ಶವದಿಂದ ವಜ್ರದ ಕಿವಿಯೋಲೆ ಎಗರಿಸಿದ ಆಸ್ಪತ್ರೆ ಸೆಕ್ಯುರಿಟಿ ಗಾರ್ಡ್ ! ಕೆಲಸದಿಂದ ವಜಾ, ಕಳ್ಳನ ಹಾಗೇ ಬಿಟ್ಟುಬಿಟ್ಟ ಪೊಲೀಸರು !

23-08-21 02:54 pm       Mangaluru Correspondent   ಕ್ರೈಂ

ಶವಾಗಾರದಲ್ಲಿ ಇಟ್ಟಿದ್ದ ಮೃತದೇಹದಿಂದ ವಜ್ರದ ಕಿವಿಯೋಲೆ ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಅಲ್ಲಿನ ಸೆಕ್ಯುರಿಟಿ ಗಾರ್ಡ್ ವ್ಯಕ್ತಿಯೇ ಆರೋಪಿ ಎನ್ನುವುದು ತಿಳಿದುಬಂದಿದೆ. 

ಮಂಗಳೂರು, ಆಗಸ್ಟ್ 23: ನಗರದ ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿದ್ದ ಮೃತದೇಹದಿಂದ ವಜ್ರದ ಕಿವಿಯೋಲೆ ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಅಲ್ಲಿನ ಸೆಕ್ಯುರಿಟಿ ಗಾರ್ಡ್ ವ್ಯಕ್ತಿಯೇ ಆರೋಪಿ ಎನ್ನುವುದು ತಿಳಿದುಬಂದಿದೆ. 

ಕಿವಿಯೋಲೆ ನಾಪತ್ತೆ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತ ಆಸ್ಪತ್ರೆ ಆಡಳಿತ ಮತ್ತು ಕದ್ರಿ ಪೊಲೀಸರು ಶವಾಗಾರದ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಕಳ್ಳ ಸಿಕ್ಕಿಬಿದ್ದಿದ್ದಾನೆ. ಶವಾಗಾರದ ಸೆಕ್ಯುರಿಟಿ ಗಾರ್ಡ್ ಆಗಿದ್ದ ವ್ಯಕ್ತಿಯೇ ಶವದಿಂದ ಡೈಮಂಡ್ ಕಿವಿಯೋಲೆಯನ್ನು ಕಳವು ಮಾಡಿದ್ದ. ಆಸ್ಪತ್ರೆ ಆಡಳಿತ ಕಮಿಟಿ ಆರೋಪಿಯ‌ನ್ನು ಕೆಲಸದಿಂದ ವಜಾ ಮಾಡಿದ್ದು ಎರಡೂ ಕಿವಿಗಳ ವಜ್ರದ ಕಿವಿಯೋಲೆಯನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. 

ಕಳೆದ ಆಗಸ್ಟ್ 19 ರಂದು ನಗರದ ಸಿಟಿ ಸೆಂಟರ್ ಮಾಲ್ ನಲ್ಲಿ ಸೆಕ್ಯುರಿಟಿ ವಿಭಾಗದಲ್ಲಿ ಮ್ಯಾನೇಜರ್ ಆಗಿದ್ದ ಹರೀಶ್ ಶೆಟ್ಟಿ (42) ಹೃದಯಾಘಾತದಿಂದ ಮೃತಪಟ್ಟಿದ್ದರು. ಕುಂದಾಪುರಕ್ಕೆ ಪತ್ನಿ ಮಕ್ಕಳ ಜೊತೆ ತೆರಳಿದ್ದಾಗ, ಹೃದಯಾಘಾತಕ್ಕೀಡಾಗಿ ಸಾವು ಕಂಡಿದ್ದರು. ಬಳಿಕ ಅಂದು ರಾತ್ರಿ ಶವವನ್ನು ಮಂಗಳೂರಿಗೆ ಕರೆತಂದಿದ್ದು ಬೆಂದೂರ್ ವೆಲ್ ನಲ್ಲಿರು ಕೊಲಾಸೊ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿತ್ತು. 

