Udupi college Video, BJP worker Shakunthala arrested: ಮುಖ್ಯಮಂತ್ರಿಗಳ ಕುಟುಂಬ ಕುರಿತು ಟ್ವೀಟ್‌ ಮಾಡಿ ತಪ್ಪು ಮಾಡಿದೆ ; ಬಂಧನವಾಗಿದ್ದ ಬಿಜೆಪಿ ಕಾರ್ಯಕರ್ತೆ ತಪ್ಪೊಪ್ಪಿಗೆ ಬಳಿಕ ಬಿಡುಗಡೆ 

28-07-23 10:35 pm       Bangalore Correspondent   ಕರ್ನಾಟಕ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕುಟುಂಬ ಸದಸ್ಯರ ಕುರಿತು ಅವಹೇಳನಕಾರಿ ಟ್ವೀಟ್‌ ಮಾಡಿದ್ದ ಬಿಜೆಪಿ ಕಾರ್ಯಕರ್ತೆ ಶಕುಂತಲ ಅವರನ್ನು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದರು.

ಬೆಂಗಳೂರು, ಜುಲೈ 28: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕುಟುಂಬ ಸದಸ್ಯರ ಕುರಿತು ಅವಹೇಳನಕಾರಿ ಟ್ವೀಟ್‌ ಮಾಡಿದ್ದ ಬಿಜೆಪಿ ಕಾರ್ಯಕರ್ತೆ ಶಕುಂತಲ ಅವರನ್ನು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದರು. ಸಂಜೆ ವೇಳೆಗೆ ತಪ್ಪೊಪ್ಪಿಗೆ ನೀಡಿದ ಕಾರಣ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವಿಡಿಯೋ ರೆಕಾರ್ಡ್‌ ಮಾಡಿದ ಆರೋಪ ವಿಚಾರ ಆಡಳಿತಾರೂಢ ಕಾಂಗ್ರೆಸ್‌ ಹಾಗೂ ಪ್ರತಿಪಕ್ಷ ಬಿಜೆಪಿ ನಾಯಕರ ನಡುವೆ ರಾಜಕೀಯ ವಾಕ್ಸಮರ ನಡೆಯುತ್ತಿದೆ. '' ಕಾಂಗ್ರೆಸ್‌, ಮಕ್ಕಳಾಟವನ್ನು ರಾಜಕೀಯದ ಕಳ್ಳಾಟಕ್ಕೆ ಬಳಸಿಕೊಳ್ಳಲು ಬಿಜೆಪಿ ಉಪ್ಪು, ಖಾರ, ಮಸಾಲೆ ಬೆರೆಸುತ್ತಿದೆ,'' ಎಂದು ಟ್ವೀಟ್‌ ಮಾಡಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ರೀ ಟ್ವೀಟ್‌ ಮಾಡಿದ್ದ ಶಕುಂತಲಾ, '' ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ, ಸೊಸೆ ವಿಡಿಯೊ ಮಾಡಿದ್ದರೆ ಮಕ್ಕಳಾಟ ಎಂದು ಒಪ್ಕೋತಿರಾ '' ಎಂದು ಟ್ವೀಟ್‌ ಹಾಕಿದ್ದರು.

ಈ ಬಗ್ಗೆ ಕಾಂಗ್ರೆಸ್‌ ಕಾರ್ಯಕರ್ತ ಹನುಮಂತರಾಯ ಎಂಬುವವರು ನೀಡಿದ ದೂರಿನ ಅನ್ವಯ ಮಹಿಳೆಯರ ಘನತೆಗೆ ಉದ್ದೇಶಪೂರ್ವಕವಾಗಿ ಧಕ್ಕೆ ಉಂಟು ಮಾಡಿದ ಆರೋಪ ಸಂಬಂಧ ಶಕುಂತಲಾ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಶುಕ್ರವಾರ ತುಮಕೂರಿಗೆ ತೆರಳಿದ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯ ತನಿಖಾ ತಂಡ ಆರೋಪಿ ಶಕುಂತಲಾ ಅವರನ್ನು ಬಂಧಿಸಿ ಕರೆತರಲಾಗಿತ್ತು. ಆರೋಪಿ ಹೇಳಿಕೆ ದಾಖಲಿಸಿಕೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಆರೋಪಿ ನ್ಯಾಯಾಲಯದಲ್ಲಿ ಜಾಮೀನು ಪಡೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಿಜೆಪಿ ಕಾರ್ಯಕರ್ತೆ ತಪ್ಪೊಪ್ಪಿಗೆ ಹೇಳಿಕೆ

''ಮುಖ್ಯಮಂತ್ರಿಗಳ ಕುಟುಂಬದ ಮಹಿಳಾ ಸದಸ್ಯರ ಕುರಿತು ಟ್ವೀಟ್‌ ಮಾಡಿ ತಪ್ಪು ಮಾಡಿದೆ,'' ಎಂದು ಆರೋಪಿ ಶಕುಂತಲಾ ಹೇಳಿಕೆ ದಾಖಲಿಸಿದ್ದಾರೆ. ಜತೆಗೆ ''ರಾಜಕೀಯ ನಾಯಕರ ಕುಟುಂಬ ಸದಸ್ಯರ ಕುರಿತು ಮುಂದಿನ ದಿನಗಳಲ್ಲಿಅವರ ಗೌರವಕ್ಕೆ ಧಕ್ಕೆ ತರುವಂತೆ ಪೋಸ್ಟ್‌ ಮಾಡುವುದಿಲ್ಲ. ಈಗ ಮಾಡಿರುವ ಪೋಸ್ಟ್‌ ಅಳಿಸಿ ಹಾಕುತ್ತೇನೆ '' ಎಂದು ಹೇಳಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Derogatory post about CM Siddaramaiah and family, BJP activist Shakuntala released after apology. Amid the raging Udupi college row, the Bengaluru Police have arrested a BJP woman worker identified as Shakunthala HS for posting derogatory comments on social media against Karnataka Chief Minister Siddaramaiah on Twitter. She was later released on station bail.