ಎಂಆರ್ ಪಿಎಲ್ ಉದ್ಯೋಗದಲ್ಲಿ ಸ್ಥಳೀಯರಿಗೆ ವಂಚನೆ ; ಜಿಲ್ಲೆಯಾದ್ಯಂತ ಪ್ರತಿಭಟನೆ ಬಿಸಿ, ಸಂಸದರ ವಿರುದ್ಧ ಆಕ್ರೋಶ 

05-06-21 10:23 pm       Mangaluru Correspondent   ಕರಾವಳಿ

ಎಂಎರ್ ಪಿಎಲ್ ನೇಮಕಾತಿಯಲ್ಲಿ ಸ್ಥಳೀಯರಿಗೆ ಆಗಿರುವ ಅನ್ಯಾಯವನ್ನು ಖಂಡಿಸಿ ಡಿವೈಎಫ್ಐ ಕರೆ ನೀಡಿದ್ದ ಮನೆ ಮನೆ ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಮಂಗಳೂರು, ಜೂನ್ 5: ಎಂಎರ್ ಪಿಎಲ್ ನೇಮಕಾತಿಯಲ್ಲಿ ಸ್ಥಳೀಯರಿಗೆ ಆಗಿರುವ ಅನ್ಯಾಯವನ್ನು ಖಂಡಿಸಿ ಡಿವೈಎಫ್ಐ ಕರೆ ನೀಡಿದ್ದ ಮನೆ ಮನೆ ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಶಾಸಕರು, ಸಂಸದರ ನಿರ್ಲಕ್ಷ್ಯದ ವಿರುದ್ದ ಜನರು ತಮ್ಮ ಮನೆ, ಕಚೇರಿಗಳಲ್ಲಿ ಸ್ವಯಂಪ್ರೇರಿತರಾಗಿ ಪ್ರತಿಭಟನೆ ನಡೆಸಿದ್ದಾರೆ.

ಬೆಳಗ್ಗಿನಿಂದ ಸಂಜೆಯ ವರೆಗೂ ಪ್ರತಿಭಟನೆಯ ಕಾವು ಮಾರ್ದನಿಸಿದ್ದು, ಜಿಲ್ಲೆಯಾದ್ಯಂತ ಜನರು ಲಾಕ್ಡೌನ್ ನಡುವೆಯೇ ಸದ್ದಿಲ್ಲದೆ ಪ್ರತಿಭಟನೆಯಲ್ಲಿ ಕೈಜೋಡಿಸಿದ್ದಾರೆ. ಬೆಳಗ್ಗೆ ಸಾಂಕೇತಿಕವಾಗಿ ಎಂಆರ್ ಪಿಎಲ್ ಗೇಟ್ ಮುಂಭಾಗದಲ್ಲಿ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದರೆ, ಆಬಳಿಕ ಜಿಲ್ಲೆಯ ಅಲ್ಲಲ್ಲಿ ಜನರು ಪ್ರತಿಭಟನೆ ನಡೆಸಿದ್ದಾರೆ. ಮಂಗಳೂರು ನಗರದ ಬೋಳಾರ, ಜಪ್ಪು, ಬಜಾಲ್, ಕೋಡಿಕಲ್, ಬಂಟ್ವಾಳ, ಮೂಡುಬಿದ್ರೆ, ಸುರತ್ಕಲ್, ಪುತ್ತೂರು ಹೀಗೆ ಎಲ್ಲ ತಾಲೂಕು, ಗ್ರಾಮ ಗ್ರಾಮಗಳಲ್ಲಿಯೂ ಪ್ರತಿಭಟನೆಯ ಕೂಗು ಕೇಳಿಬಂತು. ಎಂಆರ್ ಪಿಎಲ್ ಆಸುಪಾಸಿನ ಪೆರ್ಮುದೆ, ಕಳವಾರು, ಬಾಳ, ಕಾಟಿಪಳ್ಳದಲ್ಲಿಯೂ ಜನರು ಭಿತ್ತಿಪತ್ರ ಹಿಡಿದು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಜನರು, ಜನನಾಯಕರು ಸ್ವಯಂಪ್ರೇರಿತವಾಗಿ ಕೈಯಲ್ಲಿ ಭಿತ್ತಿಪತ್ರ ಹಿಡಿದು ಸಂಸದ ನಳಿನ್ ಕುಮಾರ್ ವಿರುದ್ಧ ಘೋಷಣೆ ಕೂಗಿದ್ದಾರೆ. ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರು ಕೂಡ ಕೈಜೋಡಿಸಿದ್ದಾರೆ. ಮಾಜಿ ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್ ಸೇರಿದಂತೆ ಸಿಪಿಎಂ, ಡಿವೈಎಫ್ಐ ಸ್ಥಳೀಯ ನಾಯಕರು, ಕಾರ್ಯಕರ್ತರು ತಮ್ಮ ಮನೆಗಳಲ್ಲಿ ಎಂಆರ್ ಪಿಎಲ್ ಉದ್ಯೋಗ ನಮ್ಮ ಹಕ್ಕು, ಅದನ್ನು ನಮಗೇ ಕೊಡಿ ಎಂದು ಒತ್ತಾಯಿಸಿದ್ದಾರೆ.

