ಬರೋಬ್ಬರಿ ಆರು ಕೋಟಿ ಮೌಲ್ಯದ ಆರೂವರೆ ಕೇಜಿ ಎಂಡಿಎಂಎ ಡ್ರಗ್ಸ್ ವಶಕ್ಕೆ ; ನೈಜೀರಿಯಾ ಮೂಲದ ಕೇಡಿ ಸೆರೆಹಿಡಿದ ಮಂಗಳೂರು ಸಿಸಿಬಿ ಪೊಲೀಸರು, ಮಹತ್ವದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಪೂರೈಕೆದಾರ 

07-10-24 04:25 pm       Mangalore Correspondent   ಕ್ರೈಂ

ಮಂಗಳೂರು ಸಿಸಿಬಿ ಪೊಲೀಸರ ಮಹತ್ವದ ಕಾರ್ಯಾಚರಣೆಯಲ್ಲಿ ಮಂಗಳೂರು ನಗರಕ್ಕೆ ಹಾಗೂ ಇತರ ರಾಜ್ಯಗಳಿಗೆ ಎಂಡಿಎಂಎ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಬೆಂಗಳೂರಿನಲ್ಲಿ ಅಕ್ರಮ ವಾಸ್ತವ್ಯವಿದ್ದ ನೈಜಿರಿಯಾ ದೇಶದ ಪ್ರಜೆಯನ್ನು ದಸ್ತಗಿರಿ ಮಾಡಿದ್ದು ಬರೋಬ್ಬರಿ ರೂ. 6 ಕೋಟಿ ಮೌಲ್ಯದ 6.300 ಕೆಜಿ ಎಂಡಿಎಂಎ ಡ್ರಗ್ಸ್ ವಶಪಡಿಸಿದ್ದಾರೆ.

ಮಂಗಳೂರು, ಅ.7: ಮಂಗಳೂರು ಸಿಸಿಬಿ ಪೊಲೀಸರ ಮಹತ್ವದ ಕಾರ್ಯಾಚರಣೆಯಲ್ಲಿ ಮಂಗಳೂರು ನಗರಕ್ಕೆ ಹಾಗೂ ಇತರ ರಾಜ್ಯಗಳಿಗೆ ಎಂಡಿಎಂಎ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಬೆಂಗಳೂರಿನಲ್ಲಿ ಅಕ್ರಮ ವಾಸ್ತವ್ಯವಿದ್ದ ನೈಜಿರಿಯಾ ದೇಶದ ಪ್ರಜೆಯನ್ನು ದಸ್ತಗಿರಿ ಮಾಡಿದ್ದು ಬರೋಬ್ಬರಿ ರೂ. 6 ಕೋಟಿ ಮೌಲ್ಯದ 6.300 ಕೆಜಿ ಎಂಡಿಎಂಎ ಡ್ರಗ್ಸ್ ವಶಪಡಿಸಿದ್ದಾರೆ. ಇಷ್ಟು ದೊಡ್ಡ ಮೊತ್ತದ ಡ್ರಗ್ಸ್ ಪತ್ತೆ ಮಾಡಿದ್ದು ಮಂಗಳೂರು ಪೊಲೀಸರ ಇತಿಹಾಸದಲ್ಲಿ ಇದೇ ಮೊದಲು. 

