ಡೆಲ್ಲಿ ಟು ಮಂಗಳೂರು ಡ್ರಗ್ ನೆಟ್ವರ್ಕ್ ; ಪೊಲೀಸರ ಕಣ್ತಪ್ಪಿಸಿ ಪೂರೈಕೆ ಜಾಲಕ್ಕೆ ಆಂಬುಲೆನ್ಸ್ ಬಳಕೆ, ಸಮಾಜಸೇವೆ ಸೋಗಿನಲ್ಲಿದ್ದ ಜಲೀಲ್ ಬಾಬಾ ನಿಜಬಣ್ಣ ಬಹಿರಂಗ !

26-07-26 04:30 pm       HK News Staffer   ಕ್ರೈಂ

ಬಾಗಲಕೋಟೆಯಲ್ಲಿ ಇತ್ತೀಚೆಗೆ ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದ ₹5.5 ಕೋಟಿ ಮೌಲ್ಯದ ಎಂಡಿಎಂಎ ಮಾದಕ ವಸ್ತು ಪ್ರಕರಣದಲ್ಲಿ ತನಿಖೆ ತೀವ್ರಗೊಳಿಸಿರುವ ಪೊಲೀಸರು ಡ್ರಗ್ಸ್ ಸರಬರಾಜಿಗೆ ಆಂಬುಲೆನ್ಸ್ ಬಳಸುತ್ತಿದ್ದ ವಿಚಾರವನ್ನು ಪತ್ತೆ ಮಾಡಿದ್ದಾರೆ. ‌ಬೆಳ್ತಂಗಡಿಯ ಜಲೀಲ್ ಬಾಬಾ ಎಂಬಾತ ಸಮಾಜಸೇವೆಯ ಸೋಗಿನಲ್ಲಿ ಆಂಬುಲೆನ್ಸ್ ನಡೆಸುತ್ತಿದ್ದು ಇದರ ಜೊತೆಗೆ ಪೊಲೀಸರ ಕಣ್ತಪ್ಪಿಸಿ ಡ್ರಗ್ಸ್ ಪೂರೈಕೆಯನ್ನೂ ಮಾಡುತ್ತಿದ್ದ ಎಂಬ ಮಾಹಿತಿ ಲಭಿಸಿದೆ.‌

ಮಂಗಳೂರು, ಜುಲೈ 26: ಬಾಗಲಕೋಟೆಯಲ್ಲಿ ಇತ್ತೀಚೆಗೆ ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದ ₹5.5 ಕೋಟಿ ಮೌಲ್ಯದ ಎಂಡಿಎಂಎ ಮಾದಕ ವಸ್ತು ಪ್ರಕರಣದಲ್ಲಿ ತನಿಖೆ ತೀವ್ರಗೊಳಿಸಿರುವ ಪೊಲೀಸರು ಡ್ರಗ್ಸ್ ಸರಬರಾಜಿಗೆ ಆಂಬುಲೆನ್ಸ್ ಬಳಸುತ್ತಿದ್ದ ವಿಚಾರವನ್ನು ಪತ್ತೆ ಮಾಡಿದ್ದಾರೆ. ‌ಬೆಳ್ತಂಗಡಿಯ ಜಲೀಲ್ ಬಾಬಾ ಎಂಬಾತ ಸಮಾಜಸೇವೆಯ ಸೋಗಿನಲ್ಲಿ ಆಂಬುಲೆನ್ಸ್ ನಡೆಸುತ್ತಿದ್ದು ಇದರ ಜೊತೆಗೆ ಪೊಲೀಸರ ಕಣ್ತಪ್ಪಿಸಿ ಡ್ರಗ್ಸ್ ಪೂರೈಕೆಯನ್ನೂ ಮಾಡುತ್ತಿದ್ದ ಎಂಬ ಮಾಹಿತಿ ಲಭಿಸಿದೆ.‌

ಡ್ರಗ್ಸ್ ಸಾಗಾಟಕ್ಕೆ ಆಂಬ್ಯುಲೆನ್ಸ್ ಬಳಸುತ್ತಿದ್ದ ಎನ್ನುವ ಬಗ್ಗೆ ಸಿಕ್ಕಿಬಿದ್ದ ಪೆಡ್ಲರ್ ಗಳ ಮಾಹಿತಿ ಆಧರಿಸಿ ಮಂಗಳೂರು ನಗರ ಸಿಸಿಬಿ ಪೊಲೀಸರು ಮಂಗಳೂರಿನ ಸೆಶನ್ಸ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಇದಲ್ಲದೆ, ಸುರತ್ಕಲ್ ಠಾಣೆಯಲ್ಲಿ ದಾಖಲಾಗಿರುವ ಡ್ರಗ್ಸ್ ಪ್ರಕರಣದಲ್ಲಿ ಜಲೀಲ್ ಬಾಬಾನನ್ನು ಆರೋಪಿಯಾಗಿ ಗುರುತಿಸಿದ್ದು ಇದರ ಬೆನ್ನಲ್ಲೇ ಜಲೀಲ್ ತಲೆಮರೆಸಿಕೊಂಡಿದ್ದಾನೆ. 

