'ಇದು ಟಿ20 ಅಲ್ಲ, ಟೆಸ್ಟ್‌ ಕ್ರಿಕೆಟ್‌': ಲಿಟನ್‌ ದಾಸ್‌ಗೆ ಹೇಳಿದ್ದ ಮಾತನ್ನು ರಿವೀಲ್ ಮಾಡಿದ ಸಿರಾಜ್‌!

16-12-22 01:49 pm       Source: Vijayakarnataka   ಕ್ರೀಡೆ

ಮೊದಲನೇ ಟೆಸ್ಟ್‌ ಪಂದ್ಯದ ಬಾಂಗ್ಲಾದೇಶ ತಂಡದ ಪ್ರಥಮ ಇನಿಂಗ್ಸ್‌ನಲ್ಲಿ ಮಾರಕ ದಾಳಿ ನಡೆಸಿದ ಮೊಹಮ್ಮದ್‌ ಸಿರಾಜ್‌ ಪ್ರಮುಖ 3 ವಿಕೆಟ್‌ಗಳನ್ನು ಉರುಳಿಸಿದರು. ಇದರ ನಡುವೆ ಬೌಲ್‌ ಮಾಡುವ ವೇಳೆ ಮೊಹಮ್ಮದ್‌ ಸಿರಾಜ್‌ ಹಾಗೂ ಲಿಟನ್‌ ದಾಸ್‌ ನಡುವೆ ಮಾತಿನ ಚಕಮಕಿ ನಡೆದಿತ್ತು.

ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಇಲ್ಲಿನ ಝಹೂರ್‌ ಅಹ್ಮದ್‌ ಚೌಧುರಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಎರಡನೇ ದಿನ ಕುಲ್ದೀಪ್‌ ಯಾದವ್ ಅವರ ಆಲ್‌ರೌಂಡ್‌ ಆಟದ ಬಲದಿಂದ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ಭಾರಿ ಮುನ್ನಡೆ ಪಡೆಯುವ ಹಾದಿಯಲ್ಲಿದೆ.

ಗುರುವಾರ ಭಾರತ ತಂಡ 404 ರನ್‌ಗಳಿಗೆ ಆಲ್ಔಟ್‌ ಆದ ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ್ದ ಬಾಂಗ್ಲಾದೇಶ ತಂಡ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಹೊಸ ಚೆಂಡಿನಲ್ಲಿ ಮಾರಕ ದಾಳಿ ನಡೆಸಿದ ಮೊಹಮ್ಮದ್‌ ಸಿರಾಜ್‌, ನಜ್ಮುಲ್‌ ಹುಸೇನ್ ಶಾಂಟೊ, ಝಕಿರ್ ಹಸನ್‌ ಹಾಗೂ ಲಿಟನ್‌ ದಾಸ್‌ ಅವರನ್ನು ಔಟ್‌ ಮಾಡಿದ್ದರು. ಆ ಮೂಲಕ ಬಾಂಗ್ಲಾದೇಶ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದರು.

BAN vs IND, 1st Test: Mohammed Siraj breaks silence on heated argument with Litton  Das on Day 2

ಅಂದಹಾಗೆ ಮೊಹಮ್ಮದ್‌ ಸಿರಾಜ್‌ ತಮ್ಮ ಬೌಲಿಂಗ್‌ನಲ್ಲಿ ಎಂದಿನಂತೆ ಆಕ್ರಮಣಕಾರಿಯಾಗಿ ಕಂಡರು. ಮಾರಕ ದಾಳಿ ನಡೆಸುತ್ತಿದ್ದ ವೇಳೆ ಸಿರಾಜ್‌, ಎದುರಾಳಿ ಬ್ಯಾಟ್ಸ್‌ಮನ್‌ ಲಿಟನ್‌ ದಾಸ್‌ ಅವರನ್ನು ಸ್ಲೆಡ್ಜ್‌ ಮಾಡುತ್ತಿದ್ದರು. ಇದರ ನಡುವೆ ಇವರಿಬ್ಬರ ನಡುವ ಮಾತಿನ ಚಕಮಕಿ ನಡೆಯಿತು. ಇದನ್ನು ಗಮನಿಸಿದ ಅಂಪೈರ್‌ ಪರಿಸ್ಥಿತಿಯನ್ನು ಸರಿದೂಗಿಸಿದರು.

ಇದರ ಮುಂದಿನ ಎಸೆತದಲ್ಲಿ ಮೊಹಮ್ಮದ್‌ ಸಿರಾಜ್ ಅವರು ಲಿಟನ್‌ ದಾಸ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದರು. ಆ ಮೂಲಕ ಬಾಂಗ್ಲಾದೇಶ ಬ್ಯಾಟ್ಸ್‌ಮನ್‌ಗೆ ತಿರುಗೇಟು ನೀಡಿದರು. ಅಂತಿಮವಾಗಿ ಎರಡನೇ ದಿನದಾಟದ ಅಂತ್ಯಕ್ಕೆ ಮೊಹಮ್ಮದ್‌ ಸಿರಾಜ್‌ 9 ಓವರ್‌ಗಳಿಗೆ ಕೇವಲ 14 ರನ್ ನೀಡಿ ಪ್ರಮುಖ 3 ವಿಕೆಟ್‌ ಕಬಳಿಸಿದರು.

