ಕೆಜೆ ಹಳ್ಳಿ ಠಾಣೆಯಲ್ಲಿ 19 ಮಂದಿ ವಿರುದ್ಧ ಎಫ್ಐಆರ್ ; ರಾಜ್ಯದ ಎಂಟು ಜಿಲ್ಲೆಗಳಲ್ಲಿ ಪಿಎಫ್ಐ ನಾಯಕರಿಗೆ ಶಾಕ್, ಹತ್ತಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ

22-09-22 05:43 pm       Bangalore Correspondent   ಕರ್ನಾಟಕ

ಎನ್ಐಎ ಅಧಿಕಾರಿಗಳು ಮತ್ತು ರಾಜ್ಯ ಪೊಲೀಸರು ಜಂಟಿಯಾಗಿ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಕೆಜೆ ಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಾದ್ಯಂತ 19 ಮಂದಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆಂದು ಗೊತ್ತಾಗಿದೆ.

ಬೆಂಗಳೂರು, ಸೆ.22: ಎನ್ಐಎ ಅಧಿಕಾರಿಗಳು ಮತ್ತು ರಾಜ್ಯ ಪೊಲೀಸರು ಜಂಟಿಯಾಗಿ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಕೆಜೆ ಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಾದ್ಯಂತ 19 ಮಂದಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆಂದು ಗೊತ್ತಾಗಿದೆ.

ಕೆಜೆ ಹಳ್ಳಿ ಠಾಣೆಯಲ್ಲಿ ಏಂಟಿ ಟೆರರಿಸ್ಟ್ ಸ್ಕ್ವಾಡ್ ಎಸಿಪಿ ದರ್ಜೆಯ ಅಧಿಕಾರಿ ದೂರಿನಂತೆ ಎಫ್ಐಆರ್ ದಾಖಲಾಗಿದ್ದು, ರಾಜ್ಯಾದ್ಯಂತ ಪಿಎಫ್ಐನಲ್ಲಿ ಸಕ್ರಿಯವಾಗಿರುವ 19 ನಾಯಕರ ವಿರುದ್ಧ ಕೇಸು ದಾಖಲಿಸಿದ್ದರು. ಪಿಎಫ್ಐ ನಾಯಕರು ಯುವಕರನ್ನು ದೇಶ ವಿರೋಧಿ ಕೃತ್ಯಗಳಿಗೆ ಪ್ರಚೋದಿಸುತ್ತಿದ್ದಾರೆಂದು ಆರೋಪಿಸಿ ಎಫ್ಐಆರ್ ದಾಖಲು ಮಾಡಲಾಗಿದೆ. ಇದೇ ವೇಳೆ, ಎನ್ಐಎ ಅಧಿಕಾರಿಗಳು ದೇಶಾದ್ಯಂತ ಟೆರರ್ ಫಂಡಿಂಗ್ ವಿಚಾರದಲ್ಲಿ ಪಿಎಫ್ಐ ಸಂಘಟನೆಯ ಚಟುವಟಿಕೆ ಮೇಲೆ ನಿಗಾ ಇಟ್ಟಿದ್ದಾರೆ. ದೇಶ ವಿರೋಧಿ ಕೃತ್ಯಗಳಿಗಾಗಿ ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆಂಬ ಆರೋಪದ ಬಗ್ಗೆ ಕೇರಳ, ತಮಿಳುನಾಡು, ಕರ್ನಾಟಕ ಸೇರಿದಂತೆ ದೇಶದ ಹತ್ತು ರಾಜ್ಯಗಳಲ್ಲಿ ಪಿಎಫ್ಐ ಕಚೇರಿ, ನಾಯಕರ ಮನೆಗಳಿಗೆ ದಾಳಿ ನಡೆಸಿದ್ದಾರೆ. ಇವೆರಡೂ ಪ್ರತ್ಯೇಕ ಪ್ರಕರಣಗಳಾಗಿದ್ದು, ಕರ್ನಾಟಕದಲ್ಲಿ ರಾಜ್ಯ ಪೊಲೀಸರು ಮತ್ತು ಎನ್ಐಎ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದಾರೆ. ಹೀಗಾಗಿ ರಾಜ್ಯದ ವಿವಿಧೆಡೆ ಏಕಕಾಲದಲ್ಲಿ ದಾಳಿ ನಡೆದಿದ್ದರೂ, ಎಲ್ಲ ಕಡೆಯೂ ಎನ್ಐಎ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿಲ್ಲ. ಆದರೆ ಒಂದೇ ಸಮಯಕ್ಕೆ ಕಾರ್ಯಾಚರಣೆ ನಡೆಸಿದ್ದು ಪಿಎಫ್ಐ ನಾಯಕರಿಗೆ ಶಾಕ್ ಆಗುವಂತಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಐವರು ಪೊಲೀಸ್ ವಶಕ್ಕೆ

