ಜಮೀರ್ ಡ್ರಗ್ಸ್ ಪ್ರಕರಣ ಮೀಡಿಯಾದಲ್ಲಿ ಮಾತ್ರ, ಅದು ರಾಜಕೀಯ ಪ್ರೇರಿತ ಸುದ್ದಿ !

13-09-20 02:51 pm       Mangalore Reporter   ಕರಾವಳಿ

ಜಮೀರ್ ಅಹ್ಮದ್ ಬಗ್ಗೆ ಡ್ರಗ್ಸ್ ಪ್ರಕರಣದಲ್ಲಿ ಕೈವಾಡ ಇದೆಯೆಂದು ಬರ್ತಿರೋದು ಮೀಡಿಯಾದಲ್ಲಿ ಮಾತ್ರ. ರಾಜಕೀಯ ಪ್ರೇರಿತ ಕಾರಣದಿಂದ ಇಂಥ ಸುದ್ದಿ ಹರಡಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.

ಮಂಗಳೂರು, ಸೆಪ್ಟಂಬರ್ 13: ಮಾಜಿ ಸಚಿವ ಜಮೀರ್ ಅಹ್ಮದ್ ಬಗ್ಗೆ ಡ್ರಗ್ಸ್ ಪ್ರಕರಣದಲ್ಲಿ ಕೈವಾಡ ಇದೆಯೆಂದು ಬರ್ತಿರೋದು ಮೀಡಿಯಾದಲ್ಲಿ ಮಾತ್ರ. ರಾಜಕೀಯ ಪ್ರೇರಿತ ಕಾರಣದಿಂದ ಇಂಥ ಸುದ್ದಿ ಹರಡಲಾಗುತ್ತಿದೆ. ಅದಕ್ಕೆ ಬಿಜೆಪಿಯವರು ಬೇಜವಾಬ್ದಾರಿ, ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಲೀಂ ಅಹ್ಮದ್, ಡ್ರಗ್ಸ್ ವಿಷಯದಲ್ಲಿ ಯಾರೇ ತಪ್ಪು ಮಾಡಿದ್ರು ಕಾಂಗ್ರೆಸ್ ಪಕ್ಷ ರಕ್ಷಿಸುವ ಪ್ರಶ್ನೆಯೇ ಬರಲ್ಲ. ಎಲ್ಲರಿಗೂ ಕಾನೂನು ಒಂದೇ ಆಗಿದ್ದು ತಪ್ಪು ಮಾಡಿದವರನ್ನು ಶಿಕ್ಷಿಸಲಿ. ಹಾಗೆಂದು ಬಿಜೆಪಿಯವರು ಬೇಜವಾಬ್ದಾರಿ ಹೇಳಿಕೆ ನೀಡೋದು ಸರಿಯಲ್ಲ. ಬಿಜೆಪಿಯ ಎಂಎಲ್ಸಿ ರವಿಕುಮಾರ್ ಒಬ್ಬ ಮುಠ್ಠಾಳ, ಬೇಜವಾಬ್ದಾರಿಯಾಗಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆಯಲ್ಲಿ ಸರಕಾರ ಎಡವುತ್ತಿದೆ. ತನಿಖೆಯ ದಿಕ್ಕನ್ನು ನೋಡಿದರೆ ರಾಜಕೀಯ ಪ್ರೇರಿತವಾಗಿ ಸಾಗುತ್ತಿರುವಂತೆ ತೋರುತ್ತಿದೆ ಎಂದು ಹೇಳಿದರು.

ಇನ್ನು ಕುಮಾರಸ್ವಾಮಿ ಜೊತೆ ಜಮೀರ್ ಶ್ರೀಲಂಕಾಗೆ ಹೋಗಿದ್ದು ನಾಲ್ಕು ವರ್ಷ ಹಿಂದಿನ ಕತೆ. ಅಲ್ಲಿ ಏನೇನು ಆಗಿದೆ ಅನ್ನೋದ್ರ ಬಗ್ಗೆ ಜಮೀರ್ ಅವರೇ ಉತ್ತರಿಸಬೇಕು. ಆದರೆ, ಕುಮಾರಸ್ವಾಮಿ ತನ್ನ ಸರಕಾರ ಬೀಳಲು ಡ್ರಗ್ಸ್ ಮಾಫಿಯಾ ಕಾರಣ ಎಂದಿದ್ದರು.  ಈ ಹೇಳಿಕೆ ಬಗ್ಗೆ ತನಿಖೆ ಆಗಬೇಕು, ಸತ್ಯ ಹೊರಬರಲಿ ಎಂದರು.

ಹಿರಿಯರನ್ನು ಹೊರಗಿಟ್ಟಿದ್ದಲ್ಲ, ಪುನಾರಚನೆ ಅಷ್ಟೇ

ಇನ್ನು ಎಐಸಿಸಿಯಿಂದ ಹಿರಿಯ ನಾಯಕರನ್ನು ಹೊರಗಿಟ್ಟಿರುವ ಪ್ರಶ್ನೆಗೆ ಉತ್ತರಿಸಿದ ಸಲೀಂ ಅಹ್ಮದ್, ಎಐಸಿಸಿ ಪುನಾರಚನೆ ಅನ್ನುವುದು ಸಾಮಾನ್ಯ ಪ್ರಕ್ರಿಯೆ. ಮೂರು ವರ್ಷಗಳಿಂದ ಪುನಾರಚನೆ ಪ್ರಕ್ರಿಯೆ ಆಗಿರಲಿಲ್ಲ. ಈಗ ಪುನಾರಚನೆ ಆಗಿರುವುದನ್ನು ಬೇರೆ ದೃಷ್ಟಿಯಿಂದ ನೋಡುವುದು ಬೇಡ. ಅದರಲ್ಲಿ ಹೊಸಬರಿಗೆ ಅವಕಾಶ ನೀಡಲಾಗಿದೆ, ಜೊತೆಗೆ ಹಿರಿಯರನ್ನು ಉಳಿಸಿಕೊಳ್ಳಲಾಗಿದೆ. ಇನ್ನು ಕೆಲವು ಹಿರಿಯರಿಗೆ ಬೇರೆಯದ್ದೇ ಜವಾಬ್ದಾರಿ ನೀಡಿ ಪಕ್ಷ ಸಂಘಟನೆಗೆ ಬಳಸಿಕೊಳ್ಳಲಿದೆ ಎಂದು ಹೇಳಿದರು.