ಕಳೆದ 3 ಪಂದ್ಯಗಳಿಂದ ನನಗೆ ಬೇಸರವಾಗಿತ್ತೆಂದು ಕೆ.ಎಲ್‌ ರಾಹುಲ್‌!

03-11-22 02:42 pm       Source: Vijayakarnataka   ಕ್ರೀಡೆ

ಪ್ರಸ್ತುತ ನಡೆಯುತ್ತಿರುವ 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಆರಂಭಿಕ ಮೂರು ಪಂದ್ಯಗಳಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಭಾರತ ತಂಡದ ಆರಂಭಿಕ ಕೆ.ಎಲ್‌ ರಾಹುಲ್, ಬುಧವಾರ ಬಾಂಗ್ಲಾದೇಶ ವಿರುದ್ದದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಕಮ್‌ಬ್ಯಾಕ್‌ ಮಾಡಿದರು.

ಆಸ್ಟ್ರೇಲಿಯಾ ಆತಿಥ್ಯದ 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ತನ್ನ ಆರಂಭಿಕ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಭಾರತ ತಂಡದ ಆರಂಭಿಕ ಕೆಎಲ್‌ ರಾಹುಲ್‌ ಬುಧವಾರ ಅಡಿಲೇಡ್ ಓವಲ್‌ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ಆಕರ್ಷಕ ಅರ್ಧಶತಕ ಸಿಡಿಸಿದರು. ಆ ಮೂಲಕ ಭಾರತ ತಂಡದ 5 ರನ್‌ ರೋಚಕ ಗೆಲುವಿಗೆ ನೆರವಾದರು.

ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ನಡೆದಿದ್ದ ಅಭ್ಯಾಸ ಪಂದ್ಯಗಳಲ್ಲಿ ಅರ್ದಶತಕ ಸಿಡಿಸುವ ಮೂಲಕ ಕೆ.ಎಲ್‌ ರಾಹುಲ್‌ ಸಾಕಷ್ಟು ಭರವಸೆ ಮೂಡಿಸಿದ್ದರು. ಆದರೆ, ಟೂರ್ನಿಯ ಆರಂಭಿಕ ಮೂರೂ ಪಂದ್ಯಗಳಲ್ಲಿ ಸತತ ವೈಫಲ್ಯ ಅನುಭವಿಸಿದ್ದರು. ಪಾಕಿಸ್ತಾನ ವಿರುದ್ಧ 4 ರನ್ ಹಾಗೂ ನೆದರ್ಲೆಂಡ್ಸ್‌ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತಲಾ 9 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು.

ಈ ಹಿನ್ನೆಲೆಯಲ್ಲಿ ಕೆ.ಎಲ್‌ ರಾಹುಲ್‌ ಬದಲು ರಿಷಭ್‌ ಪಂತ್‌ಗೆ ಇನಿಂಗ್ಸ್ ಆರಂಭಿಸಲು ಅವಕಾಶ ನೀಡಿ ಎಂದು ಹಲವರು ಆಗ್ರಹಿಸಿದ್ದರು. ಆದರೆ, ಬಾಂಗ್ಲಾದೇಶ ವಿರುದ್ದದ ಪಂದ್ಯ ಕೆ.ಎಲ್‌ ರಾಹುಲ್‌ ಪಾಲಿಗೆ ನಿರ್ಣಾಯಕವಾಗಿತ್ತು. ಅದರಂತೆ ಕನ್ನಡಿಗ ಎದುರಿಸಿದ 32 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 3 ಬೌಂಡರಿಗಳೊಂದಿಗೆ 50 ರನ್‌ ಸಿಡಿಸಿ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡಿದರು. ಅಂತಿಮವಾಗಿ ಭಾರತ 20 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 184 ರನ್‌ ಕಲೆ ಹಾಕಿತು.ಪಂದ್ಯದ ಬಳಿಕ ಮಾತನಾಡಿದ ಕೆ.ಎಲ್‌ ರಾಹುಲ್‌, "ಕಳೆದ ಮೂರು ಪಂದ್ಯಗಳಲ್ಲಿ ತಂಡಕ್ಕೆ ನನ್ನಿಂದ ಯಾವುದೇ ಕೊಡುಗೆ ನೀಡಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದ ನನಗೆ ತುಂಬಾ ಬೇಸರವಾಗಿತ್ತು. ಅಂದಹಾಗೆ ಇದರಿಂದ ನನಗೆ ನಿರಾಶೆಯಾಗಿರಲಿಲ್ಲ ಹಾಗೂ ನನ್ನಲ್ಲಿ ವಿಶ್ವಾಸ ಕಡಿಮೆಯಾಗಿದೆ ಎಂದು ಕೂಡ ನನಗೆ ಅನಿಸಿರಲಿಲ್ಲ. ನಾನು ರನ್‌ ಗಳಿಸದೇ ಇದ್ದಾಗ ಇಂತಹ ಸಂಗತಿಗಳು ಸಂಭವಿಸುವುದು ಸಾಮಾನ್ಯ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇನೆ. ನಾನು ವಿಶ್ವಾಸದಲ್ಲಿದ್ದರೆ ಒಳ್ಳೆಯ ಇನಿಂಗ್ಸ್ ಬಂದೇ ಬರುತ್ತದೆ. ನಾನು ಚೆಂಡನ್ನು ಚೆನ್ನಾಗಿ ನೋಡುತ್ತಿದ್ದೇನೆಂಬ ಬಗ್ಗೆ ನನಗೆ ಗೊತ್ತಿತ್ತು," ಎಂದು ಹೇಳಿದರು.

