Alok Kumar IPS, Sudheer Kumar Reddy, Mangalore; ಪಾಕ್ ಪರ ಘೋಷಣೆಯೂ, ಕಮಿಷನರ್ ಸಾಹೇಬ್ರ ನಿರಾಕರಣೆಯೂ..! ಗಲಭೆ ಹತ್ತಿಕ್ಕಿದ ಅಲೋಕ್ ಕುಮಾರ್, ಚಂದ್ರಶೇಖರ್, ಸುಧೀರ್ ರೆಡ್ಡಿ ನೆನಪಿಸಿಕೊಳ್ಳುತ್ತೆ ಮಂಗಳೂರು, ಪೊಲೀಸರ ಸಣ್ಣ ಎಡವಟ್ಟೂ ಸದಾ ಉರಿವ ಕೋಮು ಕಿಡಿಯೂ..!   

29-05-25 05:54 pm       Giridhar Shetty, Mangaluru   ಅಂಕಣಗಳು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆನ್ನು ಬೆನ್ನಿಗೆ ಕೋಮು ದ್ವೇಷದ ಕೊಲೆಗಳಾಗುತ್ತಿರುವುದು ಆತಂಕ ಮೂಡಿಸಿರುವಾಗಲೇ ಜಿಲ್ಲೆಯ ಪೊಲೀಸ್ ವ್ಯವಸ್ಥೆ ಬಗ್ಗೆ ಚರ್ಚೆಗಳಾಗುತ್ತಿವೆ. ಇತ್ತೀಚಿನ ಘಟನೆಗಳನ್ನು ಪೊಲೀಸರು ನಿರ್ವಹಿಸಿದ ರೀತಿ, ಅದರಿಂದ ಉಂಟಾಗಿರುವ ಕೋಮು ವೈಷಮ್ಯ, ಪೊಲೀಸ್ ಕಮಿಷನರ್ ನಡೆಗಳು, ಗುಪ್ತಚರ ವೈಫಲ್ಯಗಳು, ಸ್ಥಳೀಯರಲ್ಲದ ಪೊಲೀಸರ ಕಾರ್ಯಶೈಲಿಗಳು ಪ್ರಜ್ಞಾವಂತರ ಸಮ್ಮುಖದಲ್ಲಿ ಚರ್ಚೆಗೆ ಕಾರಣವಾಗಿದೆ.

ಮಂಗಳೂರು, ಮೇ 28: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆನ್ನು ಬೆನ್ನಿಗೆ ಕೋಮು ದ್ವೇಷದ ಕೊಲೆಗಳಾಗುತ್ತಿರುವುದು ಆತಂಕ ಮೂಡಿಸಿರುವಾಗಲೇ ಜಿಲ್ಲೆಯ ಪೊಲೀಸ್ ವ್ಯವಸ್ಥೆ ಬಗ್ಗೆ ಚರ್ಚೆಗಳಾಗುತ್ತಿವೆ. ಇತ್ತೀಚಿನ ಘಟನೆಗಳನ್ನು ಪೊಲೀಸರು ನಿರ್ವಹಿಸಿದ ರೀತಿ, ಅದರಿಂದ ಉಂಟಾಗಿರುವ ಕೋಮು ವೈಷಮ್ಯ, ಪೊಲೀಸ್ ಕಮಿಷನರ್ ನಡೆಗಳು, ಗುಪ್ತಚರ ವೈಫಲ್ಯಗಳು, ಸ್ಥಳೀಯರಲ್ಲದ ಪೊಲೀಸರ ಕಾರ್ಯಶೈಲಿಗಳು ಪ್ರಜ್ಞಾವಂತರ ಸಮ್ಮುಖದಲ್ಲಿ ಚರ್ಚೆಗೆ ಕಾರಣವಾಗಿದೆ. ಯಾಕಂದ್ರೆ, ಇಂತಹ ಘಟನೆಗಳು ಮಂಗಳೂರನ್ನು ಮತ್ತೆ ಹತ್ತು ವರ್ಷ ಹಿಂದಕ್ಕೆ ನೂಕುತ್ತವೆ. ಅಷ್ಟೇ ಅಲ್ಲ, ಮಂಗಳೂರಿನ ಬಗ್ಗೆ ಹೊರ ಜಗತ್ತಿನಲ್ಲಿ ಬೇರೆಯದ್ದೇ ಕಲ್ಪನೆಗಳನ್ನು ಬಿತ್ತುತ್ತವೆ. ಇಂತಹ ಘಟನೆಗಳು ಹಿಂದೆಯೂ ನಡೆದಿದ್ದರೂ, ಪ್ರವೀಣ್ ನೆಟ್ಟಾರು ಮತ್ತು ಸುಹಾಸ್ ಶೆಟ್ಟಿ ಕೊಲೆ ಮತ್ತು ಆನಂತರ ಘಟನೆಗಳನ್ನು ನೋಡಿದರೆ ಎರಡು ಕಡೆಯೂ ಒಂದೇ ರೀತಿಯ ವಿಚಾರಗಳು ಎದ್ದು ಕಾಣುತ್ತವೆ. ಎರಡು ಕಡೆಯೂ ಧರ್ಮದ ಅಮಲಿನಲ್ಲಿ ಪ್ರತೀಕಾರ ತೆಗೆದುಕೊಂಡದ್ದು ಕಂಡುಬರುತ್ತದೆ.

