ವೈಯಕ್ತಿಕ ಪ್ರತಿಷ್ಠೆಗೆ ಕೊಂಡಾಣ ಕ್ಷೇತ್ರದ ಹೆಸರು ಹರಾಜು ; ಕೃಷ್ಣ ಶೆಟ್ಟಿ ವಿರುದ್ಧ ವಾಗ್ದಾಳಿ

27-05-21 01:29 pm       Mangalore Correspondent   ಕರಾವಳಿ

ವೈಯಕ್ತಿಕ ಪ್ರತಿಷ್ಠೆಗಾಗಿ ಕೊಂಡಾಣ ಕ್ಷೇತ್ರದ ಹೆಸರನ್ನು ಹರಾಜು ಹಾಕುವ ಕೆಲಸ ನಡೆದಿದ್ದು ಈ ರೀತಿಯ ಬೆಳವಣಿಗೆಯನ್ನು ಖಂಡಿಸುತ್ತೇವೆ ಎಂದು ವಕೀಲ ಮೋಹನ್ ರಾಜ್ ಕೆ.ಆರ್ ಹೇಳಿದ್ದಾರೆ. 

ಉಳ್ಳಾಲ, ಮೇ 27: ಧಾರ್ಮಿಕ ಕ್ಷೇತ್ರವಾಗಲಿ, ರಾಜಕೀಯ ಕ್ಷೇತ್ರದಲ್ಲಾಗಲಿ ತಾಮಾರ್ ಕೃಷ್ಣ ಶೆಟ್ಟಿ ಎಂಬ ವ್ಯಕ್ತಿ ನಿಷ್ಠರಲ್ಲ. ಅವರ ಇತಿಹಾಸನೇ ಅಂಥದ್ದು. ವೈಯಕ್ತಿಕ ಪ್ರತಿಷ್ಠೆಗಾಗಿ  ಕೊಂಡಾಣ ಕ್ಷೇತ್ರದ ಹೆಸರನ್ನು ಹರಾಜು ಹಾಕುವ ಕೆಲಸ ನಡೆದಿದ್ದು ಈ ರೀತಿಯ ಬೆಳವಣಿಗೆಯನ್ನು ಖಂಡಿಸುತ್ತೇವೆ ಎಂದು ವಕೀಲ ಮೋಹನ್ ರಾಜ್ ಕೆ.ಆರ್ ಹೇಳಿದ್ದಾರೆ. 

ಪುರಾಣ ಪ್ರಸಿದ್ಧ ಕೋಟೆಕಾರು ಗ್ರಾಮದ ಕೊಂಡಾಣ ಕ್ಷೇತ್ರದ ಆಡಳಿತ ಕಮಿಟಿ ಮತ್ತು ಅನುವಂಶಿಕ ಗುರಿಕಾರರಾದ ಮುತ್ತಣ್ಣ ಶೆಟ್ಟಿ ತಂಡದ ನಡುವಿನ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ವಿವಾದ ಏರ್ಪಟ್ಟ ಬೆನ್ನಲ್ಲೇ ಗ್ರಾಮಸ್ಥರು ಮತ್ತು ಪ್ರಮುಖರು ಸೇರಿ ಮುತ್ತಣ್ಣ ಶೆಟ್ಟಿಯ ಜೊತೆ ಸುದ್ದಿಗೋಷ್ಟಿ ನಡೆಸಿದ್ದಾರೆ. ‌

