ಲಾಕ್ಡೌನ್ ನೀತಿ ಉಲ್ಲಂಘಿಸಿ ಮಂಗಳಾದೇವಿ ದೇವಸ್ಥಾನದಲ್ಲಿ ಅದ್ದೂರಿ ಮದುವೆ ; ಅಧಿಕಾರಿಗಳ ದಾಳಿ

20-06-21 12:32 pm       Mangaluru Correspondent   ಕರಾವಳಿ

ಲಾಕ್ಡೌನ್ ಕಾನೂನು ಉಲ್ಲಂಘಿಸಿ, ನಗರದ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಅದ್ದೂರಿ ಮದುವೆ ನಡೆದಿದ್ದು, ಸ್ಥಳಕ್ಕೆ ಮಹಾನಗರ ಪಾಲಿಕೆ ಮತ್ತು ಮುಜರಾಯಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಂಗಳೂರು, ಜೂನ್ 20: ಲಾಕ್ಡೌನ್ ಕಾನೂನು ಉಲ್ಲಂಘಿಸಿ, ನಗರದ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಅದ್ದೂರಿ ಮದುವೆ ನಡೆದಿದ್ದು, ಸ್ಥಳಕ್ಕೆ ಮಹಾನಗರ ಪಾಲಿಕೆ ಮತ್ತು ಮುಜರಾಯಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯ, ಎಕ್ಕೂರಿನ ಭಾಸ್ಕರಚಂದ್ರ ಶೆಟ್ಟಿಯ ಪುತ್ರಿಯ ಮದುವೆ ಸೇರಿದಂತೆ ಐದು ಜೋಡಿಗಳ ಮದುವೆಯನ್ನು ಮಂಗಳಾದೇವಿ ದೇವಸ್ಥಾನದ ಅಂಗಣದಲ್ಲಿರುವ ಹಾಲ್ ನಲ್ಲಿ ಏರ್ಪಡಿಸಲಾಗಿತ್ತು. ಮದುವೆ ಹಿನ್ನೆಲೆಯಲ್ಲಿ ವಾದ್ಯ, ವಾಲಗದಲ್ಲಿ ದಿಬ್ಬಣ ಬಂದಿದ್ದು ಮದುವೆ ಸಮಾರಂಭಕ್ಕೆ ಸಿದ್ಧತೆ ನಡೆದಿತ್ತು. ದೊಡ್ಡ ಪಾರ್ಟಿಯ ಮದುವೆ ಆಗಿದ್ದರಿಂದ ದೇವಸ್ಥಾನದ ಎದುರಲ್ಲಿ 40ಕ್ಕೂ ಹೆಚ್ಚು ಕಾರುಗಳು ನಿಂತಿದ್ದು, ಫುಲ್ ಟ್ರಾಫಿಕ್ ಜಾಮ್ ಕೂಡ ಆಗಿತ್ತು.

ದೇವಸ್ಥಾನದಲ್ಲೇನೊ ಉತ್ಸವ ಇದೆಯೋ ಅನ್ನುವ ರೀತಿ ನೂರಾರು ಜನರು ಸೇರಿದ್ದರು. ಇಷ್ಟಾಗುತ್ತಿದ್ದಂತೆ, ಬೆಳಗ್ಗೆ ಹತ್ತೂವರೆ ಸುಮಾರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಶಿಸ್ತುಕ್ರಮ ಜರುಗಿಸಿದ್ದಾರೆ. ಲಾಕ್ಡೌನ್ ಮಧ್ಯೆ ಮನೆಯಲ್ಲಿ ಮದುವೆ ನಡೆಸುವುದಿದ್ದರೂ, 25 ಜನರಿಗೆ ಮೀರದಂತೆ ಸರಳ ಸಮಾರಂಭ ನಡೆಸಬೇಕು. ಆದರೆ, ಕಾನೂನು ಮಿತಿಯನ್ನು ಮೀರಿ ಅದ್ದೂರಿ ಮದುವೆ ನಡೆದಿದ್ದು, ಸಮಾರಂಭದ ಆಯೋಜಕರ ವಿರುದ್ಧ ಅಧಿಕಾರಿಗಳು ದಬಾಯಿಸಿದ ಪ್ರಸಂಗ ನಡೆಯಿತು.

ಜಿಲ್ಲಾಧಿಕಾರಿಗೆ ಬಂದ ಮಾಹಿತಿ ಮೇರೆಗೆ, ಕಾರ್ಪೊರೇಶನ್ ಮತ್ತು ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿತ್ತು. ಸಮಾರಂಭದ ಆಯೋಜಕರು ಮತ್ತು ಮದುವೆಗೆ ಅವಕಾಶ ಕೊಟ್ಟಿದ್ದ ದೇವಸ್ಥಾನದ ಆಡಳಿತ ಕಮಿಟಿ ವಿರುದ್ಧ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ. ಮಂಗಳಾದೇವಿ ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ್ದು, ಭಕ್ತರಿಗೆ ಪ್ರವೇಶ ಇಲ್ಲದಿರುವಾಗ ಮದುವೆಗೆ ಅವಕಾಶ ಕೊಟ್ಟಿದ್ದು ಹೇಗೆ ಎಂದು ದೇಗುಲದ ಆಡಳಿತಾಧಿಕಾರಿಯ ಬಗ್ಗೆ ಪಾಲಿಕೆ ಅಧಿಕಾರಿಗಳು ಗರಂ ಆಗಿದ್ದಾರೆ. ಮಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೇರಿ ಆರೋಗ್ಯ ಇಲಾಖೆ ಅಧಿಕಾರಿಗಳು ಹೆಣಗಾಡುತ್ತಿದ್ದು ಇದರ ಮಧ್ಯೆ ಅದ್ದೂರಿ ಮಡುವೆ ನಡೆಸಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. 

Read: ದೇವಸ್ಥಾನದಲ್ಲಿ ನಾಲ್ಕು ಮದುವೆ ; ಅವಕಾಶ ಕೊಟ್ಟಿದ್ದ ಅಧಿಕಾರಿಗಳ ವಿರುದ್ಧವೇ ಎಫ್ಐಆರ್, ಕುಟುಂಬಗಳ ವಿರುದ್ಧವೂ ಕೇಸು !

Temples in Karnataka are not open for devotees due to COVID but in Mangalore a grand wedding has taken place with hundreds of people in Mangaladevi Temple. Concerned officers have raided the place to take action.