ಹಿಂದೂ ಧರ್ಮ ಹುಟ್ಟಿದ್ದು ಯಾವಾಗ, ಯಾರು ಹುಟ್ಟಿಸಿದರು ಎಂಬುದೇ ಪ್ರಶ್ನೆ ; ಸಚಿವ ಪರಮೇಶ್ವರ್ ಹೊಸ ವಿವಾದ 

05-09-23 11:25 pm       HK News Desk   ಕರ್ನಾಟಕ

ಸನಾತನ ಧರ್ಮದ ಕುರಿತ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ತೀವ್ರ ವಿವಾದಕ್ಕೆ ಈಡಾಗಿರುವ ಹೊತ್ತಲ್ಲೇ ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅದೇ ರೀತಿಯ ಎಡವಟ್ಟು ಹೇಳಿಕೆ ನೀಡಿದ್ದಾರೆ.

ತುಮಕೂರು, ಸೆ.5: ಸನಾತನ ಧರ್ಮದ ಕುರಿತ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ತೀವ್ರ ವಿವಾದಕ್ಕೆ ಈಡಾಗಿರುವ ಹೊತ್ತಲ್ಲೇ ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅದೇ ರೀತಿಯ ಎಡವಟ್ಟು ಹೇಳಿಕೆ ನೀಡಿದ್ದಾರೆ. ಹಿಂದೂ ಧರ್ಮ ಹುಟ್ಟಿದ್ದು ಯಾವಾಗ, ಯಾರು ಹುಟ್ಟಿಸಿದರು ಎಂಬುದೇ ಪ್ರಶ್ನೆ ಎಂದು ಸಚಿವ ಪರಮೇಶ್ವರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ತುಮಕೂರು ಜಿಲ್ಲೆಯ ತನ್ನ ಕ್ಷೇತ್ರ ಕೊರಟಗೆರೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಪರಮೇಶ್ವರ್, ಜಗತ್ತಿನಲ್ಲಿ ಅನೇಕ ಧರ್ಮಗಳು ಹುಟ್ಟಿಕೊಂಡಿವೆ. ಆದರೆ ಈ ಹಿಂದು ಧರ್ಮವನ್ನು ಹುಟ್ಟಿಸಿದ್ದು ಯಾರು, ಯಾವಾಗ ಹುಟ್ಟಿತು ಎಂಬುದು ಇನ್ನೂ ಪ್ರಶ್ನಾರ್ಥಕ ಚಿಹ್ನೆಯಾಗಿಯೇ ಉಳಿದಿದೆ ಎಂದರು. 

ಬೌದ್ಧ ಧರ್ಮ ಹಾಗೂ ಜೈನ ಧರ್ಮ ನಮ್ಮ ಭಾರತದಲ್ಲೇ ಹುಟ್ಟಿತ್ತು. ಕ್ರೈಸ್ತ ಹಾಗೂ ಇಸ್ಲಾಂ ಧರ್ಮ ಹೊರಗಿನಿಂದ ಬಂದಿವೆ. ಎಲ್ಲಾ ಧರ್ಮಗಳ ಸಾರಾಂಶ ಮನುಕುಲಕ್ಕೆ ಒಳ್ಳೆಯದ್ದು ಆಗಲಿ ಎಂಬುದೇ ಆಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರೆ ಇತ್ತ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದ್ದರೂ ಕೆಲ ನಾಯಕರು ಮಾತ್ರ ಪರವಾಗಿ ಮಾತನಾಡುತ್ತಿದ್ದಾರೆ. ಅದನ್ನು ಸಮರ್ಥಿಸುವ ನೆಪದಲ್ಲಿ ಹಿಂದು ಧರ್ಮದ ಬಗ್ಗೆ ಸಚಿವರು ಎಡವಟ್ಟು ಹೇಳಿಕೆ ನೀಡಿದ್ದಾರೆ.

Karnataka Home Minister G Parameshwara on Tuesday, September 5 while addressing a Teachers’ Day event at his constituency Koratagere made a controversial remark on the Hindu religion. The Karnataka minister said, “There is still a question mark on who founded the Hindu Dharma.”