ಚೆಂಬುಗುಡ್ಡೆ: ಅಸಮರ್ಪಕ ವಿದ್ಯುತ್ ಚಿತಾಗಾರಕ್ಕೆ ಸ್ಥಳೀಯರ ತೀವ್ರ ವಿರೋಧ, ಶಿಲಾನ್ಯಾಸ ರದ್ದು 

03-07-21 07:43 pm       Mangaluru Correspondent   ಕರಾವಳಿ

ಇನ್ಫೋಸಿಸ್ ಕಂಪನಿಯ ಅನುದಾನದಿಂದ ಚೆಂಬುಗುಡ್ಡೆ ರುದ್ರಭೂಮಿಯಲ್ಲಿ ನಿರ್ಮಾಣಗೊಳ್ಳಲಿರುವ ವಿದ್ಯುತ್ ಚಿತಾಗಾರವು ಅಸಮರ್ಪಕವಾಗಿದೆ ಎಂದು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ ಪರಿಣಾಮ ಚಿತಾಗಾರಕ್ಕೆ ಇಂದು ನಡೆಯಬೇಕಿದ್ದ ಶಿಲಾನ್ಯಾಸವು ಕೊನೆಕ್ಷಣದಲ್ಲಿ ರದ್ದಾಗಿದೆ. 

ಉಳ್ಳಾಲ, ಜು.3: ಇನ್ಫೋಸಿಸ್ ಕಂಪನಿಯ ಅನುದಾನದಿಂದ ಚೆಂಬುಗುಡ್ಡೆ ರುದ್ರಭೂಮಿಯಲ್ಲಿ ನಿರ್ಮಾಣಗೊಳ್ಳಲಿರುವ ವಿದ್ಯುತ್ ಚಿತಾಗಾರವು ಅಸಮರ್ಪಕವಾಗಿದೆ ಎಂದು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ ಪರಿಣಾಮ ಚಿತಾಗಾರಕ್ಕೆ ಇಂದು ನಡೆಯಬೇಕಿದ್ದ ಶಿಲಾನ್ಯಾಸವು ಕೊನೆಕ್ಷಣದಲ್ಲಿ ರದ್ದಾಗಿದೆ. 

ಇನ್ಪೋಸಿಸ್ ಕಂಪನಿಯ ಒಂದೂವರೆ ಕೋಟಿ ರೂಪಾಯಿ ಅನುದಾನದಲ್ಲಿ ಚೆಂಬುಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣ ಕಾಮಗಾರಿಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶಿಲಾನ್ಯಾಸ ನೆರವೇರಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಶಿಲಾನ್ಯಾಸ ಕಾರ್ಯಕ್ಕೆ ಎಲ್ಲ ಸಿದ್ದತೆಯೂ ನಡೆದಿತ್ತು. ಆದರೆ ಸ್ಥಳೀಯರು, ರುದ್ರಭೂಮಿಯ ಶವ ಹೂಳುವ 45 ಸೆಂಟ್ಸ್ ಕಾಯ್ದಿರಿಸಿದ ಪ್ರದೇಶದಲ್ಲೇ ವಿದ್ಯುತ್ ಚಿತಾಗಾರ ನಿರ್ಮಿಸಬೇಕು. ಈಗಿರುವ ಕಟ್ಟಿಗೆಯ ಚಿತಾಗಾರದ ಬಳಿ ಅಸಮರ್ಪಕ ವಿದ್ಯುತ್ ಚಿತಾಗಾರ ನಿರ್ಮಾಣ ಬೇಡವೆಂದು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಶಿಲಾನ್ಯಾಸ ಕಾರ್ಯ ರದ್ದಾಗಿದೆ.

ವಿದ್ಯುತ್ ಚಿತಾಗಾರ ನಿರ್ಮಾಣ, ಗೊಂದಲ ಏಕೆ..? 

