ಚೆಂಬುಗುಡ್ಡೆ ಹಿಂದು ರುದ್ರಭೂಮಿಗೆ ವಿದ್ಯುತ್ ಚಿತಾಗಾರ ; ಸ್ಥಳೀಯರ ವಿರೋಧ, ಅಸಮರ್ಪಕ ಯೋಜನೆ ಎಂದು ಆಕ್ಷೇಪ

02-07-21 01:36 pm       Mangalore Correspondent   ಕರಾವಳಿ

ಚೆಂಬುಗುಡ್ಡೆ ಹಿಂದು ರುದ್ರಭೂಮಿಯಲ್ಲಿ ಹಳೆಯ ಚಿತಾಗಾರದ ಪಕ್ಕದಲ್ಲೇ ಗುಂಡಿ ಅಗೆದು ಶಿಲಾನ್ಯಾಸಕ್ಕೆ ಸಿದ್ಧತೆ ನಡೆಸಲಾಗಿದೆ. ಇದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದ್ದು ಸಾರ್ವಜನಿಕರಿಂದ ಸಹಿಸಂಗ್ರಹ ಮಾಡಿ ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದಾರೆ. 

ಉಳ್ಳಾಲ, ಜು.2: ಚೆಂಬುಗುಡ್ಡೆ ಹಿಂದು ರುದ್ರಭೂಮಿಯಲ್ಲಿ ಇನ್ಫೋಸಿಸ್ ಕಂಪನಿ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ವಿದ್ಯುತ್ ಚಿತಾಗಾರಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದ್ದು ಅಸಮರ್ಪಕ ರೀತಿಯಲ್ಲಿ ಯೋಜನೆ ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. 

ವಿದ್ಯುತ್ ಚಿತಾಗಾರ ನಿರ್ಮಾಣ ಕಾಮಗಾರಿಗೆ ಜುಲೈ 3ರಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕಾಗಿ ಈಗಿರುವ ಹಳೆಯ ಚಿತಾಗಾರದ ಪಕ್ಕದಲ್ಲೇ ಗುಂಡಿ ಅಗೆದು ಶಿಲಾನ್ಯಾಸಕ್ಕೆ ಸಿದ್ಧತೆ ನಡೆಸಲಾಗಿದೆ. ಇದಕ್ಕೆ ಸ್ಥಳೀಯ ಹಿಂದು ಬಾಂಧವರಿಂದ ವಿರೋಧ ವ್ಯಕ್ತವಾಗಿದ್ದು ಸಾರ್ವಜನಿಕರಿಂದ ಸಹಿಸಂಗ್ರಹ ಮಾಡಿ ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದಾರೆ. 

ಕೆಲವು ತಿಂಗಳ ಹಿಂದೆ ರುದ್ರಭೂಮಿಗೆ ಕಾದಿರಿಸಿದ್ದ 36 ಸೆಂಟ್ಸ್ ಜಮೀನಿನಲ್ಲಿ ಸುಮಾರು 250 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಬೃಹತ್ ಟ್ಯಾಂಕ್ ಕಾಮಗಾರಿ ನಡೆಸಲಾಗಿತ್ತು. ಈ ವೇಳೆ ಜಿಲ್ಲಾಧಿಕಾರಿ ಮತ್ತು ಜನಪ್ರತಿನಿಧಿಗಳು ರುದ್ರಭೂಮಿ ನಿರ್ವಹಣಾ ಸಮಿತಿಯವರನ್ನು ಮನವೊಲಿಸಿ, ಸ್ಮಶಾನಕ್ಕೆ ವಿದ್ಯುತ್ ಚಿತಾಗಾರ ನೀಡುವುದಾಗಿ ಭರವಸೆ ನೀಡಿದ್ದರು. ಇದೀಗ ಇನ್ಫೋಸಿಸ್ ಕಂಪನಿಯಿಂದ ಉಳ್ಳಾಲ ನಗರಸಭೆ ಸಹಯೋಗದಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಲು ಮುಂದಾಗಿದ್ದು ಶನಿವಾರ ಶಿಲಾನ್ಯಾಸ ನಡೆಸಲು ಸಿದ್ಧತೆ ನಡೆಸಲಾಗಿದೆ. 