ಮರುದಿನ ಬೆಳಗ್ಗೆ ಶವ ಸ್ವೀಕರಿಸಿದ ಸಂದರ್ಭದಲ್ಲಿ ಹರೀಶ್ ಶೆಟ್ಟಿ ಕಿವಿಯಲ್ಲಿದ್ದ ವಜ್ರದ ಕಿವಿಯೋಲೆ ಇರಲಿಲ್ಲ. ಶವ ಸ್ವೀಕಾರ ಸಂದರ್ಭದಲ್ಲಿ ದುಃಖದ ನಡುವೆ ಗೆಳೆಯರು ಆ ಬಗ್ಗೆ ಹೆಚ್ಚು ಪ್ರಶ್ನೆ ಮಾಡಿರಲಿಲ್ಲ. ಆದರೆ, ಸೆಕ್ಯುರಿಟಿ ಗಾರ್ಡ್ ನವರನ್ನು ಪ್ರಶ್ನೆ ಮಾಡಿದಾಗ, ನಾವು ತೆಗೆದೇ ಇಲ್ಲವೆಂದು ವಾದಿಸಿದ್ದರು. ಅಲ್ಲದೆ, ಶವ ನೋಡಲು ಬಂದವರು ಯಾರಾದ್ರೂ ತೆಗೆದಿರಬಹುದು, ನಮ್ಮ ಮೇಲೆ ಯಾಕೆ ಆರೋಪ ಮಾಡುತ್ತೀರಿ ಎಂದು  ಹಾರಿಕೆಯ ಉತ್ತರ ಕೊಟ್ಟಿದ್ದರು. 

ಈ ಬಗ್ಗೆ ಹರೀಶ್ ಶೆಟ್ಟಿಯ ಆಪ್ತರು ಕದ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಕುರಿತು ಹೆಡ್ ಲೈನ್ ಕರ್ನಾಟಕ ಮೊದಲ ಬಾರಿಗೆ ಕೊಲಾಸೊ ಆಸ್ಪತ್ರೆಯ ಸೆಕ್ಯುರಿಟಿ ಗಾರ್ಡ್ ಬಗ್ಗೆ ಸಂಶಯಿಸಿದ ಹರೀಶ್ ಶೆಟ್ಟಿ ಆಪ್ತರು ನೀಡಿದ ಮಾಹಿತಿಯಂತೆ ವರದಿ ಮಾಡಿತ್ತು. ವರದಿ ಬಿತ್ತರವಾಗುತ್ತಿದ್ದಂತೆ ಕದ್ರಿ ಪೊಲೀಸರು ಮತ್ತು ಆಸ್ಪತ್ರೆಯ ಆಡಳಿತ ಕಮಿಟಿ, ಶವಾಗಾರದ ಸಿಸಿಟಿವಿಯನ್ನು ಪರಿಶೀಲಿಸಿ ಕಳ್ಳನ ಪತ್ತೆ ಮಾಡಿದ್ದಾರೆ. ಕಳ್ಳನ ಕರಾಮತ್ತು ಹೊರ ಬರುತ್ತಿದ್ದಂತೆ ನಾಪತ್ತೆಯಾಗಿದ್ದ ಡೈಮಂಡ್ ರಿಂಗ್ ಮತ್ತೆ ಸಿಕ್ಕಿದ್ದು ಹರೀಶ್ ಶೆಟ್ಟಿ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಅಲ್ಲದೆ, ಆತನನ್ನು ಸೆಕ್ಯುರಿಟಿ ಗಾರ್ಡ್ ಕೆಲಸದಿಂದ ಆಸ್ಪತ್ರೆ ಆಡಳಿತ ವಜಾ ಮಾಡಿದೆ. 

ಕಿವಿಯೋಲೆ ಸಿಕ್ಕಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಈ ಬಗ್ಗೆ ದೂರು ದಾಖಲಿಸುವುದು ಬೇಡ ಎಂದಿದ್ದರಿಂದ ಕದ್ರಿ ಪೊಲೀಸರು ಎಫ್ಐಆರ್ ದಾಖಲು ಮಾಡಿಲ್ಲ. ಕಳ್ಳತನದ ಆರೋಪಿಯನ್ನು ಪೊಲೀಸರು ಹಾಗೆಯೇ ಬಿಟ್ಟುಬಿಟ್ಟಿದ್ದಾರೆ.

Read: ಕೊಲಾಸೊ ಆಸ್ಪತ್ರೆಯಲ್ಲಿ ಇಟ್ಟಿದ್ದ ಶವದಿಂದಲೇ ಡೈಮಂಡ್ ರಿಂಗ್ ಕಾಣೆ ; ಸೆಕ್ಯುರಿಟಿ ಬಗ್ಗೆ ಸಂಶಯ

Mangalore Diamond ring missing from dead Persons body Harish Shetty in Colaco hospital. Security held for stealing and dismissed from hospital. After police verified the CCTV Footage security Gaurd was held but as no case was filed by harish shetty family he was left away. Harish shetty who was a security manager at city centre died of heart attack.