲ್ಲವನ್ನೂ ಕಾನ್ಫರೆನ್ಸ್ ಕರೆಯ ಮೂಲಕ ನಿರ್ವಹಣೆ ಮಾಡಲಾಗುತ್ತದೆ. ಮಾನಸಿಕ ಆರೋಗ್ಯದ ಬಗ್ಗೆ ಕೌನ್ಸಿಲಿಂಗ್ ನೀಡುವುದಕ್ಕೆ ನಮ್ಮಲ್ಲಿ ಇಬ್ಬರು ಡಾಕ್ಟರ್ ಇದ್ದಾರೆ. ಜನರಲ್ ಫಿಸಿಶಿಯನ್ ಆಗಿರುವ ನಾಲ್ಕು ಮಂದಿ ವೈದ್ಯರಿದ್ದಾರೆ. ಅದೇ ರೀತಿ, ಶಾಲೆ, ಕಾಲೇಜಿಲ್ಲದೆ ತಮ್ಮ ಭವಿಷ್ಯದ ಬಗ್ಗೆ ಖಿನ್ನತೆ ಅನುಭವಿಸುತ್ತಿರುವ ವಿದ್ಯಾರ್ಥಿಗಳಿಗೆ ಗೈಡೆನ್ಸ್ ನೀಡುವುದಕ್ಕಾಗಿ 15 ಮಂದಿ ಪರಿಣತರಿದ್ದಾರೆ. ವಿದ್ಯಾರ್ಥಿಗಳು ಜೊತೆಗೆ ಪೋಷಕರು ಕೂಡ ಸಹಾಯವಾಣಿಗೆ ಕರೆ ಮಾಡಿ, ಮಕ್ಕಳ ಕಲಿಕೆ, ಶಿಕ್ಷಣದ ಬಗ್ಗೆ ಮಾಹಿತಿಗಳನ್ನು ಪಡೆಯಬಹುದು ಎಂದು ಶ್ರೀಶ ಭಟ್ ಮಾಹಿತಿ ನೀಡಿದ್ದಾರೆ.

ಈಗಾಗ್ಲೇ ಟ್ರಸ್ಟ್ ಸದಸ್ಯರು ಜಿಲ್ಲೆಯಲ್ಲಿರುವ ಆಂಬುಲೆನ್ಸ್ ಗಳ ಮಾಹಿತಿಗಳನ್ನು ಸಂಗ್ರಹಿಸಿದ್ದು, ಅದರ ಜೊತೆಗೆ ಜಿಲ್ಲೆಯಾದ್ಯಂತ ಇರುವ ಆಸ್ಪತ್ರೆಗಳ ಸಂಪರ್ಕವನ್ನೂ ಪಡೆದಿದ್ದಾರೆ. ಯಾರೇ ಆದ್ರೂ ಒಮ್ಮೆ ಕರೆ ಮಾಡಿದರೆ, ಅದನ್ನು ಸಂಬಂಧಪಟ್ಟವರಿಗೆ ತಲುಪಿಸುವ ಕೆಲಸ ಮಾಡುತ್ತೇವೆ. ರೋಗಿಯ ಲಕ್ಷಣ, ಆಹಾರ ಕ್ರಮ ಎಲ್ಲವುಗಳ ಬಗ್ಗೆ ಮಾಹಿತಿ ಪಡೆದು ಅಗತ್ಯ ಬಿದ್ದರೆ ಔಷಧಿ ಅಥವಾ ಆಸ್ಪತ್ರೆಗೆ ದಾಖಲಾಗುವುದು ಅವಶ್ಯವಿದ್ದರೆ ವೈದ್ಯರು ಶಿಫಾರಸು ಮಾಡುತ್ತಾರೆ.

ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯ ಇರುವ ಬೆಡ್ ಗಳ ಬಗ್ಗೆ ದಿನವಹಿ ಮಾಹಿತಿ ಸಿಗುವಂತಾಗಲು ಜಿಲ್ಲಾಧಿಕಾರಿ ಬಳಿ ಅನುಮತಿ ಕೇಳಿದ್ದೇವೆ. ಜಿಲ್ಲಾಧಿಕಾರಿ ಈ ಬಗ್ಗೆ ಅನುಮತಿ ಕೊಟ್ಟರೆ, ಎಲ್ಲಿ ಬೆಡ್ ಭರ್ತಿಯಾಗಿದೆ, ಎಲ್ಲಿ ಖಾಲಿಯಿದೆ ಎನ್ನುವ ಮಾಹಿತಿ ಆಧರಿಸಿ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲು ಸುಲಭವಾಗುತ್ತದೆ. ಇದರಿಂದ ಬೆಡ್ಡಿನ ಕೊರತೆಯಿಂದಾಗಿ ಅಲೆದಾಟ ತಪ್ಪುತ್ತದೆ ಎಂದಿದ್ದಾರೆ.

ಇದೊಂದು ರೀತಿ ಕೋವಿಡ್ ವಾರ್ ರೂಂ ರೀತಿ ಕೆಲಸ ಮಾಡುತ್ತಿದ್ದು ತಾಲೂಕು ವಾರು ಪ್ರತ್ಯೇಕ ಸಹಾಯವಾಣಿ ಸಂಖ್ಯೆಯನ್ನು ನೀಡಲಾಗಿದೆ. ಜನರು ತಮ್ಮ ತುರ್ತು ಅಗತ್ಯಕ್ಕೆ ತಕ್ಕಂತೆ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಶ್ರೀಶ ಭಟ್ ಮಾಹಿತಿ ನೀಡಿದ್ದಾರೆ.

ಸಹಾಯವಾಣಿ ಸಂಖ್ಯೆ ಹೀಗಿದೆ :

  • ಸುಳ್ಯ ಮತ್ತು ಕಡಬ ತಾಲೂಕು – 9481711643, 8970213908,
  • ಬೆಳ್ತಂಗಡಿ ಮತ್ತು ಮೂಡುಬಿದಿರೆ ತಾಲೂಕು – 9980146954, 9449758598
  • ಬಂಟ್ವಾಳ ಮತ್ತು ಪುತ್ತೂರು ತಾಲೂಕು – 9380886426, 8075669954
  • ಮಂಗಳೂರು ತಾಲೂಕು – 7975447938, 9591625115

Akanksha Trust run by Youths launches Helpline Numbers in Dakshina Kannada to help Covid 19 patients with the availability of Hospital beds, Ambulance, Education queries and Covid Vaccines. The trust is founded by Shreesha Bhat of Puttur. Call now for queries.