ಕೊರೊನಾ ರೋಗಿಗೆ 9 ಲಕ್ಷ ಬಿಲ್ ! ಕಾಂಗ್ರೆಸ್ ಪ್ರತಿಭಟನೆಗೆ ಮಣಿದು ಲಕ್ಷಕ್ಕೆ ಇಳಿಸಿದ ಆಡಳಿತ !!

18-05-21 10:01 pm       Mangaluru Correspondent   ಕರಾವಳಿ

ನಗರದ ಇಂದಿರಾ ಹಾಸ್ಪಿಟಲ್ ನಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ರೋಗಿಯೊಬ್ಬನಿಗೆ ಎಂಟೂವರೆ ಲಕ್ಷ ಬಿಲ್ ಮಾಡಿರುವ ಆರೋಪ ಕೇಳಿಬಂದಿದ್ದು ಕಾಂಗ್ರೆಸ್ ಮುಖಂಡರು ಇದರ ಬಗ್ಗೆ ಮೆಡಿಕಲ್ ಕೌನ್ಸಿಲ್ ಗೆ ದೂರು ನೀಡಲು ಮುಂದಾಗಿದ್ದಾರೆ.

ಮಂಗಳೂರು, ಮೇ 18: ಕೊರೊನಾ ಸೋಂಕು ಜನಸಾಮಾನ್ಯರ ಪಾಲಿಗೆ ಭೀತಿ ಮೂಡಿಸಿದ್ದರೆ, ಕೆಲವು ಖಾಸಗಿ ಆಸ್ಪತ್ರೆಗಳ ಪಾಲಿಗೆ ಹಣ ಮಾಡುವ ದಂಧೆಯಾಗಿಬಿಟ್ಟಿದೆ. ನಗರದ ಇಂದಿರಾ ಹಾಸ್ಪಿಟಲ್ ನಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ರೋಗಿಯೊಬ್ಬನಿಗೆ ಎಂಟೂವರೆ ಲಕ್ಷ ಬಿಲ್ ಮಾಡಿರುವ ಆರೋಪ ಕೇಳಿಬಂದಿದ್ದು ಕಾಂಗ್ರೆಸ್ ಮುಖಂಡರು ಇದರ ಬಗ್ಗೆ ಮೆಡಿಕಲ್ ಕೌನ್ಸಿಲ್ ಗೆ ದೂರು ನೀಡಲು ಮುಂದಾಗಿದ್ದಾರೆ.  

ಪುತ್ತೂರಿನ ಸಂಪ್ಯ ಮೂಲದ 30 ವರ್ಷದ ಅಶ್ರಫ್ ಎನ್ನುವ ಯುವಕನನ್ನು ಕೊರೊನಾ ಪಾಸಿಟಿವ್ ಆಗಿದ್ದರಿಂದ ಇಂದಿರಾ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಹತ್ತು ದಿನ ನಾರ್ಮಲ್ ವಾರ್ಡಿನಲ್ಲಿದ್ದ ಯುವಕನನ್ನು ಆಮೇಲೆ ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಹತ್ತು ದಿನಗಳ ಕಾಲ ವೆಂಟಿಲೇಟರ್ ನಲ್ಲಿಟ್ಟಿದ್ದರೂ, ಮೇ 17ರಂದು ಬೆಳಗ್ಗೆ ಯುವಕ ಮೃತಪಟ್ಟಿದ್ದಾಗಿ ಆಸ್ಪತ್ರೆ ಸಿಬಂದಿ ತಿಳಿಸಿದ್ದಾರೆ. ಆದರೆ, ಶವ ಕೊಡುವುದಕ್ಕೆ ಬಿಲ್ ತುಂಬಬೇಕೆಂದು ಹೇಳಿ ರೋಗಿಯ ಕಡೆಯವರಿಗೆ ಧುತ್ತೆಂದು ಎಂಟೂವರೆ ಲಕ್ಷದ ಬಿಲ್ ಮುಂದಿಟ್ಟಿದ್ದರು.

