Kasaragod Mother Kills Baby: ಮಂಜೇಶ್ವರ ; ಒಂದೂವರೆ ತಿಂಗಳ ಮಗುವನ್ನು ಕೆಸರಿನಲ್ಲಿ ಮುಳುಗಿಸಿ ಕೊಲೆ, ಗಂಡ- ಹೆಂಡತಿ ಜಗಳಕ್ಕೆ ಮಗು ಬಲಿ, ತಾಯಿ ಬಗ್ಗೆಯೇ ಶಂಕೆ

14-09-23 11:24 am       HK News Desk   ಕರ್ನಾಟಕ

ಒಂದೂವರೆ ತಿಂಗಳ ಮಗುವನ್ನು ಕೆಸರಿನಲ್ಲಿ ಮುಳುಗಿಸಿ ಕೊಲೆಗೈದ ಘಟನೆ ಮಂಗಲ್ಪಾಡಿ ಬಳಿಯ ಕೋಟಿಬೈಲು ಎಂಬಲ್ಲಿ ನಡೆದಿದ್ದು ತಾಯಿಯೇ ಕೊಲೆಗೈದ ಆರೋಪ ಕೇಳಿಬಂದಿದೆ.

ಮಂಜೇಶ್ವರ, ಸೆ.14: ಒಂದೂವರೆ ತಿಂಗಳ ಮಗುವನ್ನು ಕೆಸರಿನಲ್ಲಿ ಮುಳುಗಿಸಿ ಕೊಲೆಗೈದ ಘಟನೆ ಮಂಗಲ್ಪಾಡಿ ಬಳಿಯ ಕೋಟಿಬೈಲು ಎಂಬಲ್ಲಿ ನಡೆದಿದ್ದು ತಾಯಿಯೇ ಕೊಲೆಗೈದ ಆರೋಪ ಕೇಳಿಬಂದಿದೆ. 

ಸತ್ಯನಾರಾಯಣ- ಸುಮಂಗಲಾ ದಂಪತಿಯ ಒಂದೂವರೆ ತಿಂಗಳ ಮಗು ಕೆಸರಿನಲ್ಲಿ ಮುಳುಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬುಧವಾರ ಮಧ್ಯಾಹ್ನ ಘಟನೆ ನಡೆದಿದ್ದು ಮಗುವಿನ ಕುತ್ತಿಗೆ ಭಾಗದಲ್ಲಿ ಗಾಯದ ಗುರುತುಗಳಿರುವುದರಿಂದ ಕತ್ತು ಹಿಸುಕಿ ಕೊಲೆಗೈದು ಕೆಸರಿನಲ್ಲಿ ಮುಳುಗಿಸಿರುವ ಶಂಕೆಯಿದೆ. ಕೃತ್ಯದ ಬಳಿಕ ಸುಮಂಗಲಾ ಆತ್ಮಹತ್ಯೆಗೆ ಯತ್ನಿಸಿದ್ದು ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಹಿಳೆ ಅಸ್ಪಷ್ಟ ಹೇಳಿಕೆ ನೀಡುತ್ತಿದ್ದು ಪೊಲೀಸರು ಆಕೆಯ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. 

ಸುಮಂಗಲಾ - ಸತ್ಯನಾರಾಯಣ ಎರಡು ವರ್ಷದ ಹಿಂದೆ ಮದುವೆಯಾಗಿದ್ದರು. ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಸುಮಂಗಲಾ ಉಪ್ಪಳ ಬಳಿಯ ಅತ್ತೆಯ ಮನೆಯಲ್ಲಿ ವಾಸವಿದ್ದಳು. ಪತಿಯ ಜೊತೆಗೆ ವೈಮನಸ್ಯದಿಂದ ಮಾನಸಿಕ ತೊಂದರೆಗೀಡಾಗಿದ್ದಳು. ಇತ್ತೀಚಿಗೆ ತಾಯಿಯೂ ತೀರಿಕೊಂಡಿದ್ದರಿಂದ ಮಾನಸಿಕ ಖಿನ್ನಳಾಗಿದ್ದಳು. ಮಗುವನ್ನು ಗದ್ದೆಯ ಬಳಿಗೆ ಕೊಂಡೊಯ್ಯುವುದು ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಂಜೇಶ್ವರ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಸುಮಂಗಲಾ ತಲಪಾಡಿ ಬಳಿಯ ಕಿನ್ಯಾ ನಿವಾಸಿಯಾಗಿದ್ದು ಗರ್ಭಿಣಿಯಾದಾಗಲೇ ಗಂಡನ ಬಗ್ಗೆ ವೈಮನಸ್ಯ ಹೊಂದಿದ್ದು ತಾಯಿ ಮನೆಯಲ್ಲಿದ್ದಳು. ಈಚೆಗೆ ತಾಯಿ ತೀರಿಕೊಂಡಿದ್ದರಿಂದ ಉಪ್ಪಳದ ಅತ್ತೆ ಮನೆಗೆ ಹೋಗಿ ಉಳಿದುಕೊಂಡಿದ್ದಳು.

In a shocking incident a mother allegedly killed her newborn baby by drowing it in the muddy water at Kasargod.