ಮರ್ಡರ್ ಮಿಸ್ಟರಿ ; 5 ಲಕ್ಷ ಸುಪಾರಿ, ‘ದೃಶ್ಯಂ’ ಥರಾ ಕ್ಲೂ ಇಲ್ಲದೆ ಎಸಗಿದ್ದ ಕೃತ್ಯ ! ನೇಪಾಳ ಗಡಿಯಲ್ಲಿ ತಗ್ಲಾಕ್ಕೊಂಡಿದ್ದು ಹೇಗೆ ಕಿಲ್ಲರ್ ?!

21-07-21 09:52 pm       Giridhar Shetty   ಕ್ರೈಂ

ತೀವ್ರ ಸಂಚಲನ ಮೂಡಿಸಿದ್ದ ಉಡುಪಿ ಜಿಲ್ಲೆಯ ವಿಶಾಲ ಗಾಣಿಗ ಕೊಲೆ ಪ್ರಕರಣ ತಾರ್ಕಿಕ ಅಂತ್ಯ. ಯಾವುದೇ ಸುಳಿವನ್ನೂ ಬಿಟ್ಟು ಕೊಡಲೇಬಾರದು ಎಂದು ಆರು ತಿಂಗಳಿಂದ ಸಂಚಿನ ಮೇಲೆ ಸಂಚು ಹೂಡಿದ್ದರು.

ಉಡುಪಿ, ಜುಲೈ 21: ಒಂದು ಕೊಲೆ ಕೃತ್ಯಕ್ಕಾಗಿ ಆಕೆಯ ಗಂಡ ಮತ್ತು ಇಬ್ಬರು ಸುಪಾರಿ ಕಿಲ್ಲರ್ ಸೇರಿ ಅದೆಷ್ಟು ತಡಕಾಡಿದ್ದರು ಅಂದ್ರೆ, ಯಾವುದೇ ಸುಳಿವನ್ನೂ ಬಿಟ್ಟು ಕೊಡಲೇಬಾರದು ಎಂದು ಆರು ತಿಂಗಳಿಂದ ಸಂಚಿನ ಮೇಲೆ ಸಂಚು ಹೂಡಿದ್ದರು. ಫ್ಲಾಟಿನಲ್ಲಿ ಬೇರೆ ಯಾರೂ ಇರಬಾರದು, ಫ್ಲಾಟಿಗೆ ಎಂಟ್ರಿ ಪಡೆಯೋದಿದ್ದರೂ ಅಪರಿಚಿತರು ಅನ್ನುವ ಸುಳಿವೂ ಇರದ ಹಾಗೆ ನೋಡಿಕೊಂಡಿದ್ದರು. ಅಷ್ಟೇ ಅಲ್ಲ, ಅತ್ತ ಉಡುಪಿಯಿಂದ, ಇತ್ತ ಕುಂದಾಪುರದ ವರೆಗೂ ಹೆದ್ದಾರಿಯಲ್ಲೂ ಸಿಸಿಟಿವಿಗಳಲ್ಲಿ ಸಿಕ್ಕಿಹಾಕ್ಕೊಳ್ಳಬಾರದು ಅನ್ನುವಷ್ಟು ನಿಗಾ ಇಟ್ಟಿದ್ದರು. ಆದರೆ, ಕೃಷ್ಣ ಹೇಳಿದ ರೀತಿ ಪಾಪ ಮಾಡಿದೋನು ಎಲ್ಲಾದ್ರೂ ಸಿಕ್ಕಾಕ್ಕೊಂಡೇ ತೀರುತ್ತಾನೆ ಅನ್ನುವಂತೆ ಎಲ್ಲೋ ಒಂದ್ಕಡೆ ಎಡವಿಬಿದ್ದು ಕ್ಲೂ ಕೊಟ್ಟೇ ಕೊಡುತ್ತಾನೆ.