ಮಂಗಳೂರಿನಲ್ಲಿ ಈ ಹಿಂದೆಯೂ ಇಂತಹದ್ದೇ ಸರಣಿ ಕೊಲೆಗಳಾಗಿದ್ದಿವೆ. ಆದರೆ, ಅಷ್ಟೇ ವೇಗದಲ್ಲಿ ಪೊಲೀಸರು ಸಮಸ್ಯೆಗೆ ಉತ್ತರ ಕಂಡುಕೊಳ್ಳುತ್ತಿದ್ದುದು ಜನರಲ್ಲಿ ವೈರುಧ್ಯ ಭಾವನೆ ಬೆಳೆಯುವುದಕ್ಕೆ ಅವಕಾಶ ಇರುತ್ತಿರಲಿಲ್ಲ. ಈಗ ಸೋಶಿಯಲ್ ಮೀಡಿಯಾ ಕಾರಣದಿಂದ ಜನರಿಗೆ ಸುಲಭದಲ್ಲಿ ಮಾಹಿತಿ, ವದಂತಿಗಳು ರವಾನೆಯಾಗುತ್ತಿದ್ದು ಯುವಜನರು ಪ್ರಚೋದನೆಗೊಳ್ಳುವುದಕ್ಕೂ ಹೇತುವಾಗುತ್ತಿದೆ. 2022ರ ಜುಲೈ ತಿಂಗಳಲ್ಲಿ ಪ್ರವೀಣ್ ನೆಟ್ಟಾರು ಎಂಬ ಬಿಜೆಪಿ ಕಾರ್ಯಕರ್ತನ ಕೊಲೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿತ್ತು. ಅದಕ್ಕೆ ಕಾರಣವಾಗಿದ್ದು ಅದಕ್ಕೂ ಹಿಂದೆ ನಡೆದಿದ್ದ ಮಸೂದ್ ಎನ್ನುವ ಯುವಕನ ಸಾವು. ಗಾಂಜಾ ವಿಚಾರದಲ್ಲಿ ರಾತ್ರಿ ವೇಳೆ ಗಲಾಟೆ ನಡೆದು ಎರಡು ತಂಡದ ಹೊಡೆದಾಟದಲ್ಲಿ ಮಸೂದ್ ತಲೆಗೆ ಪೆಟ್ಟು ಬಿದ್ದು ಮರುದಿನ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದ. ಅದು ಕೋಮು ದ್ವೇಷದ ಕೊಲೆಯಾಗಿರಲಿಲ್ಲ. ಬಿಯರ್ ಬಾಟಲಿಯಲ್ಲಿ ತಲೆಗೆ ಹೊಡೆದ ಪೆಟ್ಟಿನಿಂದಾಗಿ ರಕ್ತಸ್ರಾವ ಆಗಿ ಸಾವು ಕಂಡಿದ್ದ. ಆದರೆ ಮುಸ್ಲಿಂ ಸಂಘಟನೆಗಳು ಇದನ್ನು ಕೋಮು ದ್ವೇಷದ ಕೊಲೆಯೆಂದು ಭಾವಿಸಿದ್ದವು. ಪ್ರತಿಯಾಗಿ ಪ್ರವೀಣ್ ನೆಟ್ಟಾರು ಎಂಬ ಬಿಜೆಪಿ ಕಾರ್ಯಕರ್ತನ ಕೊಲೆಗೈದು ಪ್ರತೀಕಾರ ತೀರಿಸಿಕೊಂಡಿದ್ದರು.

ಬಿಜೆಪಿ ಸರಕಾರ ಇದ್ದಾಗಲೇ ಪಕ್ಷದ ಕಾರ್ಯಕರ್ತನ ಕೊಲೆಯಾಗಿದ್ದು ಕರಾವಳಿ ಭಾಗದಲ್ಲಿ ಭಾರೀ ಸಂಚಲನ ಎಬ್ಬಿಸಿತ್ತು. ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಾಲು ಅಲುಗಾಡಿಸಿ ಸ್ವಂತ ಊರಿನ ಕಾರ್ಯಕರ್ತರೇ ರಂಪಾಟ ಎಬ್ಬಿಸಿದ್ದರು. ಅದಾಗಿ ಎರಡು ದಿನ ಕಳೆಯುವಷ್ಟರಲ್ಲಿ ಸುರತ್ಕಲ್ ಬಳಿ ಫಾಜಿಲ್ ಎಂಬ ಯುವಕನ ಹತ್ಯೆ ನಡೆದಿತ್ತು. ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರಕ್ಕಾಗಿ ಹಿಂದು ಸಂಘಟನೆಗಳೇ ಫಾಜಿಲ್ ಹತ್ಯೆ ಮಾಡಿಸಿದ್ದರು ಎನ್ನುವ ಮಾತು ಕೇಳಿಬಂದಿತ್ತು. ಅಂದು ಏನಾಗಿತ್ತೋ ಅದೇ ರೀತಿಯ ವಾತಾವರಣ ಈ ಬಾರಿಯೂ ಆಗಿದೆ. ಎಪ್ರಿಲ್ ತಿಂಗಳ ಕೊನೆಯಲ್ಲಿ ಮಂಗಳೂರಿನ ಕುಡುಪು ಭಾಗದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರ ಮಧ್ಯೆ ಪಾಕಿಸ್ತಾನ್ ಜಿಂದಾಬಾದ್ ಕೂಗಿದ್ದಕ್ಕಾಗಿ ವ್ಯಕ್ತಿಯೊಬ್ಬನ ಮೇಲೆ ಅಲ್ಲಿದ್ದವರು ಮುಗಿಬಿದ್ದು ಹಲ್ಲೆ ನಡೆಸಿದ್ದರು. ಭಾರತ-ಪಾಕ್ ಸಂಘರ್ಷ ನಡೆದಿದ್ದಾಗಲೇ ಪಾಕಿಸ್ತಾನ್ ಜೈಕಾರ ಕೂಗಿದ್ದು ಸೇರಿದ್ದ ಯುವಕರನ್ನು ಕೆರಳಿಸಿತ್ತು. ಅಲ್ಲಿ ಹಿಂದುಗಳು ಮಾತ್ರ ಇರಲಿಲ್ಲ. ಕ್ರೈಸ್ತ, ಮುಸ್ಲಿಂ ಯುವಕರೂ ಇದ್ದರು. ಕೈಯಲ್ಲಿ ಹಲ್ಲೆಗೈದು ಕಾಲಿನಲ್ಲಿ ತುಳಿದು ಪೆಟ್ಟು ತಿಂದ ಯುವಕನನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು.