ಕಳೆದ ಜೂನ್ ತಿಂಗಳ ಕೊನೆಯಲ್ಲಿ ಮಂಗಳೂರಿನ ಕುಳಾಯಿಗುಡ್ಡೆ ವಾಟರ್ ಟ್ಯಾಂಕ್ ಸಮೀಪದ ಮನೆಯೊಂದರ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು, ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು ಎಂಬಾತನಿಂದ ₹1.50 ಲಕ್ಷ ಮೌಲ್ಯದ 15.17 ಗ್ರಾಂ ಎಂಡಿಎಂಎ ವಶಪಡಿಸಿದ್ದರು. ಆತನ ವಿಚಾರಣೆ ವೇಳೆ ದೆಹಲಿಯಿಂದ ಖರೀದಿಸಿ ಬೆಂಗಳೂರು ಮೂಲಕ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳಕ್ಕೆ ಡ್ರಗ್ಸ್ ಪೂರೈಸುವ ಬೃಹತ್ ಜಾಲ ಬೆಳಕಿಗೆ ಬಂದಿತ್ತು.
ತನಿಖೆಯನ್ನು ಮುಂದುವರಿಸಿದ ಪೊಲೀಸರು ಜುಲೈ 15 ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದದ ‘ರಾಯಲ್ ಇನ್ ಲಾಡ್ಜ್’ ಮೇಲೆ ದಾಳಿ ನಡೆಸಿ, ಇಂದಬೆಟ್ಟು ಗ್ರಾಮದ ಮೊಹಮ್ಮದ್ ಅಲ್ತಾಫ್ (28), ಉಜಿರೆಯ ಮೊಹಮ್ಮದ್ ಮುಸ್ತಫಾ (28) ಹಾಗೂ ದೇವನಾರಿ ನಿವಾಸಿ ಅಲ್ಫಾಜ್ ಎಂಬವರನ್ನು ಬಂಧಿಸಿದ್ದರು. ಅವರಿಂದ ₹5.5 ಕೋಟಿ ಮೌಲ್ಯದ 5 ಕೆಜಿ 196 ಗ್ರಾಂ MDMA, ಕಾರು ಹಾಗೂ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿತ್ತು. 

ಅಂದಹಾಗೆ, ಸ್ಥಳೀಯ ವ್ಯಕ್ತಿಯೊಬ್ಬನ ಕೈಯಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆದಿದ್ದು ಕರಾವಳಿಯಲ್ಲಿ ಇದೇ ಮೊದಲು. ನೈಜೀರಿಯನ್ ಪ್ರಜೆಗಳು ಇಂತಹ ವ್ಯವಹಾರದಲ್ಲಿ ಇರುವುದರಿಂದ ದೊಡ್ಡ ಮಟ್ಟದ ಪೂರೈಕೆ ಜಾಲದಲ್ಲಿ ಅವರದೇ ಕೈವಾಡಗಳಿರುತ್ತಿದ್ದವು.‌ ಆದರೆ ಅಲ್ಫಾಜ್ ಕಡಿಮೆ ದರ ಮತ್ತು ದೊಡ್ಡ ಪ್ರಮಾಣದಲ್ಲಿ ಸಿಗುತ್ತದೆ ಎಂಬ ಕಾರಣಕ್ಕೆ ಕಾರಿನಲ್ಲಿ ನೇರವಾಗಿ ದೆಹಲಿಗೆ ತೆರಳಿದ್ದ. ಅಲ್ಲಿಂದ ಡ್ರಗ್ಸ್ ಪಡೆದು ಹಿಂತಿರುಗುತ್ತಿದ್ದಾಗ ಬಾಗಲಕೋಟ ಬಳಿ ಕಾರು ಕೆಟ್ಟು ಹೋಗಿತ್ತು. ಕಾರಿನಲ್ಲಿ ಬರುತ್ತಿದ್ದಾನೆಂಬ ಮಾಹಿತಿ ಇದ್ದುದರಿಂದ ಮಂಗಳೂರು ಪೊಲೀಸರು ನಿಗಾ ವಹಿಸಿದ್ದರು. ವಿಶೇಷ ಅಂದರೆ, ಸಾವಿರ ಕಿಮೀ ದೂರವನ್ನು ಅಲ್ಪಾಜ್ ಮತ್ತು ಸ್ನೇಹಿತರು ವಿಶ್ರಾಂತಿ ಇಲ್ಲದೆ ಡ್ರಗ್ಸ್ ಅಮಲಿನಲ್ಲಿ ಡ್ರೈವಿಂಗ್ ಮಾಡಿಕೊಂಡು ಬಂದಿದ್ದರು. 

