ಶತಮಾನದ ಸಂತ, ವಿಶ್ವವಿಖ್ಯಾತ ಪ್ರವಚನ ವಾಗ್ಮಿ , ನಡೆದಾಡುವ ದೇವರು ಸಿದ್ದೇಶ್ವರ ಶ್ರೀ ಅಸ್ತಂಗತ

03-01-23 01:31 am       HK News Desk   ಕರ್ನಾಟಕ

ಪ್ರವಚನ ಮೂಲಕ ವಿಶ್ವಕ್ಕೆ ಜ್ಞಾನ ಪ್ರಸಾರ ಮಾಡಿ ಶತಮಾನದ ಸಂತರೆನಿಸಿಕೊಂಡ, ನಡೆದಾಡುವ ದೇವರು, ಸರಳತೆಯ ಸಾಕಾರಮೂರ್ತಿ, ನುಡಿದಂತೆ ನಡೆದ ಶರಣ ವಿಜಯಪುರದ ಜ್ಞಾನಯೋಗಾಶ್ರಮದ ಪರಮಪೂಜ್ಯ ಸಿದ್ದೇಶ್ವರ ಮಹಾಸ್ವಾಮೀಜಿ (82) ಸೋಮವಾರ ಸಂಜೆ 6.05ಗಂಟೆಗೆ ಇಹಲೋಕ ತ್ಯಜಿಸಿದರು.

ವಿಜಯಪುರ: ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು (82) ಸೋಮವಾರ ಇಹಲೋಕ ತ್ಯಜಿಸಿದರು. ಕೆಲವು ದಿನಗಳಿಂದ ಸಿದ್ದೇಶ್ವರ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಪ್ರಕಟಿಸಿದರು.

ವಿಜಯಪುರ ನಗರದ ಜ್ಞಾನಯೋಗಾಶ್ರಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಜೆ 6 ಗಂಟೆಗೆ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. ನಸುಕಿನ ಜಾವ 4 ಗಂಟೆಯವರೆಗೆ ಜ್ಞಾನಯೋಗಾಶ್ರಮದ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನ 3ರ ವರೆಗೆ ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು. ಸಂಜೆ 5ರ ನಂತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿಸಿದ್ದಾರೆ.

ಸಮಾಧಿ ಆಗಬಾರದು, ಗುಡಿ ಆಗಬಾರದು, ಪೂಜೆ, ಪುನಸ್ಕಾರಗಳು ಆಗಬಾರದು ಎಂದು ವಿಲ್‌ನಲ್ಲಿ ಬರೆದಿದ್ದಾರೆ. ಅವರ ಆಶಯದಂತೆ ಅಂತ್ಯ ಸಂಸ್ಕಾರ ನಡೆಯಲಿದೆ. 'ನಿಸರ್ಗದಿಂದ ಬಂದವನು, ನಿಸರ್ಗದಲ್ಲೇ ಲೀನವಾಗಬೇಕು' ಎಂದು ಅವರ ಆಶಯವಾಗಿತ್ತು. ಜ್ಞಾನ ದಾಸೋಹ ನಿರಂತರವಾಗಿ ಪ್ರವಚನಗಳ ಮೂಲಕ ನಡೆಸಿದ್ದರು. ತತ್ವಜ್ಞಾನ ಮತ್ತು ದೇಶೀಯ, ಪಾಶ್ಚಾತ್ಯ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದವರು ಹಾಗೂ ಅಧ್ಯಯನ ನಡೆಸಿದ್ದರು. ಅಧ್ಯಾತ್ಮಕ ಮತ್ತು ಸಾಹಿತ್ಯ ಎರಡೂ ಕ್ಷೇತ್ರಗಳಲ್ಲಿ ನಿರಂತರ ಆಸಕ್ತಿ ಹೊಂದಿದ್ದರು. ಇತರರ ಏಳಿಗೆಗಾಗಿ ನಿರಂತರವಾಗಿ ಶ್ರಮಿಸಿದ ಸಿದ್ದೇಶ್ವರ ಸ್ವಾಮೀಜಿ ಅವರ ಸೇವೆಗಳು ಸದಾ ನೆನಪಿನಲ್ಲಿ ಉಳಿಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ.

ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದೆ. ಶ್ರೀಗಳ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ನಾಡಿನಾದ್ಯಂತ ಇರುವ ಶ್ರೀಗಳ ಭಕ್ತ ಸಮೂಹಕ್ಕೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

'ಎಂದಿಗೂ ಸತ್ಕಾರ ಸ್ವೀಕರಿಸಲಿಲ್ಲ, ಪ್ರಶಸ್ತಿಗಾಗಿ ಹಂಬಲಿಸಿಲ್ಲ. ಜೇಬಿಲ್ಲದ ಎರಡು ಜತೆ ಬಟ್ಟೆಯಲ್ಲಿಯೇ ಹಣ ಮುಟ್ಟದೆ ಮಾದರಿ ಜೀವನ ನಡೆಸಿದವರು. ಇಂತಹ ಶ್ರೇಷ್ಠ ಸಂತ ಬೇಗ ಗುಣಮುಖರಾಗಿ ನಮ್ಮೆಲ್ಲರಿಗೆ ಮಾರ್ಗದರ್ಶನ ನೀಡಲಿ' ಎಂದು ಭಕ್ತರು, ವಿದ್ಯಾರ್ಥಿಗಳು ನಿರಂತರ ಪ್ರಾರ್ಥನೆ ಸಲ್ಲಿಸಿದ್ದರು.

ಅಲ್ಲದೆ ಜಿಲ್ಲೆಯಲ್ಲಿರುವ ಎಲ್ಲಾ ಶಾಲಾ ಕಾಲೇಜುಗಳಿಗೆ ಜನವರಿ 03ರಂದು ಮಂಗಳವಾರ ರಜೆಯನ್ನು ಘೋಷಿಸಲಾಗಿದೆ.

Siddheshwar Swamiji of Jnanayogashram, Vijayapura passed away on Monday. State honour will be provided for the last rites of Siddeshwara Swamiji. Holiday has been declared for schools and colleges in Vijayapura on Tuesday (3rd January): Karnataka govt