ಚಾಮರಾಜನಗರ ಶೂಟೌಟ್‌ ಪ್ರಕರಣ ; ರಾಜ್ಯದಲ್ಲಿ 13 ಲಕ್ಷ ಕ್ರಿಶ್ಚಿಯನರಿದ್ದರೂ ನಮ್ಮ ನೋವಿಗೆ ಸ್ಪಂದಿಸುವ ಒಬ್ಬ ನಾಯಕನಿಲ್ಲ, ಮೃತರ ಕುಟುಂಬಗಳಿಗೆ ತಲಾ ₹15 ಲಕ್ಷ ಪರಿಹಾರ

17-08-26 05:02 pm       HK News Staffer   ಕ್ರೈಂ

ಹನೂರು ಕಾವೇರಿ ವನ್ಯಜೀವಿಧಾಮದ ಶಾಗ್ಯ ಬೀಟ್‌ನಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ಮೃತಪಟ್ಟ ಮೂವರ ಕುಟುಂಬಗಳಿಗೆ ಹನೂರು ಶಾಸಕ ಎಂ.ಆರ್. ಮಂಜುನಾಥ್ ಅವರು ಪರಿಹಾರ ವಿತರಿಸಿದ್ದಾರೆ. ಸರ್ಕಾರದಿಂದ ತಲಾ ₹5 ಲಕ್ಷ ಹಾಗೂ ವೈಯಕ್ತಿಕವಾಗಿ ತಲಾ ₹10 ಲಕ್ಷ ಸೇರಿಸಿ ಪ್ರತಿ ಕುಟುಂಬಕ್ಕೆ ಒಟ್ಟು ₹15 ಲಕ್ಷ ಪರಿಹಾರ ನೀಡಲಾಗಿದೆ.

ಚಾಮರಾಜನಗರ , ಆಗಸ್ಟ್ 17: ಹನೂರು ಕಾವೇರಿ ವನ್ಯಜೀವಿಧಾಮದ ಶಾಗ್ಯ ಬೀಟ್‌ನಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ಮೃತಪಟ್ಟ ಮೂವರ ಕುಟುಂಬಗಳಿಗೆ ಹನೂರು ಶಾಸಕ ಎಂ.ಆರ್. ಮಂಜುನಾಥ್ ಅವರು ಪರಿಹಾರ ವಿತರಿಸಿದ್ದಾರೆ. ಸರ್ಕಾರದಿಂದ ತಲಾ ₹5 ಲಕ್ಷ ಹಾಗೂ ವೈಯಕ್ತಿಕವಾಗಿ ತಲಾ ₹10 ಲಕ್ಷ ಸೇರಿಸಿ ಪ್ರತಿ ಕುಟುಂಬಕ್ಕೆ ಒಟ್ಟು ₹15 ಲಕ್ಷ ಪರಿಹಾರ ನೀಡಲಾಗಿದೆ.

ಹನೂರು ತಾಲೂಕಿನ ತೋಮಿಯಾರ್ ಪಾಳ್ಯ ಗ್ರಾಮದ ಕುಮಾರ್, ಮರಿಯಮಂಗಲ ಗ್ರಾಮದ ಅಂತೋಣಿ ಸಾಮಿ ಹಾಗೂ ಪೀಟರ್ ಅವರ ಮನೆಗಳಿಗೆ ತೆರಳಿದ ಶಾಸಕರು ಕುಟುಂಬಸ್ಥರಿಗೆ ಪರಿಹಾರದ ಮೊತ್ತವನ್ನು ಹಸ್ತಾಂತರಿಸಿದರು. ಭಾನುವಾರ ಪ್ರತಿಭಟನಾನಿರತರಿಗೆ ನೀಡಿದ್ದ ಭರವಸೆಯಂತೆ ಪರಿಹಾರ ವಿತರಿಸಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.

‘ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ’

ಶಾಗ್ಯ ಬೀಟ್‌ನ ಶೂಟೌಟ್ ಪ್ರಕರಣದ ಕುರಿತು ತನಿಖೆ ಮುಂದುವರಿದಿದ್ದು, ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಆರ್. ಮಂಜುನಾಥ್ ಭರವಸೆ ನೀಡಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕಿದ್ದು, ತನಿಖಾ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಮರಣೋತ್ತರ ಪರೀಕ್ಷೆ ಬಳಿಕ ಗ್ರಾಮಕ್ಕೆ ಮೃತದೇಹಗಳು

ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೂವರ ಮೃತದೇಹಗಳನ್ನು ಕಳೆದ ತಡರಾತ್ರಿ ಗ್ರಾಮಕ್ಕೆ ತರಲಾಗಿದೆ. ತೋಮಿಯಾರ್ ಪಾಳ್ಯದ ಚರ್ಚ್‌ನಲ್ಲಿ ಮೃತದೇಹಗಳನ್ನು ಇರಿಸಲಾಗಿದ್ದು, ಚರ್ಚ್‌ನ ಪಾದ್ರಿ ಕೆ. ಚಾರ್ಲ್ಸ್ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಗುತ್ತದೆ. ಬಳಿಕ ಕ್ರೈಸ್ತ ಸಂಪ್ರದಾಯದಂತೆ ಮೃತರ ಸ್ವಗ್ರಾಮಗಳಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಹಲವು ವಸ್ತುಗಳು ತನಿಖಾಧಿಕಾರಿಗಳ ವಶಕ್ಕೆ

ಶೂಟೌಟ್ ನಡೆದ ಸ್ಥಳಕ್ಕೆ ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಅವರು ಎರಡು ದಿನ ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದಾರೆ. ಅರಣ್ಯ ಇಲಾಖೆ ತನಿಖೆಗೆ ಸಂಬಂಧಿಸಿದ ಹಲವು ಸಾಕ್ಷ್ಯಗಳನ್ನು ತನಿಖಾಧಿಕಾರಿಗೆ ಒಪ್ಪಿಸಿದೆ.

