ಮೊದಲ ಮಳೆಗೇ ನೆಲಕ್ಕುರುಳಿದ ಶಾಲಾ ಕಟ್ಟಡ ; ಶಿಥಿಲ ಕಟ್ಟಡದ ಬಗ್ಗೆ ದೂರಿತ್ತರೂ ಅಧಿಕಾರಿಗಳ ನಿರ್ಲಕ್ಷ್ಯ! ತಪ್ಪಿದ ದುರಂತ, ಜೀವ ಬಲಿಗೆ ಕಾಯುತ್ತಿದ್ದಾರಾ ಅಧಿಕಾರಿಗಳು ? 

17-05-22 02:18 pm       Mangalore Correspondent   ಕರಾವಳಿ

ಶಾಲೆ ಶುರುವಾದ ದಿನವೇ ಸುರಿದ ಭಾರೀ ಮಳೆಗೆ ತಲಪಾಡಿ ಬಳಿಯ ಕಿನ್ಯ ಗ್ರಾಮದ ಬೆಳರಿಂಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲಗೊಂಡಿದ್ದ ಕಟ್ಟಡವು ಧರೆಗುರುಳಿದ್ದು ಅದೃಷ್ಟವಶಾತ್ ರಾತ್ರಿ ವೇಳೆ ಘಟನೆ ಸಂಭವಿಸಿದ್ದರಿಂದ ಮಕ್ಕಳು ಅಪಾಯದಿಂದ ಪಾರಾಗುವಂತಾಗಿದೆ. 

ಉಳ್ಳಾಲ, ಮೇ 17 : ಶಾಲೆ ಶುರುವಾದ ದಿನವೇ ಸುರಿದ ಭಾರೀ ಮಳೆಗೆ ತಲಪಾಡಿ ಬಳಿಯ ಕಿನ್ಯ ಗ್ರಾಮದ ಬೆಳರಿಂಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲಗೊಂಡಿದ್ದ ಕಟ್ಟಡವು ಧರೆಗುರುಳಿದ್ದು ಅದೃಷ್ಟವಶಾತ್ ರಾತ್ರಿ ವೇಳೆ ಘಟನೆ ಸಂಭವಿಸಿದ್ದರಿಂದ ಮಕ್ಕಳು ಅಪಾಯದಿಂದ ಪಾರಾಗುವಂತಾಗಿದೆ. 

ಕಿನ್ಯ ಗ್ರಾಮದ ಬೆಳರಿಂಗೆ ಜಿ.ಪಂ. ಹಿ.ಪ್ರಾ. ಶಾಲೆಯಲ್ಲಿ ಎಂಟನೇ ವರೆಗೆ ತರಗತಿಗಳಿದ್ದು ಸುಮಾರು 127 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ಶಾಲಾ ಕಟ್ಟಡವು ಶಿಥಿಲಾವಸ್ಥೆಯಲ್ಲಿದೆ ಎಂದು ಕಳೆದ ವರುಷವೇ ಅದೆಷ್ಟೋ ಬಾರಿ ಶಿಕ್ಷಣ ಇಲಾಖಾಧಿಕಾರಿಗಳಿಗೆ ಶಾಲಾಭಿವೃದ್ಧಿ ಸಮಿತಿಯವರು ದೂರು ನೀಡಿದ್ದರು. ಕಾಟಾಚಾರಕ್ಕೆ ಸ್ಥಳಕ್ಕೆ ಪರಿಶೀಲನೆಗೆ ಬಂದಿದ್ದ ಜಿಲ್ಲಾ ಪಂಚಾಯತ್ ಇಂಜಿನಿಯರ್ ನಿತಿನ್ ಎಂಬವರು ಕಟ್ಟಡ ಗಟ್ಟಿ ಮುಟ್ಟಾಗಿದೆ ಎಂದು ಸರ್ಟಿಫಿಕೇಟ್ ನೀಡಿ ಬಂದ ದಾರಿಯಲ್ಲೇ ಹಿಂತಿರುಗುತ್ತಿದ್ದರು ಎನ್ನುವ ಆರೋಪಗಳಿವೆ. 

ಅಧಿಕಾರಿಗಳ ನಿರ್ಲಕ್ಷದ ಪರಿಣಾಮ ಮೊದಲ ಮಳೆಗೇ ಶಿಥಿಲಗೊಂಡಿದ್ದ ಶಾಲಾ ಕಟ್ಟಡದ ಹಂಚಿನ ಮೇಲ್ಛಾವಣಿ ಸಂಪೂರ್ಣ ಕುಸಿದು ಬಿದ್ದಿದೆ. ಶಾಲಾರಂಭದ ರಾತ್ರಿಯೇ ಧರೆಗುರುಳಿದ್ದು ಘಟನೆ ರಾತ್ರಿ ವೇಳೆ ನಡೆದುದರಿಂದ ಅನಾಹುತ ಸಂಭವಿಸಿಲ್ಲ. 

ಕಟ್ಟಡ ಶಿಥಿಲಗೊಂಡಿರುವುದನ್ನ ಗಮನಿಸಿದ್ದ ಶಾಲಾಭಿವೃದ್ಧಿ ಸಮಿತಿಯವರು ಸೋಮವಾರ ಆ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ತರಗತಿ ನೀಡದೆ ಪಕ್ಕದ ಮದರಸ ಕಟ್ಟಡದಲ್ಲಿ ತರಗತಿ ನೀಡಿ ಮುಂಜಾಗರೂಕತೆ ವಹಿಸಿದ್ದರು. ಘಟನಾ ಸ್ಥಳಕ್ಕೆ ಇಂದು ಕಿನ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನಾದರೂ ಶಾಲೆಗೆ ಸುಸಜ್ಜಿತ ಕಟ್ಟಡ ನಿರ್ಮಿಸಿ ಕೊಡುವಂತೆ ಶಾಲಾಭಿವೃದ್ಧಿ ಸಮಿತಿಯವರು ಅಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ.

Mangalore School collapsed after the first rains in Ullal, kids escaped from a big danger. The incident happened at Kinya in Talapady.