ಡಿಸಿಎಂ ಡಿಕೆಶಿ ವಿರುದ್ಧವೇ ಕಮಿಷನ್ ಆರೋಪ ; ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲು ಬಿಬಿಎಂಪಿ ಗುತ್ತಿಗೆದಾರರ ಸವಾಲು ; ನನ್ನಲ್ಲಿ ಬ್ಲಾಕ್ಮೇಲ್ ನಡೆಯಲ್ಲ ಎಂದ ಡಿಕೆಶಿ 

08-08-23 10:06 pm       Bangalore Correspondent   ಕರ್ನಾಟಕ

ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಮೂರು ತಿಂಗಳು ಕಳೆದಿಲ್ಲ. ಆಗಲೇ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ, ಕಮಿಷನ್​ ಆರೋಪಗಳನ್ನು ಮಾಡುತ್ತಿದ್ದಾರೆ.

ಬೆಂಗಳೂರು, ಆಗಸ್ಟ್ 8: ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಮೂರು ತಿಂಗಳು ಕಳೆದಿಲ್ಲ. ಆಗಲೇ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ, ಕಮಿಷನ್​ ಆರೋಪಗಳನ್ನು ಮಾಡುತ್ತಿದ್ದಾರೆ. ಇದೀಗ ಉಪ ಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಕಮಿಷನ್​ ಆರೋಪ ಕೇಳಿಬಂದಿದೆ. ಬಾಕಿ ಬಿಲ್ ಪಾವತಿಗಾಗಿ ಡಿಕೆ ಶಿವಕುಮಾರ್ ಅವರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಬಿಬಿಎಂಪಿ ಗುತ್ತಿಗೆದಾರರೇ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಹಣ ಕೇಳಿಲ್ಲ ಎಂದರೆ, ಅವರು ನಂಬುವ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಗುತ್ತಿಗೆದಾರರು ಸವಾಲು ಹಾಕಿದ್ದಾರೆ. 

ಬಿಬಿಎಂಪಿ ಗುತ್ತಿಗೆದಾರರ ಸಂಘದಿಂದ ಸುದ್ದಿಗೋಷ್ಟಿ ನಡೆಸಿದ್ದು ಡಿಕೆ ಶಿವಕುಮಾರ್ ವಿರುದ್ಧ ಮಾತನಾಡಿದ್ದಕ್ಕಾಗಿ ಅವರಲ್ಲೇ ವಾಗ್ವಾದ ನಡೆದಿತ್ತು. ಈ ವೇಳೆ ಗುತ್ತಿಗೆದಾರ ಹೇಮಂತ್ ಎನ್ನುವರು ಡಿಕೆ ಶಿವಕುಮಾರ್​​ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಹಣ ಕೇಳಿಲ್ಲ ಎನ್ನುವುದಾದರೆ ಅವರು ನಂಬುವ ಅಜ್ಜಯ್ಯನ ಮಠಕ್ಕೆ ಬಂದು‌ ಪ್ರಮಾಣ ಮಾಡಲಿ. ಹಣ ಕೇಳಿದ್ದಾರೆ ಎಂದು ನಾನು‌‌ ಪ್ರಮಾಣ ಮಾಡುತ್ತೇನೆ ಎಂದು ಹೇಮಂತ್ ಎನ್ನುವವರು ಚಾಲೆಂಜ್ ಮಾಡಿದ್ದಾರೆ. 