ತೀವ್ರ ಬಿಸಿಲಿನ ನಡುವೆ ನೀರು ಸಿಗದೆ ಮೈದಾನದ ತುದಿಯಲ್ಲಿ ಬಿದ್ದಿದ್ದ ಯುವಕ ಅಲ್ಲಿಯೇ ಸಾವಿಗೀಡಾಗಿದ್ದ. ಆ ಘಟನೆಯನ್ನು ಸಮರ್ಥಿಸುವ ಇರಾದೆ ಇಲ್ಲಿಲ್ಲವಾದರೂ, ಅದು ಮುಸ್ಲಿಂ ದ್ವೇಷದ ಕಾರಣಕ್ಕೆ ಆಗಿದ್ದ ಘಟನೆಯಾಗಿರಲಿಲ್ಲ ಎಂದು ಹೇಳಲೇಬೇಕು. ಆತನನ್ನು ಮೊದಲಿಗೆ ಉತ್ತರ ಭಾರತದ ವ್ಯಕ್ತಿ ಎಂದು ಹೇಳಿದ್ದರೂ, ಎರಡು ದಿನಗಳ ನಂತರ ಕೇರಳದ ವಯನಾಡ್ ಮೂಲದ ಅಶ್ರಫ್ ಎನ್ನುವ ಮಾಹಿತಿ ಲಭಿಸಿತ್ತು. ಅಷ್ಟರಲ್ಲಿಯೇ ಮುಸ್ಲಿಂ ಸಂಘಟನೆಗಳು ಗುಲ್ಲು ಎಬ್ಬಿಸಿದ್ದವು. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಕ್ಕಾಗಿ ಹಲ್ಲೆ ನಡೆಸಿದ್ದಾರೆ ಎಂದು ಗೃಹ ಸಚಿವರು ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದರೂ, ಮುಸ್ಲಿಂ ಸಂಘಟನೆಗಳು, ಜಿಲ್ಲೆಯ ಕಾಂಗ್ರೆಸ್ ನಾಯಕರು ಒಪ್ಪಲಿಲ್ಲ. ಆರೋಪಿಗಳು ಹೇಳಿದ ಮಾತ್ರಕ್ಕೆ ಪಾಕಿಸ್ತಾನ್ ಜಿಂದಾಬಾದ್ ವಿಚಾರವನ್ನು ಒಪ್ಪುವುದು ಹೇಗೆ ಎಂದು ಮುಸ್ಲಿಂ ನಾಯಕರ ಜೊತೆಗೆ ಕಾಂಗ್ರೆಸ್ ನಾಯಕರೂ ವಾದಿಸತೊಡಗಿದ್ದರು. ಈ ಪ್ರಕರಣವನ್ನು ಪೊಲೀಸರು ನಿರ್ವಹಿಸುವಲ್ಲಿಯೂ ಸೋತಿದ್ದರು, ಅಲ್ಲಿ ಘಟನೆ ಏನಾಗಿದೆ ಎನ್ನುವುದನ್ನು ಹೇಳದೆ ಯಾರದ್ದೋ ಒತ್ತಡಕ್ಕೆ ಬಿದ್ದು ಕರ್ತವ್ಯ ಪಾಲಿಸಿದ್ದರು. ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮುಸ್ಲಿಂ ನಾಯಕರ ಮಾತನ್ನೇ ಅನುಕರಿಸಿ, ಪಾಕಿಸ್ತಾನ್ ಜಿಂದಾಬಾದ್ ಕೂಗಿದ್ದು ಸಾಬೀತಾಗಿಲ್ಲ ಎಂದುಬಿಟ್ಟಿದ್ದರು.