ಕೆಜೆ ಹಳ್ಳಿ ಠಾಣೆಯಲ್ಲಿ ದಾಖಲಾದ ಎಫ್ಐಆರ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಮಂದಿಯ ಹೆಸರಿದೆ. ಈ ಪೈಕಿ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಿಎಫ್ಐ ರಾಜ್ಯ ಕಾರ್ಯದರ್ಶಿ ಎಕೆ ಅಶ್ರಫ್, ನವಾಜ್ ಕಾವೂರು, ಮೊಯಿದ್ದೀನ್ ಹಳೆಯಂಗಡಿ ಎಂಬವರನ್ನು ಮಂಗಳೂರಿನಲ್ಲಿ ವಶಕ್ಕೆ ಪಡೆಯಲಾಗಿದೆ. ಪುತ್ತೂರಿನಲ್ಲಿ ಅಬ್ದುಲ್ ಖಾದರ್, ವಿಟ್ಲದಲ್ಲಿ ಮಹಮ್ಮದ್ ತಪ್ಸಿರ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತರ ಮೂವರು ದಾಳಿ ಕಾರ್ಯಾಚರಣೆ ತಿಳಿದು ತಪ್ಪಿಸಿಕೊಂಡಿದ್ದಾರೆ. ವಶಕ್ಕೆ ಪಡೆದವರನ್ನು ಬೆಂಗಳೂರಿಗೆ ಕರೆದೊಯ್ದು ವಿಚಾರಣೆ ನಡೆಸಲಿದ್ದು, ಆನಂತರ ಬಂಧನ ತೋರಿಸಲಿದ್ದಾರೆ.

ಮೈಸೂರಿನಲ್ಲಿ ಮೌಲಾನಾ ಕಲೀಮುಲ್ಲಾ ಬಂಧನ

ಉಳಿದಂತೆ ಶಿವಮೊಗ್ಗ, ದಾವಣಗೆರೆ, ಕೊಪ್ಪಳ, ಕಲಬುರ್ಗಿ, ಮೈಸೂರು, ಶಿರಸಿಯಲ್ಲೂ ಎನ್ಐಎ ಮತ್ತು ಸ್ಥಳೀಯ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಎಲ್ಲ ಕಡೆಯೂ ನಸುಕಿನ 3 ಗಂಟೆ ವೇಳೆಗೆ ದಾಳಿ ನಡೆಸಿದ್ದು, ಪಿಎಫ್ಐ ಕಚೇರಿ ಮತ್ತು ನಾಯಕರ ಮನೆಗಳಿಗೆ ತೆರಳಿ ವಶಕ್ಕೆ ಪಡೆಯುವ ಕೆಲಸ ಮಾಡಿದ್ದಾರೆ. ಮೈಸೂರಿನಲ್ಲಿ ಪಿಎಫ್ಐ ಮಾಜಿ ಜಿಲ್ಲಾಧ್ಯಕ್ಷ ಮೌಲಾನಾ ಮಹಮ್ಮದ್ ಕಲೀಮುಲ್ಲಾ ಎಂಬವರನ್ನು ನಸುಕಿನಲ್ಲಿ ವಶಕ್ಕೆ ಪಡೆದಿದ್ದಾರೆ. ಕಲಿಮುಲ್ಲಾರನ್ನು ವಶಕ್ಕೆ ಪಡೆದಿರುವುದು ತಿಳಿಯುತ್ತಿದ್ದಂತೆ ಪೊಲೀಸ್ ಜೀಪನ್ನು ತಡೆದು ಕಾರ್ಯಕರ್ತರು ರಸ್ತೆ ತಡೆ ನಡೆಸಿದ್ದಾರೆ. ಭಾರೀ ಬಂದೋಬಸ್ತ್ ಇದ್ದುದರಿಂದ ಜೀಪು ನೇರವಾಗಿ ಕಲೀಮುಲ್ಲಾನನ್ನು ಬೆಂಗಳೂರಿನತ್ತ ಕರೆದೊಯ್ದಿದೆ. ಆನಂತರ ಮೈಸೂರಿನ ಸಿಸಿಬಿ ಕಚೇರಿ ಎದುರು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಪಿಎಫ್ಐ ರಾಜ್ಯ ವಲಯ ಅಧ್ಯಕ್ಷ ಶಾಹಿದ್ ಖಾನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಾಹಿದ್ ಖಾನ್, ಸ್ಥಳೀಯವಾಗಿ ಮಾಜಿ ರೌಡಿ ಶೀಟರ್ ಆಗಿದ್ದು ಶಿವಮೊಗ್ಗದಲ್ಲಿ ಹನ್ನೊಂದು ಕೇಸು ಎದುರಿಸುತ್ತಿದ್ದಾನೆ. ಅಲ್ಲದೆ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಹಾವೇರಿ ಜಿಲ್ಲೆಯಲ್ಲಿ ಪಿಎಫ್ಐ ಸಂಘಟನೆ ಪ್ರಮುಖನಾಗಿದ್ದು, ಐದು ಜಿಲ್ಲೆಗಳ ಮುಖ್ಯಸ್ಥನಾಗಿದ್ದ. ಶಾಹಿದ್ ಖಾನ್ ಮನೆಯಲ್ಲಿ 20 ಲಕ್ಷಕ್ಕೂ ಅಧಿಕ ನಗದು, ಏಳು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಶಾಹಿದ್ ಖಾನ್ ಮನೆಗೆ ತೆರಳಿದ್ದಾಗ ಆತ ಇರಲಿಲ್ಲ. ಆನಂತರ, ಕೇರಳದಿಂದ ಕರ್ನಾಟಕಕ್ಕೆ ಬರುತ್ತಿದ್ದಾನೆಂಬ ಮಾಹಿತಿ ಪಡೆದ ಪೊಲೀಸರು ದಾರಿ ಮಧ್ಯದಲ್ಲೇ ಬಂಧಿಸಿದ್ದಾರೆ.

