ಡಿಕೆಶಿ ಮೇಲೆ ಆರೋಪ ಮಾಡಿದ್ದ ಗುತ್ತಿಗೆದಾರ ಉಲ್ಟಾ ; ಭಾವೋದ್ವೇಗಕ್ಕೆ ಒಳಗಾಗಿ ಮಾತನಾಡಿದ್ದೆ, ಕಮಿಷನ್ ಕೇಳಿಲ್ಲ!ಕಳಂಕ ತೊಳೆದುಕೊಂಡ ಕಾಂಗ್ರೆಸ್  

15-08-23 03:13 pm       Bangalore Correspondent   ಕರ್ನಾಟಕ

ಕಾಮಗಾರಿ ಬಿಲ್‌ ಪಾವತಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಕಮಿಷನ್‌ ಕೇಳುತ್ತಿದ್ದಾರೆ ಎಂದು ನೇರ ಆಪಾದನೆ ಮಾಡಿದ್ದ ಬಿಬಿಎಂಪಿ ಗುತ್ತಿಗೆದಾರ ಹೇಮಂತ್‌ ಮಾತು ಬದಲಿಸಿದ್ದಾರೆ.

ಬೆಂಗಳೂರು, ಆಗಸ್ಟ್ 15: ಕಾಮಗಾರಿ ಬಿಲ್‌ ಪಾವತಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಕಮಿಷನ್‌ ಕೇಳುತ್ತಿದ್ದಾರೆ ಎಂದು ನೇರ ಆಪಾದನೆ ಮಾಡಿದ್ದ ಬಿಬಿಎಂಪಿ ಗುತ್ತಿಗೆದಾರ ಹೇಮಂತ್‌ ಮಾತು ಬದಲಿಸಿದ್ದಾರೆ. ಇದರಿಂದ ಅಧಿಕಾರಕ್ಕೆ ಬಂದ ಕೂಡಲೇ ಕಾಂಗ್ರೆಸ್‌ ಸರ್ಕಾರಕ್ಕೆ ಅಂಟಿಕೊಂಡಿದ್ದ ಕಳಂಕ ಸ್ವಲ್ಪಮಟ್ಟಿಗೆ ಸರಿದಂತಾಗಿದೆ. ಇದಲ್ಲದೆ, ಕಮಿಷನ್‌ ವಿಚಾರವನ್ನೇ ಅಸ್ತ್ರವಾಗಿಸಿ ಹೋರಾಟಕ್ಕೆ ಅಣಿಯಾಗಿದ್ದ ಪ್ರತಿಪಕ್ಷ ಬಿಜೆಪಿಗೆ ನಿರಾಸೆ ತಂದಿದೆ. 

ಬಿಲ್‌ ಪಾವತಿಗೆ ಕಮಿಷನ್‌ ಕೇಳಿಲ್ಲ ಎಂದಾದರೆ ಡಿ.ಕೆ.ಶಿವಕುಮಾರ್‌ ಅವರು ತಾವು ನಂಬುವ ಅಜ್ಜಯ್ಯನ ಮಠಕ್ಕೆ ಬಂದು ಆಣೆ ಮಾಡಲಿ. ನಾನು ದುಡ್ಡು ಕೇಳಿದ್ದಾರೆಂದು ಪ್ರಮಾಣ ಮಾಡುತ್ತೇನೆ ಎಂದು ಹೇಮಂತ್‌ ಬಹಿರಂಗವಾಗಿಯೇ ಸವಾಲು ಹಾಕಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಪಕ್ಷದ ಅಧ್ಯಕ್ಷರ ವಿರುದ್ಧವೇ ಕೇಳಿಬಂದ ಈ ಆರೋಪ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದ್ದಲ್ಲದೆ, ಕಾಂಗ್ರೆಸ್‌ ಪಾಲಿಗೆ ತಳಮಳ ಸೃಷ್ಟಿಸಿತ್ತು. 

