ಕಾಡಾನೆ ಸೆರೆಹಿಡಿದ ಅರಣ್ಯ ಸಿಬಂದಿ ಮೇಲೆ ಕಲ್ಲು ತೂರಾಟ ; ಏಳು ಮಂದಿ ಬಂಧನ 

24-02-23 01:23 pm       Mangalore Correspondent   ಕ್ರೈಂ

ಇಬ್ಬರನ್ನು ಬಲಿ ಪಡೆದ ಕಾಡಾನೆಯನ್ನು ಸೆರೆಹಿಡಿದು ಅದನ್ನು ಬೇರೆ ಕಡೆಗೆ ಒಯ್ಯಲು ಯತ್ನಿಸುತ್ತಿದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ಎಬ್ಬಿಸಿದ ಘಟನೆ ಕಡಬ ತಾಲೂಕಿನ ಕೊಂಬಾರಿನಲ್ಲಿ ನಡೆದಿದ್ದು ಪ್ರಕರಣ ಸಂಬಂಧಿಸಿ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. 

ಪುತ್ತೂರು, ಫೆ.24: ಇಬ್ಬರನ್ನು ಬಲಿ ಪಡೆದ ಕಾಡಾನೆಯನ್ನು ಸೆರೆಹಿಡಿದು ಅದನ್ನು ಬೇರೆ ಕಡೆಗೆ ಒಯ್ಯಲು ಯತ್ನಿಸುತ್ತಿದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ಎಬ್ಬಿಸಿದ ಘಟನೆ ಕಡಬ ತಾಲೂಕಿನ ಕೊಂಬಾರಿನಲ್ಲಿ ನಡೆದಿದ್ದು ಪ್ರಕರಣ ಸಂಬಂಧಿಸಿ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. 

ಮೂರು ದಿನಗಳ ಕಾರ್ಯಾಚರಣೆ ಬಳಿಕ ಗುರುವಾರ ಸಂಜೆ ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು. ಸುಬ್ರಹ್ಮಣ್ಯ ಅರಣ್ಯ ವಲಯದ ಕೊಂಬಾರು ಗ್ರಾಮದಲ್ಲಿ ಆನೆ ಸೆರೆಹಿಡಿದು ರಾತ್ರಿ ವೇಳೆ, ಅದನ್ನು ದುಬಾರೆಯ ಆನೆ ಬಿಡಾರಕ್ಕೆ ಕರೆದೊಯ್ದು ಬಿಟ್ಟು ಬರಲು ಮುಂದಾಗಿದ್ದರು. ಆದರೆ ರಾತ್ರಿ 9 ಗಂಟೆ ಸುಮಾರಿಗೆ ಆನೆಯನ್ನು ಲಾರಿಗೆ ಹಾಕಿ ಬೇರೆ ಕಡೆ ಒಯ್ಯಲು ಮುಂದಾದಾಗ ಸ್ಥಳೀಯರು ಅಡ್ಡಗಟ್ಟಿದ್ದು ಇಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಸೆರೆಹಿಡಿದು ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂದು ವಾಗ್ವಾದ ಮಾಡಿದ್ದಾರೆ. 

ಆದರೆ ಅರಣ್ಯ ಸಿಬಂದಿ ಸೆರೆಹಿಡಿದ ಕಾಡಾನೆಯನ್ನು ಇಲ್ಲಿ ಉಳಿಸಿಕೊಳ್ಳುವಂತಿಲ್ಲ.‌ ಇದನ್ನು ಬಿಟ್ಟು ಬಂದು ಬೇರೆ ಕಾಡಾನೆಗಳನ್ನು ಸೆರೆ ಹಿಡಿಯುವುದಾಗಿ ಹೇಳಿದ್ದಕ್ಕೆ ಸ್ಥಳೀಯರು ಕೇಳಲಿಲ್ಲ.‌ ಸ್ಥಳಕ್ಕೆ ಬಂದ ಪೊಲೀಸರು ಸೇರಿದ್ದ ಜನರನ್ನು ದೂರಕ್ಕೆ ಹೋಗುವಂತೆ ಲಾಟಿ ಹಿಡಿದು ಗದರಿದ್ದಾರೆ. ಇದರಿಂದ ರೊಚ್ಚಿಗೆದ್ದ ಒಂದಷ್ಟು ಜನ ಪೊಲೀಸರು ಮತ್ತು ಅರಣ್ಯಾಧಿಕಾರಿಗಳ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.  ಈ ಬಗ್ಗೆ ಪಂಜ ವಲಯದ ಉಪವಲಯ ಅರಣ್ಯಾಧಿಕಾರಿ ಕಡಬ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸರು ಜೀವ ಬೆದರಿಕೆ ಸೇರಿ ವಿವಿಧ ಸೆಕ್ಷನ್ ಗಳಡಿ ಕೇಸು ದಾಖಲಿಸಿದ್ದು ಏಳು ಮಂದಿಯನ್ನು ಬಂಧಿಸಿದ್ದಾರೆ.

ಕಾಡಾನೆ ಸೆರೆ ಬೆನ್ನಲ್ಲೇ ಅರಣ್ಯಾಧಿಕಾರಿಗಳ ವಿರುದ್ಧ ತಿರುಗಿದ ಸ್ಥಳೀಯರ ಆಕ್ರೋಶ ; ಕಲ್ಲು ತೂರಾಟ, ಪೊಲೀಸರ ವಾಹನ ಜಖಂ

Kadaba Villagers pelt stones at forest authorities after elephants capture seven arrested.