ಶಿರಸಿಯಲ್ಲಿ ಅಣ್ಣ- ತಮ್ಮನ ವಿರುದ್ಧ ಕೇಸು

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಟಿಪ್ಪು ನಗರ ಎಂಬಲ್ಲಿಗೆ ದಾಳಿ ನಡೆಸಿದ ಪೊಲೀಸರು ಎಸ್ಡಿಪಿಐ ಮುಖಂಡ ಅಜೀಜ್ ಅಬ್ದುಲ್ ಶುಕೂರ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಈತನ ಸೋದರ ಮೌಸೀನ್ ಅಬ್ದುಲ್ ಶುಕೂರ್ ಪಿಎಫ್ಐ ಪ್ರಾಂತೀಯ ಅಧ್ಯಕ್ಷನಾಗಿದ್ದು ಪೊಲೀಸರ ಹಿಟ್ ಲಿಸ್ಟ್ ನಲ್ಲಿದ್ದ. ಆತನ ಮನೆಗೆ ದಾಳಿ ನಡೆಸಿದ ವೇಳೆ ಮೌಸೀನ್ ಇರಲಿಲ್ಲ. ಅಜೀಜ್ ಮನೆಯಿಂದ ಲ್ಯಾಪ್ ಟಾಪ್, ಎರಡು ಮೊಬೈಲ್, ಒಂದು ಪುಸ್ತಕ, ಸಿಡಿ ಜಪ್ತಿ ಮಾಡಿದ್ದಾರೆ. ಮೌಸೀನ್ ಕೂಡ ಕೇರಳಕ್ಕೆ ತೆರಳಿದ್ದಾನೆಂದು ಗೊತ್ತಾಗಿದ್ದು ಪೊಲೀಸರು ಬಲೆ ಬೀಸಿದ್ದಾರೆ.