ಸ್ಥಳೀಯ ಠಾಣೆಯ ಪೊಲೀಸರು, ಘಟನೆ ನಡೆದಿರುವ ಕುಡುಪು ಭಾಗದ ಜನರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕಾರಣಕ್ಕೆ ಹಲ್ಲೆ ಆಗಿದ್ದು ಎನ್ನುವುದನ್ನು ಹೇಳಿದ್ದರೂ, ಪೊಲೀಸ್ ಕಮಿಷನರ್ ಮಾತ್ರ ಆ ರೀತಿ ಕೇಸು ದಾಖಲಿಸದಂತೆ ಸೂಚಿಸಿದ್ದರಂತೆ. ಅಷ್ಟೇ ಅಲ್ಲ, ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆಂದು ಇನ್ಸ್ ಪೆಕ್ಟರ್ ಸೇರಿದಂತೆ ಮೂವರನ್ನು ಅಮಾನತು ಮಾಡಿ ವೈಫಲ್ಯಕ್ಕೆಲ್ಲ ಕೈಕೆಳಗಿದ್ದವರೇ ಕಾರಣ ಎಂದು ಅವರ ತಲೆಗೆ ಕಟ್ಟಿದ್ದರು. ಆದರೆ ಗೃಹ ಸಚಿವರ ಹೇಳಿಕೆಯನ್ನೂ ನಿರಾಕರಿಸಿ ಪೊಲೀಸ್ ಕಮಿಷನರ್ ಪಾಕ್ ಪರ ಘೋಷಣೆ ವಿಚಾರವನ್ನು ಬದಿಗೆ ಸರಿಸಿದ್ದೇ ಉಲ್ಟಾ ಹೊಡೆದಿದೆ. ಮುಸ್ಲಿಂ ದ್ವೇಷದ ಕಾರಣಕ್ಕೆ ಕೊಲೆಯಾಗಿದೆ ಎನ್ನುವ ವಿಚಾರವೇ ಮುಸ್ಲಿಂ ಸಮುದಾಯಕ್ಕೆ ಹೋಗಿತ್ತು. ಕಮಿಷನರ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದ ದಿನವೇ ಮೊದಲೇ ಗೊತ್ತುಪಡಿಸಿದ್ದ ಫಾಜಿಲ್ ಕೊಲೆ ಪ್ರಕರಣದ ಆರೋಪಿ ಸುಹಾಸ್ ಶೆಟ್ಟಿಯನ್ನು ನಡು ಬೀದಿಯಲ್ಲೇ ಕಡಿದು ಹತ್ಯೆ ಮಾಡಲಾಗಿತ್ತು. ಅಲ್ಲಿಗೆ ಹಳೆ ದ್ವೇಷದ ಪ್ರತೀಕಾರ ಮತ್ತು ಮುಯ್ಯಿಗೆ ಮುಯ್ಯಿ ಎನ್ನುವುದನ್ನು ಸೂಚ್ಯವಾಗಿ ಹೇಳಲಾಗಿತ್ತು.  

ಕುಡುಪು ಗುಂಪು ಹತ್ಯೆಯನ್ನು ಎಡಪಂಥೀಯರು ಖಂಡಿಸಿದ್ದಲ್ಲದೆ, ಮುಸ್ಲಿಂ ದ್ವೇಷಕ್ಕಾಗಿಯೇ ಕೊಲೆಯಾಗಿದೆ ಎನ್ನುವುದನ್ನು ಬಿಂಬಿಸ ತೊಡಗಿದ್ದರು. ಅಲ್ಲಿ ಧರ್ಮ ದ್ವೇಷದ ಬದಲು ಏನೋ ಘಟನೆಯಾಗಿದೆ, ಅದಕ್ಕೆ ತಕ್ಕಂತೆ ಕ್ರಮ ಜರುಗಿಸಬೇಕೆಂಬ ಭಾವನೆ ನಮ್ಮ ರಾಜಕೀಯ ನಾಯಕರಲ್ಲು ಇರಲಿಲ್ಲ. ಪ್ರತಿಯಾಗಿ ಸುಹಾಸ್ ಶೆಟ್ಟಿ ಕೊಲೆಗೈದಿದ್ದಲ್ಲದೆ, ಅದರ ವಿಡಿಯೋ ಮಾಡಿ ಹಂಚಿದ್ದು ಹಿಂದು ಸಂಘಟನೆ ಕಾರ್ಯಕರ್ತರನ್ನು ಕೆರಳಿಸಿತ್ತು. ಇದು ಕೇವಲ ಪ್ರತೀಕಾರಕ್ಕಾಗಿ ಆಗಿದ್ದಲ್ಲ, ಪ್ರವೀಣ್ ನೆಟ್ಟಾರು ರೀತಿಯಲ್ಲೇ ಹಿಂದು ಸಮಾಜವನ್ನು ಭಯಪಡಿಸುವ ಹುನ್ನಾರ ಇದರ ಹಿಂದಿದೆ. ಪಿಎಫ್ಐನಂತಹ ಭಯೋತ್ಪಾದಕ ಶಕ್ತಿಗಳು ದೊಡ್ಡ ಫಂಡಿಂಗ್ ಮಾಡಿ ಕೃತ್ಯ ಮಾಡಿಸಿವೆ ಎಂದು ಹೇಳುತ್ತ ಎನ್ಐಎ ತನಿಖೆಗೆ ಆಗ್ರಹ ಮಾಡಿದವು. ಆದರೆ ಕಾಂಗ್ರೆಸ್ ನಾಯಕರು ಇದೆಲ್ಲವನ್ನೂ ನಿರಾಕರಿಸುತ್ತ ಒಂದು ವರ್ಗದ ಪರವಾಗಿ ಬ್ಯಾಟಿಂಗ್ ಮಾಡಲಾರಂಭಿಸಿದ್ದರು. ಹಿಂದು ಸಂಘಟನೆಗಳ ನಾಯಕರು ಬಹಿರಂಗ ಬೆದರಿಕೆ, ಪ್ರತಿಭಟನಾ ಸಭೆ ನಡೆಸುತ್ತಿದ್ದರೂ, ಇದನ್ನು ಗ್ರಹಿಸುವುದು ಗುಪ್ತಚರ ಇಲಾಖೆಗೂ ಆಗಲಿಲ್ಲ. ಪೊಲೀಸರೂ ಒಂದು ತಿಂಗಳಾಯ್ತೆಂದು ಸುಮ್ಮನಿದ್ದಿರುವಾಗಲೇ ಮತ್ತೊಬ್ಬನ ಕೊಲೆಯಾಗಿದೆ.