ನಾವು ನ್ಯಾಯಯುತವಾಗಿ ಕೆಲಸ ಮಾಡಿದ್ದೇವೆ. ಇಷ್ಟು ದಿನ ಅವರೇ ಅಲ್ವಾ ಬಿಲ್ ಪಾವತಿ ಮಾಡುತ್ತಿರುವುದು. ಈಗ ಯಾಕೆ ಅವರು ಬಿಲ್ ತಡೆಯುತ್ತಾರೆ. ಅವರಿಗೆ ಬಿಲ್ ತಡೆ ಹಿಡಿಯುವಂತೆ ಹೇಳಿರುವುದು ಯಾರು, ಅವರ ಬಗ್ಗೆ ಮಾತನಾಡಿ. ಈಗ ಸಮಿತಿ ಮಾಡಿದ್ದಾರೆ. ಬಿಲ್ ಬಿಡುಗಡೆ ಮಾಡಿಸಿಕೊಳ್ಳುತ್ತೀರಾ? ಎಂದು ಗುತ್ತಿಗೆದಾರ ಪ್ರಶ್ನಿಸಿದ್ದು, ನಾವೇನು ಕಳ್ಳತನ ಮಾಡಿಲ್ಲ. ಕೋರ್ಟ್​ಗೆ ಹೋಗೋಣ ನಡೆಯಿರಿ. ನಾನು ಕೂಡ ಕಾಂಗ್ರೆಸ್ ಗೆ ಓಟ್ ಹಾಕಿದವನು. 94 ಕೋಟಿ ರೂ. ಬಿಲ್ ಬಾಕಿ ಬರಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಗುತ್ತಿಗೆದಾರನ ಮಾತುಗಳ ವಿಡಿಯೋ ವೈರಲ್ ಆಗಿದ್ದು, ಭಾರೀ ಸಂಚಲನ ಮೂಡಿಸಿದೆ.

ಗುತ್ತಿಗೆದಾರರ ಆರೋಪಕ್ಕೆ ಸಚಿವ ಡಿಕೆಶಿ ತಿರುಗೇಟು 

ಬಾಕಿ ಬಿಲ್ ಪಾವತಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಗುತ್ತಿಗೆದಾರರ ಆರೋಪಕ್ಕೆ ಸಂಬಂಧಿಸಿ ಸ್ವತಃ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಯಾವ ಬಿಲ್ ವಿಚಾರವೂ ಗೊತ್ತಿಲ್ಲ. ಯಾರಿಗೂ ಉತ್ತರ ಕೊಡಲ್ಲ. ನನಗೂ ರಾಜಕಾರಣ ಗೊತ್ತಿದೆ. ಯಾವ ಗುತ್ತಿಗೆದಾರನ ಹಿಂದೆ ಯಾರಿದ್ದಾರೆಂದು ನನಗೆ ಗೊತ್ತಿದೆ. ಯಾವ ಬ್ಲ್ಯಾಕ್​​ಮೇಲ್ ಕೂಡ ನನ್ನ ಮುಂದೆ ನಡೆಯುವುದಿಲ್ಲ. ನಾವು ವಿಪಕ್ಷದಲ್ಲಿದ್ದಾಗ ನಮ್ಮ ಬಳಿ ಹುಡುಕಿಕೊಂಡು ಬರುತ್ತಿರಲಿಲ್ವಾ? ನಾನು ಯಾರಿಗೂ ಪ್ರಮಾಣ ಮಾಡಬೇಕಾದ ಅವಶ್ಯಕತೆ ಇಲ್ಲ. ಕೆಲಸ ಮಾಡಿದ್ರೆ ಹಣ ಬಿಡುಗಡೆ ಆಗುತ್ತೆ. ಇಲ್ಲದಿದ್ದರೆ ಆಗುವುದಿಲ್ಲ. ಯಾರಿಗೋ ಬ್ಲ್ಯಾಕ್​ಮೇಲ್ ಮಾಡಿದಂತೆ ನನಗೆ ಮಾಡಲು ಬರಬೇಡಿ ಎಂದು ಖಡಕ್​ ಆಗಿ ತಿರುಗೇಟು ನೀಡಿದ್ದಾರೆ.

Civic contractors in Bengaluru held protests over pending dues from the Bruhat Bengaluru Mahanagara Palike (BBMP). A delegation of the contractors met Karnataka Governor Thawar Chand Gehlot and submitted a memorandum detailing their woes.