ಲಕ್ಷದ್ವೀಪ - ಮಂಗಳೂರಿನ ಮಧ್ಯೆ ವ್ಯಾಪಾರ ಸಂಬಂಧಕ್ಕೆ ಬ್ರೇಕ್ ; ನೂರಾರು ಜನರ ತುತ್ತಿಗೆ ಬಿದ್ದಿದೆ ಕೊಡಲಿಯೇಟು ! ಕೋಟ್ಯಂತರ ವಹಿವಾಟು ನಷ್ಟ !

01-06-21 03:44 pm       Mangalore Correspondent   ಕರಾವಳಿ

ಕಳೆದ ಬಾರಿ ಕೊರೊನಾ ವಕ್ಕರಿಸಿದ ಬಳಿಕ ಲಕ್ಷದ್ವೀಪ - ಮಂಗಳೂರಿನ ಮಧ್ಯೆ ವ್ಯಾಪಾರ ಸಂಬಂಧಕ್ಕೆ ಬ್ರೇಕ್ ಬಿದ್ದಿದೆ. 

Photo credits : Representative Image

ಮಂಗಳೂರು, ಜೂನ್ 1 : ಅರಬ್ಬೀ ಸಮುದ್ರದ ಮಧ್ಯೆ ಇರುವ ಲಕ್ಷದ್ವೀಪಕ್ಕೂ ಮಂಗಳೂರಿನ ಹಳೆ ಬಂದರಿಗೂ ಹತ್ತಿರದ ಮತ್ತು ಬಹುಕಾಲದ ಸಂಬಂಧ. ದ್ವೀಪ ಸಮೂಹದ ಬೇಕು, ಬೇಡಗಳನ್ನು ಪೂರೈಸುತ್ತಿದ್ದುದೇ ಮಂಗಳೂರಿನ ಮಾರುಕಟ್ಟೆ. ಆದರೆ, ಕಳೆದ ಬಾರಿ ಕೊರೊನಾ ವಕ್ಕರಿಸಿದ ಬಳಿಕ ದ್ವೀಪ ಸಮೂಹದ ಜೊತೆಗಿನ ವ್ಯಾಪಾರ ಸಂಬಂಧಕ್ಕೆ ಬ್ರೇಕ್ ಬಿದ್ದಿದೆ. 

ಕಳೆದ ಒಂದು ವರ್ಷದಿಂದ ರಾಜ್ಯದಿಂದ ದ್ವೀಪ ಸಮೂಹಕ್ಕೆ ಸರಕು ಸಾಗಾಟವೇ ಆಗಿಲ್ಲ. ಕಳೆದ ವರ್ಷ ಕೊರೊನಾ ಲಾಕ್ಡೌನ್ ಬಳಿಕ ಮಂಗಳೂರಿನ ಮಾರುಕಟ್ಟೆಯಿಂದ ದಿನಸಿ ಸಾಮಗ್ರಿಯಾಗಲೀ, ಇನ್ನಿತರ ಅಗತ್ಯ ವಸ್ತುವಾಗಲೀ ದ್ವೀಪಕ್ಕೆ ಪೂರೈಕೆ ಆಗಿಲ್ಲ. 

ಹೀಗಾಗಿ ರಾಜ್ಯದ ಬೊಕ್ಕಸಕ್ಕೆ ನೂರಾರು ಕೋಟಿ ರು. ಆದಾಯ ನಷ್ಟವಾಗಿದೆ. ಕಳೆದ ಬಾರಿಯ ಕೊರೊನಾ ಲಾಕ್ಡೌನ್ ಬಳಿಕ ಲಕ್ಷದ್ವೀಪದ ಸಂಪೂರ್ಣ ವ್ಯಾಪಾರ ವಹಿವಾಟು ಕೇರಳದಿಂದ ನಡೆಯುತ್ತಿದೆ. ಲಕ್ಷದ್ವೀಪ ಸಮೂಹಕ್ಕೆ ದಿನಸಿ, ತರಕಾರಿ, ಕೋಳಿ ಇನ್ನಿತರ ಮಾಂಸ, ಸೀಮೆಂಟ್, ಕಬ್ಬಿಣ, ಜಲ್ಲಿ, ಮರಳು ಇತ್ಯಾದಿ ಕಟ್ಟಡ ನಿರ್ಮಾಣ ಸಾಮಗ್ರಿಗಳ ಪೈಕಿ ಶೇ.30ರಷ್ಟು ಭಾಗ ಮಂಗಳೂರು ಬಂದರಿನಿಂದ ಸಾಗಾಟ ಆಗುತ್ತಿತ್ತು. ಇನ್ನುಳಿದ ಸಾಮಗ್ರಿ ಕೇರಳದ ಬೇಪೂರ್ ಹಾಗೂ ಕೊಚ್ಚಿ ಬಂದರಿನಿಂದ ಪೂರೈಕೆಯಾಗುತ್ತದೆ. ಆದರೆ ಒಂದೂವರೆ ವರ್ಷಗಳಿಂದ ಮಂಗಳೂರು ಬಂದರಿನಿಂದ ನಿಂತು ಹೋಗಿರುವ ವ್ಯಾಪಾರ ಸಂಬಂಧ ಮತ್ತೆ ಹಳಿಗೆ ಬಂದಿಲ್ಲ. ರಾಜ್ಯದಿಂದ ಸರಕು ಸಾಗಣೆಗೆ ಅವಕಾಶ ನೀಡದಿದ್ದ ಕಾರಣ ಕೇರಳದಿಂದಲೇ ಪೂರ್ತಿಯಾಗಿ ಸರಕು ಸಾಗಣೆಯಾಗುತ್ತಿದೆ.