ಹೌದು.. ಜುಲೈ 12ರಂದು ಬ್ರಹ್ಮಾವರದ ಫ್ಲಾಟಿನಲ್ಲಿ ನಡೆದುಹೋಗಿದ್ದ ಕೊಲೆಯ ಬಗ್ಗೆ ಯಾವುದೇ ಸುಳಿವೂ ಇರಲಿಲ್ಲ. ಕೊಲೆಯಾದ ಮಹಿಳೆ ವಿಶಾಲಾ ಗಾಣಿಗ ಮೊಬೈಲಿನಲ್ಲಾಗಲೀ, ಫ್ಲಾಟಿನ ಆಸುಪಾಸಿನ ಸಿಸಿಟಿವಿಗಳಲ್ಲಾಗಲೀ ಒಂಚೂರೂ ಕ್ಲೂ ಸಿಕ್ಕಿರಲಿಲ್ಲ. ಕೊಲೆಗೈದು ಮೈಯಲ್ಲಿದ್ದ ಚಿನ್ನಾಭರಣವನ್ನು ದೋಚಿದ್ದರಿಂದ ಸಹಜವಾಗೇ ಚಿನ್ನಕ್ಕಾಗಿ ಕೊಲೆ ನಡೆದಿತ್ತು ಅನ್ನುವುದಷ್ಟೇ ಪೊಲೀಸರು ಮತ್ತು ಸಾರ್ವಜನಿಕರ ಶಂಕೆಯಾಗಿತ್ತು. ಅದೇ ಕಾರಣಕ್ಕೆ ಮೊದಲಿಗೆ, ಆಕೆಯನ್ನು ಬಿಟ್ಟು ಹೋಗಿದ್ದ ಆಟೋ ಚಾಲಕನ ಮೇಲೆ ಸಂಶಯ ಬಂದಿತ್ತು. ಆದರೆ, ಯಾವತ್ತೂ ಓಡಾಟಕ್ಕೆ ಬಳಸ್ಕೊಂಡಿದ್ದ ಪರಿಚಿತ ವ್ಯಕ್ತಿಯೇ ಆಗಿದ್ದ ಆಟೋ ಚಾಲಕನ ವಿಚಾರಣೆಯಲ್ಲಿ ಸಂಶಯದ ಗೆರೆಗಳು ಕಂಡುಬರಲಿಲ್ಲ.

ಅದಕ್ಕಾಗಿ ಉಡುಪಿ ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳ ಬಗ್ಗೆ ಆಳ ಪರಿಜ್ಞಾನ ಹೊಂದಿದ್ದ ಪೊಲೀಸರನ್ನು ಬಳಸ್ಕೊಂಡು ನಾಲ್ಕು ತಂಡ ರಚಿಸಲಾಗಿತ್ತು. ಪೊಲೀಸರು ಇಂಚಿಂಚು ಬಿಡದೆ, ಏನಾದ್ರೂ ಕ್ಲೂ ಸಿಗುತ್ತಾ ಎಂದು ಹುಡುಕಾಡಿದ್ದರು. ಆಟೋ ಚಾಲಕರು, ಬಸ್, ಕಾರು ಚಾಲಕರು, ಕೆಎಸ್ಸಾರ್ಟಿಸಿ, ಖಾಸಗಿ ಬಸ್, ರೈಲು ಪ್ರಯಾಣಿಕರು, ಏರ್ಪೋರ್ಟ್ ನಲ್ಲಿ ಅಡ್ಡಾಡಿದ್ದ ಪ್ರಯಾಣಿಕರ ಬಗ್ಗೆಯೂ ತಡಕಾಡಿದ್ದರು. ಕಿಲ್ಲರ್ ವಿಮಾನದ ಮೂಲಕ ಪ್ರಯಾಣ ಮಾಡಿರಬಹುದೆಂಬ ಅನುಮಾನದಲ್ಲಿ ಯಾರಾದ್ರೂ ಸಂಶಯಿತ ವ್ಯಕ್ತಿಗಳು ತೆರಳಿದ್ದಾರೆಯೇ ಅನ್ನುವ ನೆಲೆಯಲ್ಲಿ ತಪಾಸಣೆ ನಡೆಸಿದ್ದರು.