ಕಲಬುರ್ಗಿಯಲ್ಲಿ ಪಿಎಫ್ಐ ಪ್ರಭಾವಿಗಳಿಗೆ ಶಾಕ್

ಕಲಬುರ್ಗಿ ಜಿಲ್ಲೆಯಲ್ಲಿ ಪಿಎಫ್ಐ ಜಿಲ್ಲಾಧ್ಯಕ್ಷ ಶೇಖ್ ಇಜಾಜ್ ಆಲಿ ಮತ್ತು ಪಿಎಫ್ಐ ರಾಜ್ಯ ಖಜಾಂಚಿ ಶಾಹೀದ್ ನಾಸೀರ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಲಬುರ್ಗಿ ನಗರದ ಮೆಹಬೂಬ ನಗರದಲ್ಲಿರುವ ಇಜಾಜ್ ಆಲಿ ಮನೆಗೆ ನಸುಕಿನ 3.30ರ ವೇಳೆಗೆ ಎನ್ಐಎ ಮತ್ತು ಸ್ಥಳೀಯ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದು, ಈ ವೇಳೆ 14 ಲಕ್ಷ ನಗದು ಪತ್ತೆಯಾಗಿದೆ. ಅಲ್ಲದೆ, 17 ಹೊಸ ಮೊಬೈಲ್, ಒಂದು ಟ್ಯಾಬ್, ಪಿಎಫ್ಐಗೆ ಸಂಬಂಧಿಸಿದ ದಾಖಲೆ ಪುಸ್ತಕಗಳನ್ನು ವಶಕ್ಕೆ ಪಡೆದಿದೆ. ಶೇಖ್ ಇಜಾಜ್ ಆಲಿಯನ್ನು ಆನಂತರ ಪೊಲೀಸರು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಶಾಹೀದ್ ನಾಸಿರ್ ಅವರನ್ನು ಕೇರಳದಿಂದ ಕರ್ನಾಟಕಕ್ಕೆ ಬರುತ್ತಿದ್ದ ದಾರಿಯಲ್ಲೇ ತಡೆದು ವಶಕ್ಕೆ ಪಡೆದಿದ್ದಾರೆಂದು ಮಾಹಿತಿ ಇದೆ. ಪೊಲೀಸರ ಬಂಧನ ಮಾಹಿತಿ ತಿಳಿಯುತ್ತಲೇ ಕಲಬುರ್ಗಿ ನಗರದಲ್ಲಿ ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ದಾವಣಗೆರೆಯಲ್ಲಿ ಪಿಎಫ್ಐ ಮಾಜಿ ಜಿಲ್ಲಾಧ್ಯಕ್ಷ ಇಮಾಮುದ್ದೀನ್ ಮತ್ತು ಹರಿಹರದಲ್ಲಿ ಅಬು ತಾಹಿರ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಜ್ಯಾದ್ಯಂತ ಏಕಕಾಲದಲ್ಲಿ ಪಿಎಫ್ಐ ನಾಯಕರನ್ನು ಗುರಿಯಾಗಿಸ್ಕೊಂಡು ದಾಳಿ ನಡೆಸಲಾಗಿದ್ದು, ಪೊಲೀಸರು ಮತ್ತು ಎನ್ಐಎ ಅಧಿಕಾರಿಗಳ ಜಂಟಿ ಕಾರ್ಯಾಚರಣೆ ಶಾಕಿಂಗ್ ನೀಡಿದೆ. ಎಲ್ಲ ಕಡೆಯೂ ಸ್ಥಳೀಯ ಪೊಲೀಸರು ಮತ್ತು ಮೀಸಲು ಪೊಲೀಸ್ ಪಡೆಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಮಂಗಳೂರಿನ ಹಲವೆಡೆ ಎನ್ಐಎ ದಾಳಿ ; ಎಸ್ಡಿಪಿಐ, ಪಿಎಫ್ಐ ಕಚೇರಿ, ನಾಯಕರ ಮನೆಗಳಲ್ಲಿ ಶೋಧ, ಪ್ರತಿಭಟನೆಗೈದ ನೂರಕ್ಕೂ ಹೆಚ್ಚು ಮಂದಿ ಪೊಲೀಸರ ವಶಕ್ಕೆ

ಕೇರಳ, ತಮಿಳುನಾಡು ಸೇರಿ ಹತ್ತು ರಾಜ್ಯಗಳಲ್ಲಿ ಎನ್ಐಎ ಕಾರ್ಯಾಚರಣೆ, ಬೆಂಗಳೂರಿನಲ್ಲಿ ಪಿಎಫ್ಐ ನಾಯಕರು ವಶಕ್ಕೆ

ಪಿಎಫ್ಐ ಮುಖಂಡ ಎಕೆ ಅಶ್ರಫ್ ಸೇರಿ ಮೂವರು ಎನ್ಐಎ ವಶಕ್ಕೆ, ಮಂಗಳೂರಿನಲ್ಲಿ ದಾಳಿ ಕಾರ್ಯಾಚರಣೆ ಅಂತ್ಯ

The National Investigation Agency (NIA) on Thursday morning launched a massive search operation against groups, including the Popular Front of India (PFI), and individuals allegedly supporting terrorists, in Karnataka's Bengaluru, Mangaluru, Shivamogga and some other districts as part of its nationwide operation. Nearly 100 PFI activists were detained in several parts of the country for allegedly supporting terrorists, officials said. The raids, taking place mainly in South India, was termed by the NIA as the "largest ever" investigation process "till date".