ಡ್ರಗ್ಸ್ ಮಾಫಿಯಾ ಹತ್ತಿಕ್ಕಲು ಪ್ರಬಲ ಕಾನೂನು ರೂಪಿಸಿ ; ಎಬಿವಿಪಿ ಪತ್ರ ಚಳವಳಿ 

26-09-20 09:19 pm       Mangaluru Correspondent   ಕರಾವಳಿ

ಡ್ರಗ್ಸ್ ಮಾಫಿಯಾ ಹತ್ತಿಕ್ಕಲು ಸೂಕ್ತ ಕಾನೂನು ರೂಪಿಸಿ ರಾಜ್ಯವನ್ನು ಡ್ರಗ್ಸ್ ಮುಕ್ತ ಮಾಡಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯಾದ್ಯಂತ ಪತ್ರ ಚಳುವಳಿ ನಡೆಸುತ್ತಿದೆ.

ಮಂಗಳೂರು, ಸೆಪ್ಟಂಬರ್ 26: ಸಮಾಜದಲ್ಲಿ ವ್ಯಾಪಕವಾಗಿ ಹರಡಿರುವ ಡ್ರಗ್ಸ್ ಮಾಫಿಯಾ ಹತ್ತಿಕ್ಕಲು ಸೂಕ್ತ ಕಾನೂನು ರೂಪಿಸಿ ರಾಜ್ಯವನ್ನು ಡ್ರಗ್ಸ್ ಮುಕ್ತ ಮಾಡಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯಾದ್ಯಂತ ಪತ್ರ ಚಳುವಳಿ ನಡೆಸುತ್ತಿದೆ. ಇದರ ಅಂಗವಾಗಿ ಶನಿವಾರ ಬಂಟ್ವಾಳ ಶಾಖೆ ವತಿಯಿಂದ ಬಿ.ಸಿ.ರೋಡು ಹಾಗೂ ಸಿದ್ದಕಟ್ಟೆಯ ಅಂಚೆ ಕಚೇರಿ ಬಳಿ ಪತ್ರ ಚಳುವಳಿ ನಡೆಸಲಾಯಿತು. 

ಮಾದಕ ವಸ್ತುಗಳ ಬಳಕೆ ಇಂದು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ವ್ಯಾಪಿಸಿದೆ. ಈ ಜಾಲಕ್ಕೆ ಪ್ರಮುಖವಾಗಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಯುವ ಸಮುದಾಯವೇ ಹೆಚ್ಚು ಬಲಿಯಾಗುತ್ತಿರುವುದು ಅಪಾಯಕಾರಿ ಸಂಗತಿ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪ್ರಭಾವಿಗಳು ಭಾಗಿಯಾಗಿರುವ ಈ ಜಾಲವನ್ನು ಮಟ್ಟ ಹಾಕಬೇಕಿದೆ.  ಅದಕ್ಕಾಗಿ ರಾಜ್ಯ ಸರಕಾರ ಪ್ರಬಲ ಕಾನೂನನ್ನು ರೂಪಿಸುವುದು ಮಾತ್ರ ಪರಿಹಾರ. ಸರ್ಕಾರ ನಿಷ್ಪಕ್ಷಪಾತ ತನಿಖೆ ಹಾಗೂ ಕಾನೂನನ್ನು ರೂಪಿಸಿ ಈ ದಂಧೆಯ ವಿರುದ್ಧ ಸಮರ ಸಾರಬೇಕೆಂದು ಎಬಿವಿಪಿ ಪತ್ರ ಚಳುವಳಿ ಮೂಲಕ ಆಗ್ರಹಿಸಿತು. 

ಪತ್ರವನ್ನು ಮುಖ್ಯಮಂತ್ರಿಗಳ ವಿಳಾಸಕ್ಕೆ ಕಳುಹಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಸಂಚಾಲಕರಾದ ಹರ್ಷಿತ್ ಕೊಯಿಲ, ಸಹ ಸಂಚಾಲಕರಾದ ದಿನೇಶ್ ಕೊಯಿಲ, ನಗರ ಕಾರ್ಯದರ್ಶಿ ಅಖಿಲಾಷ್, ಕಾಲೇಜು ಘಟಕದ ಅಧ್ಯಕ್ಷರಾದ ಗುರುಪ್ರಸಾದ್ ಸಿದ್ದಕಟ್ಟೆ, ನಗರ ಸಹ ಕಾರ್ಯದರ್ಶಿಗಳಾದ ನಾಗರಾಜ್ ಶೆಣೈ , ಗಗನ್ ,ಪ್ರಶಾಂತ್ ಅಜ್ಜಿಬೆಟ್ಟು ಮುಂತಾದವರು ಉಪಸ್ಥಿತರಿದ್ದರು.

Join our WhatsApp group for latest news updates (2)