ಇದೇ ವೇಳೆ, ಕಾರು ಕೆಟ್ಟಿದ್ದರಿಂದ ಉತ್ತರ ಕರ್ನಾಟಕದಲ್ಲಿ ಒಂದು ಕಡೆ ಲಾಡ್ಜ್ ಮಾಡಿಕೊಂಡು ಇದ್ದೇನೆಂಬ ಮಾಹಿತಿಯನ್ನು ಅಲ್ಫಾಜ್ ತನ್ನ ಆಪ್ತರಿಗೆ ನೀಡಿದ್ದ. ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ, ಬಾಗಲಕೋಟದ ಲಾಡ್ಜ್ ನಲ್ಲಿ ಅಡಗಿದ್ದ ಮೂವರನ್ನು ಬಂಧಿಸಿದ್ದರು. ಆರೋಪಿಗಳ ವಿಚಾರಣೆ ವೇಳೆ, ಡ್ರಗ್ಸ್ ವಿತರಣೆಗೆ ಬೆಳ್ತಂಗಡಿಯ ಜಲೀಲ್ ಬಾಬಾ ಸಹಕರಿಸುತ್ತಿರುವುದು ಮತ್ತು ತನ್ನ ತುರ್ತು ವಾಹನವನ್ನು ಹಾಸನ, ಮಂಗಳೂರು, ಚಿಕ್ಕಮಗಳೂರು ಆಸುಪಾಸಿನಲ್ಲಿ ಪೂರೈಸಲು ದುರುಪಯೋಗ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಈ ಪೈಕಿ ಕೆಲವರಿಗೆ ನೇರವಾಗಿ ಪೂರೈಕೆ ಮಾಡುತ್ತಿದ್ದರೆ, ಇನ್ನು ಕೆಲವರಿಗೆ ನಿರ್ಜನ ಪ್ರದೇಶದಲ್ಲಿ ಇಟ್ಟು ಫೋಟೊ ಕಳಿಸುವ ಮೂಲಕ ಪೂರೈಕೆ ಜಾಲ ಹೆಣೆದಿದ್ದರು.  

ಆರೋಪಿಗಳು ಸಿಕ್ಕಿಬಿದ್ದು ತನ್ನ ಪೂರೈಕೆ ಜಾಲ ಲೀಕ್ ಆಗುತ್ತಿದ್ದಂತೆ ಜಲೀಲ್ ತಲೆಮರೆಸಿಕೊಂಡಿದ್ದು ಪೊಲೀಸರು ಪತ್ತೆಗಾಗಿ ಜಾಲ ಬೀಸಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿರುವ ಜಲೀಲ್ ಪತ್ತೆಗಾಗಿ ವಿಶೇಷ ಪೊಲೀಸ್ ಪಡೆ ರಚಿಸಲಾಗಿದೆ. ಅಂದಹಾಗೆ, ಜಲೀಲ್ ತನ್ನ ಬಾಬಾ ಹೆಸರಿನ ಆಂಬುಲೆನ್ಸ್ ಇಟ್ಟುಕೊಂಡಿದ್ದು ಬೆಳ್ತಂಗಡಿಯಿಂದ ಮಂಗಳೂರಿಗೆ ಅತಿ ವೇಗದಲ್ಲಿ ಚಲಾಯಿಸಿ ನೂರಾರು ರೋಗಿಗಳ ಜೀವ ಉಳಿಸಿದ್ದಾನೆ ಎಂಬ ಅರ್ಥದಲ್ಲಿ ರೀಲ್ಸ್ ಮಾಡಿ ಜಾಲತಾಣದಲ್ಲಿ ಹಾಕ್ಕೊಂಡು ಸಮಾಜಪರ ಚಟುವಟಿಕೆಯ ಸೋಗಿನಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದ್ದ. ಇನ್ ಸ್ಟಾದಲ್ಲಿ ರೀಲ್ಸ್ ಮಾಡಿಕೊಂಡ ವಿಡಿಯೋಗಳನ್ನು ಹಾಕುವುದನ್ನೂ ಖಯಾಲಿ ಮಾಡಿಕೊಂಡಿದ್ದ‌. ಈಗ ಡ್ರಗ್ಸ್ ಜಾಲದಲ್ಲಿ ನಂಟು ಬಹಿರಂಗ ಆಗುತ್ತಲೇ ಜಲೀಲ್ ಸಮಾಜಸೇವೆಯ ನಿಜಬಣ್ಣ ಬಯಲಾಗಿದೆ.