ಕೊಂಡಾಣಕ್ಕೆ ಪೊಲೀಸ್ ಕಮಿಷನರ್ ಭೇಟಿ ; ಫೋಟೊ ಕ್ಲಿಕ್ಕಿಸಿದ ಯುವಕನ ಮೊಬೈಲ್ ಕಿತ್ತುಕೊಂಡ ಪಿಎಸ್ಐ !

26-05-21 05:37 pm       Mangalore Correspondent   ಕರಾವಳಿ

ಪುರಾಣ ಪ್ರಸಿದ್ಧ ಕೋಟೆಕಾರು ಗ್ರಾಮದ ಕೊಂಡಾಣ ಕ್ಷೇತ್ರದ ಆಡಳಿತ ಕಮಿಟಿ ಮತ್ತು ಸ್ಥಳೀಯ ಮುತ್ತಣ್ಣ ಶೆಟ್ಟಿ ತಂಡದ ನಡುವೆ ನಡೆಯುತ್ತಿರುವ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಇಂದು ಪೊಲೀಸ್ ಕಮೀಷನರ್ ಶಶಿಕುಮಾರ್ ಕೊಂಡಾಣ ಕ್ಷೇತ್ರದ ಭಂಡಾರ ಮನೆಗೆ ಭೇಟಿ ನೀಡಿದ್ದಾರೆ.

ಉಳ್ಳಾಲ, ಮೇ 26: ಪುರಾಣ ಪ್ರಸಿದ್ಧ ಕೋಟೆಕಾರು ಗ್ರಾಮದ ಕೊಂಡಾಣ ಕ್ಷೇತ್ರದ ಆಡಳಿತ ಕಮಿಟಿ ಮತ್ತು ಸ್ಥಳೀಯ ಮುತ್ತಣ್ಣ ಶೆಟ್ಟಿ ತಂಡದ ನಡುವೆ ನಡೆಯುತ್ತಿರುವ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಇಂದು ಪೊಲೀಸ್ ಕಮೀಷನರ್ ಶಶಿಕುಮಾರ್ ಕೊಂಡಾಣ ಕ್ಷೇತ್ರದ ಭಂಡಾರ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಮೊಬೈಲಲ್ಲಿ ಫೋಟೋ ಕ್ಲಿಕ್ಕಿಸಿದ ಯುವಕನ ಸೆಲ್ ಫೋನನ್ನ ಉಳ್ಳಾಲ ಪಿಎಸ್ ಐ ಶಿವಕುಮಾರ್ ವಶಕ್ಕೆ ಪಡೆದು ದರ್ಪ ತೋರಿದ್ದಾರೆ.

ಕೊಂಡಾಣ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಮತ್ತು ಕ್ಷೇತ್ರದ ಅನುವಂಶಿಕ ಗುರಿಕಾರರೆಂದು ಹೇಳಲ್ಪಡುವ ಮುತ್ತಣ್ಣ ಶೆಟ್ಟಿಯವರ ನಡುವೆ ವಿವಾದ ಏರ್ಪಟ್ಟಿದ್ದು ಪ್ರಕರಣ ಉಳ್ಳಾಲ ಠಾಣೆಯ ಮೆಟ್ಟಿಲೇರಿದೆ. ಕಳೆದ ಮೇ 23 ರಂದು ಮುತ್ತಣ್ಣ ಶೆಟ್ಟರು ಬೇರೆ ಅರ್ಚಕರನ್ನು ಕರೆದುಕೊಂಡು ಬಂದು ಭಂಡಾರ ಮನೆಗೆ ವ್ಯವಸ್ಥಾಪನಾ ಸಮಿತಿ ಹಾಕಿದ ಬೀಗವನ್ನು ಒಡೆದು ಪೂಜೆ ನೆರವೇರಿಸಿದ್ದರ ವಿರುದ್ಧ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ತಾಮಾರ್ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಮಂಗಳೂರು ಕಮಿಷನರ್ ಎನ್.ಶಶಿಕುಮಾರ್ ಅವರು ಕೊಂಡಾಣ ಕ್ಷೇತ್ರದ ಭಂಡಾರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸ್ಥಳೀಯ ಸಾಯಿ ತೇಜಸ್ ಎಂಬ ಯುವಕ ತನ್ನ ಮೊಬೈಲ್ ನಲ್ಲಿ ಫೋಟೊ ಕ್ಲಿಕ್ಕಿಸುತ್ತಿದ್ದು ಆತನನನ್ನ ಕಮಿಷನರ್, ಯಾರಪ್ಪಾ ನೀನೆಂದು ಕೇಳಿದ್ದಾರೆ. ಕಮಿಷನರ್ ಅಷ್ಟು ಹೇಳಲು ತಡ, ಸ್ಥಳದಲ್ಲಿದ್ದ ಉಳ್ಳಾಲ ಠಾಣಾ ಪಿಎಸ್ಐ ಶಿವಕುಮಾರ್ ಯುವಕನ ಮೊಬೈಲನ್ನು ಕಿತ್ತುಕೊಂಡಿದ್ದಾರೆ. ಫೋಟೊ ಕ್ಲಿಕ್ಕಿಸಿದ ಯುವಕ ಕೊಂಡಾಣ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಕಡೆಯವನಾಗಿದ್ದು, ಸ್ಥಳದಲ್ಲಿದ್ದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷರು, ಸದಸ್ಯರು ಪಿಎಸ್ ಐ ದರ್ಪವನ್ನು ಕಣ್ಣಾರೆ ಕಂಡು ಮೂಕ ಪ್ರೇಕ್ಷಕರಾಗಿದ್ದರು. ಕೊನೆಗೆ, ಯುವಕನ ಮೊಬೈಲನ್ನು ಹಿಂತಿರುಗಿಸದೆ ಎಸ್ಐ ಠಾಣೆಗೆ ಒಯ್ದಿದ್ದಾರೆ.

ದೈವಸ್ಥಾನದ ಭೇಟಿ ಬಳಿಕ ಪ್ರತಿಕ್ರಿಯಿಸಿದ ಕಮಿಷನರ್, ದೈವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಮುಜರಾಯಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ.

ಕೊಂಡಾಣ ಕ್ಷೇತ್ರದಲ್ಲಿ ವ್ಯವಸ್ಥಾಪನಾ ಸಮಿತಿಗೆ ಕಿಮ್ಮತ್ತಿಲ್ಲ ; ಮುತ್ತಣ್ಣ ಶೆಟ್ಟಿಯದ್ದೇ ಕಾರುಬಾರು ! ಮತ್ತೆ ಠಾಣೆ ಮೆಟ್ಟಿಲೇರಿದ ದೂರು

Ullal Kondana Temple issue Police Commissioner Shashi Kumar Visits temple after issues have raised with the Managing committee of the temple.