2022ರಲ್ಲಿ ಮಸೂದ್ ಅನ್ನುವ ಯುವಕನೂ ಮುಸ್ಲಿಂ ದ್ವೇಷದಿಂದ ಕೊಲೆಯಾಗಿದ್ದಲ್ಲ. ಈ ಬಾರಿ ಕುಡುಪು ಘಟನೆಯೂ ಮುಸ್ಲಿಂ ದ್ವೇಷದ ಕಾರಣಕ್ಕೆ ಆಗಿದ್ದಲ್ಲ ಎನ್ನುವುದು ಪೊಲೀಸರ ತನಿಖೆಯಲ್ಲೂ ಸಾಬೀತಾದ ಅಂಶ. ಆದರೆ ಇವೆರಡು ಘಟನೆಗಳಲ್ಲೂ ಪೊಲೀಸರು ನಿರ್ಲಕ್ಷ್ಯ ತೋರಿದ್ದು ಜನರ ಮನಸ್ಸಿನಲ್ಲಿ ಬೇರೆಯದ್ದೇ ಪರಿಣಾಮಗಳನ್ನು ಉಂಟುಮಾಡಿತ್ತು. ಎರಡು ವರ್ಷದ ಹಿಂದೆ ಕಾನೂನು ಸುವ್ಯವಸ್ಥೆ ವಿಭಾಗದಲ್ಲಿ ಎಡಿಜಿಪಿ ಆಗಿ ರಫ್ ಅಂಡ್ ಟಫ್ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಇದ್ದರು. ಅಲೋಕ್ ಕುಮಾರ್ ಬರ್ತಾರೆ ರಾಜ್ಯದ ಯಾವುದೇ ಮೂಲೆಗೂ ಬರ್ತಾರೆ ಅಂದರೆ, ಅಲ್ಲಿನ ಪೊಲೀಸ್ ಅಧಿಕಾರಿಗಳೇ ಹೆದರುತ್ತಿದ್ದರು. ಯಾವುದೇ ಗಂಭೀರ ಪ್ರಕರಣವಾದರೂ ನೇರವಾಗಿ ಎದ್ದು ಬರುತ್ತಿದ್ದ ಅಲೋಕ್ ಕುಮಾರ್ ಶೈಲಿ ಪೊಲೀಸರಲ್ಲು ಪರಿಸ್ಥಿತಿ ಬಗ್ಗೆ ಹೆಚ್ಚು ಜಾಗ್ರತೆ ಹುಟ್ಟಿಸುತ್ತಿತ್ತು. ಎರಡು  ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ಘರ್ಷಣೆಯಾದಾಗ, ಹುಬ್ಬಳ್ಳಿ, ಮೈಸೂರಿನಲ್ಲಿ ಕೋಮು ಗಲಭೆ ಆದಾಗ, ಮಂಗಳೂರಿನಲ್ಲಿ ಗಲಾಟೆ ಆದಾಗೆಲ್ಲ ಅಲೋಕ್ ಕುಮಾರ್ ಪೊಲೀಸಿಂಗ್ ಶೈಲಿ ಗಲಭೆಗಳನ್ನು ಅಲ್ಲಿಂದಲ್ಲಿಗೆ ಮುಗಿಸಲು ಕೊಡುಗೆ ಕೊಟ್ಟಿತ್ತು. ತನ್ನ ನಡತೆಯಲ್ಲೇ ಲಾ ಅಂಡ್ ಆರ್ಡರ್ ಅಂದ್ರೆ ಹೀಗಿರಬೇಕು ಎನ್ನುವ ಸಂದೇಶವನ್ನೂ ಅಲೋಕ್ ಕೊಡುತ್ತಿದ್ದರು. ಈ ಬಾರಿ ಆ ಜಾಗದಲ್ಲಿ ಆರ್.ಹಿತೇಂದ್ರ ಇದ್ದಾರೆ. ತೀರಾ ಸೌಮ್ಯ ಭಾವದ ಹಿತೇಂದ್ರ ನಡೆ ಪೊಲೀಸರ ಒಳಗಡೆಯೇ ಬಂದ ಪುಟ್ಟ ಹೋದ ಪುಟ್ಟ ಎನ್ನುವಷ್ಟರ ಮಟ್ಟಿಗೆ ಮಾತ್ರ ಎನ್ನುವಂತಿದೆ.