ಆದರೆ, ಎಲ್ಲಿಯೂ ಕೊಲೆಯನ್ನು ಬೊಟ್ಟು ಮಾಡುವ ರೀತಿಯ ಕ್ಲೂ ಸಿಕ್ಕಿರಲಿಲ್ಲ. ಒಂದು ಟೀಮ್ ಬೆಂಗಳೂರಿಗೆ, ಇನ್ನೊಂದು ಟೀಮ್ ಕೇರಳಕ್ಕೆ ಹೋಗಿದ್ದರೆ, ಮತ್ತೆರಡು ಟೀಮ್ ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿ ಕೇಸ್ ಹಿಂದೆ ಬಿದ್ದಿತ್ತು. ಆಗಲೇ ಒಂದು ಕ್ಲೂ ಪೊಲೀಸ್ ಟೀಮಿಗೆ ಸಿಕ್ಕಿತ್ತು. ಉತ್ತರ ಪ್ರದೇಶದಲ್ಲಿ ನಟೋರಿಯಸ್ ಸುಪಾರಿ ಕಿಲ್ಲರ್ ಆಗಿರುವ ಒಬ್ಬಾತ ಕಳೆದ ಐದಾರು ತಿಂಗಳಲ್ಲಿ ಕರ್ನಾಟಕದಲ್ಲಿ ಇರೋದು ಅನುಮಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ಗೋರಖಪುರ ಪೊಲೀಸರು ಖಚಿತ ಮಾಹಿತಿಗಳನ್ನು ನೀಡಿದ್ದರು. ಅವರು ಈಗೆಲ್ಲಿದ್ದಾರೆ ಅನ್ನೋದ್ರ ಬೆನ್ನತ್ತಿದ್ದಾಗ ನೇಪಾಳ ಗಡಿಯಲ್ಲಿ ಟವರ್ ಲೊಕೇಶನ್ ಕಂಡಿತ್ತು. ಕೂಡಲೇ ಉಡುಪಿ ಎಸ್ಪಿ ವಿಷ್ಣುವರ್ಧನ್ ಮೇಲಧಿಕಾರಿಗಳ ಮೂಲಕ ಮನವಿ ಮಾಡಿಕೊಂಡಂತೆ ಗೋರಖಪುರ ಪೊಲೀಸರು ಪರಾರಿಯಾಗುತ್ತಿದ್ದ ಒಬ್ಬನನ್ನು ನೇಪಾಳ ಗಡಿಯಲ್ಲಿ ಅರೆಸ್ಟ್ ಮಾಡಿದ್ದರು.  

