ಎರಡು ಟೀ ಗ್ಲಾಸು, ಜಾಗದ ತಕರಾರು, ವಿದೇಶಿ ಹಣದ ಗತ್ತು ; ವಿಶಾಲಾ ಗಾಣಿಗ ಕೊಲೆ ಹಿಂದೆ ಬಿದ್ದ ಪೊಲೀಸರು !

14-07-21 04:28 pm       Udupi Correspondent   ಕ್ರೈಂ

ಕೊಲೆಯಾಗಿದ್ದ ಮನೆಯಲ್ಲಿ ಎರಡು ಟೀ ಗ್ಲಾಸ್ ಕಂಡುಬಂದಿದ್ದು, ಕೊಲೆಗೂ ಮುನ್ನ ಪರಿಚಿತರು ಯಾರಾದ್ರೂ ಬಂದು ಹೋಗಿದ್ದರೇ ಎನ್ನುವ ಅನುಮಾನ ಹುಟ್ಟಿಸಿದೆ.

ಉಡುಪಿ, ಜುಲೈ 14: ತನ್ನದೇ ಫ್ಲಾಟಿನಲ್ಲಿ ಕೊಲೆಯಾಗಿರುವ ವಿಶಾಲ ಗಾಣಿಗ ಪ್ರಕರಣದಲ್ಲಿ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಮೇಲ್ನೋಟಕ್ಕೆ ಆಕೆಯ ಬಗ್ಗೆ ತಿಳಿದವರೇ ಕೊಲೆ ಕೃತ್ಯ ಮಾಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಯಾಕಂದ್ರೆ, ಆಕೆ ಕೊಲೆಯಾಗಿದ್ದ ಮನೆಯಲ್ಲಿ ಎರಡು ಟೀ ಗ್ಲಾಸ್ ಕಂಡುಬಂದಿದ್ದು, ಕೊಲೆಗೂ ಮುನ್ನ ಪರಿಚಿತರು ಯಾರಾದ್ರೂ ಬಂದು ಹೋಗಿದ್ದರೇ ಎನ್ನುವ ಅನುಮಾನ ಹುಟ್ಟಿಸಿದೆ. ಹೀಗಾಗಿ ಪೊಲೀಸರು ವಿಶಾಲಾ ಗಾಣಿಗ ಅವರ ಮೊಬೈಲಿಗೆ ಯಾರಿಂದ ಕರೆಗಳು ಬಂದಿದ್ದವು ಅನ್ನೋದ್ರ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಇದೇ ವೇಳೆ, ಉಡುಪಿ ಎಸ್ಪಿ ವಿಷ್ಣುವರ್ಧನ ಪ್ರಕರಣದ ತನಿಖೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಬ್ರಹ್ಮಾವರ ಠಾಣೆ ಇನ್ ಸ್ಪೆಕ್ಟರ್ ಅನಂತ ಪದ್ಮನಾಭ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಮಣಿಪಾಲ ಠಾಣೆ ಇನ್ ಸ್ಪೆಕ್ಟರ್ ಮಂಜುನಾಥ್, ಉಡುಪಿ ಸರ್ಕಲ್ ಇನ್ ಸ್ಪೆಕ್ಟರ್ ಶರಣು ಗೌಡ, ಉಡುಪಿ ನಗರ ಠಾಣೆ ಎಸ್ಐ ಪ್ರಮೋದ್ ಕುಮಾರ್ ಪ್ರತ್ಯೇಕ ತಂಡಗಳನ್ನು ಕಟ್ಟಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ದೊರೆತ ವಸ್ತುಗಳನ್ನು ಆಧರಿಸಿ ಫಾರೆನ್ಸಿಕ್ ತಜ್ಞರು ವರದಿಯನ್ನು ನೀಡಲಿದ್ದು, ಅದರ ಆಧಾರದಲ್ಲಿ ತನಿಖೆ ನಡೆಯಲಿದೆ.