ಹೆಚ್ಚಿನ ಪ್ರಕರಣಗಳಲ್ಲಿ ಪ್ರತ್ಯಕ್ಷದರ್ಶಿಗಳು ಇರೋದಿಲ್ಲ. ಆರೋಪಿಗಳು ನೀಡುವ ಹೇಳಿಕೆ ಮತ್ತು ಸಾಂದರ್ಭಿಕ ಸಾಕ್ಷ್ಯಗಳನ್ನೇ ಪರಿಗಣಿಸಿ ಪೊಲೀಸರು ಅಪರಾಧ ಸಾಬೀತು ಮಾಡಬೇಕಾಗುತ್ತದೆ. ಪಾಕಿಸ್ತಾನ್ ಪರ ಘೋಷಣೆ ಎಂದು ಆರೋಪಿಗಳು ಹೇಳಿದ್ದು ಬಿಟ್ಟರೆ ಬೇರೆ ನೋಡಿದವರಿಲ್ಲ ಎನ್ನುವ ಮಾತ್ರಕ್ಕೆ ನಿರಾಕರಿಸುವುದಾದರೆ ಅದೇ ಪೊಲೀಸರ ಎಡವಟ್ಟು ಆಗುತ್ತದೆ. ಗಂಡ – ಹೆಂಡತಿ ಜಗಳ, ನೆರೆಕರೆಯಲ್ಲಿ ಜಗಳ- ಕೊಲೆ ಇತ್ಯಾದಿ ಪ್ರಕರಣಗಳಲ್ಲಿ ಅಲ್ಲಿ ಆರೋಪಿಗಳ ಹೇಳಿಕೆಯನ್ನೇ ಆಧರಿಸಿ ಪೊಲೀಸರು ಅಪರಾಧ ನಿರ್ಣಯ ಮಾಡುತ್ತಾರೆ. ಅಪರಾಧಕ್ಕೆ ತಕ್ಕಂತೆ ಸಾಕ್ಷ್ಯಗಳನ್ನು ರೆಡಿ ಮಾಡುವುದು ನಡೆಯುತ್ತದೆ. ಪಾಕ್ ಪರ ಘೋಷಣೆ ಪ್ರಕರಣದಲ್ಲಿ, ದೇಶ ವಿರೋದಿ ಘೋಷಣೆ ಕಾರಣಕ್ಕೆ ಹಲ್ಲೆ ಮಾಡಿದ್ದೇವೆ, ಮುಸ್ಲಿಂ ಅನ್ನೋ ಕಾರಣಕ್ಕೆ ಕೊಲೆ ಮಾಡುವುದಿದ್ದರೆ ಆತನನ್ನೇ ಯಾಕೆ ಮಾಡಬೇಕಿತ್ತು ಎನ್ನುವ ಪ್ರಶ್ನೆಯನ್ನು ಕೋರ್ಟಿನಲ್ಲಿ ವಕೀಲರು ಮುಂದಿಟ್ಟರೆ ಒಟ್ಟು ಪ್ರಕರಣವೇ ಬಿದ್ದು ಹೋಗುವ ಸಾಧ್ಯತೆ ಹೆಚ್ಚಿದೆ. ಪಾಕ್ ಪರ ಘೋಷಣೆ ಕಾರಣಕ್ಕೆ ಈ ಘಟನೆ ಆಗಿಲ್ಲ ಅನ್ನುವ ಮೂಲಕ ಪೊಲೀಸರು ಈ ಪ್ರಕರಣವನ್ನು ಬಿಹಾರ, ಉತ್ತರ ಪ್ರದೇಶದಲ್ಲಾಗುವ ಗುಂಪುಹತ್ಯೆಗೆ ವಾಲಿಸುವಂತೆ ಮಾಡಿದ್ದಾರೆ. ಕರಾವಳಿ ಮಟ್ಟಿಗೆ ಗುಂಪುಹತ್ಯೆ ಹೊಸ ವಿಷಯವಾದರೂ, ವಿನಾಕಾರಣ ಕೊಲೆ ಎನ್ನುವ ವಿಚಾರವೇ ಇಲ್ಲಿ ಕೋಮು ವೈಷಮ್ಯಕ್ಕೆ ಕಾರಣವಾಗುತ್ತದೆ ಎನ್ನುವ ಗ್ರಹಿಕೆಯನ್ನು ಪೊಲೀಸರು ಮಾಡದೇ ಇದ್ದುದೇ ಎಡವಟ್ಟು. ಇದೇ ಕಾರಣಕ್ಕೆ ಮಂಗಳೂರಿನಂಥ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹೊಣೆ ಹೊತ್ತವರಿಗೆ ನಾಲ್ಕು ಕಣ್ಣಿದ್ದರೆ ಸಾಲದು, ಐದನೇ ಕಣ್ಣು ಬೇಕಾಗುತ್ತೆ ಎನ್ನೋದು.

2016-17ರಲ್ಲಿ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಮಂಗಳೂರು ಕಮಿಷನರ್ ಆಗಿದ್ದಾಗ ಸುರತ್ಕಲ್ ದೀಪಕ್ ರಾವ್ ಹತ್ಯೆ ಆಗಿತ್ತು. ಒಂದು ವರ್ಷ ಅಂತರದಲ್ಲಿ ಬಿಸಿ ರೋಡಿನಲ್ಲಿ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಯಾಗಿತ್ತು. ಎರಡು ಸಂದರ್ಭದಲ್ಲೂ ಹಿಂದು ಸಂಘಟನೆಗಳ ಆಕ್ರೋಶ ಮುಗಿಲು ಮುಟ್ಟಿತ್ತು. ಪಿಎಫ್ಐ ಕಾರ್ಯಕರ್ತರು ತಮ್ಮವರನ್ನು ಬಂಧಿಸಿದ್ದಾರೆಂದು ಚಂದ್ರಶೇಖರ್ ಒಳಗಿದ್ದಾಗಲೇ ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಲು ಬಂದಿದ್ದರು. ಆದರೆ ಚಂದ್ರಶೇಖರ್ ಅಂದಿನ ಪರಿಸ್ಥಿತಿಯನ್ನು ಕಚೇರಿಯಿಂದ ಹೊರಗೆ ಬರದೇ ನಿರ್ವಹಿಸಿದ್ದು ಐಪಿಎಸ್ ಅಧಿಕಾರಿಯ ಚಾಣಾಕ್ಷತೆ ತೋರಿಸಿತ್ತು.