ಅರೆ, ದಕ್ಷಿಣ ಭಾರತದ ಮೂಲೆಯಲ್ಲಿರುವ ಅದರಲ್ಲೂ ಉಡುಪಿ ಜಿಲ್ಲೆಯ ಹಳ್ಳಿ ಒಂದರಲ್ಲಿ ಕೊಲೆಯಾಗಿದ್ದಕ್ಕೂ ಯುಪಿಯ ನಟೋರಿಯಸ್ ಕಿಲ್ಲರ್ ಗೂ ಏನು ಸಂಬಂಧ ? ಉತ್ತರ ಪ್ರದೇಶದ ಹಿಂದುಳಿದ ಜನಾಂಗಕ್ಕೆ ಸೇರಿದ ಕಿಲ್ಲರ್ ಸ್ವಾಮಿನಾಥ ನಿಷಾದನನ್ನು ಪೊಲೀಸರು ಕಾಲರ್ ಹಿಡಿದು ಜೀಪು ಒಳತಳ್ಳಿದಾಗಲೂ ಇದೇ ಪ್ರಶ್ನೆಯನ್ನು ಆತನೂ ಕೇಳಿದ್ದ. ‘’ಅರೇ ಕ್ಯಾ ಸಾಬ್. ಕ್ಯಾ ಬಾತ್ ಬೋಳ್ ಸಕ್ತಾ ತುಮ್..’’ ಆದರೆ, ಯುಪಿ ಸಿಎಂ ಯೋಗಿಯ ಸ್ವಕ್ಷೇತ್ರ ಗೋರಖಪುರದ ಪೊಲೀಸರು ಸ್ವಲ್ಪ ಸಾಚಾ ಇರಬೇಕು. ಹಿಡಿದ ಪಟ್ಟನ್ನು ಸಡಿಲಿಸದೆ, ಏನ್ ಹೇಳ್ತೀಯೋ, ಅಮೇಲೆ ಹೇಳು.. ಎಂದು ಎಳಕೊಂಡು ಬಂದಿದ್ದರು. ಆರು ತಿಂಗಳ ಕಾಲ ಕೊಲೆಗೆ ಸಂಚು ಹೂಡಿದ್ದ ರಾಮಕೃಷ್ಣ ಮತ್ತು ಕಿಲ್ಲರ್ ನಿಷಾದ ಅಂಡ್ ಟೀಮ್ ಪೊಲೀಸರು ಈ ಪರಿ ಹಿಂದೆ ಬೀಳ್ತಾರೆ ಅನ್ಕೊಂಡೇ ಇರಲಿಕ್ಕಿಲ್ಲ.

ಉತ್ತರ ಪ್ರದೇಶದಲ್ಲಿ ಈ ರೀತಿ ಸುಪಾರಿ ಪಡೆದು ಯಾರನ್ನೋ ಹಣಕ್ಕಾಗಿ ಕೊಲೆ ಮಾಡುವುದು, ಅದನ್ನೇ ವೃತ್ತಿಯಾಗಿಸ್ಕೊಂಡವರು ಅಧಿಕ ಮಂದಿ ಇದ್ದಾರೆ. ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ನದಿ ತೀರಗಳಲ್ಲಿ ವಾಸ ಮಾಡುವ ಹಿಂದುಳಿದ ವರ್ಗದ ನಿಷಾದ ಜನಾಂಗಕ್ಕೆ ಸೇರಿದ ಸ್ವಾಮಿನಾಥ ನಿಷಾದನಿಗೂ ಅದೇ ವೃತ್ತಿಯಾಗಿತ್ತು. ಇಷ್ಟಕ್ಕೂ ದೂರದ ಸ್ವಾಮಿನಾಥ ನಿಷಾದ ಮತ್ತು ಆತನ ಸಹಚರನನ್ನು ರಾಮಕೃಷ್ಣ ಗಾಣಿಗನಿಗೆ ಪರಿಚಯಿಸಿದ್ದು ಉಡುಪಿಯಲ್ಲಿ ನೆಲೆಸಿರುವ ಒಬ್ಬ ಗೆಳೆಯ. ಆ ಆಸಾಮಿಯೂ ಈಗ ನಾಪತ್ತೆಯಾಗಿದ್ದಾನೆ. ಆರು ತಿಂಗಳ ಹಿಂದೆ ಈ ಇಬ್ಬರು ಹಂತಕರನ್ನು ಬ್ರಹ್ಮಾವರದ ಫ್ಲಾಟಿಗೇ ಕರೆಸಿಕೊಂಡಿದ್ದ ರಾಮಕೃಷ್ಣ ಗಾಣಿಗ ತನ್ನ ಪತ್ನಿಗೆ ಇದು ತನ್ನ ಗೆಳೆಯರೆಂದೇ ಪರಿಚಯ ಮಾಡಿಕೊಂಡಿದ್ದ. ಆನಂತರ ಒಂದೆರಡು ಬಾರಿ ಬ್ರಹ್ಮಾವರಕ್ಕೆ ಬಂದು ಕಾಣಿಸಿಕೊಂಡಿದ್ದ ಹಂತಕರು, ಗೆಳೆಯರ ಸೋಗಿನಲ್ಲಿದ್ದುಕೊಂಡೇ ಸ್ಕೆಚ್ ಹಾಕಿದ್ದರು.

