ಲಾಕ್ಡೌನ್ ಬೆನ್ನಲ್ಲೇ ಕುಂದುಕೊರತೆ ನೆಪದಲ್ಲಿ ರಾಜಕೀಯ ಸಭೆ ನಡೆಸಿದ ಕೆಪಿಸಿಸಿ ಅಧ್ಯಕ್ಷ ! ಗಾಳಿಗೆ 'ಹಾರಿದ' ಕೋವಿಡ್ ಮಾರ್ಗಸೂಚಿ !

05-07-21 05:04 pm       Mangalore Correspondent   ಕರಾವಳಿ

ಲಾಕ್ಡೌನ್ ತೆರವಾಗುತ್ತಿದ್ದಂತೆ ಮಂಗಳೂರಿಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಮೊದಲ ಕಾರ್ಯಕ್ರಮದಲ್ಲೇ ಕೋವಿಡ್ ಮಾರ್ಗಸೂಚಿಯನ್ನೇ ಗಾಳಿಗೆ ತೂರಿ ಸಮಾವೇಶ ನಡೆಸಿದ್ದಾರೆ. 

ಮಂಗಳೂರು, ಜುಲೈ 5: ಮೂರು ತಿಂಗಳ ಪರ್ಯಂತ ಜನಜೀವನವನ್ನು ಬಂದ್ ಮಾಡಿದ್ದ ಕೊರೊನಾ ಲಾಕ್ಡೌನ್ ಕೊನೆಗೂ ತೆರವಾಯ್ತು ಅನ್ನುತ್ತಿದ್ದಂತೆ, ಜನರು ಓಡಾಡಲು ಆರಂಭಿಸಿದ್ದಾರೆ. ಆದರೆ, ಯಾವುದೇ ರಾಜಕೀಯ, ಧಾರ್ಮಿಕ ಸಭೆಗಳನ್ನು ಮಾಡುವಂತಿಲ್ಲ. ಅದರ ಜೊತೆಗೆ ಜನರು ಹೊರಗಡೆ ಅಡ್ಡಾಡುವುದಿದ್ದರೂ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಬೇಕು ಎಂಬ ನಿರ್ದೇಶ ಇದೆ.‌ ಆದರೆ, ಲಾಕ್ಡೌನ್ ತೆರವಾಗುತ್ತಿದ್ದಂತೆ ಮಂಗಳೂರಿಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಮೊದಲ ಕಾರ್ಯಕ್ರಮದಲ್ಲೇ ಕೋವಿಡ್ ಮಾರ್ಗಸೂಚಿಯನ್ನೇ ಗಾಳಿಗೆ ತೂರಿ ಸಮಾವೇಶ ನಡೆಸಿದ್ದಾರೆ. 

ಮಂಗಳೂರು ನಗರದ ಬೋಳೂರಿನಲ್ಲಿ ಮೀನುಗಾರರು ಮತ್ತು ಮೊಗವೀರ ಸಮಾಜದ ಕುಂದುಕೊರತೆ ಆಲಿಸುವ ನಿಟ್ಟಿನಲ್ಲಿ ಸಭೆ ನಡೆಸಿದ್ದಾರೆ.‌ ಆದರೆ ಕುಂದುಕೊರತೆ ಸಭೆಯ ನೆಪದಲ್ಲಿ ರಾಜಕೀಯ ಸಭೆಯನ್ನೇ ನಡೆಸಿದ್ದಾರೆ. ಅಲ್ಲದೆ, ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮೊಗವೀರ ಸಮಾಜದ ಬಾಂಧವರು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಸಭೆಯಲ್ಲಿ ಭಾಗವಹಿಸಿದ್ದಾರೆ. 

ಸಭೆಯಲ್ಲಿ 300ಕ್ಕೂ ಹೆಚ್ಚು ಜನ ಸೇರಿದ್ದಾರೆ. ಮೊಗವೀರ ಸಮಾಜದ ಕುಂದುಕೊರತೆ ಆಲಿಸುವ ಸಭೆಯೇ ಆಗಿದ್ದರೂ, ರಾಜಕೀಯ ಸಭೆಯಾಗಿ ಮಾರ್ಪಟ್ಟಿತ್ತು. ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಸಚಿವರು, ಶಾಸಕರು, ಕಾಂಗ್ರೆಸ್ ಪ್ರಮುಖರು ಸೇರಿದಂತೆ ನೂರಾರು ಕಾರ್ಯಕರ್ತರು ಸೇರಿದ್ದರು. ಸಭೆಯಲ್ಲಿ ಮೊಗವೀರ ಸಮಾಜದ ಮಹಿಳೆಯರು, ಒಂದಷ್ಟು ಮೀನುಗಾರರು ಕುರ್ಚಿಯಲ್ಲಿ ಕುಳಿತಿದ್ದರೆ, ಹೊರಗಡೆ ಮತ್ತು ಮುಂದಿನ ಭಾಗದಲ್ಲಿ ನೂರಾರು ಮಂದಿ ಸಾಮಾಜಿಕ ಅಂತರ ಪಾಲಿಸದೆ, ಮಾಸ್ಕ್ ಧರಿಸದೆ ಬೇಕಾಬಿಟ್ಟಿಯಾಗಿ ನಿಂತುಕೊಂಡಿದ್ದರು. 