ಎರಡನೇ ದಿನದಾಟದ ಅಂತ್ಯಕ್ಕೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೊಹಮ್ಮದ್‌ ಸಿರಾಜ್‌ ಬಾಂಗ್ಲಾದೇಶ ಬ್ಯಾಟ್ಸ್‌ಮನ್‌ ಲಿಟನ್‌ ದಾಸ್‌ ಹಾಗೂ ತಮ್ಮ ನಡುವೆ ನಡೆದಿದ್ದ ಘಟನೆಯನ್ನು ಬಹಿರಂಗಪಡಿಸಿದರು. "ಅವರ ಬಳಿ ನಾನು ಜಾಸ್ತಿ ಏನನ್ನೂ ಹೇಳಲಿಲ್ಲ. ಇದು ಟಿ20 ಕ್ರಿಕೆಟ್‌ ಅಲ್ಲ, ಟೆಸ್ಟ್‌ ಕ್ರಿಕೆಟ್‌. ಹಾಗಾಗಿ ಸಂವೇದನಾಶೀಲ ಕ್ರಿಕೆಟ್‌ ಆಡಿ' ಎಂದು ಹೇಳಿದ್ದೆ," ಎಂದು ರಿವೀಲ್‌ ಮಾಡಿದರು.

ಮೊಹಮ್ಮದ್‌ ಸಿರಾಜ್‌ ಜೊತೆಗೆ ಎರಡನೇ ದಿನ ಕುಲ್ದೀಪ್ ಯಾದವ್‌ ಸ್ಪಿನ್‌ ಮೋಡಿ ಮಾಡಿದರು. 10 ಓವರ್‌ ಬೌಲ್‌ ಮಾಡಿದ ಕುಲ್ದೀಪ್‌ ಯಾದವ್ 33 ರನ್‌ ನೀಡಿ ಪ್ರಮುಖ 4 ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಬಾಂಗ್ಲಾದೇಶ ಎರಡನೇ ದಿನದಾಟದ ಅಂತ್ಯಕ್ಕೆ 133 ರನ್‌ಗಳಿಗೆ 8 ವಿಕೆಟ್‌ಗಳನ್ನು ಕಳೆದುಕೊಂಡು ಭಾರಿ ಹಿನ್ನಡೆಯ ಆತಂಕಕ್ಕೆ ಒಳಗಾಗಿದೆ.

"ನಾನು ಸ್ವಲ್ಪ ನರ್ವಸ್‌ ಆಗಿದ್ದೆ. ಬೌಲ್ ಮಾಡಿದ ಮೊದಲ ಓವರ್‌ನಲ್ಲಿಯೇ ವಿಕೆಟ್‌ ಪಡೆದ ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ. ಈ ವೇಳೆ ಪರಿಸ್ಥಿತಿ ನನ್ನ ಹಿಡಿತಕ್ಕೆ ಸಿಕ್ಕಿತು. ಅದರಂತೆ ಕೆಲ ಓವರ್‌ಗಳನ್ನು ಬೌಲ್‌ ಮಾಡಿದ ನಂತರ ನನಗೆ ಆರಾಮದಾಯಕವೆನಿಸಿತು. ತದ ನಂತರ ವೇಗ ಹಾಗೂ ವಿಭಿನ್ನ ಕೋನಗಳಲ್ಲಿ ಬೌಲ್‌ ಮಾಡಲು ಪ್ರಯತ್ನಿಸಿದೆ," ಎಂದು ಕುಲ್ದೀಪ್‌ ಯಾದವ್‌ ತಿಳಿಸಿದರು.

"ಓವರ್ ದಿ ವಿಕೆಟ್‌ ಹಾಗೂ ಅರೌಂಡ್‌ ದಿ ವಿಕೆಟ್‌ ಬೌಲ್‌ ಮಾಡುತ್ತಿದ್ದೆ. ನಿರೀಕ್ಷೆಗೆ ತಕ್ಕಂತೆ ಬೌಲಿಂಗ್‌ನಲ್ಲಿ ನನಗೆ ಟರ್ನ್‌ ಸಿಗುತ್ತಿತ್ತು. ಇದನ್ನು ನಾನು ತುಂಬಾ ಇಷ್ಟಪಡುತ್ತೇನೆ. ಈ ಹಿಂದೆ ಗಾಯಕ್ಕೆ ತುತ್ತಾದ ಬಳಿಕ, ಬೌಲಿಂಗ್‌ ಲಯ ಕಂಡುಕೊಳ್ಳಲು ಸಾಕಷ್ಟು ಕೆಲಸ ಮಾಡಿದ್ದೇನೆ. ಇದೀಗ ನಾನು ಸ್ವಲ್ಪ ಜೋರಾಗಿ ಹಾಕಲು ಪ್ರಯತ್ನಿಸುತ್ತಿದ್ದೇನೆ,"ಎಂದು ಚೈನಾಮನ್ ಸ್ಪಿನ್ನರ್‌ ತಿಳಿಸಿದರು.

Ind Vs Ban Mohammed Siraj Reveals What He Told Litton Das That Led To Bangladesh Batter Charging At Him In 1st Test.