ಸೂರಿಂಜೆ, ಕುತ್ತೆತ್ತೂರಿನಲ್ಲಿ ಮೊಳಕೆಯಲ್ಲೇ ಸುಟ್ಟು ಹೋದ ಭತ್ತ !! ಎಂಆರ್ ಪಿಎಲ್ ದುಷ್ಪರಿಣಾಮದ ಬಗ್ಗೆ ಪಂಚಾಯತ್ ನಿರ್ಲಕ್ಷ್ಯ 

09-06-21 10:41 pm       Mangaluru Correspondent   ಕರಾವಳಿ

ಸುರತ್ಕಲ್ ಸಮೀಪದ ಸೂರಿಂಜೆ ಮತ್ತು ಕುತ್ತೆತ್ತೂರಿನಲ್ಲಿ ಭತ್ತದ ಗದ್ದೆಯಲ್ಲಿ ಬಿತ್ತನೆ ಮಾಡಿದ್ದ ಭತ್ತದ ಬೀಜಗಳು ಮೊಳಕೆ ಹಂತದಲ್ಲಿ ಸುಟ್ಟು ಹೋಗಿರುವ ಘಟನೆ ಬೆಳಕಿಗೆ

ಮಂಗಳೂರು, ಜೂನ್ 9: ಸುರತ್ಕಲ್ ಸಮೀಪದ ಸೂರಿಂಜೆ ಮತ್ತು ಕುತ್ತೆತ್ತೂರಿನಲ್ಲಿ ಭತ್ತದ ಗದ್ದೆಯಲ್ಲಿ ಬಿತ್ತನೆ ಮಾಡಿದ್ದ ಭತ್ತದ ಬೀಜಗಳು ಮೊಳಕೆ ಹಂತದಲ್ಲಿ ಸುಟ್ಟು ಹೋಗಿರುವ ಘಟನೆ ಬೆಳಕಿಗೆ ಬಂದಿದ್ದು ಎಂಆರ್ ಪಿಎಲ್ ನಿಂದ ಹರಿದು ಬಂದ ಕೆಮಿಕಲ್ ಯುಕ್ತ ನೀರು ಇದಕ್ಕೆ ಕಾರಣ ಎಂದು ಸ್ಥಳೀಯರು ಭೀತಿ ವ್ಯಕ್ತಪಡಿಸಿದ್ದಾರೆ.

ಬೊಳ್ಳಾರ ಗುತ್ತಿನ ಪ್ರಕಾಶ್ ಶೆಟ್ಟಿ ಎಂಬವರು ಕೃಷಿ ಇಲಾಖೆಯಿಂದ ಪಡೆದ ಭತ್ತವನ್ನು ಮೊಳಕೆ ಬರಿಸಿ ಬಿತ್ತನೆ ಮಾಡಿದ್ದರು. ಇನ್ನೋರ್ವ ರೈತ ತಾವೇ ಸಿದ್ಧಪಡಿಸಿದ ಭತ್ತವನ್ನು ಮೊಳಕೆ ಬರಿಸಿ ಗದ್ದೆಯಲ್ಲಿ ಬಿತ್ತಿದ್ದರು. ಇಬ್ಬರು ರೈತರು ಬಿತ್ತಿದ ಬೀಜವೂ ಸುಟ್ಟು ಹೋಗಿದ್ದು ಕಪ್ಪಾಗಿ ಹೋಗಿದೆ.

ಎಂಆರ್ ಪಿಎಲ್ ಬಳಿಯ ಮೂಡುಪದವು ಸಮೀಪ ಒಸರುವ ತ್ಯಾಜ್ಯ ನೀರು ಕುತ್ತೆತ್ತೂರು ಮೂಲಕ ಹರಿದು ಸೂರಿಂಜೆಗೆ ಬರುತ್ತದೆ. ಇದರ ಪರಿಣಾಮ ಈ ಭಾಗದಲ್ಲಿ ಕೃಷಿಗೆ ತೊಂದರೆಯಾಗಿ ರೈತರು ಕೃಷಿ ಮಾಡುವುದನ್ನೇ ಬಿಟ್ಟಿದ್ದಾರೆ. ಈಗ ಸೂರಿಂಜೆಯ ರೈತರು ಮಾಡಿದ ಕೃಷಿ ಸುಟ್ಟು ಹೋಗಿದ್ದು ಹಾಳಾಗಿದೆ. 

ಇತ್ತೀಚೆಗೆ ಪೊನ್ನಗಿರಿ ಮಹಾಲಿಂಗೇಶ್ವರ ದೇವಳದ ಬಳಿ ನೀರಿನಲ್ಲಿ ತೈಲದ ಅಂಶ ಕಂಡುಬಂದಿದ್ದು, ಬಾವಿ, ಕೆರೆಯ ಮೀನುಗಳು ಸತ್ತಿದ್ದವು. ಇಲ್ಲಿಂದ ನೀರಿನ ಸ್ಯಾಂಪಲ್ ಸಂಗ್ರಹಿಸಲಾಗಿತ್ತು. ಆದರೆ ಅದರ ಫಲಿತಾಂಶ ಇನ್ನೂ ಜನತೆಗೆ ತಿಳಿದಿಲ್ಲ ಎಂಬ ಅಸಮಾಧಾನವನ್ನು ರೈತರು ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಪಂಚಾಯತ್ ಸದಸ್ಯರು ಮತ್ತು ಅಧಿಕಾರಿಗಳಲ್ಲಿ ಕೇಳಿದರೆ ತಮಗೇನೂ ಗೊತ್ತಿಲ್ಲ ಎಂದು ನುಣುಚಿಕೊಳ್ಳುತ್ತಿದ್ದಾರೆ. ಎಂಆರ್ ಪಿಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸ್ಥಳೀಯ ಕೃಷಿಕರಿಗೆ ಹಾನಿಯಾಗುತ್ತಿರುವ ಬಗ್ಗೆ ಪಂಚಾಯತ್ ನಲ್ಲಿ ಹೇಳಿಕೊಂಡರೂ, ಕೈಗಾರಿಕೆಯ ಮಾಲಿನ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಪಂಚಾಯತ್ ಅಧಿಕಾರಿಗಳ ಈ ರೀತಿಯ ನಿರ್ಲಕ್ಷ್ಯದಿಂದಾಗಿಯೇ ಎಂಆರ್ ಪಿಎಲ್ ಸೊಕ್ಕು ತೋರಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

MRPL Dump dirty wastewater Crops Burnt in Mangalore. The Pictures of this has gone viral on Social Media.