ಬೆಂಗಳೂರು ನಗರದ ದೊಮ್ಮಸಂದ್ರ ಗ್ರಾಮದ ಸ್ವಾಮಿ ವಿವೇಕಾನಂದ ನಗರದ ಫ್ಲಾಟ್ ನಲ್ಲಿ ನೆಲೆಸಿದ್ದ ಪೀಟರ್ ಇಕೇಡಿ ಬೆಲೊನು (38) ಎಂಬಾತ ಬಂಧಿತ ಆರೋಪಿ. ಈತನ ವೀಸಾ ಅವಧಿ ಮೀರಿದ್ದರೂ, ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದ. ಸೆ.29 ರಂದು ಮಂಗಳೂರು ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಪಂಪ್ವೆಲ್ ಬಳಿಯ ಲಾಡ್ಜ್ ಒಂದರಲ್ಲಿದ್ದು ಸಾರ್ವಜನಿಕರಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ತೊಕ್ಕೊಟ್ಟು ಚೆಂಬುಗುಡ್ಡೆ ನಿವಾಸಿ ಹೈದರ್ @ ಹೈದರ್ ಆಲಿ(51) ಎಂಬಾತನನ್ನು ಬಂಧಿಸಲಾಗಿತ್ತು. ಆತನ ವಶದಿಂದ ರೂ. 75,000/- ಮೌಲ್ಯದ 15 ಗ್ರಾಂ ಮಾದಕ ವಸ್ತು ಎಂಡಿಎಂಎ ಸ್ವಾಧೀನಪಡಿಸಿದ್ದು ಆತನಿಗೆ ಡ್ರಗ್ಸ್ ಎಲ್ಲಿಂದ ಪೂರೈಕೆ ಆಗುತ್ತೆ ಎಂದು ಮಂಗಳೂರು ಸಿಸಿಬಿ ಸಿಬಂದಿ ತನಿಖೆ ನಡೆಸಿದ್ದರು. 

ಇದಕ್ಕೂ ಮೊದಲೇ ಮಂಗಳೂರು ನಗರಕ್ಕೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಮೂಲ ಪತ್ತೆ ಮಾಡಲು ಸಿಸಿಬಿ ಪೊಲೀಸರು ಸಾಕಷ್ಟು ತನಿಖೆ ನಡೆಸಿದ್ದರು. ಡ್ರಗ್ಸ್ ಸಂಬಂಧಿತ ಆರೋಪಿಗಳ ಬ್ಯಾಂಕ್ ಖಾತೆ, ಮೊಬೈಲ್ ನೆಟ್ವರ್ಕ್ ಇತ್ಯಾದಿ ಅಂಶಗಳನ್ನು ಬೆನ್ನತ್ತಿದ್ದರು.  ಹಲವಾರು ಡ್ರಗ್ ಪೆಡ್ಲರ್ ಗಳ ಮಾಹಿತಿ ಸಂಗ್ರಹಿಸಿ ಬೆನ್ನತ್ತಿದಾಗ, ನೈಜೀರಿಯನ್ ಪ್ರಜೆಯ ಮಾಹಿತಿ ಸಿಕ್ಕಿತ್ತು. ಬೆಂಗಳೂರಿನಲ್ಲಿ ವಾಸ್ತವ್ಯವಿರುವ ನೈಜೇರಿಯಾ ದೇಶದ ಪ್ರಜೆ ಎಂದು ತಿಳಿದು ಮಂಗಳೂರು ಸಿಸಿಬಿ ಎಸ್ಐ ಸುದೀಪ್ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಬೆಂಗಳೂರಿನ ದೊಮ್ಮಸಂದ್ರ ಗ್ರಾಮದ ಸ್ವಾಮಿ ವಿವೇಕಾನಂದ ನಗರದ ಸಾಯಿಮಿಡೋ ಪೇಸ್ -2 ಗೋವಿಂದ ರೆಡ್ಡಿ ಲೇ ಔಟ್ ನಲ್ಲಿ ಬಾಡಿಗೆ ಮನೆಗೆ ದಾಳಿ ನಡೆಸಿದ್ದು ಪೀಟರ್ ಇಕೇಡಿ ಬೆಲೊನು (38) ಎಂಬ ಆರೋಪಿಯನ್ನು ಡ್ರಗ್ ಸಹಿತ ಬಂಧಿಸಿದ್ದಾರೆ. 