ಈ ಬಗ್ಗೆ ವಿಷಯ ತಿಳಿದ ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿಯೂ ಆಗಿರುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್, ಆಸ್ಪತ್ರೆಗೆ ಬಂದು ಅಲ್ಲಿನ ಸಿಬಂದಿಯನ್ನು ಪ್ರಶ್ನೆ ಮಾಡಿದ್ದಾರೆ. ಮೆಡಿಸಿನ್ ಬಿಲ್ ಎರಡೂವರೆ ಲಕ್ಷ ಆಗಿದ್ದಾಗಿ ಸಿಬಂದಿ ತಿಳಿಸಿದ್ದನ್ನು ಮುಂದಿಟ್ಟು ಜಿಲ್ಲಾಧಿಕಾರಿಯ ಗಮನಕ್ಕೆ ತಂದಿದ್ದಾರೆ. ಆಸ್ಪತ್ರೆಯ ಸುಲಿಗೆಯನ್ನು ಖಂಡಿಸಿ, ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ಜಿಲ್ಲಾಧಿಕಾರಿ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಕಳಿಸಿಕೊಟ್ಟಿದ್ದಾರೆ. ಪ್ರತೀ ಆಸ್ಪತ್ರೆಗೂ ಜಿಲ್ಲಾಡಳಿತದಿಂದ ನೋಡಲ್ ಅಧಿಕಾರಿಯನ್ನು ನೋಂದಣಿ ಮಾಡಿದ್ದು, ರೋಗಿಗಳಿಗೆ ಆಗುವ ತೊಂದರೆಗಳ ಬಗ್ಗೆ ನಿಗಾ ಇಡಬೇಕಾದ ಕರ್ತವ್ಯ ಹೊಂದಿರುತ್ತಾರೆ. ಆದರೆ, ನೋಡಲ್ ಅಧಿಕಾರಿ ಆಸ್ಪತ್ರೆಯ ಮಾಲೀಕರ ಜೊತೆ ಶಾಮೀಲಾಗಿ ಅಲ್ಲಿನ ಸುಲಿಗೆಯ ಬಗ್ಗೆ ಮೌನ ವಹಿಸುತ್ತಾರೆಯೇ ಎನ್ನುವ ಅನುಮಾನ ಹುಟ್ಟಿದೆ.

ಸುಹೈಲ್ ಕಂದಕ್ ಈ ರೀತಿ ಧಮಕಿ ಹಾಕಿದ ಬಳಿಕ ಜಿಲ್ಲಾ ಆರೋಗ್ಯ ಇಲಾಖೆಯ ರತ್ನಾಕರ್ ಮತ್ತಿತರ ಅಧಿಕಾರಿಗಳು ಬಂದು ಇಂದಿರಾ ಹಾಸ್ಪಿಟಲ್ ಆಡಳಿತ ವಿಭಾಗ ಮತ್ತು ಎಂಡಿ ನಿಜಾಮ್ ಜೊತೆ ಮಾತನಾಡಿದ್ದಾರೆ. ಸುಹೇಲ್ ಕಂದಕ್ ಮತ್ತವರ ಬೆಂಬಲಿಗರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಲು ಮುಂದಾಗುತ್ತಿದ್ದಂತೆ ಕದ್ರಿ ಪೊಲೀಸರು ಬಂದು ಮನವೊಲಿಸಿದ್ದು ಬಳಿಕ ಆಸ್ಪತ್ರೆ ಮಾಲೀಕರು ಬಿಲ್ಲನ್ನು ಒಂದೂವರೆ ಲಕ್ಷಕ್ಕೆ ಇಳಿಸಿ ರೋಗಿಯ ಶವ ಮತ್ತು ಕಾಂಗ್ರೆಸ್ ಮುಖಂಡರನ್ನು ಸಂಜೆ ಹೊತ್ತಿಗೆ ಸಾಗಹಾಕಿದ್ದಾರೆ.