ಆದರೆ ರುದ್ರಭೂಮಿಯ ಬಲಭಾಗದಲ್ಲಿ ಹೆಣ ಹೂಳಲು ಕಾಯ್ದಿರಿಸಿದ 45 ಸೆಂಟ್ಸ್ ಖಾಲಿ ಜಾಗ ಇದ್ದು ಅದರಲ್ಲೇ ವಿದ್ಯುತ್ ಚಿತಾಗಾರ ನಿರ್ಮಿಸಬೇಕೆಂದು ಸ್ಥಳೀಯ ಹಿಂದು ಬಾಂಧವರು ಸಾರ್ವಜನಿಕರಿಂದ ಸಹಿ ಸಂಗ್ರಹಿಸಿದ್ದು ಶಿಲಾನ್ಯಾಸ ಕಾರ್ಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಹಿಂದು ಬಾಂಧವರು ಇಂದು ರುದ್ರಭೂಮಿಯಲ್ಲಿ ಸೇರಿ ಸಭೆ ನಡೆಸಿದ್ದಾರೆ. ಈ ವೇಳೆ ಸ್ಥಳೀಯ ಪ್ರಮುಖರಾದ ಸಂತೋಷ್ ಕುಮಾರ್ ಮಾಹಿತಿ ನೀಡಿ, ಕಟ್ಟಿಗೆ ಚಿತಾಗಾರದ ಪಕ್ಕದಲ್ಲೇ ವಿದ್ಯುತ್ ಚಿತಾಗಾರ ನಿರ್ಮಿಸುವುದು ಅಸಮರ್ಪಕ. ಇದರಿಂದ ಲಾಭಕ್ಕಿಂತ ತೊಂದರೆಯೇ ಹೆಚ್ಚು. ‌ಸೌದೆಯ ಚಿತಾಗಾರದ ಹೊಗೆಯ ಮಾಲಿನ್ಯದಿಂದಾಗಿ ವಿದ್ಯುತ್ ಯಂತ್ರಗಳಿಗೆ ತೊಂದರೆಯಾಗಲಿದೆ. ತಾಂತ್ರಿಕವಾಗಿಯೂ ಸರಿಯಿಲ್ಲ. ಇದಲ್ಲದೆ, ಈ ರೀತಿ ಇಕ್ಕಟ್ಟಿನಲ್ಲಿ ಚಿತಾಗಾರ ಕಟ್ಟಡ ನಿರ್ಮಿಸುವ ಮೂಲಕ 43 ಸೆಂಟ್ಸ್ ಉಳಿಕೆ ಭೂಮಿಯಲ್ಲಿ ಇನ್ನೊಂದು ಯೋಜನೆ ತರುವ ಹುನ್ನಾರ ಇರುವಂತಿದೆ. ಅಸಮರ್ಪಕ ರೀತಿಯ ಕಾಮಗಾರಿಗೆ ನಾವು ಎಂದಿಗೂ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

24 ವರುಷದಿಂದ ನಿರ್ವಹಣಾ ಸಮಿತಿ ಮಾಡಿದ್ದೇನು..?

ಚೆಂಬುಗುಡ್ಡೆ ಹಿಂದೂ ರುದ್ರಭೂಮಿ ನಿರ್ವಹಣೆಗೆಂದು ಮೂರು ಜನರನ್ನು ಒಳಗೊಂಡ ಸಮಿತಿಯೊಂದಿದೆ. ಆದರೆ ಈ ಸಮಿತಿ 24 ವರುಷಗಳಲ್ಲಿ ನೋಂದಣಿಯನ್ನೆ ಮಾಡಿಸಿಕೊಂಡಿಲ್ಲ. 1.57 ಎಕರೆ ಜಮೀನನ್ನು ಹಿಂದೂ ರುದ್ರಭೂಮಿ ಹೆಸರಿಗೂ ವರ್ಗಾಯಿಸಿಲ್ಲ. ಕೇವಲ ರುದ್ರಭೂಮಿಯ ನಿರ್ವಹಣೆಯನ್ನಷ್ಟೇ ಮಾಡಿಕೊಂಡು ಬಂದಿದೆ. ಈಗಲೂ ಈ ಭೂಮಿ ದಫನ ಭೂಮಿಯೆಂದೇ ಸರಕಾರಿ ದಾಖಲೆಯಲ್ಲಿದೆ. ಆದರೂ ಚೆಂಬುಗುಡ್ಡೆ ಹಿಂದು ರುದ್ರಭೂಮಿ ನಿರ್ವಹಣಾ ಸಮಿತಿ ಹೆಸರಲ್ಲಿ ಸರಕಾರಿ ಅನುದಾನಗಳು ಸಾಕಷ್ಟು ಲಭಿಸಿವೆ. ಸಮಿತಿಗೆ ಸೇರಿದ 1.57 ಎಕರೆ ಜಮೀನಿನಲ್ಲಿ 72 ಸೆಂಟ್ಸ್ ಜಾಗವನ್ನು ಸರಕಾರಿ ಯೋಜನೆಗಳಿಗೆ ಬಿಟ್ಟು ಕೊಟ್ಟಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 

ಕಾಯ್ದಿರಿಸಿದ ಜಾಗದ ಮೇಲೆ ಕೆಲವರ ಕಣ್ಣು ! 

ಸದ್ಯ ಶವಗಳನ್ನ ಹೂಳಲು ರುದ್ರಭೂಮಿ ಆವರಣದಲ್ಲಿ ಕಾಯ್ದಿರಿಸಿದ 45 ಸೆಂಟ್ಸ್ ಜಾಗವನ್ನ ಸಮತಟ್ಟು ಮಾಡಲಾಗಿದೆ. ಈ ಜಾಗದಲ್ಲೂ ಯಾವುದಾದರೂ ಸರಕಾರಿ ಯೋಜನೆಗಳನ್ನ ಅನುಷ್ಠಾನಗೊಳಿಸಲು ಸ್ಥಳೀಯ ಜನಪ್ರತಿನಿಧಿಗಳು ಹುನ್ನಾರ ನಡೆಸುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ವಿದ್ಯುತ್ ಚಿತಾಗಾರ ನಿರ್ಮಿಸಲು ಇದೇ ಸೂಕ್ತವಾದ ಸ್ಥಳವಾದರೂ ಇದನ್ನ ಬಿಟ್ಟು ಈಗಿರುವ ಸೌದೆಯ ಚಿತಾಗಾರದ ಬಳಿಯಲ್ಲೇ ಇನ್ನೊಂದು ಚಿತಾಗಾರ ನಿರ್ಮಿಸುವ ಔಚಿತ್ಯವೇನೆಂದು ಹೋರಾಟ ಸಮಿತಿಯ ಪ್ರಮುಖರಾದ ಸಂತೋಷ್ ಕುಮಾರ್ ಪ್ರಶ್ನಿಸಿದ್ದು, ಈ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಗಮನಕ್ಕೂ ತಂದಿದ್ದಾರೆ.

Ullal Chembugudde residents oppose electric cremation machines given by Infosys company.