T20 WC: Virat Kohli Breaks Sachin Tendulkar's Massive Record With  Match-winning Half-century Versus Bangladesh

ಆಸ್ಟ್ರೇಲಿಯನ್‌ ಕಂಡೀಷನ್ಸ್ ಬಗ್ಗೆ ವಿರಾಟ್‌ ಕೊಹ್ಲಿ ಬಳಿ ಚರ್ಚೆ ನಡೆಸಿದ ಸಂಗತಿಯನ್ನು ಕೂಡ ಇದೇ ವೇಳೆ ಕೆ.ಎಲ್‌ ರಾಹುಲ್‌ ಬಹಿರಂಗಪಡಿಸಿದರು.

"ಮೈದಾನದಲ್ಲಿ ಹೇಗೆ ಆಡಬೇಕು ಹಾಗೂ ಮೈಂಡ್‌ ಸೆಟ್‌ ಹೇಗೆ ಇಟ್ಟುಕೊಳ್ಳಬೇಕೆಂಬ ಬಗ್ಗೆ ನಾನು ವಿರಾಟ್‌ ಕೊಹ್ಲಿ ಬಳಿ ಚರ್ಚೆ ನಡೆಸಿದ್ದೇನೆ. ಕ್ರೀಸ್‌ನಲ್ಲಿ ಬ್ಯಾಟ್‌ ಮಾಡುವ ವೇಳೆ ಅವರು ನನಗೆ ಏನಾದರೂ ಹೇಳಬಹುದೇ ಎಂದು ನೋಡುತ್ತಿದ್ದೆ. ಅದರಂತೆ ಸ್ಟಂಪ್‌ಗಳ ನಡುವೆ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡೆವು. ಆಟಗಾರರಾಗಿ ನಾವೆಲ್ಲಾ ಈ ಬಗ್ಗೆ ಚರ್ಚೆ ನಡೆಸುತ್ತೇವೆ. ನಿಸ್ಸಂಶಯವಾಗಿ ವಿರಾಟ್‌ ಕೊಹ್ಲಿ ಕಳೆದ ಹಲವು ಪಂದ್ಯಗಳಿಂದ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. ಅದರಂತೆ ಅವರ ಮೈಂಡ್‌ಸೆಟ್‌ ಅನ್ನು ಅರ್ಥ ಮಾಡಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೇನೆ," ಎಂದು ಆರಂಭಿಕ ಬ್ಯಾಟ್ಸ್‌ಮನ್‌ ತಿಳಿಸಿದರು.

ಇದಕ್ಕೂ ಮುನ್ನ ಸತತ ಮೂರು ಪಂದ್ಯಗಳಲ್ಲಿನ ವೈಫಲ್ಯದ ಹೊರತಾಗಿಯೂ ಕೆ.ಎಲ್‌ ರಾಹುಲ್‌ ಅವರನ್ನು ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ ಬೆಂಬಲಿಸಿದ್ದರು.

"ತಮ್ಮ ಸಾಮರ್ಥ್ಯದ ಬಗ್ಗೆ ಅನುಮಾನ ಪಡದಂತೆ ಆಟಗಾರರಲ್ಲಿ ಉತ್ಸಾಹ ಹಾಗೂ ವಿಶ್ವಾಸ ಮೂಡಿಸುವ ಕೆಲಸವನ್ನು ತಂಡದ ಸಹಾಯಕ ಸಿಬ್ಬಂದಿ ಮಾಡುವುದು ತುಂಬಾ ಮುಖ್ಯವಾಗಿದೆ. ಆಟಗಾರರು ಸಮಯೋಜನೆಯಲ್ಲಿ ಉಳಿಯುವುದು ಇಲ್ಲಿ ತುಂಬಾ ಮುಖ್ಯವಾಗುತ್ತದೆ. ನಾಯಕ ಆಟಗಾರರನ್ನು ಸದಾ ಬೆಂಬಲಿಸುತ್ತಾರೆ. ಕೆಲ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ ಬಳಿಕ ಮುಂದಿನ ಪಂದ್ಯದಲ್ಲಿ ಅವರು ಕಮ್‌ಬ್ಯಾಕ್‌ ಮಾಡೇ ಮಾಡುತ್ತಾರೆ," ಎಂದು ರಾಹುಲ್‌ ದ್ರಾವಿಡ್‌ ಹೇಳಿದ್ದರು.

"ಕೆಎಲ್‌ ರಾಹುಲ್‌ ಅದ್ಭುತ ಕೌಶಲವನ್ನು ಹೊಂದಿರುವ ಆಟಗಾರ. ಕ್ರೀಡೆಯಲ್ಲಿ ಏರಿಳಿತಗಳು ಇದ್ದೇ ಇರುತ್ತವೆ. ಅವರು ಮುಂದಿನ ಪಂದ್ಯದಲ್ಲಿ ಫಾರ್ಮ್‌ಗೆ ಮರಳಲಿದ್ದಾರೆ. ಟೀಮ್‌ ಮ್ಯಾನೇಜ್‌ಮೆಂಟ್‌ ಸದಾ ಆಟಗಾರರನ್ನು ಬೆಂಬಲಿಸುತ್ತದೆ ಹಾಗೂ ಅವರಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ," ಎಂದು ಹೆಡ್‌ ಕೋಚ್‌ ತಿಳಿಸಿದ್ದರು.

ಬಾಂಗ್ಲಾದೇಶ ವಿರುದ್ಧ 5 ರನ್‌ ರೋಚಕ ಗೆಲುವು ಪಡೆದಿರುವ ಭಾರತ ತಂಡ, ನ.6 ರಂದು ಮೆಲ್ಬೋರ್ನ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಜಿಂಬಾಬ್ವೆ ವಿರುದ್ಧ ಸೆಣಸಲಿದೆ.

T20 World Cup I Was A Bit Disappointed That I Was Not Able To Contribute For The Team,Says K Rahul After Match Winning Fifty Vs Bangladesh.