ರಾಜ್ಯದಿಂದ ಬೇರೆ ರಾಜ್ಯಗಳಿಗೆ ಮತ್ತು ವಿದೇಶಕ್ಕೆ ಸರಕು ಸಾಗಾಟಕ್ಕೆ ಅವಕಾಶ ಇದ್ದರೂ ಲಕ್ಷದ್ವೀಪಕ್ಕೆ ಮಾತ್ರ ಇನ್ನೂ ಅವಕಾಶ ನೀಡಿಲ್ಲ. ಇದರಿಂದಾಗಿ ರಾಜ್ಯದ ರೈತರ ಉತ್ಪಾದನೆಗಳಿಗೆ ಖಚಿತ ಮಾರುಕಟ್ಟೆಯನ್ನೇ ಕಳೆದುಕೊಂಡಂತಾಗಿದೆ.  

ಮಂಗಳೂರು ಹಳೆ ಬಂದರಿನಿಂದ ವಾರಕ್ಕೆ 100ಕ್ಕೂ ಅಧಿಕ ಟನ್ ಸರಕು ತುಂಬಿಕೊಂಡು ನಾಲ್ಕೈದು ಸಣ್ಣಮಟ್ಟಿನ ಹಡಗುಗಳು ಪ್ರತಿವಾರ ಲಕ್ಷದ್ವೀಪಕ್ಕೆ ಸಂಚರಿಸುತ್ತಿದ್ದವು. ಇದಲ್ಲದೆ, ವಾರಕ್ಕೊಮ್ಮೆ ಪ್ರಯಾಣಿಕರ ಸಂಚಾರಕ್ಕೆ ಹಡಗು ತೆರಳುತ್ತಿತ್ತು. ಇದರಿಂದ ವಾರವೊಂದಕ್ಕೇ ಹಲವು ಕೋಟಿ ರು.ಗಳ ವಹಿವಾಟು ನಡೆಯುತ್ತಿತ್ತು.
ಕಳೆದ ವರ್ಷದಿಂದ 2-3 ಬಾರಿ ಪ್ರಯಾಣಿಕರ ಹಡಗು ಸಂಚಾರಕ್ಕೆ ಅವಕಾಶ ಮಾತ್ರ ನೀಡಿದ್ದರೂ ಸರಕು ಸಾಗಾಟಕ್ಕೆ ರಾಜ್ಯದಿಂದ ಅನುಮತಿ ನೀಡಿಲ್ಲ ಎಂದು ಉದ್ಯಮಿ ಹಾಗೂ ಬಂದರು ಶ್ರಮಿಕರ ಸಂಘದ ಕಾರ್ಯದರ್ಶಿ ಬಿ.ಕೆ. ಇಮ್ತಿಯಾಜ್ ಆತಂಕ ತೋಡಿಕೊಂಡಿದ್ದಾರೆ. 

ಲಕ್ಷದ್ವೀಪದ ಸರಕು ಸಾಗಣೆ ನಿಂತು ಹೋಗಿದ್ದರಿಂದ ನೂರಾರು ಕಾರ್ಮಿಕರಿಗೆ  ಕೆಲಸವಿಲ್ಲದಾಗಿದೆ. ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಸಾಗುವ ಹಡಗಿನಲ್ಲಿ ಮತ್ತು ಲೋಡಿಂಗ್- ಅನ್ ಲೋಡಿಂಗ್ ಕೆಲಸಕ್ಕಾಗಿಯೇ ಹಳೆ ಬಂದರಿನಲ್ಲಿ 300ಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ.
ಕಳೆದ ವರ್ಷದಿಂದೀಚೆಗೆ ಈ ದುಡಿದು ತಿನ್ನುವ ವರ್ಗದ ಅನ್ನಕ್ಕೂ ಕಲ್ಲು ಬಿದ್ದಿದೆ.

Mangalore Lakshadweep trading in huge loss after covid lockdown imposed in Karnataka.