ಕೆಲವು ತಿಂಗಳ ಹಿಂದೆ ರುದ್ರಭೂಮಿಗೆ ಕಾದಿರಿಸಿದ್ದ 36 ಸೆಂಟ್ಸ್ ಜಮೀನಿನಲ್ಲಿ 250 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಬೃಹತ್ ಟ್ಯಾಂಕ್ನ ಕಾಮಗಾರಿ ಆರಂಭಿಸಲಾಗಿತ್ತು. ಈ ವೇಳೆ ಜಿಲ್ಲಾಧಿಕಾರಿ ಮತ್ತು ಜನಪ್ರತಿನಿಧಿಗಳು ರುದ್ರಭೂಮಿ ನಿರ್ವಹಣಾ ಸಮಿತಿಯವರಲ್ಲಿ ಸ್ಮಶಾನಕ್ಕೊಂದು ವಿದ್ಯುತ್ ಚಿತಾಗಾರ ನೀಡುವುದಾಗಿ ಭರವಸೆ ನೀಡಿದ್ದರು. ಇನ್ಫೋಸಿಸ್ ಕಂಪನಿಯು ಉಳ್ಳಾಲ ನಗರಸಭೆ ಜೊತೆಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಲು ಮುಂದಾಗಿತ್ತು. ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಈಗಿರುವ ಕಟ್ಟಿಗೆಯ ಚಿತಾಗಾರದ ಬಳಿಯೇ ವಿದ್ಯುತ್ ಚಿತಾಗಾರ ನಿರ್ಮಾಣ ಮಾಡಲು ಸಿದ್ಧತೆ ನಡೆಸಲಾಗಿತ್ತು. ಇದನ್ನ ಮನಗಂಡ ಸ್ಥಳೀಯರು ನೂತನ ಚಿತಾಗಾರವನ್ನ ಪಕ್ಕದ 45 ಸೆಂಟ್ಸ್ (ಶವ ಹೂಳುವ ಪ್ರದೇಶ) ಪ್ರದೇಶದಲ್ಲಿ ನಿರ್ಮಿಸುವಂತೆ ಆಗ್ರಹಿಸಿ ಸಹಿ ಸಂಗ್ರಹವನ್ನೂ ಮಾಡಿದ್ದರು. ಈಗಿರುವ ಕಟ್ಟಿಗೆ ಚಿತಾಗಾರದ ಬಳಿ ವಿದ್ಯುತ್ ಚಿತಾಗಾರ ನಿರ್ಮಿಸಿದರೆ ಅದಕ್ಕೆ ತಾಂತ್ರಿಕವಾಗಿ ನಷ್ಟ ಉಂಟಾಗುತ್ತದೆ ಮತ್ತು ಆಸಮರ್ಪಕವಾಗುತ್ತದೆ ಎಂದು ಹೇಳಿದ್ದರು. ನೂತನ ಚಿತಾಗಾರ ನಿರ್ಮಾಣದಿಂದ ಸ್ಮಶಾನದ ಒಳಗೆ ಎತ್ತರಕ್ಕೆ ಬೆಳೆದು ಪರಿಸರಕ್ಕೆ ಶುದ್ಧ ಗಾಳಿ ಪಸರಿಸುತ್ತಿರುವ ಅಶ್ವತ್ಥ ಮರವೂ ನಾಶವಾಗುತ್ತದೆ ಎಂದು ದೂರಿದ್ದರು. ಆದರೆ ಹತ್ತಿರದ 45 ಸೆಂಟ್ಸ್ ಜಾಗದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಒಂದೂವರೆ ಕೋಟಿ ರೂಪಾಯಿ ಸಾಲದು. ಅದಕ್ಕೆ ಇನ್ನೂ 80 ಲಕ್ಷ ರೂಪಾಯಿ ಹೆಚ್ಚುವರಿ ಬೇಕಾಗುತ್ತದೆಂದು ಉಳ್ಳಾಲ ನಗರಸಭೆ ಅಧಿಕಾರಿಗಳು ಹೇಳಿದ್ದಾರೆ. 

ರುದ್ರಭೂಮಿಗೆ ಕಾಯ್ದಿರಿಸಿದ ಜಮೀನು ಕಬಳಿಕೆ..? 

ರುದ್ರಭೂಮಿಯ ಒಟ್ಟು 1.57 ಎಕರೆ ಪ್ರದೇಶದ 36 ಸೆಂಟ್ಸ್ ಜಾಗದಲ್ಲಿ ಈಗಾಗಲೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಬೃಹತ್ ಟ್ಯಾಂಕನ್ನು ನಿರ್ಮಿಸಲಾಗಿದೆ. ಸದ್ಯ ಹಿಂದೂಗಳ ಶವಗಳನ್ನ ಹೂಳಲು ಕಾಯ್ದಿರಿಸಿದ 45 ಸೆಂಟ್ಸ್ ಪ್ರದೇಶವನ್ನೂ ಸಮತಟ್ಟುಗೊಳಿಸಲಾಗಿದ್ದು ಈ ಪ್ರದೇಶದಲ್ಲಿ ಇನ್ನಾವುದೋ ಸರಕಾರಿ ಯೋಜನೆಗಳ ನೆಪವೊಡ್ಡಿ ಕೆಲವು ಜನಪ್ರತಿನಿಧಿಗಳು ಜಮೀನು ಕಬಳಿಸೋ ಹುನ್ನಾರ ನಡೆಸುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ವಿದ್ಯುತ್ ಚಿತಾಗಾರ ನಿರ್ಮಿಸಲು ಇದೇ 45 ಸೆಂಟ್ಸ್ ಸೂಕ್ತ ಪ್ರದೇಶವಾದರೂ ಇದನ್ನ ಬಿಟ್ಟು ಈಗಿರುವ ಸೌದೆಯ ಚಿತಾಗಾರದ ಬಳಿಯಲ್ಲೇ ಇನ್ನೊಂದು ಚಿತಾಗಾರ ನಿರ್ಮಿಸುವ ಔಚಿತ್ಯವೇನೆಂದು ಹೋರಾಟ ಸಮಿತಿಯ ಪ್ರಮುಖರಾದ ಸಂತೋಷ್ ಕುಮಾರ್ ಪ್ರಶ್ನಿಸಿದ್ದು ಪ್ರತಿಭಟನೆಗೂ ಮುಂದಾಗಿದ್ದರು. ಆದರೆ, ಕಾಂಗ್ರೆಸ್ ಮುಖಂಡರಾದ ಈಶ್ವರ್ ಉಳ್ಳಾಲ್ ಅವರು ಈ ಎಲ್ಲ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿ ಸ್ಥಳೀಯ ಶಾಸಕ ಖಾದರ್ ಓರ್ವ ಮುಸ್ಲಿಮರಾದರೂ ಹಿಂದು ರುದ್ರಭೂಮಿಯ ಅಭಿವೃದ್ದಿಗಾಗಿ ಇನ್ಫೋಸಿಸ್ ಕಂಪನಿಯಿಂದ ಒಂದೂವರೆ ಕೋಟಿ ರೂಪಾಯಿ ಅನುದಾನ ಒದಗಿಸಿದ್ದು ಸ್ಥಳೀಯರು ಭೂಕಬಳಿಕೆ ಎಂದು ಅಪಪ್ರಚಾರ ನಡೆಸಿ ಅಭಿವೃದ್ದಿ ಕಾಮಗಾರಿಯನ್ನ ತಡೆಹಿಡಿದಿದ್ದಾರೆಂದು ಆರೋಪಿಸಿದ್ದರು.

Ullal Chembugudde residents oppose the electric cremation machine by Infosys for which the Inscription program has now been cancelled.