ತುಳು, ಕನ್ನಡದಲ್ಲಿ ಭಿತ್ತಿಪತ್ರಗಳನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆಡಳಿತದ ವಿರುದ್ಧ ಲಾಕ್ಡೌನ್ ಸಂದರ್ಭದಲ್ಲಿ ಕೈಗೆತ್ತಿಕೊಂಡ ಹೊಸ ಅಸ್ತ್ರವಾಗಿ ಕಂಡುಬಂತು. ‘ತುಳುನಾಡ ಅಭಿವೃದ್ಧಿಡ್ ತುಳುವಪ್ಪೆ ಜೋಕುಲೆಗ್ ಮಲ್ಲಪಾಲ್ ’’ ಎನ್ನುವ ಹೆಸರಿನಲ್ಲಿ ತುಳುವ ಮಕ್ಕಳಿಗೆ ಉದ್ಯೋಗ ಕೊಡಿಸಿ ಎಂಬ ಕೂಗು ಜನಮಾನಸದಲ್ಲಿ ನಿರ್ಲಕ್ಷ್ಯ ಆಡಳಿತಗಾರರ ವಿರುದ್ಧ ವಿರೋಧಿ ಭಾವನೆಯ ಅಲೆ ಎಬ್ಬಿಸಿದೆ.

ಇತ್ತೀಚೆಗೆ ಎಂಆರ್ ಪಿಎಲ್ ಕಂಪೆನಿ 183 ಉದ್ಯೋಗ ನೇಮಕಾತಿಯಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರದವರಿಗೆ ಸಿಂಹಪಾಲು ನೀಡಿದ್ದು, ಕರಾವಳಿಯಲ್ಲಿ ಆಕ್ರೋಶದ ಅಲೆ ಎಬ್ಬಿಸಿತ್ತು. ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಸಂಸದ ನಳಿನ್ ಕುಮಾರ್ ನಿರ್ಲಕ್ಷ್ಯದ ವಿರುದ್ಧ ಖಂಡಿಸಿ ಬರೆದುಕೊಂಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದರಿಂದ ಎಚ್ಚೆತ್ತ ಸಂಸದ ಮತ್ತು ಶಾಸಕರು ಎಂಆರ್ ಪಿಎಲ್ ಅಧಿಕಾರಿಗಳನ್ನು ಕರೆಸಿ ಮಾತುಕತೆ ನಡೆಸಿದ್ದರು. ಮಾತುಕತೆಯ ಬಳಿಕ ನೇಮಕಾತಿಗೆ ತಡೆ ವಿಧಿಸಿದ್ದಾರೆಂದು ಸುಳ್ಳು ಸುದ್ದಿ ಹಬ್ಬಿಸುವ ಯತ್ನ ನಡೆದಿತ್ತು. ಇವೆಲ್ಲ ನಡೆದಿದ್ದರೂ, ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಸಂಸದ ನಳಿನ್ ಕುಮಾರ್ ಈ ಬಗ್ಗೆ ಬಹಿರಂಗ ಹೇಳಿಕೆ ನೀಡಿಲ್ಲ. ಇದೀಗ ಪ್ರತಿಭಟನೆಯ ಮೂಲಕ ಜನರು ಆಡಳಿತಗಾರರಿಗೆ ಬಿಸಿ ಮುಟ್ಟಿಸುವ ಯತ್ನ ನಡೆಸಿದ್ದಾರೆ.

MRPL Job Scam DYFI and Congress leaders protest outside their houses Slam MP Naleen Kumar kateel over fake job promises to youths of Mangalore.