ಬಂಟ್ವಾಳ ಪೊಲೀಸರ ಭರ್ಜರಿ ಬೇಟೆ; ಬೆಂಗಳೂರಿನಿಂದ ಕಾರಿನಲ್ಲಿ ಸಾಗಿಸುತ್ತಿದ್ದ ₹1 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ, ಆರೋಪಿ ಖಾಕಿ ಬಲೆಗೆ

17-08-26 10:54 am       HK News Staffer   ಕ್ರೈಂ

ಹಾಸನ-ಮಂಗಳೂರು ಮಾರ್ಗವಾಗಿ ಅಕ್ರಮವಾಗಿ ಮಾದಕವಸ್ತು ಸಾಗಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿದ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು, ಓರ್ವ ಆರೋಪಿಯನ್ನು ಬಂಧಿಸಿ 1.05 ಕೋಟಿ ರೂ. ಮೌಲ್ಯದ ಮಾದಕವಸ್ತು, ಮತ್ತಿತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಟ್ವಾಳ, ಆ 17: ಹಾಸನ-ಮಂಗಳೂರು ಮಾರ್ಗವಾಗಿ ಅಕ್ರಮವಾಗಿ ಮಾದಕವಸ್ತು ಸಾಗಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿದ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು, ಓರ್ವ ಆರೋಪಿಯನ್ನು ಬಂಧಿಸಿ 1.05 ಕೋಟಿ ರೂ. ಮೌಲ್ಯದ ಮಾದಕವಸ್ತು, ಮತ್ತಿತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ ಕೆಂಗೇರಿ ನಿವಾಸಿ ಮಹಮ್ಮದ್ ಅಮೀರ್ ಜರ್ತಾಬ್ (35) ಎಂಬಾತ ಬಂಧಿತ ಆರೋಪಿ. ರಾತ್ರಿ ಹೊತ್ತು ಹಾಸನ ಕಡೆಯಿಂದ ಮಂಗಳೂರು ಕಡೆಗೆ ಕಾರಿನಲ್ಲಿ ಮಾದಕವಸ್ತು ಸಾಗಿಸಲಾಗುತ್ತದೆ ಎಂಬ ಖಚಿತ ಮಾಹಿತಿ ಲಭಿಸಿತ್ತು. ಬಂಟ್ವಾಳ ತಾಲೂಕು ಕಡೇಶಿವಾಲಯ ಗ್ರಾಮದ ಅಮೈ ಎಂಬಲ್ಲಿ ಈ ಕಾರ್ಯಾಚರಣೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಳಿ ಬಣ್ಣದ ಟೊಯೆಟಾ ಕಾರನ್ನು ತಡೆಹಿಡಿದು ಪರಿಶೀಲನೆ ನಡೆಸಿದಾಗ ಆರೋಪಿಯು ಮಾದಕ ವಸ್ತು ಸಾಗಿಸುತ್ತಿರುವುದು ಪತ್ತೆಯಾಗಿದೆ. ತಪಾಸಣೆ ವೇಳೆ ಎಂಡಿಎಂಎ, ಕೊಕೇನ್ ಪತ್ತೆಯಾಗಿದ್ದು, ಖಾಲಿ ಪ್ಲಾಸ್ಟಿಕ್ ಡಬ್ಬ, ಡಿಜಿಟಲ್ ತೂಕದ ಯಂತ್ರಗಳೂ ಸಿಕ್ಕಿವೆ. ಒಟ್ಟು 538.63 ಗ್ರಾಂ ಎಂಡಿಎಂಎ ಮತ್ತು 99.12 ಗ್ರಾಂ ಕೊಕೈನ್ ಹಾಗೂ ಖಾಲಿ ಪ್ಲಾಸ್ಟಿಕ್ ಡಬ್ಬಿಗಳು, ಡಿಜಿಟಲ್ ತೂಕದ ಯಂತ್ರ, ಸೇರಿದಂತೆ‌ ಇತರೆ ಸೊತ್ತುಗಳು ಪತ್ತೆಯಾಗಿವೆ. ಅವುಗಳನ್ನು ವಶಕ್ಕೆ ಪಡೆಯಲಾಗಿದ್ದು, ಮಾದಕ ವಸ್ತುಗಳ ಅಂದಾಜು ಮೌಲ್ಯವು ಎಂಡಿಎಂಎ 53,86,300 ಹಾಗೂ ಕೊಕೇನ್ 49,56,000 ರೂ. ಆಗಿದ್ದು, ಇತರೆ ವಶಪಡಿಸಿಕೊಂಡ ಸ್ವತ್ತುಗಳ ಮೌಲ್ಯ ಸೇರಿದಂತೆ ಒಟ್ಟು ಅಂದಾಜು ಮೌಲ್ಯ 1,05,59,450 ಆಗಿದೆ. ಆರೋಪಿಗೆ ಇರುವ ಸಂಪರ್ಕಗಳ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಟ್ವಾಳ ಉಪವಿಭಾಗ ಎಎಸ್​​​ಪಿ ಯಶ ಕುಮಾರ್ ಶರ್ಮಾ ಮಾರ್ಗದರ್ಶನ ಹಾಗೂ ಬಂಟ್ವಾಳ ಪೊಲೀಸ್ ಇನ್ಸ್​​ಪೆಕ್ಟರ್ ಅನಂತಪದ್ಮನಾಭ ನೇತೃತ್ವದಲ್ಲಿ ಗ್ರಾಮಾಂತರ ಠಾಣೆ ಎಸ್​ಐ ಮಂಜುನಾಥ ಅವರ ತಂಡ ಈ ಕಾರ್ಯಾಚರಣೆ ನಡೆಸಿದೆ.