Govinda Babu Poojari, Vinay Guruji: ಏಳನೇ ಕ್ಲಾಸು ಓದಿ ಹೊಟೇಲು ಗ್ಲಾಸ್ ತೊಳೆದು ಉದ್ಯಮ ಕಟ್ಟಿದ್ದೆ, ಬಿಜೆಪಿ, ಆರೆಸ್ಸೆಸ್ ಅಂತ ಹೇಳಿ ಹಳ್ಳಕ್ಕೆ ತಳ್ಳಿದ್ದಾರೆ ; ವಿನಯ ಗುರೂಜಿಗೆ ಗೋವಿಂದ ಪೂಜಾರಿ ಪತ್ರ ! 

16-09-23 05:02 pm       Bangalore Correspondent   ಕರ್ನಾಟಕ

​​​​​​​ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಮತ್ತು ಏಳು ಜನ ಸಹಚರರನ್ನು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು, ಸೆ.16: ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಮತ್ತು ಏಳು ಜನ ಸಹಚರರನ್ನು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಮೋಸಕ್ಕೊಳಗಾದ ಉದ್ಯಮಿ ಗೋವಿಂದ ಬಾಬು ಪೂಜಾರಿ ಚಿಕ್ಕಮಗಳೂರಿನ ಅವಧೂತ ವಿನಯ ಗುರೂಜಿಯವರಿಗೆ ಪತ್ರ ಬರೆದು ಆಗಿರುವ ವೃತ್ತಾಂತವನ್ನೆಲ್ಲ ವಿವರಿಸಿದ್ದಾರೆ. ಕಷ್ಟದಿಂದ ಮೇಲೆ ಬಂದಿದ್ದು ಸೇರಿದಂತೆ ಏಳನೇ ಕ್ಲಾಸ್ ಆದವನನ್ನು ಬಿಜೆಪಿ, ಆರೆಸ್ಸೆಸ್ ಹೆಸರಲ್ಲಿ ಮೋಸ ಮಾಡಿದ್ದಾಗಿ ತಿಳಿಸಿದ್ದಾರೆ. 
 
ಸಣ್ಣದಿರುವಾಗ ಕಷ್ಟದ ಪರಿಸ್ಥಿತಿಯಲ್ಲಿ ಏಳನೇ ತರಗತಿ ಕಲಿತು ಮುಂಬೈಗೆ ಹೋಗಿದ್ದೆ. ಮುಂಬೈನಲ್ಲಿ ಹೋಟೆಲುಗಳಲ್ಲಿ ಪ್ಲೇಟ್ ತೊಳೆದು ಜೀವನವನ್ನು ರೂಪಿಸಿದ್ದೇನೆ. ಕೆಲಸ ಮಾಡುತ್ತಾ ಮಾಡುತ್ತಾ ಫೈವ್ ಸ್ಟಾರ್ ಹೋಟೆಲ್ ಗೆ ಸೇರಿದ್ದೆ. ಮೊದಲಿಗೆ ಐದು ಜನರನ್ನು ಇಟ್ಟುಕೊಂಡು ಉದ್ಯಮ ಆರಂಭಿಸಿದ್ದೆ‌. ತಮಿಳುನಾಡು, ಗುಜರಾತ್, ಆಂಧ್ರದಲ್ಲಿ ಮನೆ, ಕಂಪನಿಗಳಿಗೆ ಫುಡ್ ಸರ್ವಿಸ್ ಶುರು ಮಾಡಿದೆ. ಅದರಲ್ಲಿ ಬಂದ ಲಾಭದಲ್ಲಿ ವೃದ್ಧಾಶ್ರಮ, ಅನಾಥಾಶ್ರಮ, ಕೋವಿಡ್ ಸಂದರ್ಭ ಶಿಕ್ಷಣಕ್ಕಾಗಿ ಸಹಾಯ ಮಾಡಿದ್ದೆ. 