ಕಳೆದ ಬಾರಿ ಲಾಕ್ಡೌನ್ ಘೋಷಣೆ ಆಗೋದಕ್ಕೂ ಕೆಲವೇ ದಿನಗಳ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮನೆಯಲ್ಲಿ ಧರ್ಮನೇಮ ನಡೆದಿತ್ತು. ಸಾವಿರಾರು ಜನರು ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಸೇರಿದ್ದು ಆಕ್ಷೇಪಕ್ಕೆ ಕಾರಣವಾಗಿತ್ತು. ಇದೀಗ ಮೂರೂವರೆ ತಿಂಗಳ ಲಾಕ್ಡೌನ್ ನಿಯಮ ಜುಲೈ 5 ಕ್ಕೆ ಕೊನೆಗೊಂಡು ರಾಜ್ಯದಾದ್ಯಂತ ರಿಲ್ಯಾಕ್ಸ್ ಮಾಡಲಾಗಿದೆ. ಆದರೆ, ಕೋವಿಡ್ ಮಾರ್ಗಸೂಚಿ ಪಾಲನೆ ಮಾಡದೇ ಪಾಸಿಟಿವ್ ರೇಟ್ ಹೆಚ್ಚಿದರೆ ಮತ್ತೆ ಲಾಕ್ಡೌನ್ ಹೇರಬೇಕಾದೀತು ಎನ್ನುವ ಮುನ್ಸೂಚನೆ ನೀಡಿಯೇ ಸಿಎಂ ಯಡಿಯೂರಪ್ಪ ಲಾಕ್ಡೌನ್ ನಿಯಮದಲ್ಲಿ ಸಡಿಲಿಕೆ ತಂದಿದ್ದಾರೆ. ಆದರೆ, ಇಂಥ ಹೊತ್ತಲ್ಲೇ ಕೆಪಿಸಿಸಿ ಅಧ್ಯಕ್ಷರು ಕುಂದುಕೊರತೆ ಕೇಳುವ ಹೆಸರಲ್ಲಿ ರಾಜಕೀಯ ಸಭೆಯನ್ನೇ ನಡೆಸಿದ್ದಾರೆ. 

ಸಭೆಯಲ್ಲಿ ಮಾತನಾಡಿದ ಡಿಕೆಶಿ, ನಿಮ್ಮ ಧ್ವನಿಯಾಗಿ ನಿಲ್ಲುತ್ತೇನೆ‌. ರಾಮನ ಬಂಟ ಹನುಮಂತನ ಮಂದಿರದ ಮುಂದೆ ನಿಂತು ಹೇಳುತ್ತೇನೆ. ಮತ್ತೆ ಕಾಂಗ್ರೆಸ್ ಸರಕಾರ ಬಂದೇ ಬರುತ್ತದೆ. ಇದನ್ನು ನೆನಪಿಟ್ಟುಕೊಳ್ಳಿ. ನಿಮಗೆಲ್ಲ ಸಾಷ್ಟಾಂಗ ನಮಸ್ಕಾರ ಹೇಳುತ್ತಾ ನಿಮ್ಮ ಆಶೀರ್ವಾದವನ್ನೂ ಕೋರುತ್ತೇನೆ. ನಿಮ್ಮ ಸಮಾಜದ ಸ್ಥಾನಮಾನಕ್ಕಾಗಿ ನಾವೂ ಕೈಜೋಡಿಸುತ್ತೇವೆ ಎನ್ನುವ ಮೂಲಕ ತನ್ನ ರಾಜಕೀಯ ನಡೆಯನ್ನೂ ಹೇಳಿಕೊಂಡಿದ್ದಾರೆ.

Video: 

Kpcc President DK Shivakumar breaks COVID rule in Mangalore hundreds gather floating rule. DK Shivakumar attended a program to hear the grievances of Mogaveer Fishermen community in which hundreds were seen floating rules including congress leaders of Mangalore.