ಹೆಚ್​ಡಿಕೆ ಆರೋಗ್ಯದಲ್ಲಿ ಚೇತರಿಕೆ ; ಐಸಿಯುನಿಂದ ಸ್ಪೆಷಲ್​ ವಾರ್ಡ್​ಗೆ ಶಿಫ್ಟ್​

31-08-23 07:00 pm       Bangalore Correspondent   ಕರ್ನಾಟಕ

ಸುಸ್ತು ಮತ್ತು ತೀವ್ರ ಜ್ವರದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಂಡು ಬಂದಿದೆ.

ಬೆಂಗಳೂರು, ಆಗಸ್ಟ್ 31: ಸುಸ್ತು ಮತ್ತು ತೀವ್ರ ಜ್ವರದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಂಡು ಬಂದಿದೆ. ಅವರನ್ನು ತೀವ್ರ ನಿಗಾ ಘಟಕದಿಂದ ಸ್ಪೆಷಲ್​ ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ. ಕುಮಾರಸ್ವಾಮಿ ಅವರು ಇಂದು ಬೆಳಗ್ಗೆ ಎಂದಿನಂತೆ ಪತ್ರಿಕೆ ಓದಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಕುಮಾರಸ್ವಾಮಿ ಅವರನ್ನು ಇಂದು ವಾರ್ಡ್​ಗೆ ಶಿಫ್ಟ್ ಮಾಡಿದ್ದು, ಎರಡು ದಿನ ವಾರ್ಡ್​ನಲ್ಲಿ ವೈದ್ಯರು ನಿಗಾ ವಹಿಸಲಿದ್ದಾರೆ. ಪ್ರಸ್ತುತ ಯಾರನ್ನೂ ಭೇಟಿ ಮಾಡದಂತೆ ವೈದ್ಯರು ಸೂಚನೆ ನೀಡಿದ್ದಾರೆ. ನಾಳೆ ಅಥವಾ ನಾಡಿದ್ದು ಅವರನ್ನು ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಆಸ್ಪತ್ರೆಗೆ ಭೇಟಿ ನೀಡಿ ಕುಮಾರಸ್ವಾಮಿಯವರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಇನ್ನು ವಿದೇಶ ಪ್ರವಾಸದಲ್ಲಿದ್ದ ಹೆಚ್​ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ವಾಪಸ್ ಆಗಿದ್ದು, ಆಸ್ಪತ್ರೆಗೆ ತೆರಳಿ ತಂದೆಯ ಆರೋಗ್ಯವನ್ನು ವಿಚಾರಿಸಿದ್ದಾರೆ. ಅದೇ ರೀತಿ ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತಿತರ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಿದ್ದಾರೆ.

Former chief minister H D Kumaraswamy has recovered and will be discharged from the hospital soon, his son Nikhil Kumaraswamy said Thursday. He was admitted to Apollo Hospital at Jayanagar, Bengaluru, during the early hours of Wednesday morning after he complained of weakness and discomfort.