ವಕೀಲರಾದ ಮೋಹನ್ ರಾಜ್ ಮಾತನಾಡಿ, ಕೃಷ್ಣ ಶೆಟ್ಟಿ ತಾಮಾರ್ ಅವರನ್ನು ಕೊಂಡಾಣ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಬೇಡಿ ಎಂದು ಸಂಘ ಪರಿವಾರದ ನಾಯಕರಲ್ಲಿ ಭಿನ್ನವಿಸಿದ್ದೆ. ಆ ವ್ಯಕ್ತಿ ಅಧ್ಯಕ್ಷ ಸ್ಥಾನಕ್ಕೆ ಸೂಕ್ತನಲ್ಲವೆಂದೂ ಹೇಳಿದ್ದೆ. ಆದರೂ ಅದೇ ವ್ಯಕ್ತಿಯನ್ನು ಅಧ್ಯಕ್ಷ ಸ್ಥಾನದಲ್ಲಿ  ಕುಳ್ಳಿರಿಸಿದ್ದು ಕ್ಷೇತ್ರದ ಹೆಸರನ್ನು ಹರಾಜಿಗಿಡುವ ಕೆಲಸ ನಡೆಯುತ್ತಿದೆ. ರಾಜಕೀಯದಲ್ಲೂ ಕೃಷ್ಣ ಶೆಟ್ಟಿ ನಿಷ್ಟರಲ್ಲ, ಅವರ ಇತಿಹಾಸವೇ ಅದೇ ರೀತಿಯದ್ದು. ಎಷ್ಟೋ ವರ್ಷದಿಂದ ನಡೆದು ಬರುತ್ತಿರುವ ಕೋಟೆಕಾರು ಬೀರಿಯ ಗಣೇಶೋತ್ಸವದ ವಿರುದ್ಧವೂ ಕೃಷ್ಣ ಶೆಟ್ಟಿ ಕೋರ್ಟಿನಲ್ಲಿ ದಾವೆ ಹೂಡಿ ಮುಖಭಂಗವನ್ನು ಅನುಭವಿಸಿದ್ದಾರೆ. ಅವರಿಗೆ ಸ್ವಲ್ಪನಾದರೂ ಕ್ಷೇತ್ರದ ಮೇಲೆ ಭಕ್ತಿ ಇದ್ದರೆ ವೈಯಕ್ತಿಕ ಪ್ರತಿಷ್ಟೆಯನ್ನ ಕ್ಷೇತ್ರದಿಂದ ಹೊರಗಿಟ್ಟು ಮುಂದುವರೆಯಲಿ. ಮುತ್ತಣ್ಣ ಶೆಟ್ಟಿ ಮತ್ತು ಅವರ ನಡುವೆ ವೈಷಮ್ಯ ಇದ್ದರೆ ಅದನ್ನು ಕ್ಷೇತ್ರದೊಳಗೆ ಬರದಂತೆ ನೋಡಿಕೊಳ್ಳಬೇಕೆಂದರು. 

ಕ್ಷೇತ್ರದ ಅನುವಂಶಿಕ ಗುರಿಕಾರರಾದ ಮುತ್ತಣ್ಣ ಶೆಟ್ಟಿ ಮಾತನಾಡಿ ತಾನು ಕೋಟೆಕಾರು ಕೆಳಗಿನ ಗುತ್ತಿನ ಒಂದನೇ ಗುರಿಕಾರನೆಂದು ನ್ಯಾಯಾಲಯವೇ ಆದೇಶ ನೀಡಿದೆ. ಕ್ಷೇತ್ರದ ಭಂಡಾರ ಮನೆಗೆ ಅದರದೇ ಆದ ಕಟ್ಟುಪಾಡಿದೆ. ಈ ಸಲ ಕೊರೊನಾ ಕಾರಣದಿಂದ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೋತ್ಸವ ನಡೆದಿಲ್ಲ. ಭಂಡಾರ ಮನೆ ಕ್ಷೇತ್ರದ ಸುಪರ್ದಿಗೆ ಬರದಿದ್ದರೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ತಾಮಾರ್ ಭಂಡಾರಮನೆಗೆ ಬೀಗ ಜಡಿದಿದ್ದರು. ಈ ಬಗ್ಗೆ ನಾವು ಉಳ್ಳಾಲ ಠಾಣೆಗೆ ದೂರು ನೀಡಿದ್ದು ಪೊಲೀಸರ ಅನುಮತಿಯಿಂದ ಭಂಡಾರಮನೆಗೆ ನಾವೂ ಕೂಡ ಬೀಗ ಹಾಕಿದ್ದೆವು. ಕಳೆದ ಮೇ 22 ರಂದು ಭಂಡಾರ ಮನೆಯ ಬೀಗ ಒಡೆದು ನಾವು ವಾಡಿಕೆಯಂತೆ ಗಣಹೋಮ ನೆರವೇರಿಸಿದ್ದೇವೆ ಎಂದು ಹೇಳಿದರು. 

ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ರಾಜೇಶ್ ರೈ ಮಾತನಾಡಿ, ಕೃಷ್ಣ ಶೆಟ್ಟಿ ತಾಮಾರನ್ನು ಕ್ಷೇತ್ರದ ಅಧ್ಯಕ್ಷ ಮಾಡಿದ್ದು ಎಂತಹ ರಾಜಕೀಯ..? ಧಾರ್ಮಿಕ ಧತ್ತಿ ಇಲಾಖೆಯ ಕಾನೂನೇ ಸರಿ ಇಲ್ಲ. ತುಳುನಾಡಿನ ದೈವ, ದೈವಸ್ಥಾನಗಳ ಕಟ್ಟುಪಾಡೇ ಬೇರೆ. ಆದರೆ ದತ್ತಿ ಇಲಾಖೆಯ ಕಾನೂನಿನಲ್ಲಿ ದೇವಸ್ಥಾನ, ದೈವಸ್ಥಾನಗಳಿಗೆ ಒಂದೇ ಕಾನೂನು ಹೇರಲಾಗಿದೆ. ತಾನು ಎರಡು ವರ್ಷ ಇಲ್ಲಿ ಅಧಿಕಾರದಲ್ಲಿದ್ದೆ. ಆನಂತರ ಸಮಿತಿ ಇಲ್ಲದೆ ದತ್ತಿ ಇಲಾಖೆಯ ಎರಡು ಅಧಿಕಾರಿಗಳಾದ ಸೀತಾರಾಮ, ನಾಗರಾಜ್ ಎಂಬವರು ಇಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ ಈಗಿನ ಸಮಿತಿ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಅವರು ವೈಯಕ್ತಿಕ ಪ್ರತಿಷ್ಟೆಗಾಗಿ ವಿನಾಕಾರಣ ಕೊಂಡಾಣದಂತಹ ಕ್ಷೇತ್ರದ ಹೆಸರನ್ನು ಹರಾಜಿಗಿಟ್ಟಿರುವುದು ಬೇಸರದ ಸಂಗತಿ ಎಂದಿದ್ದಾರೆ. 

ಕ್ಷೇತ್ರಕ್ಕೆ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳೇ ಪ್ರಧಾನರು. ಅವರ ಮಾರ್ಗದರ್ಶನದಂತೆ ಕ್ಷೇತ್ರದಲ್ಲಿ ಕಟ್ಟುಕಟ್ಟಳೆಗಳು ನಡೆಯುತ್ತಾ ಬಂದಿದೆ. ಆದರೆ ಕಳೆದ ಮೇ 18 ರಂದು ಕೃಷ್ಣ ಶೆಟ್ಟಿ ಏಕಾಏಕಿ ಬಂದು ಭಂಡಾರ ಮನೆಗೆ ಬೀಗ ಹಾಕಿ ಅನಗತ್ಯ ಗೊಂದಲ ಸೃಷ್ಟಿಸಿದ್ದಾರೆಂದರು. 

ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು, ರವೀಂದ್ರ ಶೆಟ್ಟಿ ಭಂಡಾರಮನೆ, ಧೀರಜ್ ಕೊಂಡಾಣ ಮತ್ತು ಕ್ಷೇತ್ರದ ಗುರಿಕಾರರು, ಚಾಕರಿ ವರ್ಗದವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


The Ullal Kondana Temple is now in problem after issues raise with the Managing committee now Advocate Mohan Raj has slammed Krishna Shetty for misusing the name of the temple.