ಆದರೆ, ಸೋಮವಾರ ಮಾಧ್ಯಮಗಳ ಮುಂದೆ ಬಂದಿದ್ದ ಗುತ್ತಿಗೆದಾರ ಹೇಮಂತ್‌ ತಮ್ಮ ಆರೋಪ ಹಿಂಪಡೆದಿದ್ದಾರೆ. ''ಡಿ.ಕೆ.ಶಿವಕುಮಾರ್‌ ಅವರು ನನ್ನ ಬಳಿ ಕಮಿಷನ್‌ ಕೇಳಿಲ್ಲ. ಭಾವೋದ್ವೇಗಕ್ಕೆ ಒಳಗಾಗಿ ಆ ರೀತಿ ಮಾತನಾಡಿದ್ದೆ. ಇದರಿಂದ ಡಿ.ಕೆ.ಶಿವಕುಮಾರ್‌ ಅವರ ಭಾವನೆಗೆ ಘಾಸಿಯಾಗಿದ್ದು, ಅದಕ್ಕಾಗಿ ಕ್ಷಮೆ ಯಾಚಿಸುತ್ತೇನೆ ಎಂದು ಹೇಮಂತ್‌ ಸುದ್ದಿಗೋಷ್ಠಿಯಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. 

ನಾನು ಭಾವುಕನಾಗಿ ಆ ರೀತಿ ಮಾತನಾಡಿದೆ. ಇದನ್ನೇ ಪ್ರತಿಪಕ್ಷಗಳು ಅಸ್ತ್ರವಾಗಿಸಿಕೊಂಡು ಅಜ್ಜಯ್ಯನ ಮಠದಲ್ಲಿ ಪ್ರಮಾಣ ಮಾಡಲಿ ಎಂದು ಡಿ.ಕೆ.ಶಿವಕುಮಾರ್‌ ಅವರನ್ನು ಒತ್ತಾಯಿಸುವುದು ಸರಿಯಲ್ಲ. ನನ್ನ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆ. ನಾನು ಸಣ್ಣವನು. ತಪ್ಪು ಮಾಡಿ ಪಶ್ಚಾತ್ತಾಪ ಪಟ್ಟಿದ್ದೇನೆ. ಈ ಬಗ್ಗೆ ಡಿ.ಕೆ.ಶಿವಕುಮಾರ್‌ ಅವರಲ್ಲಿ ಕ್ಷಮೆ ಕೋರುತ್ತೇನೆ. ತನಿಖಾ ವರದಿ ಬಳಿಕವೇ ಬಿಲ್‌ ಪಾವತಿ ಮಾಡಲಿ. ನಮ್ಮ ಪರಿಸ್ಥಿತಿ ತುಂಬಾ ಕೆಟ್ಟದಾಗಿದ್ದು, ಪ್ರತಿಪಕ್ಷ ಬಿಜೆಪಿಯವರು ಗುತ್ತಿಗೆದಾರರ ಬಾಕಿ ಬಿಲ್‌ ಕೊಡಿಸಲು ನೆರವಾಗಲಿ ಎಂದರು. 

ಗುತ್ತಿಗೆದಾರರು ಕಮಿಷನ್‌ ಆರೋಪ ಹಿಂಪಡೆದುಕೊಂಡ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್‌, ಅಜ್ಜಯ್ಯನ ಮಠಕ್ಕೆ ಬಂದು ಆಣೆ ಮಾಡಿ ಎಂದಿದ್ದ ಗುತ್ತಿಗೆದಾರ ಹೇಮಂತ್‌ ಮತ್ತಿತರರು ತಮ್ಮ ಹೇಳಿಕೆ ವಾಪಸ್‌ ಪಡೆದಿದ್ದಾರೆ. ಗುತ್ತಿಗೆದಾರರು ನೋವಿನಲ್ಲಿದ್ದು, ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ಅವರನ್ನು ಬಳಸಿಕೊಂಡ ಸಾಮ್ರಾಟ ಅಶೋಕ ಚಕ್ರವರ್ತಿ, ನವರಂಗಿ ನಾರಾಯಣ, ಸಿ.ಟಿ ರವಿ, ಗೋಪಾಲಯ್ಯ ಈಗ ಏನು ಹೇಳುತ್ತಾರೆ? ಉತ್ತರ ಕೊಡಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಟಾಂಗ್ ನೀಡಿದ್ದಾರೆ.

Bbmp contractor Hemanth has made a U-turn after he directly accused Deputy Chief Minister DK Shivakumar of asking for commission to pay work bills. Deputy Chief Minister D.K. Shivakumar has directed the BBMP to pay the bills for the old works carried out by the BBMP in Bengaluru. Shivakumar has asked for 15 per cent commission. The BBMP contractors had challenged him to come and take an oath in the presence of Ajjayya of Nonavinakere in Tumakuru, whom he believes in, if he did not listen.