ಮೊನ್ನೆಯೂ ಜುಲೈ ಆರಂಭದಲ್ಲಿ ವಿಶಾಲಾ ಗಾಣಿಗ ಊರಿಗೆ ಬರಲು ರೆಡಿಯಾಗಿದ್ದಾಗ ತನ್ನ ಹೆಸರಿಗೆ ಹಿರಿಯರಿಂದ ಬಂದಿದ್ದ ಆಸ್ತಿಯನ್ನು ರಿಜಿಸ್ಟರ್ ಮಾಡಿಸುವಂತೆ, ಪವರ್ ಆಫ್ ಅಟಾರ್ನಿಯನ್ನೂ ಕೊಡಿಸಿದ್ದ ಗಂಡ ರಾಮಕೃಷ್ಣ ಎಷ್ಟು ಕತರ್ನಾಕ್ ವ್ಯಕ್ತಿ ಆಗಿರಬೇಕು ನೋಡಿ. ಸ್ವಂತ ಹೆಂಡ್ತಿಯನ್ನು ಕೊಲೆ ಮಾಡಲು ತಯಾರಿ ಮಾಡಿಕೊಂಡಿದ್ದರೂ, ತನ್ನ ಮತ್ತು ಹೆಂಡ್ತಿಯ ಸಂಬಂಧ ಒಳ್ಳೆದೇ ಇದೆ, ಆಮೇಲೆ ಸಂಶಯ ಬರಬಾರದು ಅಂತ ತೋರಿಸಿಕೊಳ್ಳಲು ತನ್ನ ಆಸ್ತಿ ರಿಜಿಸ್ಟರ್ ಮಾಡುವುದಕ್ಕೂ ಅನುಮತಿಯ ಮೊಹರನ್ನು ಪತ್ನಿಯ ಕೈಗೇ ಕೊಟ್ಟುಬಿಟ್ಟಿದ್ದ. ಅವರ ನಡುವೆ ಸಂಬಂಧ ಅಷ್ಟಕ್ಕಷ್ಟೇ ಇದ್ದರೂ, ಜುಲೈ 12ರಂದು ಮಧ್ಯಾಹ್ನ ಫೋನ್ ಮಾಡಿದ್ದ ರಾಮಕೃಷ್ಣ ಗಾಣಿಗ, ಆಕೆ ಒಂಟಿಯಾಗಿರುವುದನ್ನು ಕನ್ಫರ್ಮ್ ಮಾಡಿದ್ದಾನೆ. ಅಷ್ಟೇ ಅಲ್ಲಾ, ನಿಂಗೊಂದು ಗಿಫ್ಟ್ ಕೊಡಿಸ್ತೇನೆ. ಮಗಳು ಮತ್ತು ನಿನಗಾಗಿ ಸರ್ಪ್ರೈಸ್ ಗಿಫ್ಟ್. ಯಾರಲ್ಲೂ ಹೇಳಬೇಡ. ನನ್ನ ಗೆಳೆಯರು ಫ್ಲಾಟಿಗೇ ತಂದುಕೊಡುತ್ತಾರೆ ಎಂದು ಹೇಳಿದ್ದ. ಅದಕ್ಕಾಗೇ ವಿಶಾಲಾ ಒಬ್ಬಂಟಿಯಾಗಿ ಆಟೋದಲ್ಲಿ ಗಂಗೊಳ್ಳಿಯಿಂದ 30 ಕಿಮೀ ದೂರದ ಫ್ಲಾಟಿಗೆ ತೆರಳಿದ್ದಳು. ಈಕೆ ಮನೆ ಸೇರುತ್ತಲೇ, ಒಳಬಂದಿದ್ದ ಗಂಡನ ಗೆಳೆಯರನ್ನು ಒಳಗೆ ಸೇರಿಸಿಕೊಂಡು ಟೀ ಮಾಡಿಕೊಟ್ಟಿದ್ದಾಳೆ. ಆದರೆ, ಮೊದಲೇ ರೆಡಿಯಾಗಿ ಬಂದಿದ್ದ ಹಂತಕರು ಆಕೆಯ ಕತೆಯನ್ನು ಒಂದರೆ ಕ್ಷಣದಲ್ಲಿ ಮುಗಿಸಿಬಿಟ್ಟಿದ್ದಾರೆ. ಆಬಳಿಕ ಯಾರಿಗೂ ಸಂಶಯ ಬಾರದಂತೆ, ಅಲ್ಲಿಂದ ಜಾಗ ಖಾಲಿ ಮಾಡಿದ್ದ ಹಂತಕರು ಪರಾರಿಯಾಗಿದ್ದರು. ಈ ಕೆಲಸಕ್ಕಾಗಿ ರಾಮಕೃಷ್ಣ ಗಾಣಿಗ ಐದು ಲಕ್ಷ ರೂಪಾಯಿ ಸುಪಾರಿ ಕೊಟ್ಟಿದ್ದ. ಅಷ್ಟೇ ಅಲ್ಲಾ, ಎರಡು ಲಕ್ಷವನ್ನು ಮೊದಲೇ ನೆಫ್ಟ್ ಮೂಲಕ ಅವರ ಖಾತೆಗೆ ವರ್ಗಾಯಿಸಿಯೂ ಇದ್ದ.

ಪೊಲೀಸರು ಹತ್ತಾರು ಕೋನಗಳಿಂದ ತನಿಖೆ ನಡೆಸುತ್ತಿದ್ದಾಗ, ರಾಮಕೃಷ್ಣ ಗಾಣಿಗನ ಮೊಬೈಲ್ ವಶಕ್ಕೆ ಪಡೆದಿದ್ದರು. ಆತನ ಬ್ಯಾಂಕ್ ಅಕೌಂಟ್ ಬಗ್ಗೆಯೂ ಪರಿಶೀಲನೆ ನಡೆಸಿದ್ದರು. ಅತ್ತ ಗೋರಖಪುರದಲ್ಲಿ ಹರಾಮಿ ಕಿಲ್ಲರ್ ಸಿಕ್ಕಿಬೀಳುತ್ತಿದ್ದಂತೆ, ಕಿಲ್ಲರ್ ಮೊಬೈಲ್ ಸಂಖ್ಯೆ ಮತ್ತು ಅವರ ಹೆಸರಿನ ಖಾತೆಗೆ ಹಣ ವರ್ಗಾವಣೆ ಆಗಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕಿಲ್ಲರ್ ನಿಷಾದ ಪೊಲೀಸರ ಟ್ರೀಟ್ಮೆಂಟ್ ಬೀಳುತ್ತಿದ್ದಂತೆ ವಿಶಾಲಾ ಪತಿ ರಾಮಕೃಷ್ಣ ಗಾಣಿಗನತ್ತ ಬೆರಳು ತೋರಿಸಿದ್ದ. ಆತನಿಗೂ ನಿಂಗೂ ಅದ್ಹೇಗೆ ಕನೆಕ್ಷನ್ ಅಂದಿದ್ದಕ್ಕೆ ಉಡುಪಿ ಮೂಲದ ರಾಮಕೃಷ್ಣ ಗಾಣಿಗನ ಮತ್ತೊಬ್ಬ ಗೆಳೆಯನ ಸಂಪರ್ಕದ ಬಗ್ಗೆ ಬಿಚ್ಚಿಟ್ಟಿದ್ದ. ಸುಪಾರಿ ಕಿಲ್ಲರ್ ಪರಿಚಯ ಮಾಡಿದ್ದಾತನ ಪತ್ತೆಗಾಗಿ ಪೊಲೀಸರು ಬಲೆಬೀಸಿದ್ದಾರೆ.