ಶರತ್ ಮಡಿವಾಳ ಕೊಲೆ ಪ್ರಕರಣದಲ್ಲಿ ಆರೋಪಿಗಳು ಮೈಸೂರು, ಚಾಮರಾಜನಗರ ಮೂಲದವರಿದ್ದರೂ, ದ.ಕ. ಎಸ್ಪಿಯಾಗಿ ನಾಲ್ಕು ತಿಂಗಳಿಗೆ ಬಂದು ಹೋಗಿದ್ದ ಸುಧೀರ್ ರೆಡ್ಡಿ ಯಾರ ಮುಲಾಜಿಗೂ ಬೀಳದೆ 15ಕ್ಕೂ ಹೆಚ್ಚು ಮಂದಿಯನ್ನು ಎಳೆತಂದಿದ್ದು ಎಪಿಐಸ್ ತನಿಖಾ ಶೈಲಿಯನ್ನು ತೋರಿಸಿತ್ತು. ಆ ಪ್ರಕರಣದಲ್ಲಿಯೂ ಪಿಎಫ್ಐ ಕೈವಾಡದ ಬಗ್ಗೆ ಸಾಕ್ಷ್ಯ ಲಭಿಸಿದ್ದರೂ, ಅಲ್ಲಿಗೆ ಕೈಹಾಕುತ್ತಾರೆ ಎನ್ನುವಾಗಲೇ ಸುಧೀರ್ ರೆಡ್ಡಿಯನ್ನು ವರ್ಗಾವಣೆ ಮಾಡಲಾಗಿತ್ತು. ಎರಡು ತಿಂಗಳ ಕಾಲ ಬಿಸಿ ರೋಡ್ ನಲ್ಲಿ ಸೆಕ್ಷನ್ ಹಾಕುವಂತಾಗಿದ್ದನ್ನು ಕಂಟ್ರೋಲ್ ಮಾಡಿದ್ರು ಅನ್ನೋ ಕಾರಣಕ್ಕಾದ್ರೂ ಅವರನ್ನು ನಮ್ಮ ವ್ಯವಸ್ಥೆ ಉಳಿಸಿಕೊಂಡಿರಲಿಲ್ಲ.

2019ರಲ್ಲಿ ಸಿಎಎ ವಿಚಾರದಲ್ಲಿ ಗಲಾಟೆಯಾದಾಗ ಮಂಗಳೂರಿನಲ್ಲಿ ಪಿ.ಎಸ್. ಹರ್ಷ ಕಮಿಷನರ್ ಆಗಿದ್ದರು. ಮುಸ್ಲಿಂ ಯುವಕರು ಉದ್ರಿಕ್ತಗೊಂಡು ಕಲ್ಲು ತೂರುತ್ತಿದ್ದರು. ಮೊದಲು ಸ್ಟೇಟ್ ಬ್ಯಾಂಕ್ ವೃತ್ತದ ಬಳಿ ನಡೆಯುತ್ತಿದ್ದ ಗಲಾಟೆ ಅಲ್ಲಿ ಲಾಠಿಚಾರ್ಜ್ ಮಾಡುತ್ತಿದ್ದಂತೆ ಉದ್ರಿಕ್ತರ ಗುಂಪು ಬಂದರು ಠಾಣೆಯತ್ತ ಸಾಗಿತ್ತು. ಕಲ್ಲು ತೂರುತ್ತಿದ್ದವರನ್ನ ಚದುರಿಸಿ ಕಂಟ್ರೋಲ್ ಪಡೆಯುವ ಬದಲು ಕಮಿಷನರ್ ಹರ್ಷ, ಬಂದರು ಠಾಣೆಯ ಮುಂದೆ ಟ್ಯಾಂಕರ್ ಮೇಲೇರಿ ಯುದ್ದಕ್ಕೆ ತೊಡಗಿದಂತೆ ಸಲಹೆ ನೀಡುತ್ತಿದ್ದರು. 12 ಠಾಣೆಗಳ ವ್ಯಾಪ್ತಿಗೆ ಮುಖ್ಯಸ್ಥನಂತಿರುವ ಒಬ್ಬ ಪೊಲೀಸ್ ಅಧಿಕಾರಿ ಕೋಮು ಸೂಕ್ಷ್ಮ ಜಾಗದಲ್ಲಿ ಉದ್ರಿಕ್ತ ಯುವಕರ ಗುಂಪನ್ನು ನಿರ್ವಹಿಸುವಲ್ಲಿ ವೈಫಲ್ಯಗೊಂಡಿದ್ದಕ್ಕೆ ಸಾಕ್ಷಿಯಾಗಿತ್ತು ಅಂದಿನ ಘಟನೆ. ಕಲ್ಲು ತೂರುತ್ತಿದ್ದುದನ್ನು ಟಿವಿ ಕ್ಯಾಮರಾಗಳು ಲೈವ್ ಆಗಿ ತೋರಿಸುತ್ತಿದ್ದರೂ, ಪೊಲೀಸರು ಈ ಕಡೆಯಿಂದ ಅಶ್ರವಾಯು ಸಿಡಿಸುತ್ತಿದ್ದರು. ಅಂದಿನ ಸ್ಥಿತಿ ಹೇಗಿತ್ತು ಅಂದ್ರೆ, ಕಾಶ್ಮೀರದ ಸ್ಥಿತಿಗೂ ಇಲ್ಲಿಗೂ ಏನೂ ವ್ಯತ್ಯಾಸ ಇರಲಿಲ್ಲ ಅನ್ನುವಂತಿತ್ತು. ಅದರ ಮಧ್ಯದಲ್ಲೇ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಕೊನೆಗೆ ಇಬ್ಬರು ಯುವಕರು ಗೋಲಿಬಾರ್ ನಲ್ಲಿ ಹತರಾಗಿದ್ದರು.