ನನ್ನ ಜೀವನದಲ್ಲಿ ಈವರೆಗೆ 15 ರಿಂದ 20 ಸಾವಿರ ಮನೆ/ ಜನಗಳಿಗೆ ಸಹಾಯ ಮಾಡಿದ್ದೇನೆ. ಹಿರಿಯರ ಮಾರ್ಗದರ್ಶನದಂತೆ ನಾನು ಆರ್‌ಎಸ್‌ಎಸ್‌ನ ಐಟಿಸಿ ಕೋರ್ಸ್ ಮುಗಿಸಿದ್ದೆ. ಊರಿನವರು, ಆಪ್ತರ ಹಿತೈಷಿಗಳ ಮಾರ್ಗದರ್ಶನದಂತೆ ಬಿಜೆಪಿ ಸೇರ್ಪಡೆಯಾಗಿದ್ದೆ. ಆರು ವರ್ಷಗಳಿಂದ ನಾನು ಬಿಜೆಪಿ ಸದಸ್ಯತ್ವ ಸ್ವೀಕರಿಸಿದ್ದೇನೆ. ನನ್ನ ಜೊತೆ ಕೆಲಸ ಮಾಡುತ್ತಿದ್ದ ಪ್ರಸಾದ್ ಬೈಂದೂರು ಚೈತ್ರಾಳನ್ನು ಮೊದಲು ಪರಿಚಯ ಮಾಡಿದ್ದಾನೆ. ಚೈತ್ರಾ ನಂತರ ಗಗನ್ ಕಡೂರು ಪರಿಚಯ ಮಾಡಿಸಿದಳು. ಬಿಜೆಪಿ ಮತ್ತು ಆರ್‌ ಎಸ್ ಎಸ್ ಎಂದು ವಿಶ್ವನಾಥ್ ಜಿ, ಅಭಿನವ ಸ್ವಾಮೀಜಿ , ನಾಯ್ಕ್, ಒಬ್ಬೊಬ್ಬರಾಗಿ ಪರಿಚಯಿಸಿದ್ದರು. ಆಮೇಲೆ ಚಿಕ್ಕಮಗಳೂರು ಬೆಂಗಳೂರು, ಮಂಗಳೂರಿನಲ್ಲಿ ಅಂತ ಹಂತ ಹಂತವಾಗಿ 5.50 ಕೋಟಿ ಹಣ ಪಡೆದಿದ್ದಾರೆ.  ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

ಅರ್ಧ ಅರ್ಧ ನೋಟಿನ ಕೋಡ್ ವರ್ಡ್ ಮೂಲಕ ನಾವು ಹಣ ಹಸ್ತಾಂತರ ಮಾಡಿದ್ದೇವೆ. ನನ್ನ ಆಸ್ತಿಯನ್ನು ಅಡ ಇಟ್ಟು ಒಮ್ಮೆ ಮೂರು ಕೋಟಿ ಸಾಲ ಪಡೆದಿದ್ದೇನೆ. ಇನ್ನೆರಡು ಕೋಟಿ ಬೇಕು ಎಂದು ಚೈತ್ರಾ ಗ್ಯಾಂಗ್ ಬೇಡಿಕೆ ಇಟ್ಟಾಗ, ಮತ್ತೆ ಖಾಸಗಿ ಫೈನಾನ್ಸ್ ನಿಂದ 2 ಕೋಟಿ ಸಾಲ ಪಡೆದುಕೊಂಡು ನೀಡಿದ್ದೆ ಎಂದು ಗೋವಿಂದ ಪೂಜಾರಿ ಪತ್ರದಲ್ಲಿ ವಿವರಿಸಿದ್ದಾರೆ.

ಅವಧೂತ ಗುರೂಜಿ ಅವರಲ್ಲಿ ಪತ್ರದ ಕೊನೆಗೆ ಗೋವಿಂದ ಪೂಜಾರಿ ಮತ್ತೊಂದು ವಿನಂತಿ ಮಾಡಿದ್ದಾರೆ. ರಾಷ್ಟ್ರೀಯ ಪಕ್ಷ, ಆರ್‌ಎಸ್‌ಎಸ್‌ ಸಂಘ ಎಂದು ಹೇಳಿ ನನಗೆ ಮೋಸ ಮಾಡಿದರು. ರಾಜಕೀಯದ ಆಮಿಷ ತೋರಿಸಿ ನನ್ನನ್ನು ಹಳ್ಳಕ್ಕೆ ತಳ್ಳಿದರು. ಹಿರಿಯರಾದ ತಾವು ನನಗೆ ದಾರಿ ತೋರಿಸಬೇಕು. ಕಾನೂನು ಮತ್ತು ಪೊಲೀಸ್ ವ್ಯವಸ್ಥೆ ಮೇಲೆ ನನಗೆ ನಂಬಿಕೆ ಇದೆ. ನನಗೆ ನ್ಯಾಯ ಒದಗಿಸಲು ಸಹಕಾರ ಮಾಡಿ ಎಂದು ಹೇಳಿ ಪತ್ರ ಕೊನೆಗೊಳಿಸಿದ್ದಾರೆ. ಅದರ ಜೊತೆ ಎರಡು ವಾಯ್ಸ್ ನೋಟ್ ಗಳನ್ನೂ ಇಡಲಾಗಿದೆ. ಒಂದರಲ್ಲಿ ಚೈತ್ರಾ, ಗೋವಿಂದ ಪೂಜಾರಿ ಆಪ್ತರಲ್ಲಿ ಮಾತನಾಡುವಾಗ ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೆಸರೂ ಬಂದಿದೆ. ಹೀಗಾಗಿ ಈ ಪ್ರಕರಣದಲ್ಲಿ ಸುನಿಲ್ ಅವರಿಗೂ ನಂಟು ಇದೆಯಾ ಎನ್ನುವ ಅನುಮಾನ ಉಂಟುಮಾಡಿದೆ.

Chaithra Kundapura fraud, Victim Govinda Babu Poojari writes letter to Vinay Guruji says trusting BJP, RSS has put me into ditch.