ಬಿಜೂರು ಮೂಲದ ಉದ್ಯಮಿಯೊಬ್ಬರಿಗೆ ಸೇರಿದ ಕಂಪನಿಯಲ್ಲಿ ಕೆಲಸಕ್ಕಿರುವ ರಾಮಕೃಷ್ಣ ಗಾಣಿಗ ಜೊತೆಗೆ 9 ವರ್ಷಗಳ ಹಿಂದೆ ವಿಶಾಲಾ ಗಾಣಿಗ ಮದುವೆಯಾಗಿತ್ತು. ಆಬಳಿಕ ದಂಪತಿ ದುಬೈನಲ್ಲಿಯೇ ನೆಲೆಸಿದ್ದರು. 2019ರಲ್ಲಿ ದಂಪತಿ, ಬ್ರಹ್ಮಾವರದ ಕುಮ್ರಗೋಡು ಎಂಬಲ್ಲಿ ಫ್ಲಾಟ್ ಖರೀದಿಸಿದ್ದು, ಊರಿಗೆ ಬಂದ ಸಂದರ್ಭದಲ್ಲಿ ಅದರಲ್ಲಿ ಇರುತ್ತಿದ್ದರು. ಆದರೆ, ಇತ್ತೀಚೆಗೆ ಎರಡು ವಾರದ ಹಿಂದೆ ವಿಶಾಲಾ ತನ್ನ ಮಗುವಿನ ಜೊತೆ ಊರಿಗೆ ಬಂದಿದ್ದರು. ಪತಿ ರಾಮಕೃಷ್ಣ ಜೊತೆಗೆ ಬಂದಿರಲಿಲ್ಲ.

ಈ ನಡುವೆ, ರಾಮಕೃಷ್ಣ ಗಾಣಿಗ ಅವರಿಗೆ ಹಿರಿಯರಿಂದ ಆಸ್ತಿ ಪಾಲು ದೊರಕಿತ್ತು. ಆದರೆ, ಅದರ ರಿಜಿಸ್ಟರ್ ಕೆಲಸ ಆಗಿರಲಿಲ್ಲ. ಅದನ್ನು ರಿಜಿಸ್ಟರ್ ಮಾಡಿಕೊಳ್ಳಲು ಪತ್ನಿ ವಿಶಾಲ ಗಾಣಿಗೆ ಅವರಿಗೆ ಪವರ್ ಆಫ್ ಅಟಾರ್ನಿಯನ್ನು ರಾಮಕೃಷ್ಣ ನೀಡಿದ್ದರು. ಹೀಗಾಗಿ ಅದರ ಕೆಲಸದ ಜೊತೆಗೆ ಬೇರೆ ಎರಡು ಕಡೆ ಆಸ್ತಿ ಖರೀದಿಸುವ ವಿಚಾರದಲ್ಲಿ ಮಾತುಕತೆ ನಡೆದಿತ್ತು. ಇದೇ ಕಾರಣಕ್ಕೆ ಸೋಮವಾರ, ಹೆತ್ತವರು ಮತ್ತು ಮಗುವನ್ನು ಗಂಗೊಳ್ಳಿಯ ನಾಯಕ್ ವಾಡಿಗೆ ಬಿಟ್ಟು ಆಟೋದಲ್ಲಿ ಬ್ಯಾಂಕಿಗೆ ತೆರಳಿದ್ದರು. ತನಗೆ ಗೊತ್ತಿರುವ ವ್ಯಕ್ತಿಯನ್ನೇ ಆಟೋ ಗೊತ್ತುಪಡಿಸಿ, ಬ್ಯಾಂಕಿಗೆ ತೆರಳಿ ಬಳಿಕ ಅದೇ ಆಟೋದಲ್ಲಿ ಬ್ರಹ್ಮಾವರದ ಫ್ಲಾಟಿಗೆ ಬಂದಿದ್ದರು. ಒಟ್ಟು 70-80 ಕಿಮೀ ದೂರಕ್ಕೆ ಪ್ರಯಾಣಿಸಿದ್ದರು. ವಿದೇಶದಿಂದ ಬಂದಾಗ ಅದೇ ಆಟೋವನ್ನು ಸಾಮಾನ್ಯವಾಗಿ ವಿಶಾಲಾ ಬಳಸುತ್ತಿದ್ದರಂತೆ.

ಫ್ಲಾಟಿಗೆ ಬಂದಿದ್ದ ಆಗುಂತುಕರು ಮೊಬೈಲ್ ಚಾರ್ಜರ್ ಕೇಬಲ್ ನಲ್ಲಿ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಆನಂತರ, ಅಲ್ಲಿಯೇ ಲ್ಯಾಪ್ಟಾಪ್ ಚಾರ್ಜರ್ ಕೇಬಲನ್ನೂ ಬಳಸಿದ್ದಾರೆ. ಇದೇ ವೇಳೆ, ಮುಖಕ್ಕೆ ತಲೆದಿಂಬನ್ನು ಒತ್ತಿ ಹಿಡಿದಿರುವುದನ್ನು ಮೇಲ್ನೋಟಕ್ಕೆ ಪೊಲೀಸರು ಪತ್ತೆ ಮಾಡಿದ್ದಾರೆ. ಹೀಗಾಗಿ ಇದು ಒಬ್ಬನದ್ದೇ ಕೃತ್ಯ ಅಲ್ಲ. ಇಬ್ಬರು ಸೇರಿ ಕೊಲೆ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಇದೇ ವೇಳೆ, ಆಕೆಯ ಕುತ್ತಿಗೆಯಲ್ಲಿದ್ದ ಕರಿಮಣಿ ಸರ, ಕೈಯಲ್ಲಿದ್ದ ಬಳೆಗಳು, ಕಿವಿಯೋಲೆಯನ್ನು ಆಗಂತುಕರು ಕದ್ದುಕೊಂಡು ಹೋಗಿದ್ದಾರೆ. ಆದರೆ, ಕಪಾಟಿನಲ್ಲಿದ್ದ ಇತರೇ ಆಭರಣವನ್ನು ಮುಟ್ಟಿಲ್ಲ. ಪರಿಚಿತರೇ ಕೃತ್ಯ ಎಸಗಿದ್ದರೆ ಮೈಯಲ್ಲಿದ್ದ ಚಿನ್ನವನ್ನು ಎಗರಿಸಿದ್ದು, ತನಿಖೆಯ ದಿಕ್ಕು ತಪ್ಪಿಸುವ ಯತ್ನ ಎನ್ನುವ ಅನುಮಾನವೂ ಬಂದಿದೆ.

ಪೊಲೀಸರು ಆರಂಭದಲ್ಲಿ ಆಟೋ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆದರೆ, ಆತ ವಿಶಾಲಾ ಅವರನ್ನು ಮಧ್ಯಾಹ್ನವೇ ಬ್ರಹ್ಮಾವರದ ಫ್ಲಾಟಿಗೆ ಬಿಟ್ಟು ತೆರಳಿದ್ದಾಗಿ ಹೇಳಿಕೆ ನೀಡಿದ್ದರಿಂದ ಆತನನ್ನು ಬಿಟ್ಟು ಕಳುಹಿಸಿದ್ದಾರೆ. ಇದೇ ವೇಳೆ, ಅಪಾರ್ಟ್ಮೆಂಟ್ ಕಟ್ಟಡದಲ್ಲಿ ಸಿಸಿಟಿವಿ ಇದೆಯೇ ಎಂದು ಪರಿಶೀಲನೆ ನಡೆಸಿದ್ದಾರೆ. ಆದರೆ, ಅಲ್ಲಿ ಯಾವುದೇ ಆಗಂತುಕರ ಮಾಹಿತಿ ಪೊಲೀಸರಿಗೆ ಲಭ್ಯವಾಗಿಲ್ಲ. ಹೀಗಾಗಿ ಆಕೆಯ ಜೊತೆಗೆ ಕರೆ ಮಾಡಿ ಮಾತನಾಡಿದ್ದವರು, ಜಾಗದ ವಿಚಾರದಲ್ಲಿ ತಕರಾರು ಮಾಡಿಕೊಂಡಿದ್ದವರು ಮತ್ತು ಬ್ಯಾಂಕಿನಿಂದ ಹಣ ತೆಗೆದುಕೊಂಡು ಬಂದಿದ್ದನ್ನು ಯಾರಾದ್ರೂ ನೋಡಿದ್ದಾರೆಯೇ ಅನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. 

Read: ವಿದೇಶದಲ್ಲಿ ನೆಲೆಸಿದ್ದ ಮಹಿಳೆಯ ಬರ್ಬರ ಕೊಲೆ ; ಬ್ರಹ್ಮಾವರದ ಫ್ಲಾಟ್ ನಲ್ಲಿ ಕೃತ್ಯ, ಹಣ, ಚಿನ್ನಕ್ಕಾಗಿ ಹತ್ಯೆ ಶಂಕೆ

Video: 

Udupi Vishala Gangiga Murder Two used cups hold clue for police four teams formed. The police are continuing with investigation from several angles into the shocking murder of Vishala Ganiga during daytime. Vishala, daughter of Vasu Ganiga from Nayakwadi, Gangolli, had been married to Ramakrishna Ganiga, working as personal assistant for a man from Bijoor who currently is a Dubai-based entrepreneur, nine years back. The couple lived with their daughter in Dubai. In 2019, they acquired a flat at Kumragodu near Brahmavar which they used whenever they visited India.