ಸುಲಿಗೆಯ ಬಗ್ಗೆ ಮೆಡಿಕಲ್ ಕೌನ್ಸಿಲ್ ಗೆ ದೂರು

ಆದರೆ, ಸುಹೈಲ್ ಹೇಳುವ ಪ್ರಕಾರ, ನಾವು ಈ ರೀತಿಯ ಖಾಸಗಿ ಆಸ್ಪತ್ರೆಗಳ ಸುಲಿಗೆಯ ಬಗ್ಗೆ ಹೀಗೇ ಬಿಡುವುದಿಲ್ಲ. ಆಸ್ಪತ್ರೆ ವಿರುದ್ಧ ಮೆಡಿಕಲ್ ಕೌನ್ಸಿಲ್ ಗೆ ದೂರು ನೀಡುತ್ತೇವೆ. ಜೊತೆಗೆ, ಮಾನವ ಹಕ್ಕು ಆಯೋಗಕ್ಕೂ ದೂರು ನೀಡಲು ತಯಾರಿ ನಡೆಸಿದ್ದೇವೆ. ಕೆಲವು ಪ್ರಕರಣಗಳಲ್ಲಿ ಮಾತ್ರ ಈ ರೀತಿಯ ದೂರು ಬಂದು ವಿಷಯ ಹೊರಗೆ ಬರುತ್ತದೆ. ಆದರೆ, ಇವರು ಕೊರೊನೊ ಹೆಸರಲ್ಲಿ ಹೆಚ್ಚಿನ ರೋಗಿಗಳನ್ನು ಸುಲಿಗೆ ಮಾಡುತ್ತಿದ್ದಾರೆ. ಇವರ ನಿರ್ಲಕ್ಷ್ಯದಿಂದಲೇ ಸಾವನ್ನಪ್ಪುತ್ತಿದ್ದು ಇದರ ಬಗ್ಗೆ ಪೊಲೀಸ್ ದೂರನ್ನೂ ನೀಡುತ್ತೇವೆ ಎಂದಿದ್ದಾರೆ.  

ಆಯುಷ್ಮಾನ್ ಅಡಿ ಉಚಿತ ಚಿಕಿತ್ಸೆ ಎಂದು ಯುವಕನನ್ನು ದಾಖಲಿಸಿಕೊಂಡಿದ್ದ ಆಸ್ಪತ್ರೆ ಸಿಬಂದಿ, ರೋಗಿಯ ಕಡೆಯವರನ್ನು ಸುಲಿಗೆ ಮಾಡಲು ನೋಡಿದ್ದಾರೆ. ಜನ ಸಾಯ್ತಿರೋವಾಗ ಇವರು ಹಣಕ್ಕಾಗಿ ಬಾಯಿ ಬಿಡುತ್ತಿದ್ದಾರೆ. ಇವರಿಗೂ ಮನುಷ್ಯತ್ವ ಇದೆಯೇ ಎಂದು ಪ್ರಶ್ನಿಸಿರುವ ಸುಹೈಲ್ ಕಂದಕ್, ಖಾಸಗಿ ಆಸ್ಪತ್ರೆಗಳು ಜನರನ್ನು ಸುಲಿಗೆ ಮಾಡುತ್ತಿದ್ದರೆ, ನಮ್ಮ ಆಡಳಿತಗಾರರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಇಂಥ ಸುಲಿಗೆಕೋರರ ಹಿಂದೆ ಯಾರಿದ್ದಾರೆ ಎನ್ನುವುದು ಬಯಲಾಗಬೇಕು. ಅದಕ್ಕಾಗಿ ನಾವು ಸುಲಿಗೆಕೋರ ಖಾಸಗಿ ಆಸ್ಪತ್ರೆಗಳ ವಿರುದ್ಧ ಚಳವಳಿ ನಡೆಸುತ್ತೇವೆ ಎಂದಿದ್ದಾರೆ. 

Mangalore Indira Hospital in Falnir loots Covid patient in lakhs. A Covid patient who was admitted to the hospital for 20 days and died was charged Rs 8.5 lakhs. Congress leader Suhail Kandak protested near the hospital for the way the hospital was looting money from COVID-19 Patients.