ಆರೋಪಿ ಬೆಂಗಳೂರು ನಗರದ ಮಾರತ್ ಹಳ್ಳಿಯಲ್ಲಿ ಹೆಂಡ್ತಿ ಮಕ್ಕಳ ಜೊತೆಗೆ ಮಾಮೂಲಿ ಜೀವನ ನಡೆಸುತ್ತಿದ್ದರೆ, ದೊಮ್ಮಸಂದ್ರದಲ್ಲಿ ಡ್ರಗ್ ಸ್ಟಾಕ್ ಇಡುವುದಕ್ಕಾಗಿಯೇ ಪ್ರತ್ಯೇಕ ಮನೆ ಮಾಡಿಕೊಂಡಿದ್ದ. ಆ ಮನೆಯಲ್ಲಿ ದಾಸ್ತಾನು ಇರಿಸಿದ್ದ ಒಟ್ಟು 6 ಕೋಟಿ ಮೌಲ್ಯದ 6.310 ಕೆಜಿ ಎಂಡಿಎಂಎ, 3 ಮೊಬೈಲ್ ಫೋನು, ಡಿಜಿಟಲ್ ತೂಕ ಮಾಪಕ, ಒಟ್ಟು 35 ಎಟಿಎಂ/ಡೆಬಿಟ್ ಕಾರ್ಡ್ ಗಳು, 17 ಇನ್ ಏಕ್ಟಿವ್ ಸಿಮ್ ಕಾರ್ಡ್, 10 ವಿವಿಧ ಬ್ಯಾಂಕುಗಳ ಪಾಸ್ ಪುಸ್ತಕಗಳನ್ನು ವಶಪಡಿಸಲಾಗಿದೆ. ಸೊತ್ತಿನ ಒಟ್ಟು ಮೌಲ್ಯ ರೂ. 6,00,63,500/-ಮೌಲ್ಯ ಆಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಆರೋಪಿ ಪೀಟರ್ ಇಕೆಡಿ ಬೆಲುನೋ ಎಂಬಾತನ ವಿರುದ್ಧ ಈ ಹಿಂದೆ ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ 2023ನೇ ಇಸವಿಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿರುತ್ತದೆ. ಬೆಂಗಳೂರು ನಗರ ಹಾಗೂ ರಾಜ್ಯದ ವಿವಿಧ ಕಡೆಗಳಿಗೆ ಅಲ್ಲದೇ ಕೇರಳ ರಾಜ್ಯಕ್ಕೆ ಕೂಡ ಮಾದಕ ವಸ್ತುವನ್ನು ಪೂರೈಕೆ ಮಾಡುತ್ತಿದ್ದ. ವಿವಿಧ ಕಡೆಗಳಿಗೆ ಪೂರೈಸಲು ಸಂಗ್ರಹಿಸಿಟ್ಟಿದ್ದ ಎಂಡಿಎಂಎ ಡ್ರಗ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾಳಿ ಆಗದೇ ಇರುತ್ತಿದ್ದರೆ ಬೇರೆ ಬೇರೆ ಕಡೆ ಪೂರೈಕೆ ಆಗುತ್ತಿತ್ತು. ಸುದೀಪ್ ನೇತೃತ್ವದ ಪೊಲೀಸರು ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಇದಕ್ಕಾಗಿ ಡಿಜಿಪಿ ಕಡೆಯಿಂದ ಮತ್ತು ಮಂಗಳೂರು ಕಮಿಷನರೇಟ್ ಕಡೆಯಿಂದ ತಲಾ ಒಂದೊಂದು ಲಕ್ಷ ಬಹುಮಾನ ನೀಡುವುದಾಗಿ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. 

ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್.ಎಂ, ಪಿಎಸ್ಐಗಳಾದ ಸುದೀಪ್ ಎಂ.ವಿ, ಶರಣಪ್ಪ ಭಂಡಾರಿ, ನರೇಂದ್ರ, ಎಎಸ್ಐ ಗಳಾದ ಮೋಹನ್ ಕೆ ವಿ, ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಘಟಕದ ಸಿಬ್ಬಂದಿಯವರು ಪಾಲ್ಗೊಂಡಿದ್ದರು.

In a significant operation, the Mangaluru City Crime Branch (CCB) has arrested a Nigerian national residing in Bengaluru and seized 6.310 kg of MDMA, a narcotic substance, valued at Rs 6 crore. This arrest is part of the ongoing effort to make Mangaluru a ‘Drugs-Free’ zone.