ಇಷ್ಟಕ್ಕೂ ರಾಮಕೃಷ್ಣ ಗಾಣಿಗ, ಕೈಹಿಡಿದ ಪತ್ನಿಯನ್ನು ಕೊಲೆ ಮಾಡುವುದಕ್ಕೆ ಅದೇನು ಅಂಥಾ ದ್ವೇಷ ಇತ್ತು ಅನ್ನೋದ್ರ ಬಗ್ಗೆ ಇನ್ನೂ ಸರಿಯಾಗಿ ಬಾಯಿಬಿಟ್ಟಿಲ್ಲ. ತನಗೂ ಆಕೆಗೂ ಸರಿ ಹೋಗುತ್ತಿರಲಿಲ್ಲ. ಸಂಬಂಧ ಚೆನ್ನಾಗಿರಲಿಲ್ಲ ಅಂತಷ್ಟೇ ಹೇಳುತ್ತಿದ್ದಾನಂತೆ. ಅಷ್ಟೇ ಆಗಿರುತ್ತಿದ್ದರೆ, ಡೈವರ್ಸ್ ಕೊಟ್ಟು ಬಿಟ್ಟು ಬಿಡಬಹುದಿತ್ತು. ಕೊಲೆ ಮಾಡೋದಕ್ಕೆ ಅದಷ್ಟೇ ಕಾರಣ ಅಲ್ಲ ಅನ್ನುವ ಬಗ್ಗೆ ಪೊಲೀಸರಲ್ಲೂ ಸಂಶಯ ಇದೆ. ಅದರ ಬಗ್ಗೆ ಆತನನ್ನು ಕಸ್ಟಡಿಗೆ ಪಡೆದು ಮತ್ತಷ್ಟು ತನಿಖೆ ಮಾಡುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಭಾಸ್ಕರ ಶೆಟ್ಟಿ ಎಂಬ ಎನ್ನಾರೈ ಉದ್ಯಮಿಯನ್ನು ಪತ್ನಿಯೇ ಸೇರಿ ಎಲ್ಲ ಸಾಕ್ಷ್ಯಗಳನ್ನೂ ಸುಟ್ಟು ಹಾಕಿ ಮುಗಿಸಿ ಹಾಕಿದ್ದಳು. ಆದರೆ, ಪೊಲೀಸರು ರಂಗೋಲಿಯಡಿ ತೂರಿ ಅಪರಾಧಿಗಳನ್ನು ಹಿಡಿದು ಶಿಕ್ಷೆ ಕೊಡಿಸಿದ್ದಾರೆ. ಅದೇ ರೀತಿ ಸಾಕ್ಷಿಯೇ ಇಲ್ಲದ ರೀತಿ ತಾನೇ ಚಾಲಾಕಿ ಅನ್ಕೊಂಡು ಪತ್ನಿಯನ್ನೇ ಕೊಲೆ ಮಾಡಲು ಹೋದ ಪತಿರಾಯ ಈಗ ಕಂಬಿ ಎಣಿಸುತ್ತಿದ್ದಾನೆ.

Udupi Vishala Ganiga Murder case Police arrest supari killer of Uttar Pradesh from Nepal Border. Husband Ramakrishna plots crime assembling in Dubai 6-7 months back. He paid two lac rupees as the fee of the contract killers. In March this year, the accused were shown the home and other places. On July 12, the supari killer called Ramakrishna over the phone from Gorakhpur after which he came here and strangulated the lady to death. 35-year-old Vishala was found dead at her apartment in Brahmavar on Monday, July 12. She had strangulation marks on her neck.