ಬೈಕಿಗೆ ಡಿಕ್ಕಿಯಾಗಿ ಬಸ್ಸಿಗೆ ಬೆಂಕಿ ಪ್ರಕರಣ ; ಸಿಗ್ನಲ್ ಜಂಪ್ ಮಾಡಿದ್ದ ಬಸ್ ಚಾಲಕ ಬಂಧನ, 15 ದಿನ ಜೈಲಿಗೆ

16-04-22 11:57 am       Mangalore Correspondent   ಕ್ರೈಂ

ಹಂಪನಕಟ್ಟೆ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿ, ಬೈಕ್ ಸವಾರನ ಮೇಲೆ ಡಿಕ್ಕಿಯಾಗಿ ಬೈಕ್ ಜೊತೆಗೇ ನೂರು ಮೀಟರ್ ದೂರಕ್ಕೆ ಹೊತ್ತೊಯ್ದು ಬೆಂಕಿ ಹತ್ತಿಕೊಂಡಿದ್ದ ಘಟನೆ ಸಂಬಂಧಿಸಿ ಪಾಂಡೇಶ್ವರ ಟ್ರಾಫಿಕ್ ಪೊಲೀಸರು ಬಸ್ ಚಾಲಕನನ್ನು ಬಂಧಿಸಿದ್ದಾರೆ.

ಮಂಗಳೂರು, ಎ.16: ಹಂಪನಕಟ್ಟೆ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿ, ಬೈಕ್ ಸವಾರನ ಮೇಲೆ ಡಿಕ್ಕಿಯಾಗಿ ಬೈಕ್ ಜೊತೆಗೇ ನೂರು ಮೀಟರ್ ದೂರಕ್ಕೆ ಹೊತ್ತೊಯ್ದು ಬೆಂಕಿ ಹತ್ತಿಕೊಂಡಿದ್ದ ಘಟನೆ ಸಂಬಂಧಿಸಿ ಪಾಂಡೇಶ್ವರ ಟ್ರಾಫಿಕ್ ಪೊಲೀಸರು ಬಸ್ ಚಾಲಕನನ್ನು ಬಂಧಿಸಿದ್ದಾರೆ.

ಎಪ್ರಿಲ್ 8ರಂದು ಮಧ್ಯಾಹ್ನ ಘಟನೆ ನಡೆದಿತ್ತು. ಕೆಎಸ್ ರಾವ್ ರಸ್ತೆಯಿಂದ ಮಿಲಾಗ್ರಿಸ್ ಕಡೆಗೆ ತೆರಳುತ್ತಿದ್ದ ಬೈಕ್ ಮೇಲೆ ಬಸ್ ಡಿಕ್ಕಿಯಾಗಿತ್ತು. ಅಲ್ಲದೆ, ಬಸ್ಸಿಗೆ ಬೆಂಕಿ ಹತ್ತಿಕೊಂಡರೂ, ಪ್ರಯಾಣಿಕರಿದ್ದ ಬಸ್ಸನ್ನು ಚಾಲಕ ಸ್ಟೇಟ್ ಬ್ಯಾಂಕಿನತ್ತ ಚಲಾಯಿಸಿದ್ದು ನೂರು ಮೀಟರ್ ದೂರದಲ್ಲಿ ನಿಲ್ಲಿಸಿದ್ದಾನೆ. ಅಷ್ಟರಲ್ಲಿ ಬೈಕ್ ಘರ್ಷಣೆಯಿಂದಾಗಿ ಬಸ್ಸಿಗೆ ಬೆಂಕಿ ಹತ್ತಿಕೊಂಡಿತ್ತು.

ಆನಂತರ ಬೆಂಕಿ ಸಂಪೂರ್ಣ ಹತ್ತಿಕೊಂಡಿದ್ದು ಬಸ್ 75 ಶೇಕಡಾ ಸುಟ್ಟು ಹೋಗಿತ್ತು. ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆ ಬಗ್ಗೆ ಪ್ರಕರಣ ದಾಖಲಿಸಿದ್ದ ಪೊಲೀಸರು ಇದೀಗ ಬಸ್ ಚಾಲಕ ಬಿಜು ಮೋನುವನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಎ.26ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

45 ನಂಬರಿನ ಬಸ್ ಜ್ಯೋತಿ ಕಡೆಯಿಂದ ಸ್ಟೇಟ್ ಬ್ಯಾಂಕಿನತ್ತ ತೆರಳುತ್ತಿದ್ದು ಹಂಪನಕಟ್ಟೆ ವೃತ್ತದಲ್ಲಿ ಟ್ರಾಫಿಕ್ ರೆಡ್ ಸಿಗ್ನಲ್ ಬೀಳುತ್ತಿರುವುದನ್ನು ಕಂಡು ವೇಗವಾಗಿ ಧಾವಿಸಿ ಹೋಗಿದ್ದ. ಈ ವೇಳೆ, ಬೈಕನ್ನು ಗಮನಿಸದೆ ಬಸ್ಸನ್ನು ಚಲಾಯಿಸಿದ್ದರಿಂದ ಅಪಘಾತ ಆಗಿತ್ತು. ಬೈಕ್ ಸವಾರ ದಿಲೋನ್ ಅದೃಷ್ಟವಶಾತ್ ಬೈಕಿನಿಂದ ಹಿಂಭಾಗಕ್ಕೆ ಎಸೆಯಲ್ಪಟ್ಟಿದ್ದು ಕಾಲಿನ ಭಾಗಕ್ಕೆ ಮಾತ್ರ ಗಾಯಗೊಂಡಿದ್ದ. ಆದರೆ ಬೈಕ್ ಬಸ್ಸಿನಡಿ ಸಿಲುಕಿಕೊಂಡು ಅದರ ಜೊತೆಗೇ ನೂರು ಮೀಟರ್ ಉದ್ದಕ್ಕೆ ರಸ್ತೆಗೆ ಘರ್ಷಿಸುತ್ತಾ ಚಲಿಸಿತ್ತು. ಆದರೂ ಬಸ್ ಚಾಲಕ ಬಸ್ಸನ್ನು ನಿಲ್ಲಿಸದೇ ಇದ್ದುದು ಪ್ರಯಾಣಿಕರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.

ಹಂಪನಕಟ್ಟೆ ; ಬೈಕ್ ಡಿಕ್ಕಿಯಿಂದ ಹೊತ್ತಿದ ಕಿಡಿ, ಖಾಸಗಿ ಬಸ್ ರಸ್ತೆ ಮಧ್ಯದಲ್ಲೇ ಸುಟ್ಟು ಭಸ್ಮ ! ಬಿಸಿಲ ಝಳದ ಮಧ್ಯೆ ಧಗ ಧಗ ಉರಿದ ಬೆಂಕಿ

Traffic East police arrested the driver, who jumped red signal, crashed on to a bike which caused fire and burnt the bus, putting the lives of bike rider as well as passengers in the bus in danger, on April 8, at Hampankatta in the city.