ಘಟನೆ ಬಳಿಕ ವಶಪಡಿಸಿಕೊಳ್ಳಲಾಗಿದ್ದ ವಸ್ತುಗಳ ಪೈಕಿ ಸುಮಾರು 30 ಕೆ.ಜಿ. ಜಿಂಕೆ ಮಾಂಸ, ಒಂಟಿ ನಳಿಕೆಯ ಎರಡು ನಾಡ ಬಂದೂಕುಗಳು, ಹೆಡ್‌ಟಾರ್ಚ್‌ಗಳು, ಮೃತರು ಧರಿಸಿದ್ದ ಚಪ್ಪಲಿಗಳು, ಅಡುಗೆ ಮಾಡಲು ತಂದಿದ್ದ ಪಾತ್ರೆಗಳು, ಸಾಂಬಾರ ಪದಾರ್ಥಗಳು, ಚಾಕು, ಬ್ಯಾಗ್‌ಗಳು ಸೇರಿವೆ ಎಂದು ತಿಳಿದುಬಂದಿದೆ. ಈ ವಸ್ತುಗಳನ್ನು ತನಿಖೆಯ ಭಾಗವಾಗಿ ಸಾಕ್ಷ್ಯಗಳಾಗಿ ತನಿಖಾಧಿಕಾರಿಗೆ ಸಲ್ಲಿಸಲಾಗಿದೆ.

ಪ್ರಕರಣವನ್ನು ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ತನಿಖೆಯ ಸಂಪೂರ್ಣ ವರದಿಯನ್ನು ಸಲ್ಲಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಶೂಟೌಟ್ ನಡೆದ ನಿಖರ ಸಂದರ್ಭ, ಗುಂಡಿನ ಚಕಮಕಿ ಹೇಗೆ ಆರಂಭವಾಯಿತು, ವಶಪಡಿಸಿಕೊಂಡಿರುವ ವಸ್ತುಗಳ ಪ್ರಕರಣದೊಂದಿಗಿನ ಸಂಬಂಧ ಹಾಗೂ ಗುಂಡಿನ ದಾಳಿಯ ಸಂದರ್ಭ ಸೇರಿದಂತೆ ಹಲವು ಅಂಶಗಳ ಪರಿಶೀಲನೆ ನಡೆಯುತ್ತಿದೆ.

ಮೃತ ಪೀಟರ್ ಅವರ ಸಹೋದರಿ, ವೃತ್ತಿಯಲ್ಲಿ ನರ್ಸ್ ಆಗಿರುವ ಮಾರ್ಗರೇಟ್, ಪೊಲೀಸರ ಕ್ರಮದ ಕುರಿತು ಗಂಭೀರ ಆರೋಪ ಮಾಡಿದ್ದಾರೆ. “ಪಂಚನಾಮೆ ಹೆಸರಿನಲ್ಲಿ ನಮ್ಮಿಂದ ಸಹಿ ಪಡೆದು, ನಮಗೆ ತಿಳಿಯದಂತೆ ಎರಡು ಮೃತದೇಹಗಳ ಮರಣೋತ್ತರ ಪರೀಕ್ಷೆ ಮುಗಿಸಿದ್ದಾರೆ. ಶವಗಳನ್ನು ಐಸ್ ಬಾಕ್ಸ್‌ನಲ್ಲೂ ಇಟ್ಟಿರಲಿಲ್ಲ” ಎಂದು ಆರೋಪಿಸಿದ್ದಾರೆ. ಕುಟುಂಬಸ್ಥರ ಈ ಆರೋಪಗಳ ಬಗ್ಗೆಯೂ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.

ಮಾರ್ಟಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸೆಲ್ವಂ ಮಾತನಾಡಿ, ತಮ್ಮ ಸಮುದಾಯದ ಪ್ರಮುಖ ನಾಯಕರು ಈ ಘಟನೆಗೆ ನಿರೀಕ್ಷಿತ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. “ರಾಜ್ಯದಲ್ಲಿ 13 ಲಕ್ಷ ಮಂದಿ ಕ್ರಿಶ್ಚಿಯನ್ ಸಮುದಾಯದವರಿದ್ದೇವೆ. ಸಮುದಾಯದ ಪ್ರಮುಖ ನಾಯಕರು ನಮ್ಮ ನೋವಿಗೆ ಸ್ಪಂದಿಸಿಲ್ಲ. ಇದೇ ಘಟನೆ ಬೇರೆ ಪ್ರಭಾವಿ ಸಮುದಾಯಗಳಿಗೆ ಆಗಿದ್ದರೆ ರಾಜ್ಯಾದ್ಯಂತ ದೊಡ್ಡ ಹೋರಾಟವೇ ನಡೆಯುತ್ತಿತ್ತು” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.