ಶಿವಮೊಗ್ಗದಲ್ಲಿ ಹೋರಿ ಓಡಿಸುವ ಸ್ಪರ್ಧೆ ; ಗೂಳಿ ತಿವಿತಕ್ಕೊಳಗಾಗಿ ಇಬ್ಬರು ಯುವಕರು ಸಾವು

16-01-23 10:25 pm       HK News Desk   ಕರ್ನಾಟಕ

ಹೋರಿ ಓಡಿಸುವ ಸ್ಪರ್ಧೆಯನ್ನು ವೀಕ್ಷಿಸಲು ಬಂದಿದ್ದ ಇಬ್ಬರು ಯುವಕರು ಹೋರಿ ತಿವಿತಕ್ಕೊಳಗಾಗಿ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ನಡೆದಿದೆ.

ಶಿವಮೊಗ್ಗ, ಜ.16: ಹೋರಿ ಓಡಿಸುವ ಸ್ಪರ್ಧೆಯನ್ನು ವೀಕ್ಷಿಸಲು ಬಂದಿದ್ದ ಇಬ್ಬರು ಯುವಕರು ಹೋರಿ ತಿವಿತಕ್ಕೊಳಗಾಗಿ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ನಡೆದಿದೆ.

ಶಿಕಾರಿಪುರ ತಾಲೂಕಿನ ಮಳೂರು ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹೋರಿ ಓಡಿಸುವ ಸ್ಪರ್ಧೆ ನಡೆಯುತ್ತಿದ್ದಾಗ ವೀಕ್ಷಣೆಗೆ ಬಂದಿದ್ದ ರಂಗನಾಥ್ (24) ಹೋರಿ ತಿವಿತಕ್ಕೊಳಗಾಗಿ ಗಾಯಗೊಂಡಿದ್ದರು. ಇದೇ ಸಂದರ್ಭದಲ್ಲಿ ಶಿವಮೊಗ್ಗ ತಾಲೂಕಿನ ಕೊನಗವಳ್ಳಿಯಲ್ಲಿ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಆಲ್ಕೊಳದ ಲೋಕೇಶ್(31) ಎಂಬವರು ಗಾಯಗೊಂಡಿದ್ದು, ಇಬ್ಬರು ಕೂಡ ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮಳೂರು ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡೆಯುತ್ತಿದ್ದಾಗ ರಂಗನಾಥ್ ಅದನ್ನು ನೋಡಲೆಂದು ಸ್ಥಳಕ್ಕೆ ಬಂದಿದ್ದರು. ಈ ವೇಳೆ, ಹೋರಿಯು ಏಕಾಏಕಿ ನುಗ್ಗಿ ಬಂದು ಯುವಕರನ್ನು ತಿವಿದು ಹಾಕಿದೆ. ರಂಗನಾಥ್ ಗಂಭೀರ ಗಾಯಗೊಂಡಿದ್ದು ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೊನಗವಳ್ಳಿಯಲ್ಲೂ ಲೋಕೇಶ್ ಸೇರಿದಂತೆ ಜನರತ್ತ ಗೂಳಿ ನುಗ್ಗಿ ಬಂದಿದ್ದು, ತಿವಿದು ಹಾಕಿದೆ. ಈ ವೇಳೆ, ಲೋಕೇಶ್ ಗಂಭೀರ ಗಾಯಗೊಂಡು ಮೆಗ್ಗಾನ್ ಆಸ್ಪತ್ರೆ ಸೇರಿದ್ದರು. ಅವರಿಬ್ಬರು ಕೂಡ ಸೋಮವಾರ ಸಾವು ಕಂಡಿದ್ದಾರೆ.

ಶಿವಮೊಗ್ಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಂಕ್ರಾಂತಿ, ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಹೋರಿ ಓಡಿಸುವ ಸ್ಪರ್ಧೆ ನಡೆಯುತ್ತದೆ. ತರಬೇತಿ ಮಾಡಲ್ಪಟ್ಟಿರುವ ಹೋರಿಯನ್ನು ಓಡಿಸುತ್ತಾ ಮುನ್ನಡೆಯುವಾಗ ಉದ್ದಕ್ಕೂ ನಿಲ್ಲುವ ಯುವಕರು ಅದನ್ನು ಹಿಡಿಯಲು ಯತ್ನಿಸುತ್ತಾರೆ. ಹೋರಿಯನ್ನು ಹಿಡಿದು ನಿಲ್ಲಿಸುವ ಯುವಕರಿಗೆ ನಗದು ಬಹುಮಾನ ಇರುತ್ತದೆ. ಶಿವಮೊಗ್ಗದಲ್ಲಿ ನಡೆದ ಘಟನೆಯಲ್ಲಿ ಇತರ ಆರು ಮಂದಿಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಸ್ಪರ್ಧೆ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Shivamogga Hori habba, two dead.