ಬೆವರು ಸುರಿಸುವ ಕಾರ್ಮಿಕರೇ ದೇಶದ ಸಂಪತ್ತು ; ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿದ ಖಾದರ್

25-06-21 02:17 pm       Mangalore Correspondent   ಕರಾವಳಿ

ತಳಮಟ್ಟದ ಕಟ್ಟಡ ಕಾರ್ಮಿಕರು ಬೆವರು ಸುರಿಸಿ ದುಡಿಯುವ ಮೂಲಕ ದೇಶದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು. 

ಉಳ್ಳಾಲ, ಜೂ.25: ತಳಮಟ್ಟದ ಕಟ್ಟಡ ಕಾರ್ಮಿಕರು ಬೆವರು ಸುರಿಸಿ ದುಡಿಯುವ ಮೂಲಕ ದೇಶದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು. 

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ ವತಿಯಿಂದ ಶಾಸಕ ಯು.ಟಿ. ಖಾದರ್ ನೇತೃತ್ವದಲ್ಲಿ ಮಂಗಳೂರು ಕ್ಷೇತ್ರದ ಕಟ್ಟಡ ನಿರ್ಮಾಣ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಮುಡಿಪಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು. 

ಸಮಾಜದ ಏಳಿಗೆಗೆ ಕಾರ್ಮಿಕರ ಕೊಡುಗೆ ಅಪಾರವಿದೆ. ಕಾರ್ಮಿಕರು ನೆಮ್ಮದಿಯಿಂದ ಬಾಳಲು ಸರಕಾರವು ಇಂದು  ಅನೇಕ ಸವಲತ್ತುಗಳನ್ನು ನೀಡಿದೆ. ಆದರೆ ಎಂಟು ಗಂಟೆಯ ಕಾನೂನನ್ನೆ ಉಲ್ಲಂಘಿಸಿ ಕಾರ್ಮಿಕರನ್ನ 12 ಗಂಟೆ ದುಡಿಸುತ್ತಾರೆ. ಇನ್ನು 12 ಗಂಟೆ ಮಾಡಿದರೆ ಕಾರ್ಮಿಕರ ಅವಸ್ಥೆ ಹೇಗಿರಬಹುದು. ಕಾರ್ಮಿಕರಿಗೆ ಎಂಟು ಗಂಟೆಯಿಂದ ಹನ್ನೆರಡು ಗಂಟೆ ಕೆಲಸ ಮಾಡಬೇಕು ಎಂದು ಒತ್ತಡ ಸರಕಾರದ ಮೇಲೆ ಇತ್ತಾದರೂ ಅದಕ್ಕೆ ಪ್ರತಿ ಒತ್ತಡ ಹಾಕುವ ಮೂಲಕ ಹಿಂತೆಗೆಯುವಂತೆ ಮಾಡಿದ್ದೇವೆ ಎಂದರು.

ಕಾರ್ಮಿಕ ವರ್ಗದ ಮಕ್ಕಳ ಮುಂದಿನ ಶಿಕ್ಷಣಕ್ಕೆ ಯಾವ ರೀತಿಯ ಸಹಕಾರ ಬೇಕಿದ್ದರೂ ಕೊಡಲು ನಾನು ಸಿದ್ಧ. ಕಾರ್ಮಿಕರಿಗೆ ಸಿಗುವ ಸೌಲಭ್ಯಕ್ಕೆ ಕೆಲವು ಗುತ್ತಿಗೆದಾರರು ಅಡ್ಡಿಯಾಗಿದ್ದಾರೆ. ಒಬ್ಬ ಗುತ್ತಿಗೆದಾರನ‌ ಅಧೀನದಲ್ಲಿ ಇಪ್ಪತ್ತು ಮಂದಿ ಕೆಲಸ ಮಾಡುತ್ತಿದ್ದರೆ, ಆತ ಕೇವಲ ಐದು ಜನರ ನೋಂದಣಿಗೆ ಅವಕಾಶ ಕೊಟ್ಟು ತಾನು ಕಾರ್ಮಿಕರಿಗೆ ಇತರೆ ಸೌಲಭ್ಯ ಕೊಡುವುದರಿಂದ ಬಚಾವಾಗಲು ಪ್ರಯತ್ನಿಸುತ್ತಾನೆ. ಅಂತಹ ಸಂದರ್ಭದಲ್ಲಿ ಇತರ ಕಾರ್ಮಿಕರು ಸೌಲಭ್ಯ ಪಡೆಯುವುದರಿಂದ ವಂಚಿತರಾಗುತ್ತಾರೆ. ಇಂತಹ ಸಂದರ್ಭ ಎದುರಾದಾಗ ಪಿಡಿಒಗಳು ಕೂಡ ಸಹಕರಿಸುತ್ತಿಲ್ಲ. ಹಾಗಾಗಿ ಕಾರ್ಮಿಕ ಇಲಾಖೆ ಅದಕ್ಕೊಂದು ಪರಿಹಾರ ಕಂಡುಹಿಡಿಯಬೇಕು ಎಂದು ನುಡಿದರು.

ಕಾರ್ಮಿಕ ಇಲಾಖೆ ಅಧಿಕಾರಿ ವಿಲ್ಮಾ ಪ್ರಾಸ್ತಾವಿಕ ಮಾತುಗಳನ್ನಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 86 ಸಾವಿರ ಜನ ಕಟ್ಟಡ ಕಾರ್ಮಿಕರು ನೋಂದಣಿ ಮಾಡಿದ್ದಾರೆ. ಕೆಲವು ಆಟೋ ಚಾಲಕರಿಗೂ ಈ ಸೌಲಭ್ಯ ಪಡೆಯಲು ತಪ್ಪು ಮಾಹಿತಿ ನೀಡಿದ್ದು ಅದು ಸಲ್ಲದು. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ ಅಧೀನದ ದುಡ್ಡು ಕಟ್ಟಡ ಕಾರ್ಮಿಕರಿಗೇ ಸಲ್ಲಬೇಕು ಹೊರತು ಈ ಸೌಲಭ್ಯ ಇತರರಿಗೆ ಸಿಗುವುದಿಲ್ಲ ಎಂದು ನುಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಬಂಟ್ವಾಳ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಕಾರ್ಮಿಕ ಘಟಕದ ಅಬ್ದುಲ್ ರಹಿಮಾನ್, ಅರುಣ್ ಡಿಸೋಜ, ಕುರ್ನಾಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಶಾಂತ ಕಾಜವ, ದೇವದಾಸ ಭಂಡಾರಿ ಹಾಗೂ ಸೂಪಿಕುಂಞಿ, ಅಬ್ದುಲ್ ಜಲೀಲ್ ಮೋಂಟುಗೋಳಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರವೀಣ್ ಆಳ್ವ, ಪದ್ಮನಾಭ ನರಿಂಗಾನ, ಸಜಿಪ ಪಡು, ಸಜಿಪ ನಡು ಹಾಗೂ ಕುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಕಾರ್ಮಿಕ ಇಲಾಖೆಯ ವೀರೇಂದ್ರ, ಮೀರಾ ಉಪಸ್ಥಿತರಿದ್ದರು.

Food kits distributed to construction workers by U T Khader in Ullal.