ಪೊಲೀಸ್ ಅಧಿಕಾರಿಗಳು ಯಾರಿದ್ದರೂ, ಆಯಾ ಭಾಗದ ಸೂಕ್ಷ್ಮ ಪರಿಸ್ಥಿತಿ ಅರಿತುಕೊಂಡು ಮುನ್ನಡೆಯಬೇಕಾಗುತ್ತದೆ. ಇಂಥ ಸಮಯದಲ್ಲಿ ಯಾರೇ ಆದ್ರೂ ಪ್ರಚೋದನೆ ನೀಡುತ್ತಾರಂದ್ರೆ, ಕಠಿಣ ಕ್ರಮ ಜರುಗಿಸುವುದಕ್ಕೂ ಐಪಿಎಸ್ ಅಧಿಕಾರಿಗಳು ಹಿಂಜರಿಯಬಾರದು. ಮಂಗಳೂರಿನ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಕಾರ್ಯಶೈಲಿ ಜನಪರವಾಗಿಲ್ಲ, ಇಲ್ಲಿಂದ ವರ್ಗಾವಣೆ ಮಾಡುವಂತೆ ಕಮ್ಯುನಿಸ್ಟ್ ನಾಯಕರು ಆರು ತಿಂಗಳ ಹಿಂದೆಯೇ ಆಗ್ರಹಿಸಿ ಪ್ರತಿಭಟನೆಯನ್ನೂ ಮಾಡಿದ್ದರು. ಆದರೆ ಸ್ಪೀಕರ್ ಸಾಹೇಬ್ರು ಮತ್ತು ಅವರ ತಂಡದವರು ತಾವು ಹೇಳಿದ್ದೇ ನಡೆಯಬೇಕು, ಕಮ್ಯುನಿಸ್ಟರದ್ದಲ್ಲ ಎನ್ನುವ ಭಾವನೆ ಕಮಿಷನರ್ ಸಾಹೇಬ್ರನ್ನು ಇಲ್ಲೇ ಉಳಿಸಿಕೊಂಡಿತ್ತು. ಅಗರ್ವಾಲ್ ಬರೋದಕ್ಕೂ ಹಿಂದೆ ಕುಲದೀಪ್ ಜೈನ್ ಎಂಬ ಯುವ ಐಪಿಎಸ್ ಅಧಿಕಾರಿ ಮಂಗಳೂರಿಗೆ ಬಂದಿದ್ದರು. ಅಡ್ಡ ಕಸುಬು ತಿಳಿದಿಲ್ಲದ ಆ ಮನುಷ್ಯನನ್ನು ಇಲ್ಲಿಂದ ಮೂರೇ ತಿಂಗಳಲ್ಲಿ ಓಡಿಸಲಾಗಿತ್ತು ಎನ್ನುವುದನ್ನೂ ಇಲ್ಲಿ ನೆನಪಿಸಬೇಕು.

ಕೇರಳದಲ್ಲಿಯೂ 20-25 ವರ್ಷಗಳ ಹಿಂದೆ ಇದೇ ರೀತಿಯ ಕೋಮು ಸಂಘರ್ಷ, ಮುಯ್ಯಿಗೆ ಮುಯ್ಯಿ, ಕೋಮು ಗಲಭೆಗಳಿದ್ದವು. ಆರೆಸ್ಸೆಸ್- ಕಮ್ಯುನಿಸ್ಟ್, ಬಿಜೆಪಿ- ಲೀಗ್ ಎನ್ನುವಂತಹ ರಾಜಕೀಯ ಕಾರಣದ ಕೊಲೆಗಳೇ ಹೆಚ್ಚಿದ್ದವು. ರಾಜಕೀಯದ ಕಾವು ಹೆಚ್ಚುತ್ತಿದ್ದಂತೆ ಅಲ್ಲಿ ವೈಷಮ್ಯದ ಕಿಡಿ ಮಾಸಿತ್ತು ಎನ್ನುವುದು ವಿಶೇಷ. ಅದರ ಬಗ್ಗೆ ಮುಂದಿನ ಭಾಗದಲ್ಲಿ ಚರ್ಚಿಸೋಣ.

Pro Pakistan Slogans Denied by Police Commissioner IPS Anupam Agrawal, Mangalore Remembers Officers Who Curbed Communal Riots. Mangaluru has once again found itself in the spotlight, this time over controversial claims of pro-Pakistan slogans during recent unrest. City Commissioner has firmly denied these allegations, urging the public not to fall for misinformation that could spark tensions. As the city grapples with the aftermath, residents recall the swift and decisive action taken by senior police officers Alok Kumar, Chandrashekhar, and Sudhir Reddy during past communal clashes. Their efforts had played a key role in restoring order and curbing violence in highly volatile situations.